Tuesday 12 December 2017

"ಅಯ್ಯೋ, ಪಾಪ ಕರ್ಣ. ಯಾಕಮ್ಮ ಕುಂತಿ ಮಗುವನ್ನು ನೀರಿನಲ್ಲಿ ಬಿಟ್ಟದ್ದು? ಕರುಣೆಯಿಲ್ಲದ ತಾಯಿ..."

ಮಗಳು ನೀರು ತುಂಬಿದ ಕಣ್ಣುಗಳಿಂದ ನಿನ್ನೆ ಕೇಳಿದ್ದ ಪ್ರಶ್ನೆ.ಅದೆಷ್ಟು ಬಾರಿ ನನ್ನನ್ನು ಕಾಡಿಲ್ಲ ಈ ಪ್ರಶ್ನೆ? ಏನೆಂದು ಉತ್ತರಿಸಲಿ? ಉತ್ತರಗಳಿರಲಿಲ್ಲ ನನ್ನಲ್ಲಿ. ರಚ್ಚೆ ಹಿಡಿದು ಮಳೆ ಸುರಿಯುತ್ತಿದೆ.ಸೃಷ್ಟಿಯನ್ನೆಲ್ಲಾ ತೋಯಿಸಿ ಎದುರಿಗೆ ಸಿಕ್ಕಿದ್ದನ್ನೆಲ್ಲಾ ಕೊಚ್ಚಿಕೊಂಡು ಹೋಗುತ್ತಿದೆ.ಅಂಗಳದ ತುಂಬೆಲ್ಲಾ ಹರಿಯುವ ಕೆಂಪು ಕೆಂಪು ನೀರು.ಹೌದು, ಯಾವುದೂ ನಿಂತ ನೀರಾಗಬಾರದು, ಸದಾ ಹರಿಯುತ್ತಲೇ ಇರಬೇಕು.ನಿಂತು ಪಾಚಿಗಟ್ಟುವುದು ನಾನು ಎಂದಿಗೂ ಯೋಚಿಸದ ಕನಸು. ಗಿರಿ ಕಂದರ ಎಲ್ಲವನ್ನೂ ಸರಿಸಿ ಮುಂದೆ ಸಾಗಿ ಸಾಗರ ಸೇರುವ ನದಿಯಂತೆ, ಬದುಕೂ ಸದಾ ಚಲನಶೀಲೆ. ಇದನ್ನೇ ತಾನೇ ನಾನು ನನ್ನ ಬದುಕಿನ ಸೂತ್ರವಾಗಿ ನೆಚ್ಚಿಕೊಂಡದ್ದು...! ಎಲ್ಲವೂ ಕೊಚ್ಚಿಕೊಂಡು ಹೋಗುವಾಗ ಮತ್ತೆ ಹರಿಯುವುದು ಅದೆಷ್ಟು ಕಷ್ಟ? ಆದರೂ ಅದು ಮಳೆಗೆ ಅದೆಷ್ಟು ಸಹಜ? ನನಗೆ?... ಮಳೆಯ ನೀರಿಗೆ ನೆನಪುಗಳ ಹಂಗಿಲ್ಲ.

ಅಂದು ಕೂಡಾ ಇಂತಹುದೇ ಒಂದು ಮಳೆ ಸುರಿಯುತ್ತಿದ್ದ ಸಂಜೆಯಲ್ಲಿ ಕನಸುಗಳ ಕಾಮನ ಬಿಲ್ಲನ್ನು ಹೊಸೆದುಕೊಂಡು ಕೂತಿದ್ದೆ.ಚೊಚ್ಚಲ ಬಸಿರು. ಒಂದು ವರ್ಷದ ನಮ್ಮ ಒಲವಲ್ಲಿ ಕುಡಿಯೊಡೆಯುತ್ತಿರುವ ಚಿಗುರನ್ನು ಬಸಿರಲ್ಲಿ ಹೊತ್ತುಕೊಂಡು ಮೆದುವಾಗಿದ್ದೆ.ಗೆಲುವಾಗಿದ್ದೆ, ಭೂಮಿಯಾಗಿದ್ದೆ. ಸಂಭ್ರಮ ಸಂತಸಗಳ ಕಾರಣವಾಗಿದ್ದೆ. ನನಗೂ ಗೊತ್ತಾಗಲೇ ಇಲ್ಲ, ಸಂತಸದಿಂದ ಸುರಿಯುವ ಮಳೆ ಮಿಂಚು ಸಿಡಿಲನ್ನೂ ತನ್ನೊಳಗೆ ಹೊತ್ತುಕೊಂಡಿದೆಯೆಂದು. ಸುಖದ ಕ್ಷಣಗಳು ಅದೆಷ್ಟು ಕ್ಷಣಿಕ! ಸುರಿಯುವ ಮಳೆಯಿಂದಾಗಿ ರಸ್ತೆ ಕಾಣದೇ ಇವರ ಬೈಕ್ ಬಸ್ ಗೆ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ...ಮಳೆ ನಿಂತಿತ್ತು. ನಿಲ್ಲುವ ಮೊದಲು ಎಲ್ಲವನ್ನೂ ಕೊಚ್ಚಿಕೊಂಡು ಹೋಗಿತ್ತು. ಅಂಗಳದಲ್ಲಿ ಅಲ್ಲಲ್ಲಿ ನಿಂತ ಕೆಂಬಣ್ಣದ ನೀರು. ಉತ್ತರ ಕಾಣದ ಪ್ರಶ್ನೆಗಳನ್ನು ನನ್ನೆದುರು ಚೆಲ್ಲಿ ಮಳೆ ನಿಂತಿತ್ತು. ಯಾವುದರ ಪರಿವೇ ಇಲ್ಲದೆ ಕದಲುತ್ತಿರುವ ಬಸಿರು ನನ್ನನ್ನು ವಾಸ್ತವಕ್ಕೆ ಕರೆ ತಂದು ನಿಲ್ಲಿಸುತ್ತಿದೆ, ಸಂಭ್ರಮಕ್ಕೆ ಕಾರಣವಾಗಿದ್ದು ಈಗ ಬೃಹದಾಕಾರ ಪ್ರಶ್ನೆಯಾಗಿ ಎದುರಿಗೆ ನಿಂತಿದೆ. ಮತ್ತೆ ಮಳೆ ಸುರಿಯುತ್ತಿದೆ. ಅಂಗಳದ ತುಂಬೆಲ್ಲಾ ಹರಿಯುವ ನೀರು, ಅದೆಷ್ಟು ಸಲೀಸು...ಮಳೆಯ ನೀರಿಗೆ ನೆನಪುಗಳ ಹಂಗಿಲ್ಲ.

ಹೊಟ್ಟೆಯಲ್ಲಿ ಮಗು ಬೆಳೆಯುತ್ತಿರುವಾಗ ಒಳ್ಳೆಯ ಪುಸ್ತಕ ಓದ್ಬೇಕು ಅಂತ ಮಹಾಭಾರತವನ್ನು ತಂದು ಕೊಟ್ಟಿದ್ದೂ  ಅವನೇ.ಸಂತಸದ ಕ್ಷಣಗಳಲ್ಲಿ ಖುಷಿಯಿಂದ ಓದಿದ್ದ ಭಾರತ ಕತೆಯಲ್ಲಿ ಈಗ ನನ್ನ ಮನಸ್ಸನ್ನು ಪೂರ್ತಿಯಾಗಿ ಕಲಕ್ಕಿದ್ದು ಮಾತ್ರ ಕುಂತಿಯ ಪಾತ್ರ...ದೂರ್ವಾಸರು ಉಪದೇಶಿಸಿದ ಮಂತ್ರದ ಕುರಿತು ಕುತೂಹಲಿಯಾಗಿ ಮದುವೆಯ ಮೊದಲೇ ಬಸಿರಾಗಿದ್ದಳು. ಆತಂಕ, ಭಯದ ನಡುವೆಯೇ ಮಗುವನ್ನು ಹಡೆದಿದ್ದಳು.ಮುದ್ದಾಗಿದ್ದ ಗಂಡು ಮಗು. ಮಗುವಿನ ಮುಖ ನೋಡಿ ಲೋಕವನ್ನೇ ಮರೆತಳು ಕುಂತಿ. ತನ್ನೊಡಲೇ ಚಿಗುರಾಗಿ ಬೆಳೆದು ನಗುತ್ತಿದೆ. ಅಮ್ಮನಾದಳು ಕುಂತಿ! ಹಾಲುಣಿಸುವ ಅಮ್ಮನಾದಳು, ಲಾಲಿ ಹಾಡಿ ಕಂದನ ತಬ್ಬಿಕೊಳ್ಳುವ ಅಮ್ಮನಾದಳು. ಸಂಭ್ರಮ ಸಂಭ್ರಮ ಸಂಭ್ರಮ....ಎಲ್ಲಿಯವರೆಗೆ? ದಾಸಿ ಬಂದು ಎಚ್ಚರಿಸಿದಳು .ಸುಖದ ಕ್ಷಣಗಳು ಅದೆಷ್ಟು ಕ್ಷಣಿಕ. ಸಂತಸದ ಕಾರಣವಾಗಿದ್ದ, ಎದುರಿಗೆ ನಿರಾಳವಾಗಿ ಮಲಗಿದ್ದ ಮಗು, ನನ್ನ ಮಗು ಈಗ ಪ್ರಶ್ನೆಯಾಗಿ ಕಾಡುತ್ತಿದೆ...ಇದು ಯಾರ ಮಗು? ನನ್ನದೇ? ಏನೆಂದು ಉತ್ತರಿಸಲಿ ಈ ಲೋಕಕ್ಕೆ? ಮದುವೆಯ ಮೊದಲೇ ಮಗು? ಅಂದರೆ...ಅಂದರೆ, ಕುಂತಿ ಕನ್ಯೆಯಲ್ಲ...! ನನ್ನ ಮದುವೆಯ ಕನಸು? ಭವಿಷ್ಯ?. ಇಲ್ಲ ಹಾಗಾಗಬಾರದು...ನನ್ನದಲ್ಲ ಮಗು...ಈ ಮಗು ನನ್ನದಲ್ಲ! ಅಯ್ಯೋ ನನ್ನ ವಿಧಿಯೇ!...ಬಿಟ್ಟೇ ಬಿಟ್ಟಳು ನಗುವ ಮಗುವನ್ನು ಹರಿಯುವ ನೀರಿನಲ್ಲಿ...ಜೊತೆಗೆ ನೆನಪುಗಳನ್ನೂ...ಹರಿಯುವ ನದಿಗೆ ನೆನಪುಗಳ ಹಂಗಿಲ್ಲ...!

ಎಲ್ಲವನ್ನೂ ಕಳೆದುಕೊಂಡು ಬರಿಯ ಸಂತಾಪದ ಕಣ್ಣುಗಳಿಗೆ ಕಾರಣವಾಗಿದ್ದ  ಕ್ಷಣಗಳಲ್ಲೂ ಬಿಡದೇ ಕಾಡಿದಳು ಮತ್ತ ಮತ್ತೆ ಕುಂತಿ. ಕಣ್ಣೆದುರು ತೇಲಿ ಬಿಟ್ಟ ತೊಟ್ಟಿಲಲ್ಲಿ ನಗುವ ಮಗು! ಇಲ್ಲ, ಇದು ಸರಿಯಲ್ಲ.‌‌..ತಪ್ಪು ಮಾಡಿದಳು ಕುಂತಿ...ಹಾಗಾದರೆ ಯಾವುದು ಸರಿ? ಏನಿತ್ತು ಅವಳ ಮುಂದೆ ಬೇರೆ ಆಯ್ಕೆ?...ಎದುರಲ್ಲಿ ಶಾಂತವಾಗಿ ಹರಿಯುವ ನದಿ...ನದಿಯಲ್ಲೊಂದು ತೊಟ್ಟಿಲು...ಆದರೆ ಮಗುವಿಲ್ಲ! ಇಲ್ಲ,  ತೊಟ್ಟಿಲಲ್ಲಿ ಮಗುವಿಲ್ಲ.ನನ್ನ ಮಗು...ನನ್ನ ಮಗು...! ಕನಸೇ? ಇದು ಕನಸೇ? ಕೂತಲ್ಲಿ ನಿಂತಲ್ಲಿ ಕಾಡಿದ ಕುಂತಿ ಕೊನೆಗೂ ನನ್ನೊಳಗಿಳಿದಳು. ಇಲ್ಲ ಹಾಗಾಗಬಾರದು. ಕರ್ಣ ಪಟ್ಟ ಪಾಡು ನನ್ನ ಮಗುವಿಗೆ ಬರಬಾರದು...ಹಾಂ...ಹರಿಯುತ್ತಲೇ ಇರಬೇಕು ಎಲ್ಲವನ್ನು ಕೊಚ್ಚಿಕೊಂಡು ಹೋದರೂ ಹರಿಯುತ್ತಲೇ ಇರಬೇಕು.ನಿಂತ ನೀರಾಗಬಾರದು.ನಾನು ಮಳೆಯಾಗಬೇಕು, ಬಿಡದೇ ಸುರಿಯುವ ಮಳೆಯಾಗಬೇಕು. ನೆನಪುಗಳನ್ನೆಲ್ಲಾ ಕೊಚ್ಚಿಕೊಂಡು ಸದಾ ಹರಿಯುವ ನೀರಾಗಬೇಕು. ಕುಂತಿಯಂತೆ ಮಗುವನ್ನು ನೀರಲ್ಲಿ ತೇಲಿ ಬಿಡಲಾರೆ...ಈ ಮಗುವನ್ನುಳಿಸಿ ಬದುಕನ್ನು ನಿಂತ ನೀರಾಗಿಸಲಾರೆ.ನಾನು ಹರಿಯುವ ನದಿ.ನನಗೆ ಅಣೆಕಟ್ಟುಗಳಿಲ್ಲ.ಅಳು, ದುಃಖ, ಸಾಂತ್ವಾನ, ಸಮಾಧಾನ ಎಷ್ಟು ದಿನ?...ಎಲ್ಲವನ್ನೂ ಕಳೆದುಕೊಂಡೆ.ಎದುರಿಗೆ ಶಾಂತವಾಗಿ ಹರಿಯುವ ನದಿ...ತೇಲಿ ದೂರ ದೂರ ಸಾಗುತ್ತಿರುವ ತೊಟ್ಟಿಲು... ಬರಿಯ ತೊಟ್ಟಿಲು...ಕಂದನಿಲ್ಲದ ತೊಟ್ಟಿಲು...ಬರಿದಾದೆ, ಹಗುರಾದೆ...ಮತ್ತೆ ಹರಿಯುವ ನೀರಾದೆ...ಹರಿಯುವ ನೀರಿಗೆ ನೆನಪುಗಳ ಹಂಗಿಲ್ಲ.

ಯಾವುದೂ ನಿಲ್ಲುವುದಿಲ್ಲ...ಹರಿಯುವುದೇ ಬದುಕು! ಮತ್ತೆ ಮದುವೆ, ಮತ್ತೆ ಮಗು, ನಗು...ಬದುಕು ಸದಾ ಚಲನಶೀಲ.ಎಡಬಿಡದೇ ಸುರಿಯುವ ಮಳೆ, ಹರಿಯುತ್ತಿರುವ ನೀರು...ಈಗ ಮಗಳ ಪ್ರಶ್ನೆ...ಕೆಟ್ಟವಳು ಕುಂತಿ!...ಕುಂತಿ ಕೆಟ್ಟವಳು...ಕುಂತಿ...ನಿಜಕ್ಕೂ ಕುಂತಿ ಕೆಟ್ಟವಳೇ? ಹೇಗೆ  ಎದುರಿಗೆ ಇರಿಸಲಿ ಈ ಕುಂತಿಯನ್ನು? ಅರ್ಥವಾದಳೇ ಕುಂತಿ ನನ್ನ ಮಗಳ ಕಣ್ಣಿಗೆ? ಕುಂತಿಯಾಗದ ಹೊರತು ಕುಂತಿ ದಕ್ಕುವವಳಲ್ಲ.ಲೋಕಕ್ಕೆ ಹೇಳಲು ನನ್ನಲ್ಲಿ ನಿಜಕ್ಕೂ ಉತ್ತರಗಳಿಲ್ಲ. ನಾನು ಸುರಿಯುತ್ತಿರುವ ಮಳೆ.ಕೊಚ್ಚಿಕೊಂಡು ಹೋಗುವ ಮಳೆ...ನನಗಷ್ಟೇ ಗೊತ್ತಿರುವುದು.ಹರಿಯುವ ನೀರಿಗೆ ನೆನಪುಗಳ ಹಂಗಿಲ್ಲ.



ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

Sunday 3 December 2017

ದೂರ ಹೋಗು ನೆನಪೇ
ಸುಳಿದು ನನ್ನ ಕಾಡಬೇಡ
ಒಲವ ಕದವ ತೆರೆದು
ಮೋಹಕ‌ ಸಂಚು ಹೂಡಬೇಡ
ತಣ್ಣಗಿದೆ ಈಗ ಎದೆಯ ಸುಡುವ ಜ್ವಾಲೆ
ಕೆಣಕದಿರು ಮತ್ತೆ ಶಂಕೆ ಧೂಮ ಮಾಲೆ

ಹರಿವ ನೀರಿನಲಿ ದಿಕ್ಕು ತಪ್ಪಿದ
ಬದುಕ‌ ನಾವೆಯೆಷ್ಟೋ
ಸುರಿವ ಮಳೆಯಲ್ಲಿ ನೀರು ಬತ್ತಿದ
ಕಣ್ಣ ತೊರೆಗಳೆಷ್ಟೋ
ಸುಮ್ಮನಿದೆ ಎಲ್ಲಾ ನೋಡಿ ಕೂಡಾ ತೀರ
ಮೊರೆಯುತಿರೆ ಅಲ್ಲಿ ಕಡಲ ಒಡಲು ಭಾರ

ಹೂವ ಮಕರಂದ ಹೀರಿದಾ ಭ್ರಮರ
ತಿರುಗಿ ಬಾರದಲ್ಲ
ಉರಿವ ದೀಪಕೆ ಸುಟ್ಟ ರೆಕ್ಕೆಗಳ
ಕನಸು ಕಾಡೂದಿಲ್ಲ
ಮಿನುಗುತಿದೆ ತಾರೆ ಇರುಳ ಬಾನ ತುಂಬ
ಮುಸುಕಿದರೆ ಮೋಡ ಒಂಟಿ ಚಂದ್ರ ಬಿಂಬ


ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು


ನನ್ನವಳು,
ಅಷ್ಟು ಬೇಗ ಅಂಕೆಗೆ
ಸಿಗದ ಅಸೀಮಳು.
ಅವಳು,
ಕೋಮಲ ಶುಧ್ಧತೆಯನ್ನೆಲ್ಲಾ
ದಾಟಿ ನಿಂತ ತೀವ್ರತೆಯ ಗಡಿಯವಳು,

ಅವಳ ಸುಕೋಮಲ
ಲಹರಿಗಳಲ್ಲೇ ಸದಾ ಅಲೆಯುವ,
ಅವಳಷ್ಟೇ ಪ್ರೀತಿಸುವ
ತೀವ್ರತೆಯ ಗಡಿಗಳನ್ನು ಎಂದೂ
ಮುಟ್ಟಲಾಗದ ನಾನು,
ಅವಳನ್ನು ಹುಡುಕುವುದು
ಕೋಮಲತೆಯ ನುಣುಪು ಗರಿಗಳಲ್ಲಿ.
ಬದುಕಿನ ಗತಿಗಳಲ್ಲಿ
ನಮ್ಮ ನಡುವಿನ ಅಂತರ ಬಹುದೂರ.
ನನಗೂ ಗೊತ್ತಿದೆ,
ಅವಳ
ಧಮನಿಗಳಲ್ಲಿ ಹರಿಯುವುದು
ಎಂದಿಗೂ ತೀರದ
ಕದನ ಕುತೂಹಲವೆಂದು.

ಹಾಗಂತ,
ಅಕಸ್ಮಾತ್ ಕೈಗೆ ಸಿಕ್ಕರೆ
ಸುಮ್ಮನೆ ನಿಲ್ಲದ,
ತಟ್ಟಂತ ಬಿಟ್ಟರೂ ಓಡದ
ರಚ್ಚೆ ಹಿಡಿದು ಅಳುವ
ಅತ್ತು ಅತ್ತು ನಗುವ
ಮಡಿಲ ಮಗುವಿನಂತವಳು.

ಅದಕ್ಕಾಗಿಯೇ,
ಪ್ರತೀ ಬಾರಿ ತಂಬೂರ ಶೃತಿ ಮಾಡಿ
ಅಭ್ಯಾಸಕ್ಕಿಳಿಯುತ್ತೇನೆ.
ಮನೆಬಾಗಿಲಿಗೆ ಸಿಂಗರಿಸಿದ
ಗರಿಯನ್ನು ಸ್ಪರ್ಶಿಸಿ
ಅವಳ ಗಡಿಗಳನ್ನು ಮುಟ್ಟುತ್ತೇನೆ;
ಮತ್ತು
ಸಿಕ್ಕರೂ ಸಿಕ್ಕಳೆಂಬ
ಆಸೆಯಿಂದ ಸಂಚರಿಸುತ್ತೇನೆ.

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಕೋಳಿಗಳ ಕಾಲಿಗೆ ಕತ್ತಿ ಕಟ್ಟಿ
ಹುರಿದುಂಬಿಸುವವರೆಗೂ
ಒಬ್ಬರ ಮೇಲೊಬ್ಬರಿಗೆ,
ಅಷ್ಟು ರೋಷವಿರಬಹುದೆಂಬ
ಕಲ್ಪನೆಯೂ ಇರಲಿಲ್ಲ.

ಅಂಕಕ್ಕೆ ಇಳಿದ ನಂತರ
ಮತ್ತೆ ಯೋಚನೆಗಿಲ್ಲಿ ಅವಕಾಶಗಳಿಲ್ಲ.
ಇರುವುದಿಷ್ಟೇ;
ನಾನೋ ನೀನೋ ಎನ್ನುವ
ಅಂತಿಮ ವ್ಯಾಪಾರ.

ಬೆನ್ನ ಹಿಂದೆ ನಿಂತವರಿಗೆ
ಇದು ಈ ಕ್ಷಣದ ಪಂದ್ಯವಷ್ಟೇ;
ಅವರ ಚೀಲಗಳಲ್ಲಿ
ಮತ್ತೂ ಇವೆ,
ಕಾಲಿಗೆ ಕತ್ತಿ ಕಟ್ಟಿಸಿಕೊಳ್ಳಲು
ಕಣ್ಣಿಗೆ ಬಟ್ಟೆಕಟ್ಟಿಕೊಂಡ
ಬೇರೆ ಬೇರೆ ಬಣ್ಣದ ಕೋಳಿಗಳು.

ಅಲ್ಲಿಯವರೆಗೆ,
ಅವುಗಳೀಗ ಒಂದೇ ಚೀಲದಲ್ಲಿ
ಸುಖವಾಗಿ ಮಲಗಿವೆ,
ಒಂದನ್ನೊಂದು ಅಪ್ಪಿಕೊಂಡು;

ಕಾಲಿಗೆ ಕತ್ತಿ ಕಟ್ಟುವುದೂ ಒಂದೇ,
ಮತ್ತು
ಕಣ್ಣಿಗೆ ಬಟ್ಟೆ ಕಟ್ಟುವುದೂ.
ಒಟ್ಟಿಗಿದ್ದವರೆಂದು
ಆ ಕ್ಷಣಕ್ಕೆ ಗೊತ್ತಾಗುವುದೇ ಇಲ್ಲ;
ಮತ್ತು ಅಂಕಕ್ಕೆ ರಂಗೇರಲು
ಅಷ್ಟೇ ಸಾಕು,
ಈ ಜನಕ್ಕೆ;
ಆ ಕ್ಷಣಕ್ಕೆ...!

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ನಮ್ಮ ಭಾರತ ಕೇವಲ ದೇಶವಲ್ಲ
ವಿಶ್ವದಿ ಪುಟಿಯುವ ಶಕ್ತಿ
ಈ ಭೂಮಿಯು ಬರಿಯ ಮಣ್ಣಲ್ಲ
ಮೋಕ್ಷವ ತೋರುವ ದೀಪ್ತಿ

ಇಲ್ಲಾಡುವ ಭಾಷೆಯು ನುಡಿಯಲ್ಲ
ಶಾಂತಿಯ ಪಠಿಸುವ ಮಂತ್ರ
ಇಲ್ಲಿರುವುದು ಕೇವಲ ಬದುಕಲ್ಲ
ಸಗ್ಗಕೆ ನಡೆಸುವ ಯಂತ್ರ

ಹರಿಯುವ ನದಿ ಬರಿ ನೀರಲ್ಲ
ಪಾಪವ ಕಳೆಯುವ ತೀರ್ಥ
ರಾಷ್ಟ್ರೀಯತೆ ಬರಿಯ ಘೋಷವಲ್ಲ
ಸಮತೆಯ ಸಾರುವ ಸೂತ್ರ

ಸ್ವಾತಂತ್ರ್ಯದ ಹಿಂದಿರುವ ತ್ಯಾಗ ಬಲಿದಾನಗಳನ್ನು ಮರೆಯದೇ ಇಂದಿನ ದಿನವನ್ನು ಹಬ್ಬವಾಗಿಸೋಣ.

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಕೃಷ್ಣ ಕನ್ನಡಿ...

ಚಿತ್ರ: Avinash K Nagaraj

ಕೃಷ್ಣನ ಕೊಳಲಿನ ನಾದದಲಿ ಜಗದ ಒಲುಮೆಯಿದೆ
ನಗುವ ನವಿಲಿನ ಗರಿಯಲ್ಲಿ ಬಾಳಿನ ಚಿಲುಮೆಯಿದೆ
ಅವನಲ್ಲಿ ಇರಿಸು ಮನ
ಆ ಸನಿಹವೆ ಬೃಂದಾವನ

ಬೆಣ್ಣೆಯ ಕದಿಯುವ ಪೋರನ ಕಣ್ಣಲು
ಕಳ್ಳನೆ ಕಾಣಿಸಿದ
ಹೆಣ್ಣನು ಕಾಡುವ ಮಾರನ ಕೃತಿಯೊಳು
ಮಳ್ಳನೆ ಕಾಣಿಸಿದ
ಕಾಣಲು ಕನ್ನಡಿಯೊಳಗೆ ಕಂಡೆನು ನನ್ನದೇ ರೂಪ
ಕಾಣದು ಅಚ್ಯುತನೊಸಗೆ ಮುಸುಕಿರೆ ಮಾಯೆಯ ಧೂಪ

ಹೊಳೆಯುವ ಹೂವಿನ ಸೆಳೆತಕೆ ಸಿಕ್ಕಲು
ಪರವಶ ನಾನದೆ
ಚಿಕ್ಕೆಯ ಕದಿರನು ತೋರುವ ದುಂಬಿಗೆ
ಕುರುಡನು ನಾನದೆ
ಕಾಡಲು ಭಾವದ ಲಹರಿ ಕೇಳಿತು ಕೃಷ್ಣನ ಮುರಳಿ
ಕಳೆಯಿತು ಹೃನ್ಮನದಿರುಳು ನೋಡಲು ಮೈಮನವರಳಿ

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
#ಅಪ್ರಮೇಯ

ಅವನೋ,
ಗೋವರ್ಧನ ಗಿರಿಯನ್ನು
ಕಿರುಬೆರಳಿನಲ್ಲೆತ್ತಿದ
ಅಸೀಮಬಲ;
ಆದರೂ
ಸಾಕಾಯಿತಲ್ಲ
ಅವನನ್ನೆತ್ತಲು
ಒಂದು ತಳಸೀದಳ?

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಮಳೆಯ ದಟ್ಟಮೋಡಗಳು ಒತ್ತೊತ್ತಾಗಿ ಆಗಸದಲ್ಲಿ ಹಾಲು ತುಂಬಿದ ಹಸುವಿನ ಕೆಚ್ಚಲಿನಂತೆ ಇನ್ನೇನು ಸುರಿಯುವುದೊಂದೇ ತಡ ಎಂಬಂತೆ ಕಾಯುತ್ತಿದ್ದ ಒಂದು ಶ್ಯಾಮಲ ಸಂಜೆಯಲ್ಲಿ ಕನಸುಗಳ ಬೆನ್ನು ಹತ್ತಿ ಹೊರಟಿದ್ದೆ. ಮಳೆ ಸುರಿಯುವ ಮೊದಲಿನ ಕಡುಕಪ್ಪಾದ ಸಂಜೆಗಳ ಮೇಲೆ ನನಗ್ಯಾಕೋ ನಿಲ್ಲದ ನಿರಂತರ ಮೋಹ. ಅದೂ ಸ್ವಲ್ಪ ಗುಡುಗು ಸಿಡಿಲು ಇದ್ದರಂತೂ ಹಬ್ಬ ನನಗೆ. ಆದರೆ ಅದಕ್ಕಾಗಿ ಕಾರ್ತೀಕದವರೆಗೆ ಕಾಯಲೇ ಬೇಕು. ಇಂತಹ ಸಂಜೆಗಳು ನನ್ನ ನೆನಪುಗಳನ್ನು, ಕನಸುಗಳನ್ನು ಕೆಣಕುತ್ತಾ ಕೆಣಕುತ್ತಾ ಇರುಳಿನ ಸೆರಗಲ್ಲಿ ಖಾಲಿಯಾಗುತ್ತವೆ. ಮೊದಲ ದಿನದ ಶಾಲೆಗೆ ಅಳುತ್ತಾ ಹೋಗಿ, ಅಳುತ್ತಲೇ ಹಿಂದಿರುಗಿದಾಗ ಇಂತಹುದೇ ಒಂದು ಶ್ಯಾಮಲ ಸಂಜೆ! ಕಟಾವ್ ಆದ ಗದ್ದೆಯಲ್ಲಿ ಒಣಗಲು ಬಿಟ್ಟ ಬತ್ತದ ಸೂಡಿಗಳನ್ನು ಹುರಿಹಗ್ಗ ತೆಗೆದುಕೊಂಡು ಅಪ್ಪನೊಂದಿಗೆ ಓಡುವುದೂ ಇಂತಹುದೇ ಮಳೆ ಮೋಡಗಳ ಸಂಜೆಗಳಲ್ಲಿ! ಬೈಲ್ ಗದ್ದೆಗಳಲ್ಲಿ ಕಟ್ಟಿದ ದನಕರುವನ್ನು ತರಲು ಅಮ್ಮನು ಓಡುವ ಹುಸೇನ್ ಬೋಲ್ಟ್ ಓಟ! ಅಂಗಳದಲ್ಲಿ ಹಾಯಾಗಿ ಒಣಗುತ್ತಿದ್ದ ಅಡಿಕೆಗಳನ್ನು ಸಿಕ್ಕಿದ ಚೀಲಗಳಲ್ಲಿ ತುಂಬಿಸಿ, ಚೀಲ ಸಿಗದಿದ್ದರೆ ಬುಟ್ಟಿಗಳಲ್ಲಿ ತುಂಬಿಸುವ ಧಾವಂತಕ್ಕೆ ಕೆಲವು ಸಲ ಸೂರ್ಯನೂ ಇಣುಕುವುದುಂಟು ಮೋಡಗಳ ಮರೆಯಿಂದ!

ಹೀಗೆ ಗೊತ್ತುಗುರಿಯಿಲ್ಲದೆ ಹೊರಟಾಗ ಮನದಲ್ಲಿ ಲಂಗುಲಗಾಮಿಲ್ಲದ ಏನೇನೋ ಯೋಚನೆಗಳು  ಹೊರಗೆ ಸುರಿಯುವ ಮಳೆಗೆ ತಾಳ ಹಾಕುತ್ತಾ ಯಾವುದೋ ಹಳೆಯ ಅನಂತ್ ನಾಗ್ ಲಕ್ಷ್ಮಿ ಜೋಡಿಯ ಗೀತೆಯೊಂದನ್ನು ಗುನುಗುತ್ತದೆ. ಈ ಮಳೆ ಮತ್ತು ಹಳೆಯ ಕನ್ನಡ ಚಿತ್ರಗೀತೆಗಳಿಗೆ ಅವಿನಾಭಾವ ಸಂಬಂಧ. ಯಾಕಿರಬಹುದೆಂದು ಕೆದಕುವಾಗ ಮನದ ಮೂಲೆಯಲ್ಲಿ ಇನ್ನೂ ರಿಪೇರಿಯಾಗದೇ ಬಿದ್ದಿದ್ದ ಒಂದು ರೇಡಿಯೋ ಸಿಕ್ಕಿತು.ರೇಡಿಯೋ...! ಆಗ ನಮ್ಮ ಮನೆಯಲ್ಲಿದ್ದ ಅಮೂಲ್ಯ ವಸ್ತುಗಳೆಂದರೆ ರೇಡಿಯೋ ಮತ್ತು ಒಂದು ಉರೂಂಟ್ ಇದ್ದ ಸ್ಟೀಲ್ ನ ಕೀ ಕೊಡುವ ಅಲರಾಂ ಗಡಿಯಾರ. ಮತ್ತು ಅವೆರಡೂ ಸರಿಯಾಗಿದ್ದದ್ದು ನನ್ನ ಕೈಗೆ ಬರುವವರೆಗೆ ಮಾತ್ರ. ಯಾವುದನ್ನೂ ರಿಪೇರಿ ಮಾಡಬಲ್ಲ ಹುಡುಗ ಅನ್ನುವ ಭಾರೀ ಹೆಸರು ಗಳಿಸಿಕೊಂಡಿದ್ದ ನಾನು ಮೊದಲು ಕೈ ಹಾಕಿದ್ದು ಗಡಿಯಾರಕ್ಕೆ . ಸರಿ ಇದ್ದ ಗಡಿಯಾರವನ್ನು ಬಿಚ್ಚಿ ಅದರೊಳಗಿದ್ದ ಸ್ಟೀಲ್ ನ ಕರುಳನ್ನು ಹೊರ ತೆಗೆದು ಅದನ್ನೊಂದು ಶೋಪೀಸ್ ಮಾಡಿ ಬಿಡಲು ನನಗೇನೂ ಬಹಳ ಸಮಯ ತೆಗೆದುಕೊಂಡಿರಲಿಲ್ಲ.

ನಂತರ ನನ್ನ ಕಣ್ಣು ಬಿದ್ದದ್ದು ಈ ರೇಡಿಯೋ ಮೇಲೆ. ಮಂಗಳೂರು ಆಕಾಶವಾಣಿಯಷ್ಟೇ ಟ್ಯೂನ್ ಆಗಿದ್ದ ರೇಡಿಯೋದಲ್ಲಿ ಪ್ರಸಾರ ಆಗುತ್ತಿದ್ದ, ಕೃಷಿರಂಗ ಮತ್ತು ಯುವವಾಣಿಯ ಮೊದಲ ಟ್ಯೂನ್ ಗಳೆಂದರೆ ನನಗೆ ಅಚ್ಚುಮೆಚ್ಚು. ಈಗಲೂ ಕೃಷಿರಂಗಕ್ಕೆ ಅದೇ ಟ್ಯೂನ್ ಇದೆ. ಮತ್ತು ಒಳ್ಳೆಯ ಚಿತ್ರಗೀತೆಗಳು ಬರುತ್ತಿದ್ದರಿಂದ ಬಹಳ ಸಮಯ ಅದರ ರಿಪೇರಿಗೆ ಕೈಹಾಕಿರಲಿಲ್ಲ. ಆಗಲೇ ನನಗೆ ಅನಂತನಾಗ್ ಲಕ್ಷ್ಮಿ ಜೋಡಿಯ ಪದ್ಯಗಳ ಹುಚ್ಚು ಹಿಡಿದದ್ದು. ಎರಡು ಸಲ ಭಾನುವಾರದ ಕೋರಿಕೆ ಹಾಡಾಗಿ "ಅರಳಿದೇ ಅರಳಿದೇ ಮುದುಡಿದ ತಾವರೆ ಅರಳಿದೆ..." ಹಾಡು ಪ್ರಸಾರವಾಗಿತ್ತು. ಆದರೆ ಗೆಳೆಯನೊಬ್ಬ ," ಏನೋ...ಬರೀ ಮಂಗಳೂರು ಸ್ಟೇಷನ್ ಅಷ್ಟೇ ಕೇಳೋದಾ ನೀನು?... ಸ್ವಲ್ಪ ತಿರುಗಿಸು...ವಿವಿಧ್ ಭಾರತಿಯ ಸ್ಟೇಷನ್ ಗಳಲ್ಲದೇ ಶ್ರೀಲಂಕಾದ ಸ್ಟೇಷನ್ ಗಳೂ ಬರ್ತವೆ" ಅಂದಾಗಲೇ ರೇಡಿಯೋದ ಸುವರ್ಣ ದಿನಗಳು ಅಂತ್ಯವಾಗುವ ಕಾಲ ಸನ್ನಿಹಿತವಾಗಿತ್ತು. ಸಂಜೆ ಮನೆಗೆ ಹೋಗಿ ಬೇರೆ ಬೇರೆ ಸ್ಟೇಷನ್ ಗಳಿಗೆ ಟ್ಯೂನ್ ಮಾಡಲು ನೋಡಿದರೆ..ಊಹೂಂ...ಮಂಗಳೂರು ಬಿಟ್ಟು ಬೇರಾವುದೇ ಸ್ಟೇಷನ್ ಕೇಳಲೇ ಇಲ್ಲ. ಬರೇ ಗುರ್...ಅಂತ ಬೆಕ್ಕು ಪ್ರೀತಿಯಿಂದ ಕಾಲು ಸವರುವಾಗ ಮಾಡುವ ಶಬ್ದ ಮಾತ್ರ ಬರ್ತಾ ಇತ್ತು. ಹೋ..ಇಲ್ಲೇನೋ ಸಮಸ್ಯೆ ಇದೆ...ಅಂತ ನನ್ನ ರಿಪೇರಿ ಮೈಂಡ್ ಗೆ ಹೊಳೆದದ್ದೇ ತಡ...ಮುಂದಿನ ಅರ್ಧ ಗಂಟೆಯಲ್ಲಿ ಮಂಗಳೂರು ಸ್ಟೇಷನ್ ಕೂಡಾ..."ನಿಲಯದ ಇಂದಿನ ಪ್ರಸಾರವನ್ನು ಮುಕ್ತಾಯಗೊಳಿಸುತಿದ್ದೇವೆ..."  ಅಂತ ತನ್ನ ಕೊನೆಯ ವಾಕ್ಯವನ್ನುಸುರಿ ಪ್ರಾಣ ಬಿಟ್ಟಿತು.

ಹೀಗೆ ನನ್ನ ಬಾಲ್ಯದ ಬೆರಗಿನ ಅರಮನೆ ಆಗಿದ್ದ ಮಂಗಳೂರು ರೇಡಿಯೋ ಸ್ಟೇಷನ್ ಗೆ ಹೋದ ವರ್ಷ ನನ್ನ ಸ್ವರಚಿತ ಕವನ ವಾಚನ ಮಾಡಲು ಹೋಗಿ ಒಂದು ಆಸೆಯನ್ನು ತಣಿಸಿಕೊಂಡಿದ್ದೆ.ನಿನ್ನೆಯೂ ಮನದಲ್ಲೆಲ್ಲಾ ರೇಡಿಯೋನೇ ತುಂಬಿದಾಗ ಹಿಂದೆ ಮುಂದೆ ನೋಡದೆ ರೇಡಿಯೋ ಸಾರಂಗ್ ನ ಗೆಳೆಯ Abhishek Shetty ಗೆ  ಫೋನ್ ಮಾಡಿ ಸಾರಂಗದ ಬಣ್ಣಬಣ್ಣದ ಬದುಕಿಗೆ ಪ್ರವೇಶ ಪಡೆದೆ.ಒಳಗೆ ಹೋಗುತ್ತಲೇ ಬಹುಕಾಲದ ಎಫ್.ಬಿ. ಸ್ನೇಹಿತ Vk Kadaba  ನಗುವಿನ ಸ್ವಾಗತ ನೀಡಿದರು. ಮುಂದೆ ಸಾರಂಗದ ಕಾರ್ಯಕ್ರಮ, ಕಂಟ್ರೋಲ್ ರೂಮ್, ಲೈವ್ ರೂಮ್, ರೆಕಾರ್ಡಿಂಗ್ ರೂಮ್ ನ ವಿಷಯಗಳ ಬಗ್ಗೆ ಒಂದಿಷ್ಟು ಮಾಹಿತಿ ನೀಡಿ, ಬಿಸಿಬಿಸಿ ಚಹಾ ಕುಡಿಸಿದ ಅಭಿಷೇಕ್  ನಂತರ ಒಂದು ಕ್ಷಣ ನನ್ನನ್ನೂ ಆರ್.ಜೆ. ಯಾಗಿಸಿದರು.

ಆದರೆ ಈ ಭೇಟಿಯ ಅಸಲೀ ವಿಷಯವಿದಲ್ಲ.  #TEAM #BLACKANDWHITE ಅನ್ನುವ ಒಂದು ಸಂಘಟನೆಯನ್ನು ಇತರ ಕೆಲವು ಗೆಳೆಯರೊಂದಿಗೆ ಸೇರಿ ಆರಂಭಿಸಿ ಮೊದಲ ಕಾರ್ಯಕ್ರಮವಾಗಿ ಹೋದ ವರುಷ "ಹಾಡು ಹುಟ್ಟುವ ಸಮಯ" ಎನ್ನುವ ಅಭೂತಪೂರ್ವ ಕಾರ್ಯಕ್ರಮವನ್ನು ಮಂಗಳೂರಿನ ಕಲಾ ರಸಿಕರಿಗೆ  ಕೊಟ್ಟವರು. ಹಿರಿಯ ಕವಿಗಳಾದ ಎಚ್.ಎಸ್.ವಿ ಮತ್ತು ಬಿ.ಆರ್.ಎಲ್. ಮಾತುಕತೆ ಜೊತೆಗೆ ಗಾಯಕ ರವಿ ಮೂರೂರ್ ತಂಡದಿಂದ ಅವರ ಭಾವಗೀತೆಗಳ ಪ್ರಸ್ತುತಿ...ತುಂಬಾ ಒಳ್ಳೆಯ ಆ ಕಾರ್ಯಕ್ರಮಕ್ಕೆ ನಾನೂ ಸಾಕ್ಷಿಯಾಗಿದ್ದೆ. ಈ ವರ್ಷ ಇದೇ ಸಂಘಟನೆ " ಅಮರ್ ಜವಾನ್ " ಎನ್ನುವ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ದಕ್ಷಿಣ ಕನ್ನಡದ ಹುತಾತ್ಮ ಯೋಧರನ್ನು ಸ್ಮರಿಸುತ್ತಾ ಅವರ ಕುಟುಂಬವನ್ನು ಅಭಿನಂದಿಸುವ ಒಂದು ಅರ್ಥಪೂರ್ಣ ಕಾರ್ಯಕ್ರಮ. ಈ ಎಲ್ಲಾ ಒಳ್ಳೆಯ ಅಭಿರುಚಿಯ ಕಾರ್ಯಕ್ರಮಗಳಿಗಾಗಿ ನಾನೂ ಇವರ ಬಳಗದೊ‌ದಿಗೆ ಕೈಜೋಡಿಸಿದ್ದೇ‌ನೆ.ನೀವೆಲ್ಲರೂ ಬನ್ನಿ, ಒಂದು ಅರ್ಥಪೂರ್ಣ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ.

ದಿನಾಂಕ: 20-08-2017
ಸ್ಥಳ : ಪುರಭವನ ಮಂಗಳೂರು
ಸಮಯ : 10am

ಈ ಕಾರ್ಯಕ್ರಮಕ್ಕೆ ನಿಮಗೆಲ್ಲರಿಗೂ ತುಂಬು ಹೃದಯದ ಸ್ವಾಗತ
ಯಾರೊ ತೋರಿದ ದಾರಿಯಲ್ಲಿ
ನಡೆದು ಬಳಲಿದೆ ಸುಮ್ಮನೆ
ಗಮ್ಯ ತಿಳಿಯದ ಗುಟ್ಟಿನಲ್ಲಿ
ಮರೆತು ಹುಡುಕಿದೆ ನನ್ನನೆ

ಗುರಿಯ ತೋರುವ ದಾರಿಗಳಿಗೆ
ಬೀಸಿ ಕರೆಯುವ ಕವಲಿದೆ
ಗುರುವು ಕಾಣದೆ ನಿಂತ ನಿಲುವಿಗೆ
ಅತ್ತ ಹೊರಳುವ ತೆವಲಿದೆ

ಹಕ್ಕಿ ಹಾಡನು ಹೆಕ್ಕಿ ನೋಡು
ಗೂಡು ಮಗ್ಗುಲ ಹಾಸಿಗೆ
ಬಣ್ಣ ಬಣ್ಣದ ಹಕ್ಕಿ ಕಾಡು
ಕೂಡಿ ಗದ್ದಲ ಸಂತೆಯೆ

ಯಾವ ಹಕ್ಕಿಯ ಕೊರಳ ದನಿಯ
ಜಾಡು ಹಿಡಿಯಲಿ ಇಂದು ನಾ?
ದಾರಿ ಕಳೆದು ಹೋಗಿ ಸೇರಲು
ತಾನು ಮುಟ್ಟುವೆ ಎಂದು ನಾ?

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಚಿತ್ರ ಕೃಪೆ: Gopi Hirebettu

ಭರಿಸಲಾಗದು ಮನೆಯಲಿ ನಿನ್ನಯ ಅನುಪಸ್ಥಿತಿ
ಹೇಗೆ ತಿಳಿಸಲಿ ಮನಸಿನ ನನ್ನ ಕಲಕುವ ಈ ಸ್ಥಿತಿ

ಅಪ್ಪ ನಿನ್ನನು ನೋಡಿದ ಒಂದೂ ನೆನಪು ನನಗಿಲ್ಲ
ನಿನ್ನ ಕತೆಯನು ಕೇಳುತಾ ಬೆಳೆದೆ ನಾನು ದಿನವೆಲ್ಲ
ಪುಟ್ಟ ಕಣ್ಣಲಿ ಎಂದಿಗೂ ಅಮ್ಮ ತೋರಿದ ಬೆರಗು ನೀ
ಕವಿದ ಮನದ ಇರುಳನು ಕಳೆಯೊ ಬೆಳಕ ಸೂರ್ಯ ನೀ
ನಿನ್ನ ನೆನಪೇ ನನ್ನ ಪೊರೆವ ಬೆಚ್ಚಗಿನ ಶ್ರೀರಕ್ಷೆಯು
ನೀನು ಕಂಡ ಕನಸೇ ನಾನು ನಡೆಯುವ ದಾರಿಯು

ಅಪ್ಪ ನಿನ್ನ ಕಾಣುವೆ ನಾ ಗಡಿಯ ಕಾಯುವ ಯೋಧರಲ್ಲಿ
ಶತ್ರು ಗುಂಡಿಗೆ ಹೆದರದೆ ಎದುರು ನಿಲ್ಲುವ ಛಾತಿಯಲ್ಲಿ
ದೇಶ ಕಾಯ್ದ ಸೈನಿಕ ಅನ್ನೋ ಹೆಮ್ಮೆ ನನಗಿದೆ
ಬಿಟ್ಟು ಹೋದ ಹೆಜ್ಜೆಯಲ್ಲಿ ಮುಂದೆ ಸಾಗುವ ಕನಸಿದೆ
ಆರದು ಎಂದೆಂದಿಗೂ ನೀನು ಹಚ್ವಿದ ದೀಪವು
ನಿನ್ನ ನೆನಪಲಿ ಮೊಳಗಿದೆ ರಾಷ್ಟ್ರಭಕ್ತಿಯ ಗೀತವು...

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಮೌನರಾಗ ಮಿಡಿದ ವೀಣೆ
ಒಲವ ಬೆರಳು ಸೋಕಲು
ಹರಿಯೆ ಯಮುನೆ ತೀರವೆಲ್ಲ
ಕಂದ ನಗುವ ತೊಟ್ಟಿಲು

ಪ್ರೇಮದುರಿಗೆ ಸೋಕಿ ತನುವು
ಜ್ವಾಲೆಯಾಗಿ ದಹಿಸಲು
ಕೂಡಿ ನಲಿದ ಮಧುರ ನೆನಪು
ಉಕ್ಕಿ ಯಮುನೆ ಹರಿಯಲು

ನಲ್ಲನಿರದ ಸಂಜೆ ಬಾನು
ಬಣ್ಣವಿರದೆ ಕಾಡಲು
ಸುಳಿದ ಗಾಳಿ ರೂಪ ತಳೆದು
ಬನದ ಹೂವು ಅರಳಲು

ಶ್ಯಾಮನೆದೆಯ ನಲ್ಮೆ ಕರವು
ಹೆರಳ ಸುಕ್ಕು ಬಿಡಿಸಲು
ಮಡಿಲ ಬೊಂಬೆ ಜೀವ ತಳೆದು
ಮುರಳಿ ನಾದ ಹೊಮ್ಮಲು

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಹರವು ಭವ್ಯವೆಂದ ಜಗವು
ಸ್ಪರ್ಶದಲ್ಲೆ ಪುಳಕಗೊಂಡು
ದಕ್ಕಿತೆಲ್ಲ ತನ್ನ ಕೈಗೆ ಎಂದು ನಂಬಿದೆ
ತೀರ ತಾಕಿ ಕಳೆದು ಹೋದ
ಇಳಿಯದಂತ ರಭಸ ಕಂಡು
ಆಳದಲ್ಲೆ ಕಡಲ ಮನಸು ನೊಂದು ಬೆಂದಿದೆ

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಜೊತೆಗಿದ್ದೂ
ಒಳಗಿಳಿಯಲಾಗದ ನೀನು;
ಒಳಗಿದ್ದೂ
ಜೊತೆಯಾಗದ ಮೀನು.

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ನಿನ್ನಂತೆಯೇ ನಾನೂ ಕೆಲಸದಲ್ಲಿ
ತೊಡಗಿದೆ ಅವಿರತ;
ಎರಡು ದಿನಕ್ಕಿಂತ ಮುಂದೆ ಸಾಗಲಿಲ್ಲ
ಕಾಯಕದ ರಥ.

ನಿನ್ನಂತೆಯೇ ನಾನೂ ಯೋಚಿಸಿದೆ
ದೇಶಕ್ಕಾಗಿ ಕ್ಷಣಕ್ಷಣ;
ಕೀರ್ತಿಶನಿ ಲಾಲಸೆಯ ಕಾಂಚಾಣ
ಕುಣಿಸಿತು ಝಣಝಣ.

ಸಂಸಾರದ ಜೋಡಿ ಕಣ್ಣುಗಳ ಆಸೆಯ
ಬಲೆಯಲ್ಲೇ ನಾನು ಸೀಮಿತ;
ಸಾಗರದ ಕೋಟಿ ಕಣ್ಣುಗಳ ನಿರೀಕ್ಷೆಯ
ಭಾರದಲ್ಲೂ ನೀನು ಮಂದಸ್ಮಿತ.

ಹೆಜ್ಹೆಗಳ ಆರಂಭವಷ್ಟೇ;
ಏರಲಿದೆ ಬೆಟ್ಟದಷ್ಟು.

ದೇವರ ಆಶೀರ್ವಾದ ನಿಮಗಿರಲಿ
ನನ್ನ ನೆಚ್ಚಿನ ಪ್ರಾಧಾನಿಗೆ
ಹುಟ್ಟು ಹಬ್ಬದ ಶುಭಾಶಯಗಳು

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಬಯಲಿನ ಮನೆಯ
ಕದವನು ತೆರೆಯದೆ
ಬೆಳಕಿನ ಅರಿವು ಕಾಣಿಸದು
ಒಳಗಿನ ಬೀದಿಯ
ಕಸವನು ಮರೆತರೆ
ನಿರ್ಮಲ ಶಾಂತಿ ಎಲ್ಲಿಯದು?

ಮನಸಿನ ಕುದುರೆಗೆ
ಲಗಾಮು ಬಿಗಿಯದೆ
ಸೇರುವ ದಾರಿಯು ಗುರಿಯಲ್ಲ
ತುಮುಲದ ತೆರೆಯನು
ಸರಿಸದೆ ನದಿಯಲಿ
ಮಾಡಿದ ಸ್ನಾನವು ಶುಚಿಯಲ್ಲ

ಬಯಕೆಯ ಮೀನಿಗೆ
ಕಾದಿಹ ಬಕಕೂ
ಧ್ಯಾನದ ಸ್ಥಿತಿಯ ಹಂಗಿಲ್ಲ
ಫಲವನು ಬಯಸದೆ
ಮಾಡುವ ಕರ್ಮಕೆ
ಸಿದ್ಧಿಯು ಎಂದಿಗು ತಪ್ಪಿಲ್ಲ.

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಒಲವಿನ ನೋಟದ ಮಳೆಗೆ
ಒದ್ದೆಯಾಗಿದೆ ಎದೆನೆಲ
ಬಯಕೆಯ ಬೆಳಕಿನ ಕರೆಗೆ
ಮೊಗ್ಗು ಬಿರಿದೆದೆ ಹೂದಳ

ಕದಪಿನ ರಂಗಿನ ಕವಿತೆ
ಕಾಡಿ ಕಾಮನೆ ಚಂಚಲ
ಒನಪಿನ ಐಸಿರಿ ಲಲಿತೆ
ಮೋಡಿ ಮೈಮನ ನಿಶ್ಚಲ

ಮಾದಕ ಇಂಪಿನ ಕುಕಿಲ
ಹಿಗ್ಗಿ ಚಿಗುರಿದೆ ಮಾಮರ
ಮೋಹಕ ಕಂಪಿನ ಬಕುಲ
ಸುಗ್ಗಿ ಬೀಸಿದೆ ಚಾಮರ

ಕಾದಿಹೆ ಚೆಲುವೆಯ ಸೆರೆಗೆ
ಹಿಡಿದು ಕನಸಿನ ಪಂಜರ
ಬಾರೆಯ ಒಲುಮೆಯ ಮನೆಗೆ
ಹೆಣೆದು ಬದುಕಿನ ಹಂದರ

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ನವರಾತ್ರಿಗಳು ಭಕ್ತಿಯ ಆರಾಧನೆಯಲ್ಲಿ ಕಳೆದು ಹೋದದ್ದೇ ಗೊತ್ತಾಗಲಿಲ್ಲ. ನಿನ್ನೆ ವಿಜಯದಶಮಿ.ಮೈಸೂರಿನಲ್ಲಿ ನಾಡ ಹಬ್ಬ ದಸರಾದ ವಿಶ್ವವಿಖ್ಯಾತ ಜಂಬೂ ಸವಾರಿಯ ಮೆರವಣಿಗೆಯ ದಿನ. ಈ ಸಂಭ್ರಮವನ್ನು ಕಣ್ತುಂಬಿಕೊಳ್ಳಬೇಕು ಎಂಬುದು ನನ್ನ ಬಹುದಿನಗಳ ಕನಸು.ಅದು ಈ ಸಾರಿಯೂ ಈಡೇರಲಿಲ್ಲ ಬಿಡಿ.ಆದರೆ ಈ ನಮ್ಮ ಮಂಗಳೂರು ದಸರಾ ಮೆರವಣಿಗೆ ಕೂಡಾ ಶ್ರೀಮಂತಿಕೆಯಲ್ಲಿ, ಅದ್ಧೂರಿಯಲ್ಲಿ ಏನೂ ಕಮ್ಮಿಯಿಲ್ಲ. ಕೆ.ಪಿ.ಟಿ.ಯಲ್ಲಿ ಡಿಪ್ಲೋಮಾ ಕಲಿಯುವ ದಿನಗಳಲ್ಲಿ ರಾತ್ರಿಯಿಡೀ ಸುತ್ತಾಡಿ ಕೊನೆಗೆ ಲಾಲ್ ಭಾಗ್ ನ ರಸ್ತೆಗಳಲ್ಲಿ ನಿಂತುಕೊಂಡು ಮೆರವಣಿಗೆ ನೋಡಿದ ದಿನಗಳು ಇನ್ನೂ ಹಚ್ಚ ಹಸುರಾಗಿವೆ.

ಕಳೆದ ಒಂದು ವಾರದಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದರೂ ಈ ಮೆರವಣಿಗೆ ತಯಾರಿಯ ಉತ್ಸಾಹಕ್ಕೇನೂ ಭಂಗ ಬಂದಿರಲಿಲ್ಲ. ನಿನ್ನೆ ಮಂಗಳೂರಿನ ಯಾವ ಭಾಗದಲ್ಲಿ‌ ನಡೆದುಕೊಂಡು ಹೋದರೂ ಅಲ್ಲಿ ಒಂದು ಟ್ಯಾಬ್ಲೋ ತಯಾರಿ ನಡೆಯುತ್ತಿರುವ ದೃಶ್ಯ ನಮ್ಮ ಕಣ್ಣಿಗೆ ಬೀಳದೇ ಇರದು. ಈ ಎಲ್ಲಾ ಸಂಭ್ರವವನ್ನೂ ಕಣ್ತುಂಬಿಕೊಳ್ಳಬೇಕೆಂದು ಮಂಗಳೂರಿಗೆ ಹೊರಟ ನನಗೆ ಈ ಎಲ್ಲಾ ಟ್ಯಾಬ್ಲೋ ತಯಾರಿಯ ದೃಶ್ಯಗಳನ್ನು ನೋಡುವ ಅವಕಾಶವೂ ಸಿಕ್ಕಿತು. ಗಣೇಶೋತ್ಸವದ ಮೆರವಣಿಗೆಗೆಂದು ಪರ್ಕಳದಲ್ಲಿ ನಮ್ಮ ಮಂಗಳ ಕಲಾ ಸಾಹಿತ್ಯ ವೇದಿಕೆಯಿಂದ ನಾವು ತಯಾರಿಸುತಿದ್ದ ಟ್ಯಾಬ್ಲೋನ ದಿನಗಳು ಫಕ್ಕನೇ ಕಣ್ಣೆದುರು ಬಂದವು. ಪ್ರತೀ ವರ್ಷ ಏನಾದರೂ ಹೊಸದನ್ನು ಕೊಡಬೇಕೆನ್ನುವ ತುಡಿತ, ರಾತ್ರಿ ಹಗಲೆನ್ನದೇ ಎರಡು ದಿನಗಳ‌ ಕೆಲಸ, ಎಲ್ಲಾ ಮುಗಿದ ನಂತರ ಅದರ ಮೇಲೆ ವೇಷ ಹಾಕಿ ಕುಳಿತುಕೊಳ್ಳುವ ಆತುರ...ಎಲ್ಲವೂ ನನ್ನ ಕಣ್ಣೆದುರು ಬಂದು ಆ ಟ್ಯಾಬ್ಲೋ ತಯಾರಿಯನ್ನು ಕುತೂಹಲದಿಂದ ನೋಡುವಂತೆ ಮಾಡಿತ್ತು.ಮೆರವಣಿಗೆ ಸಾಗುವ ಮುಖ್ಯ ರಸ್ತೆ ಅಂತೂ ಮದುವಣಗಿತ್ತಿಯಂತೆ ಶೃಂಗಾರಗೊಂಡಿತ್ತು. ವಿದ್ಯುತ್ ಅಲಂಕಾರಿಕ ದೀಪಗಳಿಂದ ಝಗಮಗಿಸುತಿದ್ದ ರಸ್ತೆಯ ಇಕ್ಕೆಲಗಳಲ್ಲಿ ದೊಡ್ದ ದೊಡ್ಡ ಶುಭಕೋರುವ ಬ್ಯಾನರ್, ಫ್ಲೆಕ್ಸ್ ಗಳು ರಾರಾಜಿಸುತಿದ್ದವು.ಮಧ್ಯಾನ್ಹ ನಾಲ್ಕು ಗಂಟೆಗೇ ಮುಖ್ಯ ರಸ್ತೆಯ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ಹೊರಬರಲು ಅರ್ಧ ಗಂಟೆಯೇ ಹಿಡಿದಿತ್ತು.

ತಮಟೆಯ ಲಯಬದ್ಧ ಬಡಿತದಲ್ಲಿ ಕುಣಿಯುವ ಹುಲಿಗಳ ದೊಡ್ಡ ತಂಡವೇ ಇತ್ತು. ಲಕ್ಷದ ಮೇಲೆ ಬಹುಮಾನವಿದ್ದ ಹುಲಿವೇಷ ಸ್ಪರ್ಧೆಯಲ್ಲಿ ಭಾಗವಹಿಸಲು ಅಲ್ಲಲ್ಲಿ ತಾಲೀಮು ನಡೆಯುತಿತ್ತು. ದಸರಾದಲ್ಲಿ ಹುಲಿವೇಷ ಪ್ರಧಾನ ಆಕರ್ಷಣೆ.ಮೈಯಿಡೀ ಬಣ್ಣದ ಕುಸುರಿಯಲ್ಲಿ ಅರಳುವ ಹುಲಿಗಾಗಿ ಪುಟಾಣಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ತೋರಿಸುವ ಆಸಕ್ತಿ ನನಗೆ ಅಚ್ಚರಿಯನ್ನುಂಟು ಮಾಡುತ್ತದೆ.ಎಷ್ಟು ಮಳೆ ಬಂದರೂ ಎಲ್ಲಾ ಋತುಗಳಲ್ಲೂ ಬೆವರಿ ಚಂಡಿ ಮುದ್ದೆಯಾಗುವ ಮಂಗಳೂರಿನಲ್ಲಿ ದಿನವಿಡೀ ಮೈಯೆಲ್ಲಾ ಬಣ್ಣದೊಂದಿಗೆ ಕುಣಿದು ಕುಪ್ಪಳಿಸುವ ಹುಲಿಗಳನ್ನು ಕಂಡರೆ ನನಗೆ ಮೊದಲಿನಿಂದಲೂ ವಿಶೇಷ ಅಕ್ಕರೆ. ಎಲ್ಲಾ ಕಡೆಯ ಹುಲಿ ತಂಡದ ಕುಣಿತವನ್ನು ಕಣ್ತುಂಬಿಕೊಳ್ಳುತ್ತಾ ಮುಂದೆ ಸಾಗುತಿದ್ದೆ. ಅಚಾನಕ್ ಆಗಿ ಒಂದು ಸಣ್ಣ ಹುಲಿ ನನ್ನ ಕಣ್ಣನ್ನು ಸೆಳೆಯಿತು. ಕಾಡು ಬಿಟ್ಟು ನಾಡಿಗೆ ಹೊಸದಾಗಿ ಬಂದ ಹುಲಿಯಂತೆ ಭಯಭೀತವಾಗಿ ಗುಂಪಿನಿಂದ ಪ್ರತ್ಯೇಕಗೊಂಡು ಏಕಾಂಗಿಯಾಗಿ ಅಲೆಯುತಿತ್ತು.
ದೊಡ್ಡ ತಂಡಗಳ ಕುಣಿತದಿಂದ ನೋಟವನ್ನು ಬಲವಂತದಿಂದ ಹೊರಳಿಸಿ ಈ ಸಣ್ಣ ಹುಲಿಯನ್ನು ಬೆನ್ನಟ್ಟಿಕೊಂಡು ಹೋದೆ.ಅದೂ ನಿರಾಯುಧನಾಗಿ! ನನ್ನ ಧೈರ್ಯವನ್ನು ನೀವು ಮೆಚ್ಚಲೇ ಬೇಕು. ಯಾವುದೇ ತಮಟೆ ಬಡಿತದ ಪಕ್ಕ ವಾದ್ಯಗಳ ಸದ್ದಿಲ್ಲದೇ ಅದು ಕುಣಿಯುತಿತ್ತು ಅಂಗಡಿಗಳ ಗಲ್ಲಾ ಪೆಟ್ಟಿಗೆಯ ಎದುರು.ನವರಾತ್ರಿಯ ಸಮಯದಲ್ಲಿ ಬೇರೆ ಬೇರೆ ರೀತಿಯ ವೇಷಗಳನ್ನು ಹಾಕಿಕೊಂಡು ಮನೆ, ಅಂಗಡಿಗಳಲ್ಲಿ ಪ್ರದರ್ಶನವನ್ನು ಕೊಟ್ಟು ಹಣ ಸಂಪಾದಿಸುವುದು ಹೊಸ ವಿಚಾರವೇನಲ್ಲ. ಆದರೆ ಈ ಹುಲಿಯನ್ನು ಬೆನ್ನಟ್ಟಲು ನನಗಿದ್ದ ಮುಖ್ಯ ಕುತೂಹಲ ಅದು ಪ್ರತೀ ಅಂಗಡಿಗೆ ಹೋದ ನಂತರ ಒಂದು ಮೂಲೆಯಲ್ಲಿ ಸಣ್ಣ ಮಗುವನ್ನು ಹಿಡಿದುಕೊಂಡು ಕುಳಿತಿದ್ದ ಒಂದು ಹೆಂಗಸಿನ ಬಳಿ ಓಡಿ ಹೋಗುತಿತ್ತು.ಮತ್ತೆ ಸ್ವಲ್ಪ ಸಮಯದ ನಂತರ ಮತ್ತೊಂದು ಅಂಗಡಿಯ ಮುಂದೆ ನಿಲ್ಲುತಿತ್ತು. ಆ ಹುಲಿಯ ಕಣ್ಣುಗಳು ಬೇರೆ ಹುಲಿಗಳ ಕಣ್ಣುಗಳಂತೆ ಹೆದರಿಕೆಯನ್ನು ಹುಟ್ಟಿಸುತ್ತಿರಲಿಲ್ಲ.ಬದಲಾಗಿ ಅವುಗಳೇ ಹೆದರಿದ್ದವು. ಬೆದರಿದ ಹರಿಣಿಯ ಕಣ್ಣುಗಳಂತೆ ಈ ಹುಲಿಯ ಕಣ್ಣುಗಳು. ಎರಡು ಮೂರು ಅಂಗಡಿಗೆ ಹೋಗಿ ವಾಪಾಸು ಬರುವಾಗ ಆ ಸಣ್ಣ ಹುಲಿಯನ್ನು ಹಿಡಿದುಬಿಟ್ಟೆ! ಒಂದು ಕ್ಷಣ ಹುಲಿ ಹಿಡಿದ ವೀರನ ಗತ್ತು ಗಾಂಭೀರ್ಯ ನನ್ನೊಳಗೆ ಹರಿಯಿತು.ಬೆದರಿ ಬೆವೆತು ನನ್ನ ಹಿಡಿತದಿಂದ ಪಾರಾಗಲು ಒದ್ದಾಡುತಿತ್ತು.

ರಸ್ತೆಯ ಪಕ್ಕದಲ್ಲಿ ನಿಂತಿದ್ದ ಐಸ್ಕ್ರೀಮ್ ಗಾಡಿಯಿಂದ ಎರಡು ಚೋಕೊಬಾರ್ ನ್ನು ತಂದು ಎರಡನ್ನೂ ಅವನ ಕೈಗಿತ್ತೆ. ಎಷ್ಟೋ ದಿನಗಳಿಂದ ಬೇಟೆ ಸಿಗದೇ ಒದ್ದಾಡುತಿದ್ದ ಹುಲಿಯ ಎದುರು  ಕೊಬ್ಬಿದ ಜಿಂಕೆ ಕಂಡಾಗ ಹಾರಿ ಹಿಡಿದು ಗಬಗಬನೆ ತಿನ್ನುವಂತೆ ಎರಡೂ ಐಸ್ಕ್ರೀಮ್ ಗಳನ್ನೂ ತಿಂದಿತು ಈ ಪುಟಾಣಿ ಹುಲಿ.‌ ಹೊಟ್ಟೆ ಸ್ವಲ್ಪ ತಣ್ಣಗಾಗಿರಬೇಕು.ಹೆದರಿದ ಕಣ್ಣಿಗಳಿಂದ ನಿರಾಳತೆಯ ಭಾವ ಹೊರಹೊಮ್ಮಿತು. ಮತ್ತು ನಾನು ಒತ್ತಾಯ ಮಾಡಿ ಕೇಳಿದ್ದಕ್ಕೆ ತನ್ನ ಕತೆಯನ್ನು ನನ್ನ ಮುಂದೆ ಬಿಚ್ಚಿಟ್ಟಿತು.ಮೂಲೆಯಲ್ಲಿ ಕೂತ ಎರಡು ಮಕ್ಕಳ ತನ್ನ ತಾಯಿಗೆ ಬಿಕ್ಷಾಟನೆಯೇ ಪ್ರಮುಖ ಉದ್ಯೋಗ.ಈಗ ಆ ಸಣ್ಣ ಮಗುವಿನೊಂದಿಗೆ ಅವಳಿಗೆ ಹೆಚ್ಚು ಕಡೆ ಹೋಗಲಾಗದೇ ಕುಳಿತಲ್ಲೇ ಬಟ್ಟೆ ಹರಡಿ ಭಿಕ್ಷೆ ಕೇಳುತ್ತಾಳೆ. ತನ್ನನ್ನು ಯಾವುದೋ ಹುಲಿ ತಂಡದವರಿಗೆ ದಮ್ಮಯ್ಯ ಹಾಕಿ ಈ ಹುಲಿವೇಷವನ್ನು ಹಾಕಿಸಿದ್ದಾಳೆ.ಮತ್ತು ಅಂಗಡಿ ಅಂಗಡಿಗೆ ಕಳಿಸುತ್ತಾಳೆ.ಬೆಳಿಗ್ಗೆಯಿಂದ ಹೀಗೆ ಹೋಗಿ‌ ಹೋಗಿ ಸಣ್ಣ ಹುಲಿಯ ಪುಟ್ಟ ಪಾದಗಳು ದಣಿದಿವೆ.ನನಗಾಗಲ್ಲಮ್ಮಾ ಇನ್ನು... ಸಾಕು ಅಂತ ಎಷ್ಟು ಗೋಗರೆದರೂ ತಾಯಿ ಕೇಳುತ್ತಿಲ್ಲ. ಮಗುವಿಗೇನು ಗೊತ್ತು? ಇಂದು ವಿಜಯದಶಮಿ! ಕೆಡುಕಿನ ಮೇಲೆ ಒಳಿತಿನ ವಿಜಯದ ದಿನ. ಇವತ್ತು ದುಡಿದರೆ ವಾರವಿಡೀ ಸುಖವಾಗಿರಬಹುದು. ನಾನೂ ಹೊಟ್ಟೆತುಂಬಾ ಉಣ್ಣಬಹುದು.ತನ್ನಲ್ಲಿ ಸ್ವಲ್ಪವಾದರೂ ಹಾಲು ಉಕ್ಕಿದರೆ ಸದಾ ಹಾಲಿಗಾಗಿ ಅಳುವ ಸಣ್ಣ ಮಗುವಿಗೂ ಹಾಲೂಡಿಸಬಹುದು ಅನ್ನುವ ಲೆಕ್ಕಾಚಾರದಲ್ಲಿ ಸಣ್ಣ ಹುಲಿಯನ್ನು ಮತ್ತೆ ಮತ್ತೆ ಬಲವಂತವಾಗಿ ಬೇಟೆಗೆ ತಳ್ಳುತಿದ್ದಾಳೆ. ಮನಸ್ಸಿಲ್ಲದ ಮನಸ್ಸಿನಿಂದ ಭಾರಾವಾದ ಹೆಜ್ಜೆಗಳನ್ನು ಊರಿಕೊಂಡು ಸಣ್ಣ ಹುಲಿ ಹೊರಡುತ್ತದೆ ಮತ್ತೆ ಮತ್ತೆ ಬೇಟೆಗೆ!...ಸಣ್ಣ ಹುಲಿಯ ಮಾತು ಕೇಳಿ ಮನಸ್ಸು ಭಾರವಾಯ್ತು.ತಪ್ಪಿ‌ಅವನ ಅಪ್ಪನ ಬಗ್ಗೆ ಕೇಳಿದೆ. ಆಗ ಹುಲಿಯ ಕಣ್ಣಲ್ಲಿ ಉಕ್ಕಿದ ರೋಷ ನನ್ನನ್ನು ಅಟ್ಟಾಡಿಸಿ ಕೊಂದು ತಿನ್ನುವಷ್ಟಿತ್ತು.

ಹುಲಿ ಕುಣಿತದ ತಂಡಕ್ಕೆ ಅಂತಾನೇ ಇಟ್ಟುಕೊಂಡಿದ್ದ ದುಡ್ಡನ್ನು ಸಣ್ಣ ಹುಲಿಯ ಜೋಳಿಗೆಗೆ ಹಾಕಿ, ಆ ದಿನಕ್ಕಾಗುವಷ್ಟು ತಿಂಡಿಯನ್ನೂ ಕೊಟ್ಟು ಅವನನ್ನು ಕಳಿಸಿದೆ. ಸ್ವಲ್ಪ ಹೊತ್ತು ಹಾಗೆಯೇ ಕುಳಿತಿದ್ದೆ. "ಎಲ್ಲಿದ್ದಿ ಮಾರಯಾ, ಸಿಗ್ತೇನಂತ ಹೇಳಿ ಪತ್ತೆನೇ ಇಲ್ಲ..." ಅಂತ ಮಂಜನ ಕಾಲ್ ಬಂತು. ಮನಸ್ಸು ಅರಳಿತು,ಮತ್ತೆ ಸಂಭ್ರಮದ ರಸ್ತೆಯಲ್ಲಿ ಮಂಜನ ಜೊತೆಗೆ ಹೆಜ್ಜೆ ಹಾಕಿದೆ.ದೇವಸ್ಥಾನ ಬೀದಿಯಲ್ಲೆಲ್ಲಾ ತಿರುಗಿ ನಮ್ಮ ಖಾಯಂ ಅಡ್ಡ ಪಬ್ಬಾಸ್ ಐಸ್ಕ್ರೀಮ್ ಪಾರ್ಲರ್ ಗೆ ಬಂದು ಕುಳಿತಾಗ ಮುಸ್ಸಂಜೆ ಕಳೆದು ರಾತ್ರಿ ಇಣುಕುತಿತ್ತು. ಪಬ್ಬಾಸ್ ಎದುರಿನಲ್ಲೇ ಹಾಕಿದ್ದ ದೊಡ್ಡ ವೇದಿಕೆಯಲ್ಲಿ ಆರ್ಕೆಸ್ಟ್ರಾ ತಂಡದ ಮೈಕ್ ಟೆಸ್ಟಿಂಗ್ ನಡೆಯುತಿತ್ತು. ಹೊರಗೆಲ್ಲಾ ಝಗಮಗಿಸುವ ಲೈಟಿಂಗ್ಸ್ ನಿಂದಾಗಿ ಮಾಮೂಲಿ ಹೋಗುವ ರಸ್ತೆಗಿಂದು ರಾಜಕಳೆ.ನಿಧಾನವಾಗಿ ರಸ್ತೆ ಸಂಭ್ರಮದ ಮೆರವಣಿಗೆಗೆ ಸಜ್ಜಾಗುತಿತ್ತು.ಇದೆಲ್ಲದರ ನಡುವೆಯೂ ಎದುರಿನ ಅಂಗಡಿಯ ಗಲ್ಲಾ ಪೆಟ್ಟಿಗೆಯೆದುರು ಕುಣಿದು ಮಾಲೀಕನ ಮುಖವನ್ನೇ ನೋಡುತಿದ್ದ ಸಣ್ಣ ಹುಲಿ ಕಾಣದೇ ಇರಲಿಲ್ಲ.

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ವಿಶ್ವ ಶಾಂತಿ ಹಾಗೂ ಭಾತೃತ್ವದ ಶೃಂಗ ಸಭೆ
SDM COLLEGE MANGALORE
ಕವಿಗೋಷ್ಟಿ:

೧. ಹುಚ್ಚು

ಧರ್ಮಗಳ ತಿರುಳನರಿಯದೇ
ಶ್ರೇಷ್ಠತೆಯ ವ್ಯಸನಕ್ಕಿಳಿದ ಜನ
ಗಡಿ ಗಡಿಗಳ ನಡುವೆ
ಹಚ್ಚಿದರು ಕಿಚ್ಚು;
ಯಾವುದರ ಪರಿವೇ ಇಲ್ಲದೇ
ಗಡಿಗಳ ನಡುವೆ ಹುಟ್ಟಿ
ನಗುವ ಹೂವಿಗೆ ಮಾತ್ರ
ಶಾಂತಿಯ ಹುಚ್ಚು?

೩.ಭರವಸೆ

ಕೋಟಿ ತಾರೆ ಹೊಳೆದರೂ
ಬಾನಿನಲ್ಲಿ
ಜೀವಜಾಲಕ್ಕೆ
ಸೂರ್ಯನೊಬ್ಬನೇ ಬೆಳಕು
ಮತ ಧರ್ಮಗಳೆಷ್ಟಿದ್ದರೂ
ಜಗದಲ್ಲಿ
ಶಾಂತಿ ಮಂತ್ರಕ್ಕೆ
ಮಾನವತೆಯೊಂದೇ ಮಿಣುಕು

೩. ಧ್ಯೇಯ

ಸಾಲಾಗಿ ಹಚ್ಚಿಟ್ಟ ದೀಪಗಳು
ಸೂಸುವ ಬೆಳಕೊಂದೇ
ಶಾಂತ ಶೀತಲ;
ಗುರುವಾಗಿ ಹುಟ್ಟಿದ ಧರ್ಮಗಳು
ಹೇಳುವ ಆಶಯವೂ ಒಂದೇ
ಶಾಂತಿ ಸಕಲ.

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಪಯಣಿಸುವ ವೇಳೆಯಲಿ...

ಹೆಚ್ಚು ಕಡಿಮೆ ಖಾಲಿಯೇ ಇದ್ದ ಬಸ್ಸಿನಲ್ಲಿ ಕುಳಿತು ಕಿಟಕಿಯಿಂದ ಹೊರಗೆ ನೋಡುತ್ತಿದ್ದ ನನ್ನಲ್ಲೂ ಖಾಲಿ ಖಾಲಿಯಾದ ಭಾವ.ಹೊರಗೆ ಓಡುತ್ತಿರುವ ಸರ್ವ ಸೃಷ್ಟಿಯ ನಡುವೆಯೂ ನಾನು ಸ್ತಬ್ದವಾಗಿ ಕುಳಿತಿದ್ದೆ ಥೇಟ್ ನನ್ನ ಯೋಚನೆಗಳಂತೆ.ಕಾಲದೊಂದಿಗೆ ಯಾವತ್ತೂ ಹೆಜ್ಜೆ ಹಾಕಿಯೇ ಇಲ್ಲ ನೀನು... ಅನ್ನುವ ಅಮ್ಮನ ಮಾತು ತಲೆಯಲ್ಲಿ ಯಾವತ್ತೂ ಕೊರೆಯುವ ಗುಂಗೀ ಹುಳ. ಯೋಚನೆಗಳ‌ ನಡುವೆಯೇ ನನ್ನ ಹತ್ತಿರದ ಖಾಲಿ ಸೀಟ್ ನಲ್ಲಿ ಅವಳು ಬಂದು ಕುಳಿತುಕೊಂಡದ್ದು ಅರಿವಾಗಿ ಅವಳತ್ತ ತಿರುಗಿದೆ.ಒಂದು ನಗೆಯ ವಿನಿಮಯವಾದಾಗಲೇ, ಅರೇ...ಪರಿಚಯದವಳೇ?, ಹೆಸರು ನೆನಪಾಗುತಿಲ್ವೇ...ನನ್ನನ್ನು ನೋಡಿಯೇ ಹತ್ತಿರ ಕುಳಿತಿರ್ಬೇಕು...ಅಂದುಕೊಳ್ಳುವಷ್ಟರಲ್ಲಿಯೇ, "ಹಾಯ್'' ಅಂದ್ಳು. ಈಗ ತಾನೇ ಇಣುಕುತ್ತಿರುವ ಡಿಸೆಂಬರ್ ಚಳಿಗೆ ಮುದುಡಿ ಕುಳಿತ ನನ್ನ ಮೇಲೆ ಸೂರ್ಯನ ಬೆಚ್ಚಗಿನ ಎಳೆಯ ಕಿರಣ ಬಿದ್ದಂಗಾಯ್ತು. ಸ್ವಲ್ವವೇ ಅರಳಿ ಕುಳಿತೆ... ಇಬ್ಬನಿ ಬಿದ್ದು ಮುದುಡಿದ ನಾಚಿಗೆ ಮುಳ್ಳು ಬಿಸಿಲಿಗೆ ಅರಳಿದಂತೆ.ಪೆದ್ದು ಪೆದ್ದಾಗಿ ನಕ್ಕೆ. ''ಯಾಕೆ ಶಶಿ...ನನ್ನ ಗುರ್ತ ಸಿಗ್ಲಿಲ್ಲಾ?..'' ಅಂದಾಗ ಯಾರಪ್ಪಾ ಇವಳು? ಎಲ್ಲೋ ನೋಡಿದ ಹಾಗೇ ಇದೆ, ನನ್ನ ಹೆಸ್ರು ಬೇರೆ ಕರಿತಿದ್ದಾಳೆ...ಏನ್ ಹೇಳೋದೀಗ...ಅಂತ ಚಡಪಡಿಸುತ್ತಿರುವಾಗ ನನಗೆ ಕಷ್ಟವೇ ಕೊಡದೇ, " ನಾನು ಕಣೋ, ಸ್ಮಿತಾ...ನಿನ್ನದೇ ಕಾಲೇಜ್, ಕಲಾ ವಿಭಾಗ" ಅಂದಾಗಲೂ ಎಲ್ಲಿ ನೋಡಿದ್ದು ಅಂತ ಸ್ಪಷ್ಟವಾಗದೇ ಯೋಚಿಸತೊಡಗಿದೆ.ನಾನು ಮೌನವಾದದ್ದು ನೋಡಿ ಕೊಂಚ ಹತಾಶಳಾದಂತೆ ಕಂಡ ಅವಳು " ಯಾಕೆ, ಬೇರೆ ಸೀಟ್ ಗೆ ಹೋಗ್ಬೇಕಾ?..." ಅಂದ್ಳು. "ಹೇ..ಹೇ..ಬೇಡ ಬೇಡ, ನನಗೂ ಕಂಪೆನಿ ಬೇಕು" ಅನ್ನೋದಷ್ಟೇ ಆಯಿತು ನನ್ನಿಂದ...ಪುಣ್ಯಕ್ಕೆ ಸೀಟ್ ಬಿಟ್ಟು ಹೋಗ್ಲಿಲ್ಲ.ಆದರೆ ಇಷ್ಟು ಹೇಳಿದ ಮೇಲೂ ನನ್ನಿಂದ ಸಕಾರಾತ್ಮಕ ಸ್ಪಂದನೆ ಸಿಗದಿದ್ದದ್ದು ಬೇಸರವಾಗಿರಬೇಕು ಅವಳಿಗೆ. ಮತ್ತೆ ಮಾತಾಡದೇ ಕಿವಿಗೆ ಇಯರ್ ಫೋನ್ ಸಿಕ್ಕಿಸಿ ಮೊಬೈಲ್ನಲ್ಲಿ ಬ್ಯುಸಿ ಆದಳು.

ಚೆಲುವೆಯ ಸಾನಿಧ್ಯ ಆಸ್ವಾದಿಸುವುದನ್ನು ಬಿಟ್ಟು ಮತ್ತೆ‌ ಮನಸ್ಸು ಯೋಚನೆಯ ಬೀದಿಗಿಳಿಯಿತು.ಹುಡುಗಿಯರೆಂದರೆ ಮಾರು ದೂರ ಓಡುವ ನನ್ನ ಮೊಬೈಲ್ ಕಾಂಟೆಕ್ಟ್ ಲಿಸ್ಟ್ ನಲ್ಲಿ ಹುಡುಗಿಯರ ನಂಬರುಗಳೇ ಇಲ್ಲ.ಎಲ್ಲೋ ಮರೆಯಲ್ಲಿ ನಿಂತು ಹಕ್ಕಿ ವೀಕ್ಷಣೆಯ ಅಭ್ಯಾಸವಿದ್ದರೂ ಎದುರಲ್ಲಿ ನಿಂತು ಮಾತಾಡುವಾಗ ನಾನೀಗಲೂ ಉತ್ತರಕುಮಾರನೇ.ನನ್ನ ಕಾಲೇಜ್ ಫ್ರೆಂಡ್ಸ್ ಕಾಲೇಜು ಕಾರಿಡಾರ್ ನಲ್ಲಿ ಹುಡುಗಿಯರ ಜೊತೆಗೆ, ಬಸ್ ಸ್ಟ್ಯಾಂಡ್ನಲ್ಲಿ ಪಾರ್ಕ್ನಲ್ಲಿ  ತಮ್ಮ ತಮ್ಮ ಗರ್ಲ್ಸ್ ಫ್ರೆಂಡ್ಸ್ ಗಳ ಜೊತೆಯಲ್ಲಿ ಚಕ್ಕಂದವಾಡುವಾಗ ದೂರದಲ್ಲಿ ನೋಡಿ ಅಸೂಯೆಯಲ್ಲಿ ವಿಲ ವಿಲ ಒದ್ದಾಡಿದರೂ ಅವಕಾಶವಿದ್ದಾಗ ಸದುಪಯೋಗ ಮಾಡಿಕೊಳ್ಳುವ ಕಲೆಯೂ ಸಿದ್ಧಿಸಿಲ್ಲ.ಎಲ್ಲರೂ ಹೇಳುವಂತೆ ನಾನೊಬ್ಬ ರಿಜಿಡ್ ವ್ಯಕ್ತಿತ್ವದವನು.ಸುಲಭವಾಗಿ ಯಾರೊಂದಿಗೂ ಬೆರೆಯಲಾರದ ಶುಕಮುನಿ.ಎಲ್ಲಾ ಯೋಚನೆಗಳಿಂದ ಹೊರಬಂದು ಅವಳತ್ತ ನೋಡಿದರೆ ಸೀಟಿಗೊರಗಿ ಕಣ್ಣು‌ಮಚ್ಚಿದ್ದಾಳೆ. ಬಹುಶಃ ಯಾವುದೋ ಹಾಡಿನ ಗುಂಗಲ್ಲಿರಬೇಕು.ಹಳದಿ ಟೀ ಶರ್ಟ್ ನೀಲಿ ಜೀನ್ಸ್ ತೊಟ್ಟಿರುವ ಬಳುಕುವ ನೀಳ‌ ಶರೀರ.ಮುಂಗುರುಳೊಂದು ಅವಳ ಕೆನ್ನೆಯ ಮೇಲೆ ಹಿತವಾಗಿ ಲಾಸ್ಯವಾಡುತ್ತಿದೆ.ಮುಚ್ಚಿದ ರೆಪ್ಪೆಗಳಡಿಯಲ್ಲಿ ಚಂಚಲ ಕಣ್ಣುಗಳು ಕದಲಿದಂತೆ ಭಾಸವಾಗುತ್ತಿದೆ.ಮಿತವಾಗಿ ತುಟಿಗೆ ಮೆತ್ತಿದ ಗುಲಾಬಿ ರಂಗಿನಲ್ಲಿ ಆಹ್ವಾನ ಎದ್ದು ಕಾಣುತ್ತಿದೆ.ಅವಳು ನೋಡದಿದ್ದರೂ ಅವಳನ್ನು ನೋಡಲು ಭಯವಾಗಿ ಮತ್ತೆ ಕಿಟಕಿಯ ಹೊರಗೆ ಇಣುಕಿದರೂ ನೋಟದಲ್ಲಿ ತುಂಬಿಕೊಂಡ ಒಲುಮೆಯ ತುಂಬು ಪೌರ್ಣಿಮೆ! ಸಂಜೆಯ ಹಿತವಾದ ತಂಗಾಳಿ ಮೈಗೆ ಸೋಕಿ ಹುಚ್ಚು ಕಾಮನೆಗಳನ್ನು ಕೆರಳಿಸುತ್ತಿದೆ.ಹತ್ತಿರವೇ ಕುಳಿತಿದ್ದರೂ ಅದೆಷ್ಟು ದೂರ ನಮ್ಮ ನಡುವೆ. ಕಿಟಕಿ ಬಿಟ್ಟು ಅವಳೆಡೆಗೆ ಸರಿದು ಕುಳಿತೆ.ಹಿತವಾಗಿ ಮೈ ತಾಗುವಷ್ಟು ಹತ್ತಿರ.ಅವಳನ್ನು ಸೋಕಿ ಬರುತ್ತಿದ್ದ ತಂಗಾಳಿಯಿಂದ ಮನದಲ್ಲಿ ಮಲ್ಲಿಗೆ ಅರಳುತ್ತಿರುವ ಘಮ!.ಯಾವುದೋ ದಿವ್ಯ ಘಳಿಗೆಯಲ್ಲಿ ಅವಳ ಕೈಗೆ ಕೈ ಸೋಕಿದಾಗ ಮೃದುತ್ವದ ಸ್ಪರ್ಶದಲ್ಲಿ ಸಾವಿರ ದೀಪಗಳು ಒಮ್ಮೆಲೇ ಉರಿದಂತೆ ಪುಳಕಿತನಾದೆ.

ಯಾರಪ್ಪಾ ಈ ಸ್ಮಿತಾ?...ನಿಲ್ಲದ ಹುಡುಕಾಟದಲ್ಲಿ ತಲೆ  ಬಿಸಿಯೇರಿತು.ಯಾರೇ ಆಗಲಿ, ಅವಳು ಇಷ್ಟು ಆತ್ಮೀಯತೆಯಲ್ಲಿ ಮಾತಾಡುವಾಗ, ನಗುವಾಗ ನಾನು ಸುಮ್ಮನಿರಬಾರದಿತ್ತು.ಏನಂದುಕೊಂಡ್ಳೋ ನನ್ನ ಬಗ್ಗೆ....ಹತ್ತಿರವೇ ಕುಳಿತಿದ್ದಾಳೆ. ಮಾತಾಡಿಸಿಯೇ ಬಿಡುವ ಅಂತ ಗಟ್ಟಿ ನಿರ್ಧಾರ ಮಾಡಿ ಅವಳತ್ತ ತಿರುಗಿದರೆ ಅವಳಿನ್ನೂ ಮುಚ್ಚಿದ ಕಣ್ಣು ತೆರೆದಿಲ್ಲ.ಸರಿ, ಎದ್ದ ಕೂಡಲೇ ಮಾತಾಡಿಸುವ, ಯಾವ ಸ್ಮಿತಾಳೇ ಆಗಿರಲಿ...ನನ್ನ ಸ್ಮಿತಾವಾದರೆ ಅದೆಷ್ಟು ಹಿತ ಅಂತ ಯೋಚಿಸಿ ಅವಳು ಕಣ್ತೆರೆಯುವ ದಿವ್ಯ ಘಳಿಗೆಯನ್ನೇ ಕಾಯುತ್ತಾ ಕುಳಿತೆ.

ಬಸ್ಸು ಬೈಲೂರು ಸ್ಟ್ಯಾಂಡ್ ನಲ್ಲಿ ನಿಲ್ಲುತ್ತಲೇ ಸಡನ್ ಆಗಿ ಎದ್ದು ನಿಂತಳು.ಇನ್ನೇನು ಇಳಿಯಬೇಕು ಅನ್ನುವಷ್ಟರಲ್ಲಿ ಎಲ್ಲಿಲ್ಲದ ಧೈರ್ಯ ಒಗ್ಗೂಡಿಸಿ ತುಟಿಯ ಮೇಲೆ ಬಲವಂತದ ನಗು ಚೆಲ್ಲಿ "ಸ್ಮಿತಾ...." ಅಂದೆ. ಮುಂದೆ ಹೋದವಳು ಒಂದು ಕ್ಷಣ ನಿಂತು, ನಂತರ ನನ್ನ ಕಡೆಗೆ ತಿರುಗಿ ಹತ್ತಿರ ಬಂದು,
" ಕ್ಷಮಿಸಿ, ನನ್ನ ಹೆಸರು ಸ್ಮಿತಾ ಅಲ್ಲ.ಮಮತ ಅಂತ. ನನಗೆ ನಿಮ್ಮ ಪರಿಚಯವಿಲ್ಲ. ಹಿಂದಿನ ಸೀಟ್ ನಲ್ಲಿ ಎರಡು ಸ್ಟಾಪ್ ಹಿಂದೆ ಇಳಿದ ವ್ಯಕ್ತಿ ನನ್ನನ್ನು ಫಾಲೋ ಮಾಡ್ತಿದ್ದ. ಓಡಿ ಓಡಿ ಸಿಕ್ಕಿದ ಈ ಬಸ್ ಹತ್ತಿದೆ.ಅವನೂ ಹತ್ತಿದ. ಏನೂ ತೋಚದೇ ನಿಮ್ಮ ಹತ್ತಿರ ಕುಳಿತೆ.ನೀವೆಲ್ಲೋ ನೋಡ್ತಿದ್ರಿ.ನಿಮ್ಮ ಕಾಲೇಜ್ ಐಡಿಯಿಂದ ಹೆಸರು ನೋಡಿ ಮಾತಾಡಿಸಿದೆ. ಇವನ್ಯಾರೋ ಪರಿಚಯದ ಹುಡುಗ ಅಂತ ತಿಳಿದು ಅವನೂ ಇಳಿದು ಹೋದ...ಥ್ಯಾಂಕ್ಯೂ" ಅಂತ ಹೇಳಿ ಮತ್ತೆ ಹಿಂದೆ ತಿರುಗದೇ,ಒಲುಮೆಯ ಭಾಗವೇ ಬದುಕಿನಿಂದ ದೂರ ಹೋದಂತೆ ಬಸ್ಸಿನಿಂದ ಇಳಿದು ಹೋದಳು.

ಆವರಿಸಿದ ಗಾಢ ಅಂಧಕಾರದ ಶೂನ್ಯದಲ್ಲಿ ಅವಳು ಇಳಿದು ಹೋದ ದಾರಿಯನ್ನೇ ನೋಡುತ್ತಾ ಕಿಟಕಿಯಿಂದ ಹೊರಗೆ ನೋಡಿದರೆ ಸೃಷ್ಟಿಯೆಲ್ಲಾ ಓಡುತ್ತಿತ್ತು ಯಥಾ ಪ್ರಕಾರ. ಹತ್ತಿರದ ಖಾಲಿ ಸೀಟು ನನ್ನನ್ನು ಅಣಕಿಸಿದಂತೆ ಭಾಸವಾಗಿ ಕುಳಿತಲ್ಲೇ ಸ್ತಬ್ದನಾದೆ.

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಹೆಚ್ಚು ದಿನಗಳಿಲ್ಲ,
ಇನ್ನೇನು ಬಂದೇ ಬಿಟ್ಟಿತು ನೋಡಿ
ಕಾಲನ ಮಾಗಿ.

ಚಿಗುರಿ ನಳನಳಿಸಿ
ಹಣ್ಣುಬಿಟ್ಟ ಗೊಂಚಲು ತೊನೆದು
ಕೊಟ್ಟು ಕೊಟ್ಟೂ ಬರಿದಾಗಿ
ತೊಟ್ಟು ಕಳಚುವ ದಿವ್ಯ ಕಾಲ.

ಸುಲಭವಲ್ಲ,
ಸುರಿಸುರಿದು ಖಾಲಿಯಾಗುತ್ತಾ
ಮೋಹ ಕಳಚಿ
ಬಯಲಿನಲ್ಲಿ ನಿಲ್ಲುವುದು.
ಮುಸುಕುವ ಮಂಜಿನ ಎದುರೂ
ನಿಲ್ಲುವುದೇ ಇಲ್ಲ;
ನಿರಂತರ ಸುರಿವ ಮಳೆಯ ಸೆಳೆತ!

ಮಾಗಿ ಬರುವ ಮುನ್ನ
ಮಾಗಬೇಕು ಇಲ್ಲಿ;
ಬಾಗಿ ಹೊಸ ಬೀಜಕ್ಕೆ
ಒಲುಮೆಯ ನೀರೆರೆದು
ಚಿಗುರ ಕಂಡು ಸಂಭ್ರಮಿಸಬೇಕಿಲ್ಲಿ.

ಅದುವೇ ಬದುಕ ಮಗ್ಗಿ;
ನಿಜದ ಸುಗ್ಗಿ!

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಮಾತು ಮರೆತ ಸಹನೆಯಲ್ಲಿ
ಒಲುಮೆ ಹೂವು ನರಳಿದೆ
ಕೋಶ ತೆರೆದು ಬಂದರಷ್ಟೆ
ಚಿಟ್ಟೆಗೊಂದು ಬದುಕಿದೆ

ಮೌನ ಕಣಿವೆ ಆಳದಲ್ಲಿ
ದನಿಯು ಮರೆತ ಮಾತಿದೆ
ಶಬ್ದ ಸೀಮೆ ಆಚೆಯೆಲ್ಲೊ
ಮೌನ ಸುಖದ ಭ್ರಮೆಯಿದೆ

ಹಮ್ಮು ಬಿಮ್ಮು ಗೋಡೆಯಲ್ಲಿ
ಮೌನವರಳಿ ನಗುತಿದೆ
ಅಂಕೆ ಶಂಕೆ ನೆರಳಿನಲ್ಲಿ
ಶೂನ್ಯವೊಂದು ಕಾಡಿದೆ

ದಾರ ಕಡಿದ ನನ್ನ ದನಿಯು
ನಲ್ಮೆ ಬಾನ ಹಾರಲಿ
ಮೌನಕಲ್ಲು ಸೀಮೆ ದಾಟಿ
ಕಾದ ಎದೆಯ ತಣಿಸಲಿ

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಈ ಭೂತವೊಂದು ಮೈಯಲ್ಲಿ ಹೊಕ್ಕಿ
ಕುಣಿದು ಧೀಂ ತಕಿಟ ತಕಿಟ
ಎಷ್ಟು ಹೊದ್ದರೂ ಒಳ ಸುಳಿಗೆ ಸಿಕ್ಕಿ
ನಡುವೆಲ್ಲ ಕೊರೆವ ಕೀಟ

ಬೋಳಾದ ಮರಕು ಹಸಿ ಚಿಗುರ
ಬಯಕೆ ಅಹಾ! ನಿಮಿರಿ ಎಂಥ ಪುಳಕ
ಕಾದು ಕುದಿದ ನರನಾಡಿ ಉರಿಗೆ
ಸರಿ ರಾತ್ರಿ ನೀರ ಜಳಕ

ಮೋಡವೆಲ್ಲವೂ ಪೂರ್ಣಕುಂಭ
ಕಂಡಂತೆ ಜೋಡಿ ತೊನೆದಾಟ
ಮಾವು ತೂಗೊ ಗಿಡ ಭಾರವಂತೆ
ಅಲ್ಲಿ ಕಚ್ಚೊ ಗಿಳಿಯ ಕಾಟ

ಶಾಂತ ದೀಪದ ಒಡಲು ಚಂಚಲ
ಬೀಸಿ ಮಾಗಿ ಚಳಿಗಾಳಿ
ಒದ್ದೆಒದ್ದೆ ಹಸಿ ಕನಸ ನಿದ್ದೆಗೂ
ಕಾಮಪುಷ್ಪ ಶರ ಧಾಳಿ!

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
#ಜೋಡಿ

"ಯಾರು ಏನಾದ್ರೂ ಹೇಳ್ಲಿ, ಆದರೆ ಅವನಿಗೆ ಹೇಳಿದ ಹುಡುಗಿಯೇ ಅಲ್ಲ ಅವಳು..."
ಅಂತ ರಜನಿ ಹೇಳಿದಾಗ ಶಶಿ ಇನ್ನೂ ಯೋಚನೆಯಲ್ಲಿಯೇ ಇದ್ದ. ಎಷ್ಟು ಚಂದದ ಹುಡುಗಿ ಅವಳು,ಬಳುಕುವ ಬಳ್ಳಿ ತರಹ ಅವನ ಪಕ್ಕದಲ್ಲಿ ನಿಂತಿದ್ಳು...ಅವಳಿಗೆ ಕಂಪೇರ್ ಮಾಡಿದ್ರೆ ಹುಡುಗನೇ ಸಾಧಾರಣ ಅನ್ನಿಸುತಿದ್ದ. ಆದ್ರೂ ಇವಳು ಹೀಗೆ ಹೇಳ್ತಿದ್ದಾಳೆ ಅಂದ್ರೆ? ಅಲ್ಲ, ಇವಳಿಗೆ ಅದು ಯಾವ ಜೋಡಿ ಸರಿ ಅಂತ ಅನಿಸಿದೆ ಇದುವರೆಗೆ. ಚಂದದ ಜೋಡಿ ಅಂತ ಇವಳ ಬಾಯಲ್ಲಿ ನಾನಿದುವರೆಗೂ ಕೇಳಿದ ನೆನಪೇ ಇಲ್ವಲ್ಲ ಅಂತ ಯೋಚಿಸಿ ತಲೆ ಕೊಡವಿಕೊಂಡ.
"ಏನ್ರೀ ಅದು? ಅಷ್ಟು ಸಿರೀಯಸ್ ಆಗಿ ಯೋಚನೆ ಮಾಡ್ತಿದ್ರಿ...ನಾನೇನಾದ್ರೂ ನಿಮ್ಮನ್ನ ಸೀರೆ ಸೆಲೆಕ್ಷನ್ ಮಾಡು ಅಂದ್ನಾ?".
ಸೀರೆ ಅಂದಾಕ್ಷಣ ಮೊನ್ನೆ ಮದುವೆಗೆ ಮಾಡಿದ ಶಾಪಿಂಗ್ ನಲ್ಲಿ ಕೊಟ್ಟ ತನ್ನ ಅರ್ಧ ಸಂಬಳದ ಬಿಲ್ ನೆನಪಾಗಿ, ಇನ್ನು ಸುಮ್ಮನಿದ್ದರೆ ನಿಜವಾಗಿಯೂ ಶಾಪಿಂಗ್ ಹೋಗ್ಬೇಕಾದೀತು ಅಂದುಕೊಂಡು,
"ಅಲ್ಲ ಕಣೆ, ಏನಾಗಿದೆ ಜೋಡಿಗೆ? ಎಷ್ಟು ಚಂದ ಇದ್ದಾಳೆ ಹುಡುಗಿ, ಒಳ್ಳೆ..."
ಏನೋ ಹೇಳ್ಲಿಕ್ಕೆ ಹೋಗಿ ನಾಲಿಗೆ ಕಚ್ಚಿಕೊಂಡ.
"ಆಹಹಹಹಾ...ಹುಡ್ಗಿ ಅಂದ್ರೆ ಆಯ್ತು, ಜೊಲ್ಲು ಸುರಿಸ್ತೀರಾ...ನನ್ಗೊತ್ತಿಲ್ವಾ ನಿಮ್ ಬುದ್ದಿ? ಎಲ್ಲ ಗಂಡಸರೂ ಒಂದೇ"
ಕೋಪದಲ್ಲಿ ರಜನಿ ಮುಖ ಕೆಂಪಾಯ್ತು. ಹೋ...ಹೇಳ್ಬಾರ್ದಿತ್ತು ಹಾಗೆ, ಇನ್ನು ವಿಪರೀತಕ್ಕೆ ಹೋದ್ರೆ ಕಷ್ಟ ಅಂದ್ಕೊಂಡು,
" ಅಯ್ಯೋ, ನಾನೆಲ್ಲಿ ಹಾಗಂದ್ನೇ...ಒಳ್ಳೆಯ ಜೋಡಿ ಅಂತ ಅಷ್ಟೇ ನಾನು ಹೇಳ್ಲಿಕ್ಕೆ..."
ಕೇಳುವ ತಾಳ್ಮೆ ಅವಳಿಗಿದ್ದಿದ್ದರೆ...,
" ಸಾಕು ಸಾಕು, ಬೇರೆ ಹುಡ್ಗಿಯರನ್ನು ಹೊಗಳೋದೇ ಆಯ್ತು..‌.ನನ್ನಲ್ಲಿ ಮಾತ್ರ ಸಾವಿರ ಹುಡುಕ್ತೀರಾ? ನಾನೊಬ್ಳು ಇದ್ದೇನಲ್ವಾ ನೀವು ಹೇಳಿದ್ದನ್ನು ಕೇಳ್ಕೊಂಡು ಇರ್ಲಿಕ್ಕೆ...ಏನ್ ಚಂದ ಕಂಡ್ರಿ ಅವಳಲ್ಲಿ?" ನೇರ ವೈಯಕ್ತಿಕವಾಗಿ ಬಿಟ್ಟಿತು ವಿಷಯ ರಜನಿಯ ಈ ಬಾಣದೊಂದಿಗೆ.
ಇಂತಹ ಚರ್ಚೆ ನಡೆಯುತ್ತಿರುವುದು ಇದೇ ಮೊದಲಲ್ಲ, ಮುಂದುವರೆಸಿದರೆ ಆ ದಿನ ಮತ್ತೆ ಮಾತಿಲ್ಲ.ಮೌನ ಮನೆಯ ಸಂದುಗೊಂದುಗಳಲ್ಲಿ ಆವರಿಸಿ ಅಸಹನೀಯವಾಗುತ್ತದೆ ಅನ್ನುವುದನ್ನು ತಿಳಿಯದವನೇನಲ್ಲ ಶಶಿ.ಆದರೂ ಪ್ರತೀ ಬಾರಿ ಇಂತಹ ವಿಷಯ ಬಂದಾಗ ನಾನೇಕೆ ಸುಮ್ಮನಿರಲ್ಲ ಅಂದುಕೊಂಡ ಶಶಿ,
"ಇರ್ಲಿ ಬಿಡೇ...ನನ್ನ ಕಣ್ಣಿಗೆ ಕಂಡದ್ದು ಹೇಳಿದೆ...ನಮಗ್ಯಾಕೆ ಅವರ ವಿಷಯ...?" ಅಂದರೂ  ಪಟ್ಟು ಬಿಡದ ರಜನಿ,
"ಸಾಕು ನಿಮ್ಮ ಸಮರ್ಥನೆ. ನನಗೊತ್ತಿಲ್ವಾ ನಿಮ್ಮ ವಿಷ್ಯ? ಮೊನ್ನೆ ಮದುವೆಯಲ್ಲಿ ಬಫೆ ಸಾಲಿನಲ್ಲಿ ನಿಂತಿದ್ದಾಗ ಎದುರಿನ ಹುಡ್ಗಿ ನಿಮ್ಮನ್ನು ದುರುಗುಟ್ಟಿಕೊಂಡು ನೋಡಿ ಬೇರೆ ಲೈನಿಗೆ ಹೋದ್ಳು..ಏನ್ ಮಾಡಿದ್ರಿ ನೀವು ಅವಳಿಗೆ...?".
ಈಗ ಶಶಿ ನಿಜವಾಗಿಯೂ ಗಲಿಬಿಲಿಗೊಂಡ. ಮೊನ್ನೆ ನಡೆದ ಆ ಘಟನೆ ಇವಳು ನೋಡ್ಲಿಲ್ಲ ಅಂತಾನೇ ಅಂದ್ಕೊಂಡಿದ್ದೆ. ನೋಡಿಯೂ ಇದುವರೆಗೆ ಹೇಗೆ ಸುಮ್ಮನಿದ್ದಾಳೆ ಈ ಶೀಘ್ರ ಪ್ರತಿಕ್ರಿಯೆಗಾರ್ತಿ?...ಕಬ್ಬಿಣ ಕಾದ ಸಮಯಕ್ಕೆ ಹೊಡೆಯುವ ಕಲೆ ಯಾವತ್ತು ಕಲಿತ್ಲು ಇವಳು? ಛೇ! ವಿಷಯ ಎಲ್ಲೆಲ್ಲೋ ಹೋಗ್ತಾ ಇದೆಯಲ್ಲ...ಸುಮ್ನೆ ಅವಳು ಹೇಳಿದ್ದಕ್ಕೆ, ಹೌದು;  ಜೋಡಿ ಸರಿ ಇಲ್ಲ.ಅವಳು ಅವನಿಗೆ ಹೇಳಿದ ಹುಡುಗಿಯೇ ಅಲ್ಲ ಅಂತಿದ್ರೆ ನನ್ನ ಗಂಟೇನು ಹೋಗ್ತಿತ್ತು? ಇನ್ನೇನೇನು ಕಾದಿದೆಯೋ? ಯೋಚಿಸುತ್ತಿರುವಾಗಲೇ ತಲೆಗೊಂದು ಮೊಟಕಿ,
" ಹೇಳ್ರೀ..." ಅಂದ್ಳು.
 "ಹೋ ಅದಾ...ಅದು ನಿನ್ನ ಮಗರಾಯ ಮಾಡಿದ್ದು.ನಾನಲ್ಲ ಕಣೆ. ಅವನನ್ನು ನಾನು ಎತ್ಕೊಂಡಿದ್ನಲ್ಲ..ಅವಳು ಎದುರು ಇದ್ಳು, ಇವನ ಕೈ ಸುಮ್ಮನಿರಬೇಕಲ್ಲ...ಅವಳು ಮುಡಿದಿದ್ದ ಗುಲಾಬಿ ಕಿತ್ತು ನನ್ನ ಕೈಗೆ ಕೊಟ್ಟ...ನಾನು ಬೇಡ, ಬೇಡ ಅನ್ನುವಷ್ಟರಲ್ಲಿ ಗುಲಾಬಿ ನನ್ನ ಕೈಯಲ್ಲಿತ್ತು. ಅವಳು ಹಿಂದೆ ನೋಡಿದಾಗ ನನ್ನ ಕೈಯಲ್ಲಿ ರೋಜ್...ನಾನು ಹೇಳಿದೆ ಅವಳಿಗೆ, ಮಗು ಮಾಡಿದ್ದು ಅಂತ. ಆದ್ರೂ ಕೇಳದೆ ಸಿಟ್ಟು ಮಾಡ್ಕೊಂಡು ಬೇರೆ ಕಡೆ ಹೋದ್ಳು...ನಾನೇನು ಮಾಡ್ಲಿ?" . ಅಂದದ್ದೇ ತಡ,
"ಛೀ... ನಾನೂ ಕೇಳ್ಬೇಕು ಅಂತನೇ ಇದ್ದೆ.ಗಡಿಬಿಡಿಯಲ್ಲಿ ಮರೆತು ಹೋದೆ.ಅಲ್ಲಾ...ಹೋಗೋವಾಗ ಎಲ್ಲೂ ಹೂ ತೆಕೊಂಡಿಲ್ಲ...ಆದರೂ ಅಲ್ಲಿ, ಆ ಊಟದ ಸಾಲಿನಲ್ಲಿ ನಂಗೆ ಹೂ ಕೊಟ್ಟಾಗ್ಲೇ ಅನುಮಾನ ಬಂತು.ಏನೋ ಕಿತಾಪತಿ ಮಾಡಿದ್ದೀರಾ ಅಂತ, ಆದ್ರೂ ಮುಡ್ಕೊಂಡೆ ನೀವು ಕೊಟ್ಟದ್ದು ಅಂತ...ಯಾರ್ಯಾರೋ ಮುಡಿದ ಹೂ ಕೊಟ್ರಲ್ಲ, ಅಸಹ್ಯ. ಇನ್ನು ಮಾತಾಡ್ಬೇಡಿ ನನ್ನತ್ರ..." ಮತ್ತೆ ಮಾತಿಗೆ ಯಾವ ಅವಕಾಶವೂ ಇಲ್ಲದ ಹಾಗೆ ತೆರೆ ಎಳೆದು ಹೋದ್ಳು.

ಮಗು ಕೈಯಲ್ಲಿ , ಎದುರಿನ ಹುಡುಗಿ ಮುಡಿದ ಹೂ ಕಿತ್ತು ಕೊಟ್ಟಾಗ ಹೆಂಡತಿಯೆದುರು ಏನೂ ಹೇಳಲು ತೋಚದೇ, ಹಾಲ್ ನ ಎಂಟ್ರೆನ್ಸ್ ನಲ್ಲಿಟ್ಟಿದ್ದ ಸ್ವಾಗತ ಕೋರುವ ಪುಟಾಣಿ ಕೊಟ್ಟದ್ದು ಅಂತ ಹೇಳಿ ಹೆಂಡತಿ ಮುಡಿಯುವಂತೆ ಮಾಡಿದ್ದ. ಅವಳಿಗೆ ಆಗ ಗೊತ್ತಿರಲಿಲ್ಲ. ಯಾರೋ ಅವಳ ಕಿವಿ ಊದಿರಬೇಕು,ಹಾಳಾಗಿಹೋಗ್ಲಿ ಎಂದು ಶಪಿಸಿದ ಶಶಿ.

ಆ ಘಟನೆ ಈಗ ಇಬ್ಬರ ಮನದಿಂದಲೂ ಮರೆಯಾಗಿದೆ.ಇಂದು ಕೂಡಾ ಶಶಿ ಒಂದು ಮದುವೆಗೆ ಹೋಗಿ ಬಂದಿದ್ದ.ಆಫೀಸಿನಿಂದ ನೇರವಾಗಿ ಹೋಗಿದ್ದರಿಂದ ಫ್ಯಾಮಿಲಿಯನ್ನು ಕರ್ಕೊಂಡು ಹೋಗಿರಲಿಲ್ಲ. ಮನೆಗೆ ಬಂದವನೇ,
"ಛೇ, ಈಗಿನ ಹುಡುಗ್ರಿಗೆ ಟೇಸ್ಟೇ ಇಲ್ಲ. ಲವ್ ಈಸ್ ಬ್ಲೈಂಡ್ ಅಂತಾರಲ್ಲ.ಸರಿಯಾಗಿ ಹೇಳಿದ್ದಾರೆ ಯಾರೋ...ಇಲ್ಲದಿದ್ರೆ".
ರಜನಿಯ ಕಿವಿ ನೇರವಾಗಿ, " ಏನ್ರೀ, ಏನಾಯ್ತು?...ಯಾರ ಬಗ್ಗೆ ಮಾತಾಡ್ತಿದ್ದೀರಿ?".
"ಮತ್ತೆ ಯಾರ ಬಗ್ಗೆ?...ಇವತ್ತಿನ ಜೋಡಿ ಬಗ್ಗೆ. ಯಾರು ಏನಾದ್ರೂ ಹೇಳ್ಲಿ, ಆದರೆ ಅವನಿಗೆ ಹೇಳಿದ ಹುಡುಗಿಯೇ ಅಲ್ಲ ಅವಳು.ಒಂದು ಬಣ್ಣ, ಒಂದು ರೂಪ...ಏನೂ ಇಲ್ಲ.ಎಷ್ಟು ಚಂದದ ಹುಡುಗ ಅವನು..." ಆಚೆ ನೋಡಿ ಹೇಳುತಿದ್ದರೂ ಶಶಿಯ ಒಂದು ಕಣ್ಣು ಹೆಂಡತಿಯ ಕಡೆಯೇ ನೆಟ್ಟಿತ್ತು.
" ಮತ್ತೆ ನಾನು ಸುಮ್ನೆನಾ ಹೇಳೋದು...ಇವತ್ತಾದ್ರೂ ಗೊತ್ತಾಯ್ತಲ್ಲ ನಿಮ್ಗೆ. ಇರಿ, ಬಿಸಿ ಬಿಸಿ ನೀರುಳ್ಳಿ ಬಜೆ ಮತ್ತು ಟೀ ತರ್ತೇನೆ..." ಅಂದು ರಜನಿ ಒಳಗೆ ಹೋದ್ಳು.

ಪ್ರೇಯಸಿಯ ಎದುರು ಕವಿಯಾದರೆ ಹಿತ; ಹೆಂಡತಿಯ ಎದುರು ಕಿವಿಯಾದರೆ ಹಿತ...ಮಾತಾಡಿ ಗೆದ್ದವರಿಲ್ಲ ಈ ಹೆಂಡತಿಯೆನ್ನುವ ಅಪ್ರಮೇಯ ಎದುರು ಅನ್ನುವ ಹೊಸ ಸತ್ಯದ ಅರಿವಾಗಿ ಸಣ್ಣದಾಗಿ ಶಿಳ್ಳೆ ಹೊಡೆದು ಬಿಸಿ ಬಿಸಿ ಟೀಗಾಗಿ ಕಾಯುತ್ತಾ ಕೂತ ಶಶಿಯ ಮುಖದಲ್ಲಿ ಗೆಲುವಿನ ಕಳೆಯಿತ್ತು.

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಕೊನೆಗೂ ನೀನು ಬರಲೇ ಇಲ್ಲ,
ನಾನಂದುಕೊಂಡಂತೆ;
ಹಾಗಾಗಿ ನನ್ನಲ್ಲಿ ಯಾವುದೇ
ದೂರುಗಳಿಲ್ಲ.

ನನ್ನೆಲ್ಲ ಇರವು ಅರಿವುಗಳನ್ನೂ
ಮೂಟೆಗಟ್ಟಿ ಎಸೆದುಬಿಟ್ಟಿದ್ದೆ
ನಿಜವಾಗಿಯೂ ಅಲ್ಲಿ
ಯಾವುದನ್ನೂ ಉಳಿಸಲಾಗಲಿಲ್ಲ.
ಹೊರಗೆ ಜಗಮಗಿಸುವ ಬೆಳಕು,
ಮುಖಗಳ‌ ಮೇಲೆ ಮಾತ್ರ
ಕುಣಿಯುವ ಕತ್ತಲು.

ಮಿಂಚೊಂದು ಹೊಳೆದಂತೆ
ಕೈಯೆತ್ತಿ ಮೊರೆಯಿಟ್ಟೆ;
ಇನ್ನೂ ಕೊನೆಯ ಅಂಕ
ಇರುವಂತೆಯೇ ಅಕ್ಷಯವಾಗುವ
ಕ್ಷಣಕ್ಕಾಗಿ ಕಾತರಿಸುತ್ತಾ.

ಇಲ್ಲ,
ಕತೆಯಾಗುವ ಯಾವುದೂ
ಮತ್ತೆ ಸಂಭವಿಸಲೇ ಇಲ್ಲ;
ಎದುರಿನ ಪ್ರೇಕ್ಷಕರೂ
ಎಂದಿನ ಪರಧಿ ದಾಟದೇ
ತಮ್ಮ ತಮ್ಮ ನಿರೀಕ್ಷೆಯಲ್ಲಿಯೇ
ಇದ್ದರು,
ಪರದೆ ಬೀಳುವವರೆಗೆ;
ಕತ್ತಲಾಗುವವರೆಗೆ.

ನನ್ನೊಳಗಿದ್ದ ಕತ್ತಲು
ಹೊರಗೂ ಆವರಿಸಿ
ನಿರಾಳಳಾದೆ;
ಎಲ್ಲಾ ಮುಗಿದ ಮೇಲಿನ
ಅವನ‌ ಭಾವದಂತೆಯೇ.

- - - - - - - - - - - - - - - - - - - - -

ಹೆಣ್ಣಿನ ಮೊರೆ ನಿನಗೆ
ತಲುಪಿದ ದಾಖಲೆಗಳು ಇಲ್ಲಿ
ಸಿಗುವುದಿಲ್ಲ;
ನಿನ್ನ ಕುರುಹುಗಳಿರದ
ತಮ್ಮದೇ ರಾಜ್ಯದಲ್ಲಿ ದುಃಶ್ಯಾಸನರು
ಸೋಲುವುದೂ ಇಲ್ಲ.

ಅವಳಿಗೆ ಮಾತ್ರ
ಅಕ್ಷಯವಾದ ಸೀರೆ
ಮತ್ತೆ ಯಾರಿಗೂ ಸಿಗಲೇ ಇಲ್ಲ;
ಅಂದು ತಲೆ ತಗ್ಗಿಸಿ ಕುಳಿತವರು
ಇಂದಿಗೂ ಎದ್ದಿಲ್ಲ,
ಬಹುಶಃ ಎಂದಿಗೂ.

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಎದೆನೆಲದ ಕುದಿಗೆಲ್ಲ
ಹದವಾದ ಮಳೆ ಸುರಿದು
ಮೆದುವಾಗಿ ಲವಲವಿಕೆ ಮನದ ತುಂಬ
ಮುದದಲ್ಲಿ ಮುಳುಗಿರಲು
ಚದುರಿ ಕರಿಮೋಡಗಳು
ಕದಿರೊಂದು ಬಳುಕಿತ್ತು ಚಂದ್ರ ಬಿಂಬ

ಮುಂಗುರುಳು ತುಟಿತಾಕಿ
ಕೆಂಗರುವು ಕುಣಿದಂತೆ
ಚೆಂಬವಳ ಹೊಳೆದಿತ್ತು ಕೆನ್ನೆಯಲ್ಲಿ
ಅಂಗನಾಮಣಿಯವಳು
ಸಿಂಗರದಿ ಬರುವಾಗ
ಬೆಂಗದಿರ ಕಳೆಯಿಲ್ಲ ಬಾನಿನಲ್ಲಿ

ನೋಟ ಮರೆವಾ ಚೆಲುವು
ಮಾಟಗೊಳಿಸುತಲಿರಲು
ಕೋಟೆಯರಮನೆಯೆಲ್ಲ ಬರಿದೆ ನೆನಪು
ಮೀಟಿ ಮನಸಿನ ತಂತಿ
ನಾಟ ರಾಗವು ನುಡಿಯೆ
ದಾಟಿಯೆಲ್ಲವ ಬರಿದೆ ನಿನ್ನ ವಶವು

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು


ಸೂರ್ಯಕಿರಣಕೆ ಬಿರಿದು ನಗುತಲಿಹುದು ನೋಡು
ಮಂದಾರ ಪುಷ್ಪವು ಚೆಲುವಿನಲ್ಲಿ
ಒಲವ ಹಾಡನು ಗುನುಗಿ ಸೆಳೆವ ದುಂಬಿಯ ಕಂಡು
ಬಾಗಿಹುದು ಸಿರಿಮೊಗವು ನಾಚಿಕೆಯಲಿ

ಹೂವ ತೋಟದ ತುಂಬ ಬಣ್ಣಬಣ್ಣದ ಕನಸು
ರೆಕ್ಕೆ ಬೀಸುತ ಬಳಿಗೆ ಸುಳಿಯುವಂತೆ
ಎದೆಎದೆಯು ಒಲವಲ್ಲಿ ಕಟ್ಟಿ ಜೇನಿನ ಗೂಡು
ಹುಡುಕಿ ಹೊರಡುವ ಹೆಣ್ಣು ರಾಣಿಯಂತೆ

ಯಾರ ಕುಡಿ ನೋಟದ ನೆನಪ ಸುಳಿಯಲಿ ಸಿಲುಕಿ
ಕೆಂಪು ಕದಪಿನ ತುಂಬ ಹೊಳೆವ ಮಿಂಚು
ದೀಪಗೆಂಪಿಗೆ ಸೋತು ಮೋಹದಲಿ‌ ಉರಿವಂತೆ
ಕಣ್ಣ ಸುಳಿಯಲಿ ಇಹುದು ಬಲೆಯ ಸಂಚು

ಮೈಮನದ ತುಂಬೆಲ್ಲ ಒಲವು ಕುಡಿಯೊಡೆದಿರಲು
ಕಂಡ ಲೋಕವು ಎಲ್ಲ ನಗುವ ಹೆಣ್ಣು
ಬೋಳಾದ ಮರ ಚಿಗುರಿ ಹಸಿರು ನೆಲೆಯಾಗಿರಲು
ಹಾಡು ಹಕ್ಕಿಯು ಕುಳಿತು ತೂಗಿ ಹಣ್ಣು


ತಿರುಗಿ ಕಳೆವ ಕಾಲವನ್ನು
ಹೊರೆಯ ಹೊತ್ತು ಹಾಳುಮಾಡಿ
ಹರೆಯ ಕರಗಿತೆಂದು ಮರುಗಿ ಹಳೆಯ ಜೋಡಿಯು
ಮರೆತ ದಿನದ ನೆನಪು ಕಾಡಿ
ಕರೆದರವರು ಸಭೆಯನೊಂದು
ಸರಿದು ನೋಡುವಂತೆ ಮತ್ತೆ ಪರದೆ ತೆರೆದರು

ಹೊತ್ತು ಮುಳುಗೊ ಸಮಯದಲ್ಲಿ
ಕತ್ತು ನೇರ ಮಾಡಿನಿಂತು
ಎತ್ತ ಹೋದನೆಂದು ಪತಿಯು ದಿನವು ಕೊರಗಿಹೆ
ಮತ್ತೆ ಬರದ ಹಾದಿ ನೋಡಿ
ಅತ್ತುಗರೆದು ಮಗನ‌ ಜೊತೆಗೆ
ಸುತ್ತು ಹಾಕಿ ಪೇಟೆ ಪೂರ ನಾನು ಬಳಲಿಹೆ

ಕೇಳಿ ಸತಿಯ ಕೊಂಕು ಮಾತು
ಗೇಲಿ ಮಾಡಿದಂತೆ ತೋರಿ
ನೀಲಿ ಬಾನಿನತ್ತ ನೋಡಿ ಚಿಂತೆ ಮಾಡಲು
ತೇಲಿ ಹಳೆಯ ದಿನಗಳಲ್ಲಿ
ಕೀಳು ಜನರ ಸಂಗಮಾಡಿ
ಗೀಳು ಹತ್ತಿ ಕೆಟ್ಟೆನಂದು ಜೂಜು ಕಾಡಲು

ಎಲ್ಲ ಕೇಳಿ ಸುಮ್ಮನಿದ್ದು
ಬಿಲ್ಲು ಹೆದೆಯನೇರದಿರಲು
ಸುಳ್ಳನೆಂದು ಸತಿಯು ತನ್ನನೆಂದುಕೊಂಡರೆ
ಒಳ್ಳೆಯವರ ನಡುವಿನಲ್ಲು
ಸಲ್ಲಲಿಲ್ಲವೆಲ್ಲು ನೀನು
ಮಳ್ಳಿಯಂತೆ ಮಂದಿ‌ ನಡುವೆ ಜಗಳವಾಡಿದೆ

ಗತದ ನೆನಪು ಮಾಡಿ ಕೊಡಲು
ಕಿತಮನೆಂದು ಸಿಡುಕಿ ಮುನಿದು
ಗತಿಸಿ ಹೋದ ತಾಯ ನೆನೆದು ದೂರ ಕುಳಿತಳು
ಸತಿಯ ಕೂಡೆ ಜಗಳವಾಡಿ
ಪತಿಯು ಗೆಲುವು ಕಾಣದೆಂದು
ಹಿತದ ಮಾತು ಮತಿಗೆ ತಾಕಿ ಮುಗುಳು ನಕ್ಕನು

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

Friday 22 September 2017

                                        ನೆಪ

ನಿನ್ನೆಯ ಮಳೆ ಸುರಿದ ರಸ್ತೆ ಮುಂಜಾನೆಯ ಎಳೆ ಬಿಸಿಲಿಗೆ ಯಾಥಾ ಪ್ರಕಾರ ಬೆಚ್ಚಗಿದ್ದರೂ ಇನ್ನೂ ಮಳೆ ಸುರಿದ ಮಣ್ಣಿನ ಘಮಲು ಬಿಟ್ಟಿರಲಿಲ್ಲ.ಸಾಲು ಮರದಿಂದ ಮುರಿದು ಬಿದ್ದ ಒಣ ಕಟ್ಟಿಗೆಯ ತುಂಡುಗಳು ಅಲ್ಲಲ್ಲಿ ಚೆದುರಿ ಬಿದ್ದಿದ್ದವು.ಅಷ್ಟು ಮೇಲಿನಿಂದ ಬಿದ್ದ ರಭಸಕ್ಕೆ ಕೆಲ ತುಂಡುಗಳು ರಸ್ತೆಗೆ ಡಿಕ್ಕಿಹೊಡೆದು ಮತ್ತಷ್ಟು ಹೋಳುಗಳಾಗಿ ಚಿಮ್ಮಿ ಅಕ್ಕಪಕ್ಕದ ಮನೆಯ ಕಾಂಪೌಂಡ್ ಗೆ ತಾಗಿ ಬಿದ್ದಿದ್ದವು. ಇರುವೆಗಳ ದೊಡ್ಡದೊಂದು ಸಾಲು ಮಣ್ಣನ್ನು ಕೊರೆದು ಸಾಗುತ್ತಿದ್ದುದು ಕುತೂಹಲಕಾರಿಯಾಗಿತ್ತು.ಅವುಗಳು ಎತ್ತಿಹಾಕಿದ ಮಣ್ಣು ಉದ್ದವಾದ ಸಾಲಾಗಿ ಹತ್ತಿರದಿಂದ ನೋಡಿದರೆ ಚೀನಾದ ಮಹಾಗೋಡೆಯನ್ನು ನೆನಪಿಸುತಿತ್ತು.ಯಾವತ್ತೂ ತುಸು ದೂರದವರೆಗೆ ಬೊಗಳಿಕೊಂಡೇ ಬರುವ ಕರಿಯ ನಾಯಿ ಇಂದೇಕೋ ರಸ್ತೆಯ ಅಂಚಿಗೆ ಬಾಲಮುದುರಿಕೊಂಡು ಮಲಗಿತ್ತು.ಬಹುಶಃ ನಿನ್ನೆಯ ಜೋರು ಮಳೆಗೆ ನಿಲ್ಲಲು ಎಲ್ಲಿಯೂ ಜಾಗ ಸಿಗದೇ ನೆಂದಿರಬೇಕು.ಆದರೂ ದಿನಾ ಬೊಗಳುವ ನಾಯಿಯ ಪರಿಚಿತ ಸ್ವಭಾವ ಕಾಣದೇ ಕೇಶವ  ಕ್ಣಣ ಬೆರಗಾದ.

ಮನದಲ್ಲಿ ನೂರು ಯೋಚನೆಗಳು ಅವನನ್ನು ತಿನ್ನುತ್ತಿದ್ದರೂ ಕಣ್ಡೆದುರು ನಡೆಯುವ ಸಂಗತಿಗಳಿಗೆ ಕೇಶವ ಸದಾ ತೆರೆದ ಕನ್ನಡಿ. ಅವನು ಈಗಾಗಲೇ ದಿನಾ ಒಂದಷ್ಟು ಹೊತ್ತು ಕೂರುವ ದೊಡ್ಡ ಅಶ್ವತ್ಥಕಟ್ಟೆಯನ್ನು ದಾಟಿ ಮುಂದೆ ಬಂದಿದ್ದ.ಅಲ್ಲಿಂದ ರಸ್ತೆ ಪಡೆದುಕೊಳ್ಳುವ ತಿರುವಿಗೆ ತಾಕಿಕೊಂಡೇ ಜನ್ನನ ವೆಲ್ಡಿಂಗ್ ಶಾಪ್ ಇದೆ.ವಾಪಾಸು ಬರುವಾಗ ಮೊನ್ನೆ ಕೊಟ್ಟಿದ್ದ ಗೇಟ್ ಬಗ್ಗೆ ಕೇಳಿಬರಬೇಕು. ತುಡುಗು ದನಗಳು ಮನೆಯ ಕಾಂಪೌಂಡ್ ಒಳಗೇ ನುಗ್ಗುತ್ತವೆ, ಆ ಗೇಟ್ ಒಂದು ರಿಪೇರಿ ಮಾಡಿಸೋ ಅಂತ ಅಮ್ಮ ಎಷ್ಟೋ ಸಾರಿ ಅಂದಿದ್ದರೂ ಮನಸ್ಸಾದದ್ದು ಮೊನ್ನೆಯೇ. ಇಲ್ಲಿಂದ ಇನ್ನು ಹೆಚ್ಚು ದೂರವಿಲ್ಲ. ನೇರ ಹೋಗಿ ಪಾಂಡುವಿನ ಬೀಡ ಅಂಗಡಿಯ ನಂತರ ಬಲಕ್ಕೆ ತಿರುಗಿದರೆ ರಸ್ತೆಗೆ ತಾಗಿಕೊಂಡೇ ಹೂವಿನ ಪಾರ್ಕ್ ಇದೆ.ಅಲ್ಲಿಯೇ ಅವಳು ಕೇಶವನನ್ನು ಕಾಣಲು ಹೇಳಿದ್ದು.ವೆಲ್ಡಿಂಗ್ ಶಾಪ್ ನ ಬಳಿ ನಿಂತ ಕೇಶವನ ಮನದಲ್ಲಿ ಮತ್ತೆ ತಳಮಳ.ಯಾಕಾಗಿ ಹೊರಟು ಬಂದೆ ನಾನು? ಮತ್ತೆ ಯಾರನ್ನು ನನ್ಮ ಜೀವಮಾನದಲ್ಲಿ ನೋಡಬಾರದು ಅಂತ ಅಂದುಕೊಂಡಿದ್ನೋ, ಅವರೇ ಮತ್ತೆ ಕರೆದಾಗ ಯಾಕೆ ಹಿಂದೆ ಮುಂದೆ ಯೋಚಿಸದೇ ಬಂದುಬಿಟ್ಟೆ? ಸ್ವಲ್ಪ ಹೊತ್ತು ಆ ಯೋಚನೆಯಲ್ಲಿಯೇ ಅಂತರ್ಮುಖಿಯಾದ. ದಿನವೂ ಮನೆಗೆ ಹಾಲು ಹಾಕುವ ಹುಡುಗ ಪರಿಚಯದ ನಗೆ ಬೀರಿ ಸೈಕಲ್ ನಿಂದ ಎರಡೂ ಕೈಯನ್ನು ಬಿಟ್ಟು ಸಿಳ್ಳೆ ಹೊಡೆಯುತ್ತಾ ರಸ್ತೆಯ ತಿರುವಲ್ಲಿ ಮರೆಯಾದ. ಮೀನಿನ ಬುಟ್ಟಿಯನ್ನು ತಲೆ ಮೇಲೆ ಹೊತ್ತುಕೊಂಡ ಹೆಂಗಸೊಬ್ಬಳು ದಾಟಿಹೋದಾಗ ಮೂಗಿಗೆ ಬಡಿದ ಮೀನಿನ ವಾಸನೆಗೆ ಕೇಶವ ಮತ್ತೆ ಗೆಲುವಾದ.ಹೋಗುವಾಗ ಮೀನು ತೆಗೆದುಕೊಂಡು ಹೋಗ್ಬೇಕು, ಅಮ್ಮನಿಗೆ ಬಂಗುಡೆ ಅಂದ್ರೆ ಪ್ರಾಣ. ನೂರಕ್ಕೆ ಎಷ್ಟು ಅಂತ ಕೇಳುವ ಅಂತ ಒಂದು ಕ್ಷಣ ಅನ್ನಿಸಿದರೂ ಕೇಳಲಿಲ್ಲ.ಯಾವುದೋ ಯೋಚನೆ ಸುಳಿದು ಅಪ್ರಯತ್ನವಾಗಿ ನಕ್ಕು ಬೆನ್ನಿಗೇ ಗಂಭೀರನಾದ ಮತ್ತು ಅನ್ಯಮನಸ್ಕನಾಗಿ ಮುಂದೆ ಸಾಗಿದ.

ಪಾಂಡುವಿನ ಬೀಡ ಅಂಗಡಿಯಲ್ಲಿ ಪೇಪರ್ ಓದುತ್ತಾ ಒಂದು ಪಾನ್ ಹಾಕದಿದ್ದರೆ ಕೇಶವನಿಗೆ ಸ್ಪಷ್ಟವಾಗಿ ಬೆಳಗಾಗುವುದೇ ಇಲ್ಲ.ಆದರೂ ಇಂದು ಯಾವತ್ತಿನ ಸಾದಾ ಬೀಡ ಹಾಕದೇ ಕಲ್ಕತ್ತ ಕಟ್ಟಿಸಿಕೊಂಡ.ಹಾಗೆಯೇ ಮೆಲ್ಲುತ್ತಾ ಪೇಪರ್ ಪುಟ ತಿರುಗಿಸಿ ಎಂದಿನಂತೆ ವಧೂವರರ ಜಾಹಿರಾತಿನ ಪುಟದಲ್ಲಿ ದೃಷ್ಟಿ ನೆಟ್ಟು ಕೂತ. ರಸ್ತೆಯಲ್ಲಿ ಬೆನ್ನಿಗೆ ಭಾರದ ಬ್ಯಾಗ್ ಹೊತ್ತುಕೊಂಡು ಟಿಫಿನ್ ಬಾಕ್ಸ್ ಬ್ಯಾಗ್ ನ್ನು ಕೈಯಲ್ಲಿ ಹಿಡಿದುಕೊಂಡು ಸಾಗಿದ ಶಾಲಾ ಮಕ್ಕಳನ್ನು ಕಂಡು ಗಂಟೆಯ ನೆನಪಾಗಿ ಪೇಪರನ್ನು ಮಡಚಿ ಚಾಕಲೇಟ್ ಡಬ್ಬದ ಸಾಲಿನ ನಡುವೆ ತುರುಕಿಸಿದ. ಪಾಂಡುವನ್ನು‌ ಮಾತಾಡಿಸಬೇಕು ಅನ್ನಿಸಿದರೂ ಅವನು ಯಾರಿಗೋ ಬೊಂಡ ಕೆತ್ತುವುದರಲ್ಲಿ ಬ್ಯುಸಿಯಾಗಿದ್ದ. ರಸ್ತೆಗಿಳಿದು ಶಾಲಾ ಮಕ್ಕಳ ನೀಲಿ ಬಿಳಿಯಲ್ಲಿ ಒಂದಾದ.ಹಾಗೆ ನೋಡಿದರೆ ಅವಳು ಬಹಳ ದೂರದವಳೇನಲ್ಲ. ಹತ್ತಿರದ ಸಂಬಂಧಿಯೇ ಆಗಬೇಕು.ಮನೆಯೂ ಹೆಚ್ಚು ದೂರವಿಲ್ಲ. ಆದರೂ ಒಂದೇ ಶಾಲೆಗೆ ಹೋಗದ, ಒಂದೇ ದೇವಸ್ಥಾನಕ್ಕೆ ಹೋಗದ ನಾವಿಬ್ಬರೂ ಶಾಲೆಯ ದಿನಗಳಲ್ಲಿಯೇ ಹತ್ತಿರವಾದದ್ದು ಹೇಗೆ ಅನ್ನುವುದು ನೆನಪಾಗದೇ ಕೇಶವ ಗಲಿಬಿಲಿಗೊಂಡ. ಪ್ರೈಮರಿಯಲ್ಲಿದ್ದಾಗಲೇ ಅವಳ ಪರಿಚಯವಾದದ್ದು ಅನ್ನುವುದನ್ನು ಮತ್ತೆ ಮತ್ತೆ ಯೋಚಿಸುತ್ತಾ ಅದನ್ನೇ ಗಟ್ಟಿ ಮಾಡಿಕೊಂಡರೂ ಉಳಿದ ಯಾವುದೇ ವಿವರಗಳಿಗೆ ನೆನಪು ಜೊತೆ ನೀಡಲಿಲ್ಲ.ವೇಗವಾಗಿ ಹಾದು ಹೋದ ಬಸ್ಸು ಹೊಂಡದಲ್ಲಿದ್ದ ನೀರನ್ನು ಮಕ್ಕಳ ಮೇಲೆ ಪ್ರೋಕ್ಷಣೆ ಮಾಡಿತು. ಒಂದು ಹುಡುಗಿಯ ಯುನಿಫಾರ್ಮ್ ಸ್ವಲ್ಪ ಒದ್ದೆಯಾಗಿ ಅವಳ ಅಳು ಶುರುವಾದದ್ದೇ ಹತ್ತಿರವಿದ್ದ ಹುಡುಗ ಅತೀವ ಕಾಳಜಿಯಿಂದ ಸಂತೈಸುವುದನ್ನು ಕಂಡು ಕೇಶವ ಪುಟ್ಟ ಮಗುವಿನಂತೆ ನೋಡಿದ.ಮತ್ತೆ ನೆನಪುಗಳಿಗೆ ಜಾರಿದ.ಅವಳು ಅಪ್ಪನಿಲ್ಲದ ಹುಡುಗಿ.ಮನೆಯಿಂದ ಬರುವಾಗ ಅವಳ ಮುಖ ಗೆಲುವಾಗಿದ್ದನ್ನು ತಾನು ಕಂಡೇ ಇರಲಿಲ್ಲ ಅನ್ನುವ ಹೊಸ ಯೋಚನೆ ಸುಳಿದು ದಃಖಿತನಾದ.ಮತ್ತೆ ಆ ಶಾಲಾ ಮಕ್ಕಳ‌ ಗುಂಪಿನಲ್ಲಿರಲು ಮನಸ್ಸಾಗದೇ ವೇಗವಾಗಿ ನಡೆದು ಹೂವಿನ ಪಾರ್ಕ್ ತಲುಪಿದ.ಎಂದಿನಂತೆ ಒಂದು ಸುತ್ತು ವಾಕಿಂಗ್ ಮಾಡಲು ಇಂದೇಕೋ ಮನಸ್ಸಾಗದೇ ಆಗಷ್ಟೇ ಬಿರಿದು ನಗು ಚೆಲ್ಲುತ್ತಿದ್ದ ಗುಲಾಬಿ ಹೂವಿನ ಗಿಡಗಳಿದ್ದ ಪಕ್ಕದ ಬೆಂಚಿನಲ್ಲಿ ಕುಳಿತ. ಮುಳ್ಳುಗಳ ನಡುವೆ ಅರಳಿ ನಗುವ ಗುಲಾಬಿಯನ್ನೇ ನೋಡುತ್ತಾ ಕುಳಿತ ಕೇಶವ ಎಂದಿನಂತೆ ಗೆಲುವಾಗಲಿಲ್ಲ.ಹತ್ತಿರದ ಬೆಂಚಿನಲ್ಲಿ ಕುಳಿತಿದ್ದ ಮುದುಕ ಪರಿಚಿತ ನಗು ಬೀರಿದ. ಮೈಯೆಲ್ಲಾ ಬೆವರಾಗಿ ಕೂತಿದ್ದ. ನಿನ್ನೆ ಚೆಕಪ್ ಗೆ ಹೋಗೋದಿದೆ ಹೇಳಿದ್ದ.ಬಹುಶಃ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚು ಬಂದಿರಬೇಕು. ಎರಡು ಸುತ್ತು ಹೆಚ್ಚಿಗೆ ವಾಕಿಂಗ್ ಮಾಡಿದ ಹಾಗಿದೆ.‌ ಕಾಲೇಜಿನ ವರೈಟಿ ಡ್ರೆಸ್ ದಿನಕ್ಕೆ ಸೀರೆ ಉಟ್ಟ ಅವಳು ಬಂದು ನನ್ನ ಪಕ್ಕದಲ್ಲಿ ಕೂತಾಗ ಇಳಿಬಿಟ್ಟ ಅವಳ ಉದ್ದ ಕೂದಲ ರಾಶಿಯಲ್ಲಿ ನಗುತ್ತಿದ್ದ ಕೆಂಪು ಗುಲಾಬಿ ನೆನಪಾಗಿ ಕೇಶವ ಮತ್ತೆ ಗೆಲುವಾದ. ಹಿಂದಿನ ದಿನ ತಾನೇ ಕೊಟ್ಟಿದ್ದ ಹೂ ಅದು. ನಮ್ಮ ಪ್ರೀತಿ ಅವಳು ಮುಡಿದ ಹೂವಿನಲ್ಲಿ ಸಮೃದ್ಧವಾಗಿ ಅರಳುತಿತ್ತು.

ಬಣ್ಣದ ಚಿಟ್ಟೆಯೊಂದು ಹೂವಿಂದ ಹೂವಿಗೆ ಹಾರುತಿತ್ತು. ತನ್ನಷ್ಟಕ್ಕೇ ಅರಳಿ ನಿಂತಿದ್ದ ಹೂವಿನ ಮೇಲೆ ಕ್ಷಣ ಕಾಲ ಕುಳಿತು ರೆಕ್ಕೆ ಅಗಲಿಸುತಿದ್ದ ಚಿಟ್ಟೆ ಮತ್ತೆ ಬೇರೆ ಹೂವಿಗೆ ಹಾರುತಿದ್ದುದನ್ನು ಎವೆಯಿಕ್ಕದೇ ನೋಡುತಿದ್ದ ಕೇಶವ.ದಿನಾ ಹೆಂಡತಿ ಜೊತೆಗೇ ವಾಕಿಂಗ್ ಬರುತ್ತಿದ್ದ ಪರಿಚಿತ ಗಂಡಸು ಒಬ್ಬನೇ ನಡೆಯುತ್ತಿದ್ದ, ಯಾಕೋ ನಡಿಗೆಯಲ್ಲಿ ಗೆಲುವಿರಲಿಲ್ಲ.ಕೇಳಬೇಕು ಅನ್ನಿಸಿದರೂ ಸುಮ್ಮನಾದ.ಅವಳ ಮನೆಗೆ ಮೊದಲ ಬಾರಿ ಹೋದ ದಿನದ ನೆನಪು ಯಾಕೋ ಈ ನಡುವೆ ತೂರಿ ಬಂತು. ಅವರ ಎಲ್ಲಾ ಖರ್ಚುಗಳನ್ನು ನೋಡಿಕೊಳ್ಳುತಿದ್ದ ಹೆಂಡತಿ ಸತ್ತು ಎರಡು ಮಕ್ಕಳಿರುವ ಮಾವ ಅವಳನ್ನು ತನಗೇ ಮದುವೆ ಮಾಡಿಕೊಡಬೇಕು ಅಂತ ತಾಕೀತು ಹಾಕಿದ್ದ. ಆ ವಿಷಯವನ್ನು ಅವಳು ಹೇಳಿದ ದಿನವೇ ಅವಳ ಮನೆಗೆ ಹೋಗಿದ್ದ ಕೇಶವ. ಯಾವ ನಿರ್ಧಾರವನ್ನೂ ತೆಗೆದುಕೊಳ್ಳಲು ಶಕ್ತವಿರದಿದ್ದ ಅವಳ ಅಶಕ್ತ ತಾಯಿಯ ಎದುರು ತಾನು ಅವಳನ್ನು ಪ್ರೀತಿಸುವ ವಿಷಯ ಹೇಳಿ ಅವಳನ್ನೇ ಮದುವೆಯಾಗುವುದಾಗಿ ಹೇಳಿ ಬಂದಿದ್ದ.ಆಗ ಅವಳ ಕಣ್ಣುಗಳಲ್ಲಿ ಹೊಳೆದ ಬೆಳಕು ಮತ್ತೆ ಎರಡು ಎರಡು ವರ್ಷ ನಮ್ಮ ಪ್ರೀತಿಗೆ ದಾರಿ ದೀಪವಾಗಿತ್ತು. ಅವಳು ನಿರಾಳವಾಗಿದ್ದಳು.ಹೊತ್ತು ಏರುತಿದ್ದರೂ ಕೇಶವನಿಗೆ ಅಲ್ಲಿಂದ ಏಳುವ ಮನಸ್ಸಾಗಲಿಲ್ಲ.ಎದುರಿನ ಬೆಂಚಿನಲ್ಲಿ ವಾಕಿಂಗ್ ಮುಗಿಸಿದ ಪರಿಚಿತ ಮುದುಕ ತಾನು ತಂದಿದ್ದ ಪೇಪರ್ ಓದುವಲ್ಲಿ ತಲ್ಲೀಣನಾಗಿದ್ದ. ಹೆಂಡತಿಯಿಲ್ಲದೇ ಒಬ್ಬನೇ ಬಂದಿದ್ದ ಗಂಡಸು ಎಲ್ಲಿಯೂ ಕಾಣಲಿಲ್ಲ. ಬಹುಶಃ ಹೊರಟು ಹೋಗಿರಬೇಕು. ಜಾಜಿಯ ದಟ್ಟ ಬಳ್ಳಿ ಹಬ್ಬಿದ್ದ ಅಷ್ಟೇನೂ ಬೆಳಕು ಬೀಳದ ಸ್ಥಳದಲ್ಲಿದ್ದ ಬೆಂಚಿನಲ್ಲಿ ಪ್ರೇಮಿಗಳಿಬ್ಬರು ಸ್ಪರ್ಶ ಸುಖದಲ್ಲಿ ಮೈಮರೆತಿದ್ದರು. ಅವರ ಚಂಚಲ ಕಣ್ಣುಗಳಲ್ಲಿ ನಿರೀಕ್ಷೆಗಳನ್ನು ಕಂಡು ಕೇಶವನಿಗೆ ಅದೇಕೋ ಜೋರಾಗಿ ನಕ್ಕು ಬಿಡಬೇಕು ಅನ್ನಿಸಿತು.ಮರುಕ್ಷಣವೇ ತನ್ನ ಯೋಚನೆಗೆ ಬೆರಗಾಗಿ ಗಂಭೀರವಾಗಿ ಕುಳಿತುಕೊಂಡ.

ಹೋದ ಸಲ ಇದೇ ಬೆಂಚಿನ ಮೇಲೆ ಅವಳ ಜೊತೆಗೆ ಕೊನೆಯ ಬಾರಿ ಕೂತಿದ್ದು ನೆನಪಾಗಿ ಅಂತರ್ಮುಖಿಯಾದ.ಅವಳು ಕೆಲಸ ಸಿಕ್ಕಿ ಬೆಂಗಳೂರಿನಲ್ಲಿದ್ದಳು. ಕಳೆದ ದಸರಾಕ್ಕೆ ಊರಿಗೆ ಬಂದಾಗ ಇದೇ ಹೂವಿನ ಪಾರ್ಕ್ ಗೆ ಬರಲು ಹೇಳಿದಾಗ  ಕೇಶವ ಖುಷಿಯಿಂದ ಬಂದು ಕುಳಿತಿದ್ದ. ತಡವಾಗಿ ಬಂದ ಅವಳ ಮುಡಿಯಲ್ಲಿ ಎಂದಿನಂತೆ ಗುಲಾಬಿ ಇಲ್ಲದ್ದು ಕಂಡು ಯಾವುದೋ ಅವ್ಯಕ್ತ ಅಪರಿಚಿತ ಭಾವವೊಂದು ಮನದಲ್ಲಿ ಸುಳಿದು ಹೋಗಿ ಲಘುವಾಗಿ ಕಂಪಿಸಿದ್ದ. ಬಂದವಳೇ "ಥ್ಯಾಂಕ್ಸ್ ಕಣೋ ಕೇಶವ" ಅಂದು ಸ್ವಲ್ಪ ದೂರವೇ ಕುಳಿತುಕೊಂಡ ಅವಳನ್ನು ಅರ್ಥವಾಗದ ನೋಟದಿಂದ ನೋಡಿದ್ದ. ಮತ್ತೆ ಇಬ್ಬರಲ್ಲೂ ಮಾತಿಲ್ಲ.ಅವಳು ಏನನ್ನೋ ಹೇಳಬೇಕು ಅಂತ ಬಂದಿದ್ದಳು, ಆದರೆ ಅವಳಿಗೂ ಹೇಳಲಾಗದೇ ತನ್ನ ಉಗುರುಳೊಡನೆ ಆಟವಾಡುತ್ತಾ ಕುಳಿತುಬಿಟ್ಟಿದ್ದಳು. ಸಂಜೆ ಕಳೆದು ಕತ್ತಲು ಇಣುಕಲು ಶುರುವಾದಾಗ ಎದ್ದು ನಿಂತಳು. ಹೋಗುವ ಮೊದಲು ಬಹಳ ಕಷ್ಟದಲ್ಲಿ "ನಿನ್ನಸಹಾಯ ಇಲ್ಲದಿರುತಿದ್ದರೆ ಮಾವನನ್ನೇ ಮದುವೆಯಾಗಿ ನಾನು ಇಲ್ಲೇ ಕೊಳೆತಿರಬೇಕಿತ್ತು.ಥ್ಯಾಂಕ್ಸ್ ಕೇಶವ್" ಅಂತ ಹೇಳಿ ತಿರುಗಿ ನೋಡದೇ ಹೋಗಿದ್ದಳು.ಕೇಶವ ಅದೆಷ್ಟೋ ಹೊತ್ತು ಕತ್ತಲಲ್ಲಿ ಕುಳಿತೇ ಇದ್ದ. ಯಾವುದೂ ಸ್ಪಷ್ಟವಾಗದೇ ಎಲ್ಲ ಕಡೆಯೂ ಬರೇ ಕತ್ತಲು ತುಂಬಿಕೊಂಡಿತ್ತು. ಎಷ್ಟೋ ಹೊತ್ತಿನ ನಂತರ ಮನೆಗೆ ಬಂದಾಗ ಅಮ್ಮ ಕೈಯಲ್ಲೊಂದು ಕವರ್ ಕೊಟ್ಟು ಒಂದು ಕ್ಷಣ ದುರುಗುಟ್ಟಿ ನೋಡಿ ಹೋಗಿ ಮಲಗಿಕೊಂಡಿದ್ದಳು.ತೆರೆದು ನೋಡಿದರೆ ಅವಳ ಲಗ್ನ ಪತ್ರಿಕೆ! ಇಂದು ಪಾರ್ಕ್ ಗೆ ಬಂದಾಗ ಮೊದಲು ನೋಡಿದ್ದ ಗುಲಾಬಿಯನ್ನು ಮತ್ತೆ ಮತ್ತೆ ನೋಡುತ್ತಾ ಕಿತ್ತುಕೊಂಡ. ಆಸೆಯಾಗಿದ್ದರೂ ಯಾವತ್ತೂ ಕೇಶವ ಹೀಗೆ ಹೂ ಕೀಳುವ ಧೈರ್ಯ ಮಾಡಿರಲಿಲ್ಲ. ಕಿತ್ತ ಗುಲಾಬಿ ಕೈಯಲ್ಲಿ ಹಿಡಿದು ಸಂತೋಷ ತಾಳಲಾರದೇ ಜೋರಾಗಿ ಸಿಳ್ಳೆ ಹಾಕಿದ.


ಪೇಪರ್ ಮಡಚಿ ಹತ್ತಿರ ಬಂದ ಮುದುಕ "ಇವತ್ತೂ ಅವಳಿಗಾಗಿ ಕಾದು ಕುಳಿತಿದ್ದೀರಾ...ಸರಿ ಸರಿ ನಾಳೆ ಸಿಗೋಣ, ಹೇಗೂ ಬರ್ತೀರಲ್ಲ..." ಅಂತ ಹೇಳಿ ಹೊರಟ.ಜಾಜಿ ಬಳ್ಳಿಯ ಕೆಳಗಿನ ಬೆಂಚೂ ಖಾಲಿಯಾಗಿತ್ತು.ಯಾವುದರ ಪರಿವೇ ಇಲ್ಲದೇ ಚಿಟ್ಟೆ ಮಾತ್ರ ನೆಮ್ಮದಿಯಿಂದ ಮತ್ತೊಂದು ಹೂವಿಗೆ ಹಾರುತಿತ್ತು.

Monday 14 August 2017

ಅಮ್ಮನು ನಿನ್ನನೆ ಕಂದಾ ಎನ್ನುತ
ಮನೆಯಲಿ ದಾರದಿ ಕಟ್ಟಿದಳು
ಮುಗ್ದನ ತೆರದಿ ಕಾಡುತ ನೀನು
ಬಾಯಲಿ ಜಗವನೆ ತೋರಿಸಿದೆ

ರಾಧೆಯು ನಿನ್ನಯ ಪ್ರೇಮವ ಬೇಡುತ
ಮನದಲಿ ಗುಡಿಯನು ಕಟ್ಟಿದಳು
ಎಲ್ಲಿಯೂ ನಿಲ್ಲದ ಯಮುನೆಯ ಹರಿವಲಿ
ನಾದದಿ ಜಗವನೆ ತೇಲಿಸಿದೆ

ಮೋಹದ ಪರದೆಯ ಮುಸುಕಲು ಮನದಲಿ
ಪಾರ್ಥನು ಕರ್ಮಕೆ ಮರುಗಿದನು
ಜ್ಞಾನದ ಗೀತೆಯ ಸಾರವ ಬೋಧಿಸಿ
ನರರನು ಯುದ್ದದಿ ಗೆಲ್ಲಿಸಿದೆ

ನನಗೇ ಬೇಕು ಅನ್ನುವ ಲೋಕಕೆ
ಸಿಗದೇ ನೀನು ನಗುತಿರುವೆ
ತನ್ನನು ಬಿಟ್ಟು ಕೃಷ್ಣನೇ ಆಗುವ
ಭಾವದಿ ಮಾತ್ರ ದಕ್ಕಿರುವೆ

ಕೃಷ್ಣಂ ವಂದೇ ಜಗದ್ಗುರುಂ

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಅಗ್ಗವಿದ್ದ ಹೊನ್ನಶೂಲ ಸಗ್ಗವಾಗಿ ಕಂಡುಬಂದು
ಬುದ್ದಿಯೆಲ್ಲ ಮಾಯೆಯಿಂದ ತಪ್ಪಿ ಹೋಗಿದೆ
ಒಗ್ಗದಿದ್ದ ಹೆಣ್ಣಕೂಡಿ ಸುಗ್ಗಿಯಾಗಿ ಸೇರಿನಿಂದು
ತನ್ನದಲ್ಲ ಠೀವಿಯಿಂದ ಅಪ್ಪಿಯಾಗಿದೆ

ಮೊಗ್ಗೆಯಾದ ಮೊದ್ದು ಹೂವು ಚೆನ್ನೆಯಾಗಿ ಸೂರೆಗೊಂಡು
ಮುದ್ದು ಮೀರಿ ಟೊಂಗೆಯಿಂದ ಅಂಕೆ ತಪ್ಪಿದೆ
ಬುಗ್ಗೆಯಾದ ಬಣ್ಣನೀರು ತನ್ನಮೇಲೆ ಹಾಕಿಕೊಂಡು
ಶುದ್ಧಿಯಾದ ಭಾವದಿಂದ ಅಂಟಿಕೊಂಡಿದೆ

ಜುಗ್ಗವಾದ ಹೆಣ್ಣುಹಾವು ಇಷ್ಟವಾಗಿ ಸುತ್ತಿಕೊಂಡು
ಹುತ್ತವೆಲ್ಲ ಸಾಲವಾಗಿ ಮೆತ್ತಿಕೊಂಡಿದೆ
ಸಿದ್ಧವಾದ ಚಿಕ್ಕೆತೇರು ಕಷ್ಟವಾಗಿ ಮೆಟ್ಟಿಬಂದು
ಸುದ್ದಿಯೆಲ್ಲ ಮೋಹವಾಗಿ ಮುತ್ತಿಕೊಂಡಿದೆ

ಬದ್ದವಾಗಿ ಸುಪ್ತತಾಪ ಸನ್ನೆಯಲ್ಲಿ ವಾಣಿಯಾಗಿ
ಹೊನ್ನನಾದ ವೀಣೆಗಿಂದು ತಪ್ತಗೊಂಡಿದೆ
ಶುದ್ಧವಾದ ಹಕ್ಕಿಕೂಗು ಸೊನ್ನೆಯಲ್ಲಿ ಲೀನವಾಗಿ
ಜೊನ್ನವಾದ ನೇಹಮಿಂದು ತೃಪ್ತಿಗೊಂಡಿದೆ

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

Saturday 12 August 2017

ಆಶಾಡದ ವಿರಹ ಕಳೆಯುತ್ತಿದ್ದಂತೆಯೇ ಮನಸ್ಸಿಗೆ ಏನೋ ಒಂದು ತೆರನ ನಿರಾಳ ಭಾವ. ಅದೇಕೊ ಗೊತ್ತಿಲ್ಲ, ನನಗೆ ಮೊದಲಿನಿಂದಲೂ ಆಶಾಡ ಅಂದ್ರೆ ಅಷ್ಟಕ್ಕಷ್ಟೇ. ಧೋ ಎಂದು ಸುರಿಯುವ ಮಳೆ ಭೂಮಿಗೂ ಬಾನಿಗೂ ಮಿಲನದೊಸಗೆಯ ಭಾಗ್ಯವನ್ನು ಕರುಣಿಸಿದರೆ ಇಳೆಯ ಪ್ರೇಮಿಗಳ ಪಾಲಿಗೆ ವಿರಹದ ಬೇಗೆ ಸುಡುವ ಕಾಲವಂತೆ, ಹೌದೋ ಅಲ್ವೋ ನನಗಂತೂ ಗೊತ್ತಿಲ್ಲ. ನನ್ನ ಅನುಭವಕ್ಕೆ ಎಂದೂ ಬಂದಿಲ್ಲ. ಆದರೆ ನನಗೆ ಆಶಾಡದ ಬಗ್ಗೆ ಬೇಸರ ಬರಲು ಮುಖ್ಯ ಕಾರಣ ಇದ್ದದ್ದು ಬೇರೆಯೇ ವಿಷಯದಲ್ಲಿ. ಜೂನ್ ನಲ್ಲಿ ಶಾಲೆ ಆರಂಭ ಆದ್ರೆ ಈ ನಾಗರಪಂಚಮಿ ಬರೋ ತನಕವೂ ನಿರಂತರ ಶಾಲೆ. ರಜೆ ಅಂತ ಶುರುವಾಗೋದು ಈ ನಾಗರಪಂಚಮಿಯಿಂದ. ನಮ್ಮ ಹಬ್ಬಗಳ ಸೀಸನ್ ಆರಂಭವಾಗೋದೂ ಈ ನಾಗರಪಂಚಮಿಯಿಂದಲೇ. ಅಲ್ಲೀತನಕ ನಮಗೆ ರಜೆ ಅಂತ ಸಿಗುತ್ತಿದ್ದುದು ಕೆಲವೇ ಸಂದರ್ಭಗಳಲ್ಲಿ ಮಾತ್ರ.

ಪಟಪಟ ಅಂತ ಶಾಲೆಯ ಹೆಂಚಿನಮೇಲೆ ಮಳೆಯ ದೊಡ್ಡ ದೊಡ್ದ ಹನಿಗಳು ಬಿದ್ದು ಜೋರಾದ ಶಬ್ದ ಬರುವಾಗ ಮೇಷ್ಟ್ರು ಪಾಠ ನಿಲ್ಲಿಸುತ್ತಿದ್ದರು, ಅಲ್ಲದೇ ಅಗ ಕವಿಯುವ ಮಳೆಯ ಕತ್ತಲೆಯಿಂದಾಗಿ ಕರೆಂಟ್ ಕನೆಕ್ಷನ್ ಇಲ್ಲದ ನಮ್ಮ ಶಾಲೆಯಲ್ಲಿ ಪಾಠ ಮಾಡಲೂ ಸಾಧ್ಯವಾಗುತ್ತಿರಲಿಲ್ಲ. ಆದರೆ ಮನೆಗೆ ಹೋಗೋ ಹಾಗಿರಲಿಲ್ಲ...ಹೆಚ್ಚು ಮಾತಾಡೊ ಹಾಗೂ ಇರಲಿಲ್ಲ. ಹಾಗೇನಾದ್ರೂ ಮಾಡಿದ್ರೆ ಹೆಸರು ಬರೆದಿಟ್ಟು ಮೇಷ್ಟ್ರಿಗೆ ಕಂಪ್ಲೇಂಟ್ ಮಾಡ್ಲಿಕ್ಕೆ ಕ್ಲಾಸ್ ಲೀಡರ್ ನ ಹದ್ದಿನ ಕಣ್ಣುಗಳು ಸದಾ ಜಾಗ್ರತವಾಗಿರುತ್ತಿದ್ದವು. ಕಟ್ಟಿ ಹಾಕಿದಂತಹ ಪರಿಸ್ಥಿತಿ ನಮ್ಮದು.

ಜೋರ್ ಮಳೆ ಬಂದಾಗ ಒಬ್ಬ ಬಂದು ಮೇಷ್ಟ್ರು ಪಾಠ ಮಾಡುವ ಕೋಣೆಗೆ ನುಗ್ಗುತ್ತಿದ್ದ. ಅವನು ಬರುತ್ತಿದ್ದಂತೆ ಕೆಲವು ಹುಡುಗರ ಕಣ್ಣು ಖುಷಿಯಿಂದ ಅರಳುತ್ತಿದ್ದವು. ಅವನು ಬಂದು "ಹೊಳೆಯಲ್ಲಿ ನೀರು ಹೆಚ್ಚಾಗಿದೆ, ತಡ ಆದ್ರೆ ಮತ್ತೆ ದೋಣಿ ಇಳಿಸ್ಲಿಕ್ಕೆ ಆಗಲ್ಲ..." ಅಂತ ಹೇಳುವಾಗ ಪರಿಸ್ಥಿತಿಯನ್ನು ನೋಡಿ ಮೇಷ್ಟ್ರು "ಪೆರಂಪಳ್ಳಿ ಮನೆಯಿದ್ದವರು ಎದ್ದು ನಿಲ್ಲಿ" ಅನ್ನುತ್ತಿದ್ದರು. ಈ ಮಾತಿಗೇ ಜಾತಕಪಕ್ಷಿಯಂತೆ ಕಾಯುತ್ತಿದ್ದ ಹಾಗೆ, ಈಗಾಗಲೇ ತಮ್ಮ ಮುರುಕು ಬ್ಯಾಗ್ ಗಳಿಗೆ ಪುಸ್ತಕವನ್ನು ತುಂಬಿಸಿ ಲಂಕೆ ಹಾರಲು ಸಿದ್ದನಾದ ಹನುಮಂತನಂತೆ ತುದಿಗಾಲಿನಲ್ಲಿ ನಿಂತ ನಾಲ್ಕು ಹುಡುಗರು ಎದ್ದು ನಿಲ್ಲುತ್ತಿದ್ದರು. ಮತ್ತೆ ಮೇಷ್ಟ್ರು, "ನೀವು ಹೋಗ್ಬಹುದು...ಹುಷಾರಾಗಿ ಕರ್ಕೊಂಡು ಹೋಗಪ್ಪ" ಅಂತ ಆ ವ್ಯಕ್ತಿಗೆ ಹೇಳೋವಾಗ ಮರಿಕಪಿಗಳು ಛಂಗನೇ ಜಿಗಿಯುತ್ತಿದ್ದವು. ಹೋಗುವಾಗ ಇಡೀ ಕ್ಲಾಸ್ ನತ್ತ ಒಮ್ಮೆ ಅವರು ನೋಡುವ ನೋಟ ನನಗಿನ್ನೂ ನೆನಪಿದೆ. ನಂತರ ನಮಗೆ ಪಾಠ ಕೇಳುವ ಯಾವ ಮೂಡೂ ಇರ್ತಿರ್ಲಿಲ್ಲ. ಛೇ...ಬಡ್ಡಿಮಕ್ಳು, ನಮ್ಮನ್ನು ಉರಿಸಿ ಹೋದ್ವು. ಅವರಿಗೆ ಮಾತ್ರ ಯಾವಗ್ಳೂ ರಜೆ ,ಮಳೆ ಬಂದ್ರೆ....ನಾವು ಮಾತ್ರ ಕುತ್ಕೊಳ್ಬೇಕು...ಸ್ವಾಮಿ ದೇವರೆ, ಇವತ್ತು ಯಾರದ್ರು ಸತ್ತೇ ಹೋಗ್ಲಿ...ಒಂದು ದಿನ ರಜೆಯಾದ್ರೂ ಸಿಗಲಿ ಅಂತ ಆ ದೇವರಲ್ಲಿ ಕೊನೆಗೆ ಮೊರೆಯಿಡುತ್ತಿದ್ದೆ. ಮತ್ತೆ ಎಷ್ಟೋ ಸಮಯದ ನಂತರ ಗೊತ್ತಾದದ್ದು ಮಳೆ ಬಂದಾಗ ಮಕ್ಕಳನ್ನು ಕರ್ಕೊಂಡು ಹೋಗಲು ಬರುತ್ತಿದ್ದ ವ್ಯಕ್ತಿ ಶಾಲೆಗೂ ಆ ಊರಿಗೂ ನಡುವೆ ಹರಿಯುತ್ತಿದ್ದ ನದಿಯಲ್ಲಿ ಜನರನ್ನು ಈ ಬದಿಯಿಂದ ಅ ಬದಿಗೆ ಸಾಗಿಸುತ್ತಿದ್ದ ದೋಣಿ ನಡೆಸುವ ಅಂಬಿಗ ಅಂತ. ಆ ಕಾಲದಲ್ಲಿನ್ನೂ ಸೇತುವೆ ಆಗಿರಲಿಲ್ಲ. ಸೇತುವೆಯಾಗಿ ಈಗಿನ ಮಕ್ಕಳಿಗೆ ಅ ಸೌಭಾಗ್ಯವೂ  ಇಲ್ಲ. ಇದೆಲ್ಲದ್ರಿಂದ ಮುಕ್ತಿ ಸಿಗುತ್ತಿದ್ದುದು ಶ್ರಾವಣ ಶುರು ಆದ ನಂತರ ಸಿಗುತ್ತಿದ್ದ ಸಾಲು ಸಾಲು ರಜೆಗಳಿಂದಾಗಿ. ಇಷ್ಟು ದಿನ ಸುರಿಸುರಿದು ಮೋಡಗಳೆಲ್ಲಾ ಬರಿದಾದ ಹಾಗೆ ಮಳೆಯೂ ಸ್ವಲ್ಪ ದಿನ ರಜೆ ಸಾರುವ ಕಾಲವೇ ಈ ಶ್ರಾವಣ. ಗಣೇಶನ ಹಬ್ಬ, ವಿಟ್ಲಪಿಂಡಿಯ ಸಡಗರದ ರಜೆಗಳ ನಡುವೆ ಶಾಲೆ ಇದ್ದ ದಿನವೂ ಒಂದು ಗಂಟೆಯಾದರೂ ಗ್ರೌಂಡ್ ನ ಮುಖ ಕಾಣುತ್ತಿದ್ದೆವು. ಇವೇ ಆಗಿನ ದೊಡ್ಡ ದೊಡ್ಡ ಖುಷಿಗಳು.

ಹಾಗಾಗಿ ಆಶಾಡ ಪ್ರೇಮಿಗಳನ್ನು ವಿರಹ ವೇದನೆಗಾಗಿ ಕಾಡಿ ಶ್ರಾವಣದ ಮಿಲನಕ್ಕಾಗಿ ಕಾಯುವಂತೆ ಮಾಡುತ್ತಿದ್ದರೆ, ರಜೆಯಿಲ್ಲದೆ, ಶಾಲೆಯಲ್ಲಿ ಆಟವೂ ಇಲ್ಲದೇ  ನಿರಂತರ ಪಾಠದಿಂದ ಬೇಸತ್ತ ನಾವೂ ಕೂಡಾ ಶ್ರಾವಣಕ್ಕಾಗಿ ಕಾಯುತ್ತಿದ್ದ ಕಾಲವೂ ಒಂದಿತ್ತು.
ನನಗೆ ಪುರಾಣದ ಪಾತ್ರಗಳು ಮೊದಲು ಪರಿಚಯವಾದದ್ದೇ ಡಾ| ರಾಜ್ ಸಿನಿಮಾಗಳ ಮೂಲಕ.ರಾಜ್ ಸಿನಿಮಾಗಳ ಹುಚ್ಚು ಅಭಿಮಾನಿಯಾಗಿದ್ದ ನಾನು ಅವರ ಪೌರಾಣಿಕ ಕತೆಯ ಸಿನಿಮಾಗಳನ್ನು ಬಹುತೇಕ ಎರಡೆರಡು ಸಲ ನೋಡಿದ್ದೇನೆ. ಅದರಲ್ಲೂ ಬಬ್ರುವಾಹನ, ಭಕ್ತ ಪ್ರಹ್ಲಾದ, ಮಯೂರ,ಸತ್ಯಹರಿಶ್ಚಂದ್ರದಂತಹ ಸಿನಿಮಾಗಳು ನನ್ನ ಮನಸ್ಸಿನಲ್ಲಿ ಉಂಟುಮಾಡಿದ ಬೆರಗು, ರೋಮಾಂಚನ ಇನ್ನೂ ಮಾಸದೆ ಹಸಿರುಹಸಿರಾಗಿವೆ. ಈಗಲೂ ಟಿ.ವಿ‌ಯಲ್ಲಿ ಬಂದರೆ ಅದೇ ಬೆರಗಿನಿಂದ ನೋಡುತ್ತೇನೆ.

ಬಬ್ರುವಾಹನ ಚಿತ್ರದ,  " ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ...", ಮಯೂರದ "ಈ ಮಣಿಕಿರೀಟ ನಿನಗೆ ಬೇಡವೆ? ಈ ರತ್ನ ಸಿಂಹಾಸನ ನಿನಗೆ ಬೇಡವೇ? ಈ ಸಾಮ್ರಾಜ್ಯ ನಿನಗೆ ಬೇಡವೇ? ಎಂದು ಅಕ್ಕರೆಯಿಂದ ಕೇಳುತ್ತಿದ್ದವಳು ನೀನೇ ಅಮ್ಮಾ?.....ಹೊಂಚು ಹಾಕಿ ಸಂಚು ಮಾಡಿ ವಂಚನೆಯಿಂದ ನಮ್ಮ ರಾಜ್ಯವನ್ನು ಕಬಳಿಸಿ ಮೆರೆಯುತ್ತಿರುವ ಶಿವಸ್ಕಂಧವರ್ಮಾ!!!..." ಅಂತಹ ಸಂಭಾಷಣೆಗಳಲ್ಲಿ ನನಗೆ ರಾಜ್ಕುಮಾರ್ ಕಾಣಿಸೋದೇ ಇಲ್ಲ .ಬದಲಾಗಿ ಯುದ್ಧರಂಗದಲ್ಲಿ ಕಲಿ ಅರ್ಜುನನ ಎದುರು ಕೆಚ್ಚದೆಯಿಂದ ನಿಂತ ಬಬ್ರುವಾಹನ, ಅಮ್ಮನ ಸಮಾಧಿಯೆದುರು ಕಂಬನಿಗರೆಯುತ್ತಲೇ ಪಲ್ಲವರನ್ನು ಕನ್ನಡ ನಾಡಿನಿಂದ ಹೊರಹಾಕುವ ಪ್ರತಿಜ್ಞೆಯನ್ನು ಮಾಡುವ ವೀರ ಕನ್ನಡಿಗ ಮಯೂರನೇ ಕಾಣುತ್ತಾನೆ. ಅದು ಡಾ| ರಾಜ್ ಅಭಿನಯದ ಗತ್ತು ಗೈರತ್ತು ಸೌಂದರ್ಯ.

ನಾನು ಅತಿಯಾಗಿ ಮೆಚ್ಚಿದ ಮತ್ತೊಂದು ಸಿನಿಮಾ ಕವಿರತ್ನ ಕಾಳಿದಾಸ. ಸುಕೋಮಲೆಯಾದ ಶಕುಂತಲೆ,  "ಅ...ಆ್ಹ....ಅನಸೂಯೆ...ಪ್ರಿಯಂವದೆ ಕಟ್ಟಿದ ಈ ವಲ್ಕಲ ಬಹಳ ಬಿಗಿಯಾಗಿ ನನ್ನ ಎದೆ ನೋಯುತ್ತಿದೆ, ಸ್ವಲ್ಪ ಸಡಿಲಗೊಳಿಸು...." ಎಂದು ಗೋಗರೆವಾಗ ಸಖಿ ಪ್ರಿಯವಂದೆ, " ಹ್ಮ್....ಎದೆಯನ್ನು ಉಬ್ಬಿಸುತ್ತಿರುವ ನಿನ್ನ ಯೌವನವನ್ನು ನಿಂದಿಸು, ನನ್ನನ್ನಲ್ಲ" ಎಂದು ಶಕುಂತಲೆಯ ತುಂಬಿದ ಯೌವನವನ್ನು ನೋಡುವಾಗ, ದುಂಬಿಯೊಂದು ಮಕರಂದವನ್ನು ಹೀರಲು ಶಕುಂತಲೆಯ ಅಧರವನ್ನು ಮುತ್ತಿಕ್ಕುವ ದೃಶ್ಯ ಕಂಡು ದುಷ್ಯಂತ, "ಆಹಾ ...ಆ ಚಂದುಟಿಯನ್ನು ಚುಂಬಿಸುತ್ತಿರುವ ದುಂಬಿಯೇ...ನೀನೇ ಭಾಗ್ಯಶಾಲಿ" ಎಂದು ಉಧ್ಗರಿಸುತ್ತಾನೆ...ಈ ದೃಶ್ಯಗಳನ್ನು ಕಂಡಾಗ ಜಯಪ್ರದಳ ಮೋಹಕ ಚೆಲುವಿಗೆ ಕ್ಲೀನ್ ಬೋಲ್ಡ್ ಆಗಿದ್ದೆ. ಮೊದಲು ಕುರಿ ಕಾಯುವ ಪೆದ್ದನಾಗಿ, ನಂತರ ಕಾಳಿ ಕೃಪಕಟಾಕ್ಷದಿಂದ ಕಾಳಿದಾಸನಾಗಿ, ದುಷ್ಯಂತನಾಗಿ, ಪ್ರೇಮಿಯಾಗಿ, ವಿರಹಿಯಾಗಿ,ವಿರಾಗಿಯಾಗಿ ರಾಜ್ಕುಮಾರ್ ಅಭಿನಯ ಮನೋಜ್ಞ.

ಪುರಾಣದ ಕೆಲವು ಪಾತ್ರಗಳು ನನ್ನನ್ನು ಈವರೆಗಿನ ಬದುಕಿನುದ್ದಕ್ಕೂ ಕಾಡುತ್ತಲೇ ಬಂದಿವೆ.ಅಂಬೆ, ಊರ್ಮಿಳಾ, ಅಹಲ್ಯೆ ಮತ್ತು ಈ ಶಕುಂತಲ. ಎಲ್ಲರೂ ಬಹುತೇಕ ತಮ್ಮದಲ್ಲದ ತಪ್ಪಿಗೆ ಬದುಕಿನುದ್ದಕ್ಕೂ ಬೆಂದವರೇ.ಮೊದಲ ಮೂವರ ಬಗ್ಗೆ  ಇನ್ನೊಮ್ಮೆ ಅಂತಹ ಸಂಧರ್ಬ ಬಂದಾಗ ಬರೆಯುತ್ತೇನೆಂದು ಹೇಳುತ್ತಾ ಈ ಲೇಖನವನ್ನು ಶಕುಂತಲೆಗೆ ಸೀಮಿತಗೊಳಿಸುತ್ತೇನೆ. ಶಕುಂತಲೆ ದುಷ್ಯಂತರ ಗಾಂಧರ್ವ ವಿವಾಹ, ಉಂಗುರ, ದೂರ್ವಾಸರ ಶಾಪ, ದುಷ್ಯಂತನ ನಿರಾಕರಣೆ, ತನ್ನ ಪ್ರಿಯತಮನಿಂದ ತಿರಸ್ಕೃತಳಾದ ಶಕುಂತಲೆಯ ವಿರಹ...ಇವುಗಳ‌‌ ಸುತ್ತ ಗಿರಕಿಹೊಡೆಯುತ್ತದೆ ಈ ಕತೆ. ದೂರ್ವಾಸರ ಶಾಪದಿಂದಾಗಿ ದುಃಶ್ಯಂತ ಶಕುಂತಲೆಯೊಂದಿಗಿನ ಪ್ರಕರಣವನ್ನೇ ಮರೆಯುತ್ತಾನೆ. ಇನ್ನು ಕಾದು ಪ್ರಯೋಜನವಿಲ್ಲವೆಂದು ಕಣ್ವ ಮಹರ್ಷಿ ತನ್ನ ಶಿಷ್ಯಂದಿರ ಜೊತೆಯಲ್ಲಿ ದುಷ್ಯಂತನ ಅರಮನೆಗೆ  ಕಳುಹಿಸುತ್ತಾನೆ ಶಕುಂತಲೆಯನ್ನು. ಆದರೆ ರಾಜ ಸಭೆಯಲ್ಲಿ ನೀನಾರೆಂದು ಗೊತ್ತೇ ಇಲ್ಲ ಅಂತ ದುಷ್ಯಂತನಿಂದ ತಿರಸ್ಕೃತಳಾದಾಗ ಬೆರಳಿಗೆ ತೊಡಿಸಿದ ಉಂಗುರಕ್ಕಾಗಿ ತಡಕಾಡುತ್ತಾಳೆ. ಆದರೆ ಅಲ್ಲೂ ವಿಧಿ ಅವಳನ್ನು ವಂಚಿಸುತ್ತದೆ...ಉಂಗುರವಿಲ್ಲದ ಬೋಳು ಬೆರಳನ್ನು ಕಂಡು ಪೆಚ್ಚಾಗಿ ನಿಂತಾಗ ನೆರೆದ ಮಂದಿರ ವ್ಯಂಗ್ಯ ನೋಟಗಳನ್ನು ಎದುರಿಸಲಾಗದೇ ಅಪಾರ ಅವಮಾನದಿಂದ ಕುಸಿಯುತ್ತಾಳೆ.
ಜಿ.ಎಸ್.ಎಸ್. ಈ ಸನ್ನಿವೇಶವನ್ನು ತಮ್ಮ ಒಂದು ಕವನದಲ್ಲಿ ಅಮೋಘವಾಗಿ ಕಟ್ಟಿಕೊಡುತ್ತಾರೆ...

"ಉಂಗುರದ ಬೆರಳನು ಸವರಿ ಬೆಚ್ಚಿದಳಬಲೆ;
ಇದ್ದ ಸೇತುವೆ ಮುರಿದು ದಾರಿಯಿಲ್ಲ.
ಭೋರ್ಗರೆವ ಹೊನಲನೀಸುವುದೆ ನೆನಪಿನ ದೋಣಿ?
ಕೊಂಕು ನಗೆಗಳ ಮೊಳಗು ಸುತ್ತ ಮುತ್ತ.
ಸುತ್ತ ಕಣೆ ಹೂಡಿರಲು, ದಿಕ್ಕು ತಪ್ಪಿದ ಜಿಂಕೆ;
ದೇಗುಲದ ಮೂಲೆಯಲಿ ದೀಪವಾರಿದ ಮೇಲೆ
ನಿಂತ ದೀಪದ ಮಲ್ಲಿ!..."

ಶಕುಂತಲೆಗೆ ದುಷ್ಯಂತನ ಪರಿಚಯವಿತ್ತು.ಸಂಧಿಸಿದ ಕೂಡಲೇ ತನ್ನ ಗುರುತು ಹಿಡಿಯುವನೆಂಬ ಅಪಾರ ಆತ್ಮವಿಶ್ವಾಸವೂ ಇತ್ತು. ಅದಕ್ಕಾಗಿಯೇ, ಅವಳಿಗೆ ದುಷ್ಯಂತ ಗುರುತಿಗಾಗಿಯೇ ಕೊಟ್ಟಿದ್ದ ಉಂಗುರವನ್ನು ಅವಳು   ಅಷ್ಟೊಂದು ಮಹತ್ವದ್ದಾಗಿ ಪರಿಗಣಿಸಲೇ ಇಲ್ಲ. ಆ ಅಜಾಗರೂಕತೆಯಿಂದಲೇ ಅವಳು ಉಂಗುರವನ್ನು ಕಳೆದುಕೊಂಡಳು. ಈ ಉಂಗುರದ ವಿಷಯ ಬಂದಾಗ ನನ್ನ ಮನಸ್ಸು ತ್ರೇತಾಯುಗಕ್ಕೆ ಜಿಗಿಯುತ್ತಿದೆ.ಅಲ್ಲಿ ಹನುಮಂತ ಲಂಕೆಗೆ ಹಾರಲು ತಯಾರಾಗಿ ನಿಂತಿದ್ದಾನೆ. ಸೀತೆಯನ್ನು ಕಂಡಾಗ ತಾನು ರಾಮದೂತನೆಂಬ ಸಾಕ್ಷಿಗೆ, ಸೀತೆಗೆ  ತೋರಿಸಲು ರಾಮ ಕೊಟ್ಟ ಉಂಗುರವನ್ನು ಪಡೆದುಕೊಂಡಿದ್ದಾನೆ. ನಂತರ ಲಂಕೆಗೆ ಹಾರಿ ಸೀತೆಯನ್ನು ಕಂಡು ಉಂಗುರ ತೋರಿಸಿ....ಅರೆ ಎಷ್ಟು ಸಲೀಸು...ಉಂಗುರ ಕಂಡು ಸೀತೆಗೆ ರಾಮದೂತನೆಂದು ನಂಬಿಕೆ ಹುಟ್ಟಿ.....ಸುಖಾಂತ್ಯ!!!. ಅರೆ ಶಕುಂತಲೆಯ ವಿಷಯದಲ್ಲಿ ಆಗದಿದ್ದುದು ಇಲ್ಲಿ ಯಾಕಾಯ್ತು? ಅದಕ್ಕೂ ಇದಕ್ಕೂ ಏನಾದರೂ ಕನೆಕ್ಷನ್ ಇದೆಯಾ?....ನನಗನ್ನಿಸುತ್ತದೆ ಹೌದು, ಖಂಡಿತವಾಗಿಯೂ ಇದೆ! ಯೋಚಿಸಿ...ಇಲ್ಲಿ ಹನುಮಂತನಿಗೆ ಸೀತೆಯ ಪರಿಚಯವೇ ಇಲ್ಲ. ಈ ಮೊದಲು ಎಲ್ಲೂ ನೋಡಿಲ್ಲ. ತಾನು ಸೀತಾಮಾತೆಯನ್ನು ಸಂಧಿಸಿದಾಗ ಅವಳಿಗೆ ಖಂಡಿತವಾಗಿಯೂ ತನ್ನ ಗುರುತು ಸಿಕ್ಕಲ್ಲ ಅನ್ನುವುದು ಹನುಮಂತನಿಗೆ ಗೊತ್ತು. ಅದಕ್ಕಾಗಿಯೇ ರಾಮ ಕೊಟ್ಟ ಗುರುತಿನ ಉಂಗುರಕ್ಕೆ ಬಹಳ ಮಹತ್ವ ಕೊಟ್ಟು, ಸಾವಿರ ಸಾವಿರ ಯೋಜನಾ ದೂರವನ್ನು ಕ್ರಮಿಸಿ ಬಂದಿದ್ದರೂ ಉಂಗುರವನ್ನು ಬಹಳ ಜೋಪಾನವಾಗಿ ತನ್ನ ಬಳಿ ಇಟ್ಟುಕೊಂಡಿದ್ದ. ಉಂಗುರ ಕಳೆದು ಹೋಗಿದ್ದರೆ ತಾನು ಅಷ್ಟು ಕಷ್ಟಪಟ್ಟು ಹಾರಿದ್ದು ವ್ಯರ್ಥ ಅನ್ನುವ ಸ್ಪಷ್ಟ ಕಲ್ಪನೆ ಹನುಮನಿಗಿತ್ತು...ಆದರೆ ಕೇವಲ ಒಂದು ನದಿ ದಾಟುವಾಗ ಶಕುಂತಲೆ ಉಂಗುರವನ್ನು ಕಳೆದುಕೊಳ್ಳಲು ಮುಖ್ಯ ಕಾರಣ ಅವಳು ಆ "ಗುರುತಿನ ಉಂಗುರ" ಕ್ಕೆ ಮಹತ್ವ ಕೊಡದೇ ದುಷ್ಯಂತನ ಪ್ರೇಮವನ್ನು ನಂಬಿದ್ದು! (ವಿಷಯದ ಮಹತ್ವಕ್ಕಾಗಿ ದೂರ್ವಾಸರ ಶಾಪವನ್ನು ಕಡೆಗಣಿಸಲಾಗಿದೆ!).

ಇನ್ನೊಂದು ಆಯಾಮದಲ್ಲಿ ಈ ಎಲ್ಲಾ ವಿಷಯಗಳು ನನ್ನನ್ನು ಕಾಡುವುದುಂಟು. ಪೌರಾಣಿಕ ಪಾತ್ರಗಳಿಂದ ಬಿಡಿಸಿಕೊಂಡು ನಮ್ಮ ನಿತ್ಯದ ಬದುಕಿಗೆ ಬರೋಣ. ನಮ್ಮ ಬದುಕಿನ‌ ಭಾಗವೇ ಆದಂತಹ ಹೆಂಡತಿ ಮಕ್ಕಳು, ಅಪ್ಪ ಅಮ್ಮ ,ಅಣ್ಣತಮ್ಮ, ಅಕ್ಕತಂಗಿಯರ ಜೊತೆಗೆ ನಮ್ಮದು ಯಾವತ್ತೂ ಸಿಡುಕು ಮುಖ, ಲೆಕ್ಕಾಚಾರದ ಮಾತುಗಳು. ಅವರೊಂದಿಗೆ Taken for granted ಅನ್ನುವ ತರಹದ ವರ್ತನೆ ನಮ್ಮದು. ಅವರಿಗೆ ಯಾವುದೇ ಸ್ಪೆಷಲ್‌ ಉಂಗುರದ ಗುರುತುಗಳು, ನಗೆಯ ಗುರುತುಗಳ ಅಗತ್ಯ ಇಲ್ಲವೆಂದೇ ಭಾವಿಸುತ್ತೇವೆ ಮತ್ತು ಹಾಗೆಯೇ ನಡೆಯುತ್ತೇವೆ. ಯಾಕೆಂದರೆ ಅವರು ಹೇಗಿದ್ದರೂ ನಮ್ಮವರೇ ಅನ್ನುವ ಉದಾಸೀನ ಭಾವ.ದುಷ್ಯಂತನ ಜೊತೆಯ ಶಕುಂತಲೆಯ ಮನಸ್ಥಿತಿಯಂತೆ. ಅದೇ ಊರ ಮೂಲೆ ಮನೆಯ ಅಪರೂಪದಲ್ಲಿ ಅಪರೂಪಕ್ಕೆ ಮನೆಗೆ ಬರುವ ಅತಿಥಿಯೊಂದಿಗೋ ನಾವು ಉದಾರ ನಗೆಯ ವ್ಯಾಪಾರಿಗಳು!  ಅವರೊಂದಿಗೆ ಅದೇನು ಕುಶಲ ಮಾತುಕತೆ...ಯೋಗ ಕ್ಷೇಮ ವಿಚಾರಣೆ, ಅಬ್ಬಬ್ಬಾ!!!...ಅವರನ್ನು ಯಾವತ್ತೂ Taken for granted ರೀತಿ ನೋಡುವುದೇ ಇಲ್ಲ. ಅವರೊಂದಿಗೆ ಎಲ್ಲವೂ ಸಲೀಸು. ಅಲ್ಲಿ ನಮಗೆ ಗುರುತುಗಳನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಇರುತ್ತದೆ. ಹನುಮಂತ ಸೀತೆಯ ಭೇಟಿಯಂತೆ! ಈ ಧಾವಂತದ ಬದುಕಿನಲ್ಲಿ ಇದನ್ನೆಲ್ಲಾ ಯೋಚಿಸಲು ಅವಕಾಶವೇ ಇಲ್ಲದಿದ್ದಾಗ ಇನ್ನು ಬದಲಾಗಬೇಕು ಅನ್ನುವುದೊಂದು ಕನಸು.

ಇಷ್ಟೆಲ್ಲಾ ನೆನಪಾಗಲು ಕಾರಣ, ಇಂದು ಮಗಳ ಶಾಲೆಯ ಫ್ಯಾನ್ಸಿ ಡ್ರೆಸ್ ಕಾಂಪಿಟೀಶನ್ ನಿಂದಾಗಿ. ಮೊನ್ನೆಯಿಂದ ತಲೆ ಕೆರೆದೂ ಕೆರೆದೂ...ಕೊನೆಗೂ ಶಕುಂತಲೆಯ ಪಾತ್ರವೇ ಓಕೆ ಅಂತಾದ ಮೇಲೆಯೇ ಈ  ಹುಡುಕಾಟಕ್ಕೆ ವಿರಾಮವಿತ್ತದ್ದು. ಶಕುಂತಲೆಯ ಉಡುಪಿನಲ್ಲಿ ಹೇಗೆ ಮುದ್ದು ಮದ್ದಾಗಿ ಕಾಣ್ತಿದ್ಳು ನೋಡಿ ನನ್ನ ಮಗಳು ಸಾನ್ವಿ...

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

Monday 7 August 2017

ಒಲವ ಕಾವ್ಯ ಹೂವ ಕರೆಗೆ
ಕಾದು ಕುಳಿತ ಭ್ರಮರ ಸೆರೆಗೆ
ನಾಚಿ ನಿಂತು ಸೆಳೆದೆ
ಮನದಿ ಮಿಂಚಿ ಹೊಳೆದೆ
ಬನವೆಲ್ಲಾ ನಿನ್ನ ಪ್ರೇಮ ಶಾಲೆ
ನೀನಾದೆ ನನ್ನ ಕೊರಳ ಮಾಲೆ

ಮನದ ನೆಲಕ್ಕೆಲ್ಲ ಪನ್ನೀರು ಸುರಿದು
ಮಿಲನದೊಸಗೆ ಕಾಡಿ ಬೇಡಿದೆ
ಭಾವಸೆಳೆಯೆಲ್ಲ ನಿನಗಾಗಿ ಮಿಡಿದು
ಚೈತ್ರ ಚಿಗುರಿ ಹಕ್ಕಿ ಹಾಡಿದೆ
ಉಕ್ಕುವ ಅಲೆಯಲ್ಲು ತೀರದ ಕನವರಿಕೆ
ಬಾಳಿನ ಇರುಳಲ್ಲು ನೀನಗುವ ಚಂದ್ರಿಕೆ
ಕರಿಮುಗಿಲು ನೀನಾಗಿ ನಗಲು
ಗರಿಬಿಚ್ಚಿ ನಾ ಕುಣಿವ ನವಿಲು

ವೃಂದಾವನಕೆಲ್ಲ ತಂಗಾಳಿ ಬೀಸಿ
ಹಸಿಬಿಸಿ ಆಸೆ ಹೆಣ್ಣಾಗಿ
ಕೃಷ್ಣನ ಕೊಳಲ ನಾದವು ಕೇಳಿ
ಪಿಸುನುಡಿ ಎಲ್ಲ ಇಂಪಾಗಿ
ಬಯಕೆ ಬಿಸಿಯಲ್ಲೂ ಹೊಳೆವ ಮಳೆಬಿಲ್ಲು
ದೂರ ಇರುವಲ್ಲೂ ವಿರಹ ಬರಿಸುಳ್ಳು
ಕನಸಲ್ಲು ಕಣ್ಣಾಗಿ ಕಾದೆ
ನೀನಾದೆ ಈ ಬಾಳ ರಾಧೆ

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಕಣ್ಣ ಸನ್ನೆಯು ಕಾಡಿ ಚಣದಲಿ
ಸಣ್ಣ ಮಿಡಿತವು ಮನದ ಕಡಲಲಿ
ಮಣ್ಣ ಕಣಕಣ ಚಿಗಿತು ಹಾರಿತು ಭಾವದೊಡಲಿನಲಿ
ತನ್ನ ನಲ್ಲನ ಮನದ ಬಯಕೆಗೆ
ಮುನ್ನ ಕಾಣಿಕೆ ಕೊಡುವೆನೆನುತಲಿ
ಚೆನ್ನೆ ನಾಚುತ ಮುಟ್ಟಿ ಕೆನ್ನೆಯ ನಿಲ್ಲದೋಡಿದಳು

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಇಷ್ಟು ಸಾಕೆಂದೆದ್ದು ದೂರ ನಡೆದರು ಕೂಡ
ಬಿಟ್ಟುಬಿಡುತ್ತಿಲ್ಲ ಅದೆಂತ ಅಂಟು?
ಎಷ್ಟು ಬಲದಿಂದೊದ್ದು ತಳ್ಳಿದರು ಮತ್ತೆ
ಕೂಡೊ ಬಂಧಕ್ಕದೆಂತ ನಂಟು?

ಹೂವು ಕೀಳಲು ಹೋಗಿ ಚುಚ್ಚಿದರು ಮುಳ್ಳು
ಇನ್ನು ಕಾಡಿದೆಯದರ ದಳದ ಚೆಲುವು
ಹಕ್ಕಿ ಹಾಡನು ಕೇಳಿ ಹಾರುವುದು ಸುಳ್ಳು
ಹೆಕ್ಕಿ ಮುಗಿಯದು ಇಲ್ಲಿ ಅಷ್ಟು ಒಲವು

ಭಾವಬಂಧುರವೆಂದು ನಂಬಿ ನೊಂದರು ಕೂಗಿ
ಮನದ ಮಗುವಿನ ನಗುವು ಮಾಸದಿಲ್ಲಿ
ಹೊರ ಬಯಲಕರೆಗಾಳಿ ಬೀಸಿದರು ಬಲವಾಗಿ
ಮನೆಯ ಮಡಕೆಯ ಚಿಂತೆ ತೀರದಿಲ್ಲಿ

ಎಲ್ಲೊ ದೂರದಿ ಅಲ್ಲಿ ಕೇಳಿ ಮುರಳಿಯ ಸೊಲ್ಲು
ಶ್ರುತಿಯುಗೊಂಡಿದೆ ಈಗ ಹೃದಯವೀಣೆ
ಬಂದೆತ್ತಿಕೋ ನನ್ನ ಗಿರಿಯಂತೆ ಬೆರಳಲ್ಲಿ
ಹರಿದು ಹೋಗಲಿ ಎಲ್ಲ ಭವದ ಬೇನೆ

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
#ನೋಟ

ಇದ್ದಿದ್ದರೆ
ಹೆಂಡತಿಯ ನೋಟಕ್ಕೂ
ದೂರ್ವಾಸರ ಶಕ್ತಿ;
ನಾನೆಂದಿಗೋ ಬೂದಿಯಾಗಿ
ಸಿಗುತ್ತಿತ್ತು ಮುಕ್ತಿ...!

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
"ಹೂವಿರುವುದು
ದೇವರ ಗುಡಿಯಲ್ಲಿ
ಮತ್ತು
ಹೆಣ್ಣಿನ ಮುಡಿಯಲ್ಲಿ...."

ಅದ್ಯಾಕೋ ಗೊತ್ತಿಲ್ಲ,
ಈ ಮೋಸದ ಬಗ್ಗೆ
ಸಣ್ಣ ಸುಳಿವೂ ಸಿಗಲಿಲ್ಲ ನೋಡು.
ಅಜ್ಜ ಅಪ್ಪ ಅಣ್ಣ ಎಲ್ಲರೂ
ಹೇಳಿದ್ದು ಇದನ್ನೇ,
ಮೊದಮೊದಲು ನನಗೂ ಗೊತ್ತಾಗಲಿಲ್ಲ.
ಮತ್ತೆ ಮತ್ತೆ ಅದನ್ನೇ ಹೇಳಿದಾಗ
ಎಲ್ಲರಂತೆ ನಾನೂ ತಿಳಿದುಕೊಂಡೆ,
ಇದು ಹೀಗೆ
ಅದು ಹಾಗೆ...
ಮತ್ತು
ಇದು ಹೀಗೆಯೇ
ಅದು ಹಾಗೆಯೇ ಅನ್ನುವುದನ್ನು.

ಅದರಾಚೆಯ ಯೋಚನೆಗಳು
ಎಂದೂ ಕಾಡಲಿಲ್ಲ
ತೀರಾ ನಿನ್ನೆಯವರೆಗೂ;
ಹೂವಿಗಾಗಿಯೇ ಹಾರುವ
ದುಂಬಿಯನ್ನು
ಕಾಣುವವರೆಗೂ.

ತೊಟ್ಟ
ಪೊರೆ ಕಳಚಿದರೆ ಮಾತ್ರ;
ಬದುಕಿಲ್ಲಿ
ಹೊಚ್ಚಹೊಸದು...!

ಇದೀಗ,
ಅಪ್ಪ ಕೊಟ್ಟ
ಕನ್ನಡಕ ತೆಗೆದಿರಿಸಿದ್ದೇನೆ
ಮತ್ತು...
ನನ್ನ ಮಗನಿಗೆ ಸಿಗದ ಹಾಗೆ
ದೂರ ಎಸೆದಿದ್ದೇನೆ.

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಸುರಿದ ಮಳೆಯಲಿ ನಿಂತು ನೆನೆಯುತ
ಸರಿದ ನನ್ನನು ಕದ್ದು ನೋಡಿದ
ಹುರುಪು ನೋಟವು ಮನಕೆ ಚುಚ್ಚಿತು ನೂರು ಹೂಬಾಣ
ಅರಿವು ತಪ್ಪಿತು ಬುದ್ದಿ ಕೆಟ್ಟಿತು
ಮರೆತು ನನ್ನನೆ ನಿನ್ನ ವಶದಲಿ
ತಿರೆಯ ವಿರಹವು ಬಾನ ಮುತ್ತಿಗೆ ಮರೆತು ಹಸುರಾಯ್ತು

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಅಂತರಂಗದ ಬನದ ಬಯಕೆಗೆ
ಮಂದಮಾರುತವೊಂದು ಬೀಸಿರೆ
ಚಂದದಿಂದಲಿ ನಗುತ ಹೂಗಳು ಪಯಣ ಸಾರಿದವು
ಸಂದ ಚಣಗಳ ನೆನಪು ಕಳೆಯಲು
ನಿಂತ ಮನೆಗಳ ಮೋಹ ಕಳಚುತ
ಬಂಧ ಬಿಡಿಸುವ ಸೊಗದ ಕನಸನು ಕಣ್ಣು ಬೇಡಿದವು

ತೀರ ಮುತ್ತುವ ಕಡಲದಲೆಯನು
ಸೇರಿ ಸೆಳೆದೆನು ನೀರ ಮಡುವಲಿ
ಚೀರಿಕೊಂಡರು ಕಿವಿಯು ಕೇಳದು ಜನಕೆ ಜಗದಲ್ಲಿ
ಮೀರೆ ಭವದ ಸೆಳೆಯ ಸಂಚನು
ಸಾರಿ ಪಥವ ಕೂಡಿ ನಡೆಯುತ
ಪಾರು ಮಾಡುವ ಪರದ ನಾವಿಕ ಬಂದು ನೋಡಿಲ್ಲಿ

ಮುಡಿದ ಪದಕದ ಬಣ್ಣ ಕಳೆದಿರೆ
ಸಿಡಿದ ಮಾತಿನ ಲೆಕ್ಕ ಕಾಡಲು
ಪಡೆದ ಮಣ್ಣಲಿ ಬಿದ್ದ ಬೀಜದ ಬದುಕು ಬೆಂದಿಹುದು
ಹಿಡಿದು ಮೂವರ ಕಡೆದು ಬೆಣ್ಣೆಯ
ಒಡೆದುದಾರನು ಮುಂದೆ ನಡೆಯಲು
ಹಡೆದ ಶಾಂತಿಯ ಹಕ್ಕಿ ಹಾರಿತು ಬಯಲ ಬಾನಿನಲಿ

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

Friday 28 July 2017

ಯಾವ ಜನ್ಮದ ಮೈತ್ರಿಯೋ
ಬದುಕಲರಳಿದ ಚೈತ್ರವೋ
ಬೆರಗ ಸೆಳೆಯೋ ಸೊಗದ ಮಳೆಯೋ
ಭೂಮಿಗಿಳಿದ ಸಗ್ಗವು
ಮಗಳು ಬಾಳ ಕಬ್ಬವು

ಪುಟ್ಟ ಪುಟ್ಟ ಹೆಜ್ಜೆಯಿಡುತ
ನಡೆದ ಕ್ಷಣವೇ ವಿಸ್ಮಯ
ತೊದಲು ಮಾತ ಮೊಲ್ಲೆಗರೆ-
-ದಳುವ ಆಟದಿ ತನ್ಮಯ
ತಿರುಗೊ ಭುವಿಗೂ ಕೊನೆಯಿದೆ
ನಿಂತು ನೋಡಲು ಜಗವಿದೆ

ಹಾರೋ ಚಿಟ್ಟೆಯ ಬೆನ್ನಿಗೋಡುತ
ಬಣ್ಣ ಕದಿಯುವ ಕನಸಿದೆ
ಹರಿಯೋ ನೀರಿಗೆ ಕಾಲು ಸೋಕುತ
ದೋಣಿ ಬಿಡುವ ಮನಸಿದೆ
ನಿನ್ನ ಜೊತೆಗೇ ಬದುಕಿದೆ
ನಿಂತು ನೋಡಲು ಜಗವಿದೆ

ರವೀಂದ್ರ ನಾಯಕ್  
ಹೇಗೆ ನಿಲ್ಲಲಿ ನಾನು
ನೀವೇ ಹೇಳಿ?
ಹಿಂದೆ ಬಿದ್ದವರನ್ನು ಅಣಕಿಸುವ
ದಾಟಿ ಹೋದವರನ್ನು ಹಿಂದಿಕ್ಕುವ
ಕಸುವು ತುಂಬಿರುವ ಕಾಲುಗಳಿನ್ನೂ
ಓಡಲು ಹಂಬಲಿಸುವಾಗ?

ಹೇಗೆ ಹೊರಳಲಿ ನಾನು
ನೀವೇ ಹೇಳಿ?
ಚಿಗುರ ಬಯಕೆ ಕಾಣುವ
ಬೆಳೆವ ಸೊಗಸ ಕನಸುವ
ಕನಸು ತುಂಬಿರುವ ಕಣ್ಣುಗಳಿನ್ನೂ
ನೋಡಲು ಕಾತರಿಸುವಾಗ?

ಹಾಗೂ ಹೀಗೂ ನಿಂತಾಗಲೆಲ್ಲಾ
ಅಟ್ಟಿಸಿಕೊಂಡು ಬರುತ್ತಿದೆ
ಆರು ಹೆಡೆಯ ಹಾವು;
ನೋಟ ಮರೆತು ಗಮ್ಯಕ್ಕೊಡ್ಡುವ
ಬೊಗಸೆಯ ಭಕ್ತಿಗೋ
ಭರ್ತಿ ಒಂಬತ್ತು ತೂತು.....!

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಮನಸು ಹೊರಳಿದೆ ಹೊನ್ನಸೂರಿಗೆ
ಸೇರೊ ದಾರಿಯದೆಲ್ಲಿದೆ
ಹುಚ್ಚು ಬಯಕೆಯ ಕಳೆವ ಗಿರಿಪಥ
ದಲ್ಲಿ ದರಿಗಳು ಹಲವಿದೆ
ಗುರಿಯ ಕಾಣದೆ ಬಳಲಿದೆ
ತೋರೊ ಗುರು ನೀನೆಲ್ಲಿಹೆ

ಇಲ್ಲೆ ಇದ್ದ ಗಳಿಗೆಯಲ್ಲಿ
ಬಿಡದೆ ಅವನ ಕಾಡಿದೆ
ಮೇರೆ ಇರದ ಅರಸನಲ್ಲಿ
ಬರಿದೆ ಪ್ರೇಮ ಬೇಡಿದೆ
ಎಂಥ ಹುಚ್ಚು ನನ್ನದು
ಹೃದಯವೆಷ್ಟು ಸಣ್ಣದು
ದಾಹ ಕಳೆವ ದೇವನಲ್ಲಿ
ಗುಟುಕಿಗಾಗಿ ಕಾಡಿದೆ;
ಅವನ ಹರವು ಅರಿಯದೆ

ಒಡಲ ಮೋಹ ಬಿಡದು ಇಲ್ಲಿ
ಮುರಳಿಗಾನ ಕೇಳದೆ
ದಡದ ಹಂಗು ತೀರದಿಲ್ಲಿ
ಒಲವ ನದಿಯು ಹರಿಯದೆ
ಬಯಲು ಎಷ್ಟು ಕರೆದರೂ
ನಿಜದ ಸದ್ದು ಕೇಳದು
ಒಂದು ಹೆಜ್ಜೆಯ ಹಾಕದೆ
ಗೆಜ್ಜೆ ಕಾಲಿಗೆ ಕಟ್ಟಿದೆ;
ಜಗದ ಹೆಮ್ಮೆಯನಪ್ಪಿದೆ

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು


ಎದೆಯ ಸೊಗದ ಭಾವಗಳಿಗೆ
ಬಯಲು ದೂರವಾಗಿದೆ
ಅರಸುತಿರುವ ಕಣ್ಣುಗಳಿಗೆ
ಬೆಳಕು ಕಾಣದಾಗಿದೆ
ಯಾವ ಮೋಹ ಚಕ್ರದಲ್ಲಿ;
ಜಗದ ಹುಚ್ಚು ಸುತ್ತಿದೆ?

ಬಯಕೆ ಹಾವು ಸಂಚು ಹೊಸೆದು
ಪೊರೆಯ ಕಳಚಿ ಮಿಂಚಿದೆ
ಭವದ ಬೀಜ ಮರಳಿ ಚಿಗುರಿ
ಮಣ್ಣ ಋಣಕೆ ಅಂಟಿದೆ
ಗೂಡು ಬಯಸಿ ಬಾನು ಮರೆತ
ಹಾರೊ ಹಕ್ಕಿ ಕೂತಿದೆ

ಅರಿವ ಮರೆಸಿ ಇರುವ ಮೆರೆಸೊ
ಬಳ್ಳಿ ಮರವನಪ್ಪಿದೆ
ಗತವ ಅಳಿಸಿ ಹಿತವ ತೆರೆಸೊ
ಮಡಿಲ ಕೂಸು ಎದ್ದಿದೆ
ದಡವ ಬಯಸಿ ಕಡಲು ಮರೆತ
ಹರಿವ ನದಿಯು ನಿಂತಿದೆ

ಸಿಗದ ಮೂಲ ಹುಡುಕಿ ಹೊರಟ
ನಾವೆ ದಿಕ್ಕು ತಪ್ಪಿದೆ
ಜಗದ ನಂಟು ಕಳೆಯೊ ಆಟ
ದಲ್ಲಿ ಕನಸು ನೆಚ್ಚಿದೆ
ಕುಕಿಲ ದನಿಗೆ ಮುರಳಿ ಮರೆತ
ಸೋತ ಮನಸು ಕಾಡಿದೆ

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

Saturday 15 July 2017

ಬಿಡದೆ ಮಳೆ ಸುರಿವ ಉಡುಪಿಯದು ನನ್ನೂರು
ಮೊನ್ನೆ ಒಗೆದುದು‌ ಇನ್ನು ಒಣಗೆ ಇಲ್ಲ
ಕಾಡಿ ಸುಡುತಿಹ ನೆನಪು ನಿಮ್ಮಂತೆ ನನಗೂ
ಗಾಡಿ ಬಿಡದಿರಲು ಬೇರೆ ನೆಪವೆ ಇಲ್ಲ

ಮಣ್ಣ ಹಾದಿಯ ತುಂಬಾ ನೀರು ತುಂಬಿದ ಹೊಂಡ
ಬಂದ ಬಸ್ಸಿಗು ಕೂಡ ಹೊರಡೊ ಮರೆವು
ಉಪ್ಪು ನೀರಿನ ಹಲಸು ಪತ್ರೋಡೆ ತಿಂದುಂಡ
ಗಳಿಗೆಯಲು ಕಾಣುವುದು ನಿಮ್ಮ ಕನಸು

ಜಗವ ಪೊರೆವ ಕರದಿ ಮುರಳಿ ಪಿಡಿದ ಶ್ಯಾಮ
ರಾಧೆಯಿಲ್ಲದೆ ಮಿಡಿವ ವಿರಹಿಯವನು
ನಿಮ್ಮ ಕೆಲಸದಿ ನೀವು ಕಳೆದು ಹೋದರೆ ಕ್ಷೇಮ
ಮಳೆ ಬಿಡಲು ಕ್ಷಣದಿ ಬಂದು ಸೇರುವೆನು.



ಎದೆಎದೆಯೊಳಗೆ ತುಂಬಿರೆ ಒಲವು
ಈ ಜಗದೊಳಗೆ ಎಲ್ಲವು ಚೆಲುವು
ಕಣಕಣದಲ್ಲೂ ತುಂಬಿರೆ ಹಾಸ
ಪ್ರತಿ ಎದೆಯು ಶ್ರೀಕೃಷ್ಣ ನಿವಾಸ

ಹರಿಯುವ ನದಿಯೇ ಯಮುನೆಯ ತಟವು
ಬೀಸುವ ಗಾಳಿಯೇ ಮೋಹನ ಸುಧೆಯು
ತೆರೆದೆದೆ ಬಾನು ತೋರಿದ ಲಾಸ್ಯ
ಪ್ರತಿ ಎದೆಯು ಶ್ರೀಕೃಷ್ಣ ನಿವಾಸ

ಸ್ಹೇಹಕು ಪ್ರೇಮಕು ಒಲಿಯುವ ನಿಧಿಯು
ಹೂವಿಗು ಬೆಣ್ಣೆಗು ಕರಗುವ ಸಿರಿಯು
ಹಲವು ನದಿಗಳಿಗೊಂದೇ ಅರಸ
ಪ್ರತಿ ಎದೆಯು ಶ್ರೀಕೃಷ್ಣ ನಿವಾಸ

Monday 10 July 2017

ಕನಸೊಂದು ಬಳಿಬಂದು ತಾನಾಗೇ ಒಲಿದಿತ್ತು
ಎಂಟು ವರುಷದ ಹಿಂದೆ ಮೊನ್ನೆ ಮೊನ್ನೆ
ಮಾಗಿ ಕಳೆದ ಇರುಳು ಚಿಗುರು ಬೆಳಕಿನ್ನಿತ್ತು
ಮಂಜು ಕರಗಿತು ಕಂಡು ಕಣ್ಣ ಸನ್ನೆ

ಮರುಭೂಮಿ ಬಯಲಲ್ಲಿ ಚಿಗುರಿದ್ದ ಹೊಸ ಹೂವು
ಎಂಥ ಸೋಜಿಗವದರ ದಳದ ಚೆಲುವು
ಸೋಗಿನಾಸೆಯು ಇರದ ಕಾಡಿ ಬೇಡದ ಸೆಳಹು
ಸರಳ ಸುಂದರವಹುದು ಅವಳ ಒಲವು

ಬೆಳಗೆಲ್ಲಾ ಬೆಳಬೆಳಗಿ ಮನವೆಲ್ಲಾ ಬರಿ ಖಾಲಿ
ನಿಶೆಯ ನಶೆಯೇರಿತ್ತು ಅವಳ ಕಂಡು
ಪಡುವಣದ ಬೀದಿಯಲಿ ಒಲವ ರಂಗಾವಲ್ಲಿ
ಸಂಧ್ಯರಾಗದಿ ರವಿಯು ಸೊಗಸನುಂಡು

ಮಳೆಗಾಲ ಹಲವುರುಳಿ ಹಿತಮಿತದಿ ಸುಖವರಲಿ
ಪರಿಮಳವು ಕಂತಿಲ್ಲ ಇನ್ನು ಹೊಸದು
ಹುಸಿ ಮುನಿಸು ಹಸಿ ಕನಸು ಹಾಸಿ ಬಂದಂತಿರಲಿ
ಚಿರಹರೆಯಕ್ಕೊಂದು‌ ಭಾಷ್ಯ ಹೊಸೆದು

Saturday 8 July 2017

ಹರಿಯುವ ನದಿಯೂ ಉಕ್ಕುವ ತೊರೆಯೂ
ಸೇರುವ ಕಡಲೊಂದೇ;
ವಾತ್ಸಲ್ಯದ ಕರವೋ ಪ್ರೇಮದ ಕರೆಯೋ
ನುಡಿಸುವ ಕೊಳಲೊಂದೇ.
ಕಾಡ ಮಧ್ಯದಳಂದು ನೋಡಿದ
ಹಾಡಿ ತೂಗುವ ಸೀತೆ ದಂಡೆಯ
ಕಾಡಿ ನಲ್ಲನ ಮುಡಿವ ಬಯಕೆಯ ಅರಿಕೆ ಮಾಡಿದೆನು
ಗಾಡಿ ಹೊರಡಲು ತಿರುಗಿ ನೋಡುತ
ಮೋಡಿ ಮಾಡಿರುವೊಲವ ಮಾರನ-
ನೋಡಿ ಬಳಸುತಲಪ್ಪಿ ತೋಳಲಿ ಮುದ್ದು ಮಾಡಿದೆನು
#BGGROUP  @ #ಬಿಜಾಪುರ
#PART 2

#ಕೋಲಾರ್ #ಸೇತುವೆ

#ಗೋಲಗುಂಬಜ್

ದಾರಿ ಸಾಗಿದಷ್ಟೂ ನೋಡುವ ಕಣ್ಣುಗಳಿಗೆ ನೆನಪಿನ ಮೂಟೆಗಳನ್ನೇ ಕಟ್ಟಿಕೊಡುತ್ತದೆ. ಎಲ್ಲಾ ಪ್ರಯಾಣಗಳು ಒಂದೇ ತರಹ ಅಂತೂ ಇರಲು ಸಾಧ್ಯವಿಲ್ಲ. ಕಣ್ಣುಗಳಲ್ಲಿ ಗುರಿಯ ಕಾಣುವ ಆತುರವಿದ್ದಾಗ ಕ್ಣಣಗಳೆಲ್ಲಾ ಯುಗದಂತಾಗಿ ಕಣ್ಣಿಗೆ ಕುದುರೆಪಟ್ಟಿ ಕಟ್ಟಿದಂತೆ ಎದುರು ನೋಡುತ್ತಾ ಎಂದಿಗೆ ಮುಗಿಯುವುದು ಈ ಪ್ರಯಾಣ ಅನ್ನಿಸಿದರೆ ಮತ್ತೊಂದು ರೀತಿಯ ಪ್ರಯಾಣವಿದೆ, ಲಂಗು ಲಗಾಮಿಲ್ಲದ ಕುದುರೆಯನ್ನು ಮೇಯಲು ಬಿಟ್ಟಂತೆ. ಇಷ್ಟ ಬಂದ ಕಡೆ ನಿಂತು, ಗೊತ್ತುಗುರಿಯಿಲ್ಲದೇ , ಸುತ್ತಮುತ್ತಲಿನ ಪ್ರಕೃತಿಯನ್ನೆಲ್ಲಾ ಕಣ್ಮನದೊಳಗೆ ತುಂಬಿಕೊಂಡು ಸಾಗುವ ಪ್ರಯಾಣ ಅದು. ಅದರಲ್ಲೂ ಜೊತೆಯಾಗಿ ಚಡ್ಡೀದೋಸ್ತ್ ಗಳಿದ್ದರಂತೂ ಮತ್ತೆ ಸ್ವರ್ಗ ಕೈಗೆಟುಕಿದಂತೆಯೇ ಸರಿ. ಅದೂ ಅಲ್ಲದೇ ನಾವು ನಾವಾಗಿಯೇ ಇರುವುದು ನಮ್ಮ ಅಂತರಂಗದ ಗೆಳೆಯರೊಂದಿಗೆ ಮಾತ್ರ. ಅಲ್ಲಿ ಎಲ್ಲವೂ ಖುಲ್ಲಂ ಖುಲ್ಲ. ಉಪೇಂದ್ರ ಹೇಳಿದ ಹಾಗೆ ಮನಸ್ಸು ಹಾಗೂ ನಾಲಿಗೆಯ ನಡುವೆ ಫಿಲ್ಟರೇ ಇರಲ್ಲ. ಆದರೆ ಬೇರೆಲ್ಲಾ ಸಂಬಂಧಗಳೊಡನೆ ನಾವು ವ್ಯವಹರಿಸುವುದು ಮುಖವಾಡ ಹಾಕಿಕೊಂಡೇ. ಈ ಸಮಾಜ ಅಂದರೆ ಬರೇ ಮುಖವಾಡಗಳ ನಡುವಿನ ವ್ಯವಹಾರ.  ಆದರೆ ನನ್ನ ಈ ಪ್ರಯಾಣದಲ್ಲಿ ಅಂತರಂಗದ ಗೆಳೆಯರಿದ್ರು. ಹಾಗೆಂದೇ ಒಂದು ಚಂದದ ಅನುಭೂತಿಯಲ್ಲಿತ್ತು ನಮ್ಮನ್ನು ಏರಿಸಿಕೊಂಡು ಸಾಗುತ್ತಿದ್ದ ಹೊಸ್ಮನಿ ಕಾರು.

ಕೊರ್ತಿಕೋಲಾರ್ ಮೊಸರವಲಕ್ಕಿ ತಿಂದು ಹೊಟ್ಟೆ ತಂಪು ಮಾಡಿಕೊಂಡ ನಾನು ರಸ್ತೆಯ ಇಕ್ಕೆಲಗಳಲ್ಲಿ ಕಾಣುತ್ತಿದ್ದ ವಿಶಾಲ ಬಯಲನ್ನು ಕಣ್ತುಂಬಿಕೊಳ್ಳುತ್ತಿದ್ದೆ. ಭವ್ಯತೆಯ ಎದುರು ಮನುಷ್ಯ ತನ್ನ ಇರುವಿಕೆಯನ್ನು ಸ್ಪಷ್ಟವಾಗಿ ಗುರುತಿಸುವಲ್ಲಿ ಸದಾ ವಿಫಲನಾಗಿತ್ತಾನೆ. ಈ ವಿಶಾಲ ಬಯಲಿನಲ್ಲಿ ಎಲ್ಲವೂ ಚುಕ್ಕೆಯಂತೆ ಕಾಣುತ್ತದೆ. ನಿಜ,  ಬಯಲಿನಲ್ಲಿ ಮತ್ತೆಂದೂ ಸಿಗದ ಹಾಗೆ ಕಳೆದುಹೋಗಬೇಕು. ತನ್ನೆಲ್ಲಾ ಒಣ ಪ್ರತಿಷ್ಟೆ, ಸ್ಥಾನಮಾನ, ಮೋಹಗಳನ್ನು ಕಳೆದುಕೊಂಡು  ಈ  ವಿಶಾಲ ಬಯಲಿನಲ್ಲಿ ತಾನೂ ಒಂದು ಬಯಲಾಗಬೇಕು, ಭವ್ಯವಾಗಬೇಕು. ಮೋಹ ಕಳೆವಾಟದ ಈ ಬಯಲೆಂದರೆ ನನ್ನಲ್ಲಿ ಎಂದಿಗೂ ಆರದ ಮೋಹ.

ಎಷ್ಟೆಂದರೂ ಇದು ಕೃಷ್ಣ ನದಿಯ ಬಯಲಲ್ಲವೇ? ಇಲ್ಲಿ ಎಲ್ಲವೂ ವಿಶಾಲ, ಎಲ್ಲವೂ ಭವ್ಯ. ಇದಕ್ಕೊಂದು ಒಳ್ಳೆಯ ಉದಾಹರಣೆಯಾಗಿ ಸಿಕ್ಕಿದ್ದು ನಾವು ದಾಟಿಕೊಂಡು ಮುಂದೆ ಸಾಗಿದ ಮೂರು ಕಿ.ಮೀ. ಉದ್ದದ ಸೇತುವೆ! ಕೃಷ್ಣಾ ನದಿಗೆ ಅಡ್ಡಲಾಗಿ ಹುಬ್ಬಳ್ಳಿ ಬಿಜಾಪುರವನ್ನು ಜೋಡಿಸುವ ಈ ಭವ್ಯ ಸೇತುವೆಯ ಉದ್ದ ಬರೋಬ್ಬರಿ ೩ ಕಿ.ಮೀ! ದಕ್ಷಿಣ ಭಾರತದಲ್ಲೇ ಅತೀ ಉದ್ದದ ಸೇತುವೆ. ಬರೋಬ್ಬರಿ ಸೇತುವೆಯ ನಡುವೆ ತಂದು ಗಾಡಿ ನಿಲ್ಲಿಸಿ ಇಳಿದ ಮೇಲೆ ಪಳಗಿದ ಗೈಡ್ ನಂತೆ ಈ ಸೇತುವೆಯ ಕುರಿತು ಹೆಮ್ಮೆಯಿಂದ ಹೇಳಿದ‌ ಹೊಸ್ಮನಿ! ನಿಜಕ್ಕೂ ನನಗೆ ಮುಂದೆ ಸಾಗುವ ಇಷ್ಟವಿರಲಿಲ್ಲ. ಅಲ್ಲಿ ಕಳೆದ ಸಮಯ ಒಂದು ಹೊಸ ಒಳನೋಟವನ್ನು , ಹೊಸ ಅನುಭೂತಿಯನ್ನು ಕೊಟ್ಟು ಮತ್ತೆ ಮತ್ತೆ ಈ ಬಯಲಿಗೆ ನನ್ನನ್ನು ಎಳೆದವು ಬಲವಾಗಿ.ಎಲ್ಲವೂ ಮೋಹ ಕಳೆವಾಟ!

ಈ ದಾರಿಗಳು
ಸುಮ್ಮನೇ ಬಿದ್ದುಕೊಂಡಿರುತ್ತವೆ
ಹೊಟ್ಟೆ ತುಂಬಿದ ಹೆಬ್ಬಾವಿನಂತೆ.
ಅಸಲಿಗೆ ಈ ದಾರಿಗಳಿಗೆ
ಯಾವ ಆದಿಯೂ ಇಲ್ಲ
ಅಂತ್ಯವೂ ಇಲ್ಲ.
ಅವೆರಡೂ ಒಂದೇ ಬಿಂದುವಿನಲ್ಲಿ
ಮುಖಮುಖಿಯಾಗುತ್ತವೆ.

ನಿನ್ನನ್ನು ದಾಟಿ ಬಂದಿದ್ದೇನೆ....
ಅನ್ನುವ ಅಹಮಿಕೆಯೆಲ್ಲಾ
ದಾರಿ ಮಧ್ಯದ ಮಾತಷ್ಟೇ ಹೊರತು
ಇನ್ನೇನೂ ಇಲ್ಲ.
ಸುತ್ತಿ ಸುತ್ತಿ ಬಸವಳಿದು
ಓಟ ಮುಗಿಸಿದಾಗ ನಮ್ಮ ಅಸ್ತಿತ್ವಕ್ಕಿಲ್ಲಿ
ಯಾವ ಅರ್ಥವೂ ಉಳಿದಿರುವುದಿಲ್ಲ....!

ಬಿಜಾಪುರ ಸೇರಿದಾಗ ಮಧ್ಯಾನ್ಹ ೧೨ಗಂಟೆ. ನಾನು ಮೊದಲೊಮ್ಮೆ ನೋಡಿದ್ದ ಗೋಲ್ ಗುಂಬಜ್ ಗೆ ಹೊಸಬ ಯತೀಶನ್ನು ಕರೆದುಕೊಂಡು ಅನುಭವಿ ಗೈಡ್ ನಂತೆ ಮುಂದೆ ಸಾಗಿ ಗೋಲ್ ಗುಂಬಜ್ ನ್ನು ನನಗೆ ತಿಳಿದ ಮಟ್ಟಿಗೆ ತಿಳಿಸಿದೆ. ಅಲ್ಲೂ ಭವ್ಯತೆಯಿತ್ತು, ಸೌಂದರ್ಯವಿತ್ತು, ಆಳಿದ ಬಹುಮನಿ ಸುಲ್ತಾನರ ಕುರುಹುಗಳಿತ್ತು. ಹೋದ ಸಲ ಇಲ್ಲಿ ನನ್ನ ಮಂಗಳೂರಿನ ಸ್ನೇಹಿತರೊಂದಿಗೆ ಬಂದಿದ್ದಾಗ ತುಂಬಾ ಒಳ್ಳೆಯ ಗೈಡ್ ಸಿಕ್ಕಿದ್ರು. ಗುಂಬಜ್ ಮೇಲೆ ಹಾಡು ಹಾಡಿ ಅದು ಪ್ರತಿಧ್ವನಿಸುವ ವಿಶೇಷವನ್ನು ಹೇಳಿ ಬೆರಗುಮೂಡಿಸಿದ್ದು ಅವರು ಇನ್ನೂ ನನ್ನ ನೆನಪಲ್ಲಿ ಉಳಿದುದಕ್ಕೆ ಕಾರಣ ಹೌದಾದರೂ ಇನ್ನೂ ಒಂದು ಬಹು ಮುಖ್ಯ ಕಾರಣ ಅವರಂದು ನಮ್ಮ ಬಡಕಲು ದೇಹಗಳನ್ನು ನೋಡಿ ಆಡಿದ ಒಂದು ಡಯಲಾಗ್!

"ನೀವೇನ್ರೀ, ಮಂಗ್ಳೂರ್ ಮಂದಿ.
ಅಕ್ಕಿ ತಿಂದು ಹಕ್ಕಿ ತರಹ ಆಗಿದೀರಿ...

ನಾವು ಬಿಜಾಪುರ್ ಮಂದಿ ನೋಡ್ರೀ ಹ್ಯಾಗ್
ಜೋಳ ತಿಂದ್ ತೋಳ ತರ ಅದೆವ್ರೀ...."

ಅಂತ ಹೇಳಿದಾಗ ನಮಗೆ ನಗು ತಡೆಯಲಾಗಿರಲಿಲ್ಲ. ಈಗಲೂ ಆ ನೆನಪಾಗಿ ನಗುವಿನ ಹೊನಲೇ ಹರಿಯಿತು.

ಪ್ರಯಾಣ ಮುಂದುವರೆಯುವುದು...
#BGGROUP @ #ಬಿಜಾಪುರ
#PART 1

#ಕೊರ್ತಿಕೋಲಾರ್  #ಮೊಸರವಲಕ್ಕಿ"

"ಈಗೇನು ನೀ ಬರ್ತಿಯೋ? ಇಲ್ವೋ?...ಅಷ್ಟ್ ಹೇಳಿ ಬಿಡು.‌..ಹಾಂ ಹೂಂ ಕಹಾನಿ ಮತ್ ಬೋಲೋ..."
ಸುಧೀರ್ ಹೊಸ್ಮನಿ ಪೋನ್ ಮಾಡಿದಾಗ ಇನ್ನೂ ಗೊಂದಲದಲ್ಲಿಯೇ ಮಾತಾಡಿದ್ದೆ. ಮತ್ತೆ ನನ್ನ  ನೋಡೋನು  ದೋಸ್ತ್ ...ಮಾತು ಕೇಳಿ ಏಕ್ ದಮ್ ಸೆಂಟಿಮೆಂಟಲ್ ಮೂಡ್ ಗೆ ಗೇರ್ ಬದಲಾಯಿಸಿ  "ನೋಡು ದೋಸ್ತ್... ನಾಳೆ ಯಾರ್ ಇರ್ತಾರೋ ಇಲ್ವೋ ಯಾರಿಗ್ ಗೊತ್ತು...ಒಂದು ವಾರ ಮಾತ್ರ ಇಂಡಿಯಾದಲ್ಲಿರೋದು, ಮತ್ತೆ ವಿಮಾನ ಏರೋವಾಗ ಕೆಳಗೆ ಇಳಿಯೋ ಬಗ್ಗೆ ಗ್ಯಾರಂಟಿ ಇಲ್ಲ...ಬಾ ನೀನು....ಇದ್ರ ಮೇಲೆ ನಿನ್ನಿಷ್ಟ" ಅಂದು ನನ್ನ ಹೆಂಡತಿಯ ತಲೆಗೂ ಭಾವನೆಗಳ ಹುಳ ಬಿಟ್ಟಾಗ ನನಗಂತೂ ಪರ್ಮಿಶನ್ ಸಿಕ್ಕಿದ್ದೇ ನೆಪವಾಗಿ ಮತ್ತೆ ಹಿಂದೆ ಮಂದೆ ನೋಡಲಿಲ್ಲ. ಯತೀಶ್ ಗೆ ಪೋನ್ ಮಾಡಿ ಬರ್ತೀಯಾ ಅಂದದ್ದೇ ತಡ ಹೆಚ್ಚು ಯೋಚಿಸದೇ ಹೊರಟೇ ಬಿಟ್ಟ.

ಬಹುಶಃ BG GROUPನ ಸೆಳೆತವೇ ಆ ರೀತಿಯದ್ದು.

ಹಳೇ ಹುಬ್ಳಿ ಬಸ್ ಸ್ಟ್ಯಾಂಡ್ ನಾಗ ನಿಂತಿದ್ದೆ....

ಹಳೇ ಹುಬ್ಳಿ ಬಸ್ ಸ್ಟ್ಯಾಂಡ್ ನಲ್ಲಿ ಇಳಿದಾಗ ಬೆಳಗ್ಗಿನ ಜಾವ 6 ಗಂಟೆ. ಆಟೋದವರ ಕೈಯಿಂದ ತಪ್ಪಿಸಿಕೊಂಡು ಸುಧೀರ್ ಹೊಸ್ಮನಿಗೊಂದು ಕಾಲ್ ಮಾಡಿ ,ಬೀದಿ ಬದಿಯ ಟೀ ಸ್ಟಾಲ್ ಗೆ ಹೋದೆವು. ಸಾಲಾಗಿ ಇಟ್ಟ ಸಣ್ಣ ಸಣ್ಣ ಕಪ್ಗಳಿಗೆ ಚಾ ಸುರಿಯುತ್ತಿದ್ದ. " ಏ ಎರಡು ಲೆಮನ್ ಟೀ ಕೊಡಪ್ಪಾ..." ಅಂತ ಇಬ್ಬರು ತರುಣರು ಹೇಳಿದ್ದು ಕೇಳಿ "ನನಗೂ ಇಂದು ಲೆಮನ್ ಟೀ" ಅಂದೆ‌. ಅವರ ಸರದಿ ಬಂದಾಗ ಅದೇ ನೋರ್ಮಲ್ ಟೀ ಅವರಿಗೂ ಕೊಟ್ಟು " ಲೆಮನ್ ಟೀ" ಅಂದದ್ದು ಕೇಳಿ "ಲೆಮನ್ ಟೀ ಇಲ್ವಾ..." ಅಂದಾಗ ಸೇರಿದ್ದ ಮಂದಿಗೆಲ್ಲಾ ಜೋರ್ ನಗು...". ಅವನೆಲ್ಲಿ ಲೆಮನ್ ಕೊಡ್ತಾನೋ...ಹುಚ್ ಸೂ.ಮಗ...ಇದಕ್ಕೆ ಟೈಮಿಲ್ಲ. ಇದೇ ಲೆಮನ್, ಇದೇ ಜಿಂಜರ್ ...ಹ್ಹ ಹ್ಹ ಹ್ಹ " ...ಆದರೂ ಚಹಾ ಸೂಪರ್ ಆಗಿತ್ತು. ಚಹಾದ ಸ್ವಾದ ಆರುವ ಮೊದಲೇ ಹೊಸ್ಮನಿ ಸ್ವಿಫ್ಟ್ ಕಾರ್ ನಲ್ಲಿ ಕುಳಿತು ದೂರದಿಂದಲೇ ವಿಶ್ ಮಾಡಿದ.

ಕರಾವಳಿಯ ಜಡಿಮಳೆಯಿಂದ ಹುಬ್ಬಳ್ಳಿಯಲ್ಲಿ ಕಣ್ಣು ತೆರೆದಾಗ ಅಷ್ಟೇನೂ ಪ್ರಖರವಲ್ಲದ ಬಿಸಿಲು. ಬೆಳಗ್ಗಿನ ನಾಶ್ತಾ ಮುಗಿಸಿ ಹೊಸಮನಿಯ ಜೊತೆ ಅವನ ಸುಂದರ ಕುಟುಂಬದಿಂದ ಬೀಳ್ಕೊಂಡು ಸಾಗಿತು ನಮ್ಮ ಕನಸಿನ ಸವಾರಿ ಬಿಜಾಪುರದೆಡೆಗೆ.ಹುಬ್ಬಳ್ಳಿ ಬಿಜಾಪುರ ನಡುವಿನ ೧೬೦ ಕಿ.ಮೀ.ಗಳನ್ನು ಒಂದೇ ಗಂಟೆಯಲ್ಲಿ ತಲುಪುವ ಯೋಚನೆಯೊಂದಿಗೋ ಏನೋ ಕಾರನ್ನು ೧೬೦ ಕಿಮೀ/ಗ ವೇಗಕ್ಕೆ ಒಯ್ದು ಸಿಳ್ಳೆ ಹಾಕತೊಡಗಿದಾಗ ನನಗೂ ಜೊತೆಯಲ್ಲಿದ್ದ ಇನ್ನೊಬ್ಬ ಕರಾವಳಿ ಹುಡುಗ ಯತೀಶನಿಗೆ ಪುಕು ಪುಕು ಶುರು. ಹೇಳಿದ್ರೆ ಎಲ್ಲಿ ಈ ಹೊಸ್ಮನಿ ನಗಾಡ್ತಾನೋ ಅನ್ನೋ ಆತಂಕ. ಒಳ್ಳೆ ಹುಂಬನ ಸಹವಾಸ ಆಯ್ತಲ್ಲ ಅಂದುಕೊಳ್ಳುವಾಗಲೇ ಎದುರಿಗಿದ್ದ ರಸ್ತೆಯ ಕಂಡೀಷನ್ಗೆ ವೇಗವನ್ನು ಕಡಿಮೆ ಮಾಡಲೇ ಬೇಕಾಗಿ ನಿರಾಳಗೊಂಡೆ.ಆಗ ಬಿಚ್ಚಿಕೊಂಡಿತು ಹತ್ತುವರ್ಷಗಳ ಹಳೆಯ ನೆನಪಿನ ಬುತ್ತಿ.

ಈ ಮೊದಲ ಸಲ ಅನ್ನೋ ಶಬ್ದದಲ್ಲೇ ಅದೇನೋ ನಶೆ ಇದೆ.
ಮೊದಲ ಅಳು, ಮೊದಲ ನಗು, ಮೊದಲ ಸೈಕಲ್, ಮೊದಲ ಕ್ರಶ್, ಮೊದಲ ಸ್ಪರ್ಶ, ಮೊದಲ ಮುತ್ತು...ಹೀಗೆ. ಈ ಎಲ್ಲಾ ಮೊದಲಿಗೆ ಒಂದು ಮಾದಕತೆ ಇದೆ, ಹಿಡಿದಿಟ್ಟುಕೊಳ್ಳುವ ಭಾವವಿದೆ, ಮತ್ತೆ ಮತ್ತೆ ನೆನಪಿಸಿಕೊಳ್ಳುವ ಖುಷಿ ಇದೆ. ಆದರೆ ಇಲ್ಲಿ ನೆನಪುಗಳು ಬಿಚ್ಚಿಕೊಂಡದ್ದು, ದೋಸ್ತಿಗಳು ಬೆಸೆದುಕೊಂಡದ್ದು ನನ್ನ ಜೀವನದಲ್ಲಿ ಸಿಕ್ಕಿದ ಮೊದಲ ಕೆಲಸದ ವಿಷಯದಲ್ಲಿ.ಅದು ೨೦೦೨ ರ ಮಳೆಗಾಲದ ದಿನಗಳು. ಸುಲಭ ಇದ್ದ ಇಂಟರ್ ವ್ಯೂ ನ್ನು ಕಷ್ಟಪಟ್ಟು ಪಾಸು ಮಾಡಿದ ಮೇಲೆ ನನಗೆ ಬೆಳಗಾವಿಯ ಇಂಡಾಲ್ ನಲ್ಲಿ ಕೆಲಸ ಸಿಕ್ಕಿದ್ದು, ನಂತರ ನನ್ನೊಂದಿಗೆ ಕೀರ್ತಿ, ಯತೀಶ್, ಈ ಹೊಸ್ಮನಿ, ವಿನಾಯಕ್ ,ಎರಡು  ಜಗ್ಗುದಾದಾಗಳು ಇನ್ನೂ ಹಲವಾರು ಸೇರಿ ವೀಕ್ ಎಂಡ್ ಮಸ್ತಿಗೆ ಏರ್ಪಾಡಾದ ಗ್ರೂಪ್ ಈ BG GROUP.ನಮ್ಮ ಮಂಗಳೂರಿನ ಇಕ್ಬಾಲ್ ಆಗಲೇ ಅಲ್ಲಿ ಝಾಂಡಾ ಊರಿದ್ದ.

ತಲೆಯಲ್ಲಿ ನೂರು ನೆನಪುಗಳ ಮೆರವಣಿಗೆ ಸಾಗುತ್ತಿರುವಾಗಲೇ ಸುಧೀರ್,'ರವಿ ನೋಡೋ, ಈ ಊರಲ್ಲಿ ಬೆಣ್ಣೆಯಂತಹ ಮೊಸರು ಸಿಗ್ತದೆ, ಅವ್ಲಕ್ಕಿ ಮೇಲೆ ಹಾಕಿ ಮೇಲೆ ಚಟ್ನಿ ಪುಡಿ ಹರಡಿಕೊಂಡು ತಿಂದ್ರೆ....ಮ್ಹ್...ಸೂಪರಾಗಿರ್ತದೆ' ಅಂತ ಒಂದು ಸಣ್ಣ ಹೋಟೇಲ್ ಅಂತ ಬೋರ್ಡ್ ಹಾಕ್ಕೊಂಡಿರೋ ಮನೆ ಮುಂದೆ  ಮುಂದೆ ಗಾಡಿ ನಿಲ್ಸಿದ. ಇಳ್ದು ನೋಡ್ತೇನೆ...ಹೋಟೇಲ್ ಮಾತೋಶ್ರೀ...ಕೊರ್ತಿಕೋಲಾರ್ ಅಂತ ಬೋರ್ಡ್ ಇದೆ. ಸೋ ಕೊರ್ತಿಕೋಲಾರ್ ನ ಮೊಸರವಲಕ್ಕಿ ನೋಡೇ ಬಿಡುವ ಅಂತ ಒಳಗೆ ಹೊಕ್ಕಿದ್ವಿ.
'ಮಾವ್ಶೀ...ಚಲೋ ಮೊಸರು ಕೊಡ್ರೀ...ಮಂಗ್ಳುರಿನ ಈ ದೋಸ್ತ್ ರಿಗೆ ಕೊರ್ತಿಕೋಲಾರ್ ನ ಮೊಸರಕ್ಕಿ ರುಚಿ ತೋರಿಸ್ರೀ...' ಅಂದಾಗ ತಲೆ ತುಂಬಾ ಸೆರಗನ್ನು ಹೊದ್ದ ಮಾವ್ಶಿ ನಮ್ಮೆದುರಿಗೆ ಮೊಸರನ್ನು ತಂದು ಇಟ್ರು‌.

ಸಣ್ಣ ಮಣ್ಣಿನ ವಾಟಿಯಲ್ಲಿ ಬೆಣ್ಣೆಯಂತಿದ್ದ ಮೊಸರು ಮಂಗಳೂರಿನ ಐಡಿಯಲ್ ಐಸ್ಕ್ರೀಮ್ ಗಿಂತ ನುಣ್ಣಗಿತ್ತು. ಅವಲಕ್ಕಿ, ಮೇಲೆ ಮೊಸರು ಅದರ ಮೇಲೆ ಎರಡು ತರಹದ ಚಟ್ನಿ ಪುಡಿಯನ್ನು ಹಾಕಿ ತಿನ್ತಾ ಇದ್ರೆ... ಆಹಾ!, ಒಂದೇ ಪ್ಲೇಟ್ ಗೆ ನಿಲ್ಲಲಿಲ್ಲ.ಯತೀಶ್ ಅಂತೂ ಇನ್ನೆರಡು ತರಿಸಿ ಚಪ್ಪರಿಸಿ ತಿಂದ. ' ರವಿ, ಏತ್ ಸೋಕ್ ಉಂಡ್ ಯಾ..' ಅಂತ ಪ್ಲೇಟ್ಗೊಮ್ಮೆ ಹೇಳುತ್ತಾ ತಿನ್ನುತ್ತಿದ್ದ ಅವನನ್ನು ನೋಡಿ ನಗದೇ ಇರಲಾಗಲಿಲ್ಲ.

ಕೊರ್ತಿಕೋಲಾರ್ ಕಡೆ ಬಂದ್ರೆ ಈ ಮೊಸರವಲಕ್ಕಿ ತಿನ್ನೋದನ್ನು ಮಾತ್ರ ಮರಿಬ್ಯಾಡ್ರೀ ಮತ್ತ...

ಪ್ರಯಾಣ ಮುಂದುವರೆಯುವುದು.....
ಮುರಳಿ ನಾದವ ಕೇಳಿ ಮನದಲಿ
ಹರುಷ ಚಿಗುರೊಡೆದು
ಬೀಸೋ ಗಾಳಿಯ ಗಂಧದಮಲಿಗೆ
ಸುಖದ ಸೆರೆಯೊಡೆದು
ಕಾದು ಶ್ಯಾಮನ ದಾರಿಯು
ಪುಳಕಗೊಂಡಳು ರಾಧೆಯು

ಕೆಂಪು ಕದಪಿನ ಜೇನ ಅಧರದಿ
ಬೆರಳ ಬರವಣಿಗೆ
ಭರದಿ ಬರಸೆಳೆದಪ್ಪಿ ಕಾಡುವ
ಕುಶಲ ಮೆರವಣಿಗೆ
ಒಲವ ಕನಸದು ಮೋಹನ
ನಾಚಿ ನೆನೆದಳು ಇನಿಯನ

ಯಮುನೆ ತೀರದಿ ನಲಿವ ನವಿಲಿನ
ಗರಿಯ ತೊಟ್ಟವನ
ವೃಂದಾವನದ ಚೆಲುವ ಕಂಗಳ
ಒಲವ ಕುಡಿದವನ
ಜಗದ ಒಲುಮೆಯು ಮಾಧವ
ಬಯಸೆ ಗಗನದ ಕುಸುಮವು


Sunday 18 June 2017

ನನ್ನ ದೇವರು
ಕಾಲು ಮುರಿದುಕೊಂಡು ಬಿದ್ದಿದ್ದಾನೆ,
ಗರ್ಭಗುಡಿಯಿಂದ ಎಂದೂ
ಹೊರಬರಲಾಗದೆ.

ನನಗಿನ್ನೂ ಚೆನ್ನಾಗಿ ನೆನಪಿದೆ
ಅವನು ಬದುಕಿದ ರೀತಿ,
ಊರಿನ ಮುಂದೆ ಒಂದು
ಕಲ್ಲು ಬಿದ್ದು ಗುಹೆಯಾಗಿರುವ ಕೊಳ;
ಅದರ ದಂಡೆಯ ಮೇಲೆ ಕುಳಿತೇ
ಬೀಡಿ ಎಳೆಯುವುದು,
ಕಾಲು ಇಳಿ ಬಿಟ್ಟು ಇಷ್ಟದ ಮೀನುಗಳಿಂದ
ಕಚ್ಚಿಸಿಕೊಳ್ಳುತ್ತಾ ಎಲೆ ಜಗಿಯುವುದು,
ಸಂಜೆ ಗೂಡು ಸೇರಲು ಹಾರುವ
ಹಕ್ಕಿ ಸಾಲನ್ನು ನೋಡುತ್ತಾ
ತನ್ನಲ್ಲೇ ನಗುವುದು; ನಿರುಪದ್ರವಿ ದೇವರು.

ಮಗುವಾಗಿದ್ದಾಗ ನನ್ನ ಉಚ್ಚೆ ಹೇಲನ್ನೂ
ಬಾಚಿದ್ದ ನನ್ನ ದೇವರು
ನನ್ನ ಮೇಲೆ ಮುನಿಸಿಕೊಂಡದ್ದೇ ಇಲ್ಲ.
ಅವನ ಹೆಗಲ ಮೇಲೆ ಕೂತೇ
ಊರೂರು ಸುತ್ತುತ್ತಿದ್ದೆ,
ಊರ ಜಾತ್ರೆಯಲ್ಲಿ ರಥದ ಮೇಲಿರುತ್ತಿದ್ದ
ದೇವರನ್ನು ನನಗೆ ತೋರಿಸುತ್ತಿದ್ದ,
ಕೈಮುಗಿಯಲೂ ಹೇಳುತಿದ್ದ.
ನನಗಲ್ಲಿ ದೇವರು ಕಾಣಿಸುತ್ತಿರಲಿಲ್ಲ.

ಆವತ್ತು ಆ ಕೊಳದ ಯಾವುದೋ
ಮುದಿ ಮೀನು ಸತ್ತದ್ದಕ್ಕೆ
ಬೀಡಿ ಎಲೆ ಹರಟೆ
ಎಲ್ಲಾ ಬಿಟ್ಟು ಒಳ್ಳೆಯವನಾಗಿದ್ದ,
ಅದರ ಮರುದಿನವೇ ದಂಡೆಯಿಂದ ಜಾರಿ
ಕಾಲು ಮುರಿದುಕೊಂಡ;
ಪಾಪ ಯಾರ ಕೆಟ್ಟ ಕಣ್ಣು ಬಿತ್ತೋ
ನನ್ನ ದೇವರ ಮೇಲೆ...!

ಈಗ ಸದಾ ಗರ್ಭಗುಡಿಯಲ್ಲೇ
ಮಲಗಿರುವ ದೇವರಿಗೆ
ಹೊರಗಿನ ಬೆಳಕು ಕಾಣುವಾಸೆ,
ಹೂವು,ಹಸಿರು,ಪೇಟೆಯ ಬೀದಿ
ಊರಿನ ಕೊಳ ಹಕ್ಕಿಗಳ ಸಾಲು
ಕಣ್ತುಂಬಿಕೊಳ್ಳುವಾಸೆ.
ನನಗೂ ಅನಿಸುತ್ತದೆ,
ಅವನನ್ನು  ಹೊರ ತರಬೇಕು,
ಲೋಕ ತೋರಿಸಬೇಕು ಎಂದು.
ಪಲ್ಲಕ್ಕಿ ಹೊರುವ ನಾಲ್ಕು ಜನರಿಗಾಗಿ
ಹುಡುಕಾಡುತ್ತೇನೆ.
ತಲೆ ಮೇಲೆ ಹೊತ್ತುಕೊಂಡು
ಪೌಳಿ ಸುತ್ತುವ ಮಂದಿಗಾಗಿ
ಹುಡುಕಾಡುತ್ತೇನೆ.
ಸಿಕ್ಕರೂ ಅವರು ಬೇಡುವ ಕಾಣಿಕೆ
ಕೊಡಲಾಗದ ಬಡತನ ನನ್ನದು.

ಹೇಳಿ ನನ್ನ ದೇವರಿಗಾಗಿ ಯಾವ
ದೇವರಿಗೆ ಹರಕೆ ಕಟ್ಟಲಿ?
ಮತ್ತೆ ಕಾಲು ಬಂದು ಕುಣಿಯಲು
ಯಾವ ದೇವರಿಗೆ ಉತ್ಸವ ಮಾಡಿಸಲಿ?

Friday 16 June 2017

ಭರವಸೆ

ಈ ಬದುಕೇ ಶಾಪ ಅನ್ನದಿರು
ಆಸೆಗಳೇ ಸಾಯಲು;
ಹೀಗೆ ಕೈಚೆಲ್ಲಿ ಕೂರದಿರು
ನಿರಾಸೆ ಕಾಡಲು.

ಕೆಂಡ ಎಷ್ಟಾದರೂ ಉರಿಯಲಿ ಒಳಗೆ
ಬೆಚ್ಚಗೆ ಇದ್ದು ಬಿಡು;
ಕೆಂಡ ಮುಚ್ಚಿದ ಬೂದಿ ಹಾರದಿದ್ದರಾಯಿತು
ಒಳಗ ತೋರದಿದ್ದರಾಯಿತು.

ಸೇತುವೆಗಳು ಎಷ್ಟಾದರೂ ಮುರಿಯಲಿ ನಡುವೆ
ನಗೆಯ ತೇಲಿ ಬಿಡು;
ಮಾತಿನ ಹಾಯಿದೋಣಿ ಮುಳುಗದಿದ್ದರಾಯಿತು
ಶಾಂತಿ ಕದಡದಿದ್ದರಾಯಿತು.

ಕತ್ತಲು ಎಷ್ಟಾದರೂ ಕವಿಯಲಿ ಮನೆಗೆ
ಚಿಂತೆ ಇಲ್ಲ ಬಿಡು;
ಮೂಡುವ ಆಸೆಯ ಸೂರ್ಯ ಮುನಿಯದಿದ್ದರಾಯಿತು
ಬೆಳಕು ಆರದಿದ್ದರಾಯಿತು.
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

Wednesday 7 June 2017

ಕುರಂಬ್ (ಕೊರಂಬು)

ಮಳೆಗಾಲ ಶುರು ಆಯ್ತು ಅಂತ ಆದ್ರೆ ನಮ್ಮ ಮನೆಯಲ್ಲಿ  ಹೊಸ ಕೊಡೆ ಖರೀದಿ ಮಾಡುವ ಆತುರ. ನನಗೊಂದು ಕಪ್ಪು ಬಣ್ಣದ್ದು, ಹೆಂಡ್ತಿಗೊಂದು ಹೂಗಳಿರುವ ಬಣ್ಣ ಬಣ್ಣದ್ದು ಆದ್ರೆ  ಮಗಳಿಗೆ ಚೋಟ ಭೀಮ್ ನೋ, ಡೋರಾನೋ ಕೊಡೆಯ ಡೇರೆಯ ಮೇಲಿರಲೇ ಬೇಕು. ಅಮ್ಮನಿಗೆ ನೀರು ಒಳಗೆ ಬೀಳದ ಕೊಡೆ ಅಂತ ಆದ್ರೆ ಆಯ್ತು.ಹೀಗೆ ಕೊಡೆಯ ಶಾಪಿಂಗ್ ಅಂದ್ರೆ ಸುಮ್ನೆ ಅಲ್ಲ. ಎಲ್ಲರಿಗೂ ತೃಪ್ತಿ ಮಾಡಬೇಕಾದ್ರೆ ಕೆಲವು ಅಂಗಡಿ ಆದ್ರೂ ಸುತ್ತಲೇ ಬೇಕು.

ನಿನ್ನೆಯಿಂದ ಇಲ್ಲಿ ಜೋರು ಮಳೆ. ಮಗಳಿಗೆ ಶಾಲೆ ಶುರು ಆದಾಗಲೇ ಮಳೆ ಕೂಡಾ ಶುರುವಾಗಿದೆ. ಮಗಳಿಗೆ ಹೇಳಿದ್ದೆ, "ಬೇಡ ಮಾರಯ್ತಿ ಕೊಡೆ, ನಿಂಗೊಂದು ಚಂದದ ರೈನ್ ಕೋಟ್ ಕೊಡಿಸ್ತೇನೆ...ಎಷ್ಟು ದೊಡ್ಡ ಮಳೆ ಬಂದ್ರೂ ಚಂಡಿ ಆಗಲ್ಲ" ಅಂತ. ಆದ್ರೆ ಅವಳೆಲ್ಲಿ ಕೇಳ್ತಾಳೆ?...
" ಬೇಡ ಪಪ್ಪಾ, ನಂಗೆ ಕೊಡೆನೇ ಬೇಕು...ವೈಷ್ಣವಿ ಆಂಗ್ರೀ ಬರ್ಡ್ಸ್ ಇರುವ ಪಿಂಕ್ ಕಲರ್ ಕೊಡೆ ತರ್ತಾಳೆ, ಎಷ್ಟು ಚೆನ್ನಾಗಿದೆ ಗೊತ್ತಾ? ನಂಗೂ ಹಾಗಿದ್ದೇ ಬೇಕು...ಮತ್ತೆ ಪ್ರತೀಕ್, ಆಯಿಷ್ ಎಲ್ಲರೂ ಕೊಡೆನೇ ತರೋದು...ನಿಂಗೆ ಗೊತ್ತಿಲ್ಲ, ಅಮ್ಮನ ಹತ್ರ ಕೇಳು " ಅಂತ ಮಾತಿಗೆ ಅವಕಾಶನೇ ಕೊಡದೇ ಆರ್ಡರ್ ಮಾಡಿದ್ಮೇಲೆ ತೆಪ್ಪಗಾದೆ.
ಬಿಸಿ ಟೀ ಕುಡಿಯುತ್ತಾ ಹೊರಗೆ ಸುರಿಯಿವ ಮಳೆಯನ್ನೇ ನೋಡುತ್ತಾ ಕುಳಿತಿದ್ದೆ. ಫಕ್ಕನೇ ಮನಸ್ಸು ಬಾಲ್ಯದತ್ತ ನೆಗೆಯಿತು. ನಾನು ಶಾಲೆಗೆ ಹೋಗುವಾಗ ನನಗೆ ಕೊಡೆ ಸಿಕ್ಕಿದ್ದು ಹೈಸ್ಕೂಲ್ ನಲ್ಲಿರಬೇಕು ಅಲ್ಲಿತನಕ ರೈನ್ ಕೋಟೇ ಹಾಕ್ಕಂಡು ಹೋದದ್ದು.....ಅಮ್ಮ ಕೂಡಾ ನನ್ನನ್ನು ಶಾಲೆ ತನಕ ಬಿಡ್ಲಿಕ್ಕೆ ಬರ್ತಿದ್ಳು, ಅವಳ ಕುರಂಬ್ ತೆಗೆದುಕೊಂಡು.

ಆಗ ನಮ್ಮ ಮನೆಯಲ್ಲಿ ಕೊಡೆ ಇನ್ನೂ ಕಾಲಿಟ್ಟಿರಲಿಲ್ಲ. ಕೊಡೆಗೆ ಹಾಕುವಷ್ಟು ದುಡ್ಡು ಅಪ್ಪನ ಹತ್ರ ಇರಲಿಲ್ಲವಾ ಅಥವಾ ಕೊಡೆ ಜೋರು ಮಳೆಗೆ ಏನೂ ಉಪಯೋಗ ಇಲ್ಲ ಅಂತನೋ ಅದೆಷ್ಟು ಜೋರು ಮಳೆಗಾಲವಾದರೂ ಮನೆಯಲ್ಲಿ ಮಳೆಯಿಂದ ರಕ್ಷಣೆಗೆ ಬಳಸುತ್ತಿದ್ದುದು ಕುರಂಬ್ ಮಾತ್ರ. ಕೊಂಕಣಿಯಲ್ಲಿ ಕುರಂಬ್ ಅಂತ ಕರೆಯುವ ಇದಕ್ಕೆ ಕೊರಂಬು, ಗೊರಬು ಅಂತನೂ ಕರೆಯುತ್ತಾರೆ ತುಳು ಮತ್ತು ಕನ್ನಡದಲ್ಲಿ. ಬಿಲ್ಲಿನ ಆಕಾರದಲ್ಲಿ ಬಿದಿರಿನಿಂದ ಮಾಡುವ ಈ ಕುರಂಬ್ ಹಿಂತಲೆಯ ಮೇಲೆ ಇಟ್ಟುಕೊಂಡ್ರೆ ಬೆನ್ನು ಪೂರಾ ಕವರ್ ಆಗಿ ತೊಡಯ ತನಕ ನೀರು ಬೀಳದಂತೆ ನೋಡಿಕೊಳ್ಳುತ್ತದೆ. ಬಿದಿರಿನ ಅಸ್ಥಿಪಂಜರಕ್ಕೆ ದೊಡ್ಡ ಎಲೆಗಳನ್ನು ಸರಿಯಾಗಿ ಪೋಣಿಸಿರುವ ಈ ಕುರಂಬ್ ಗೆ  ಕರಾವಳಿ ಕಡೆ ಮಳೆಗಾಲದಲ್ಲಿ ಇನ್ನಿಲ್ಲದ ಬೇಡಿಕೆ ಇತ್ತು. ಸರಿಯಾಗಿ ಇಟ್ಟುಕೊಂಡರೆ ಮೂರ್ನಾಲ್ಕು ಮಳೆಗಾಲ ಬಾಳಿಕೆ ಬರುವಂತಹ ಗಟ್ಡಿಮುಟ್ಟು ಈ ಕುರಂಬ್. ಗದ್ದೆ ಉಳುವಾಗ, ನೇಜಿ ತೆಗೆಯುವಾಗ, ನಟ್ಟಿ ಮಾಡುವಾಗ ಹೀಗೆ ಎಲ್ಲಾ ಸಂದರ್ಭಗಳಲ್ಲಿ ಈ ಕುರಂಬ್ ಹಳ್ಳಿಗರ ಹತ್ತಿರದ ಒಡನಾಡಿ.

ಪ್ರೈಮರಿ ಶಾಲೆಗೆ ಹೋಗುವ ನನ್ನಂತಹ ಮಕ್ಕಳಿಗೆ ಅಪ್ಪ ಅಮ್ಮ ತೆಗೆದು ಕೊಡುತ್ತಿದ್ದುದು ಪ್ಲಾಸ್ಟಿಕಿನ ಕಲರ್ ಕಲರ್ ರೈನ್ ಕೋಟ್. ಅದರ ಮೇಲೆಲ್ಲಾ ಚಿಕ್ಕ ಚಿಕ್ಕ ಹೂಗಳಿರುತ್ತಿದ್ದ ರೈನ್ ಕೋಟ್ ಗಳೆಂದರೆ ನನಗೆ ಬಹಳ ಇಷ್ಟ. ಅಪರೂಪಕ್ಕೆ ಕೆಲವರು ಕೊಡೆ ಹಿಡ್ಕೊಂಡು ಬರುತ್ತಿದ್ದವರೂ ಇದ್ರು.ಆದರೆ ಜೋರು ಗಾಳಿ ಮಳೆಯಲ್ಲಿ ಅವರ ಕೊಡೆ ಗಾಳಿಗೆ ವಿರುದ್ದವಾಗಿ ಮೇಲ್ಮುಖವಾಗಿ ತಿರುಗಿ ಬಿಡುತ್ತಿತ್ತು.ಅವರು ಪೂರ್ತಿ ಒದ್ದೆಯಾದ್ರೆ ನಮಗೆ ಖುಷಿಯೋ ಖುಷಿ.ಆದರೆ ಕೆಲವು ಮಳೆಗೆ ಈ ರೈನ್ ಕೋಟ್ ಗಳೂ ಅಸಹಾಯಕವಾಗುತ್ತಿದ್ದವು. ಆಗೆಲ್ಲಾ ನಮ್ಮನ್ನು ಸುರಕ್ಷಿತವಾಗಿ , ಒದ್ದೆಯಾಗದಂತೆ ಶಾಲೆವರೆಗೆ ಮುಟ್ಟಿಸುತ್ತಿದ್ದದ್ದು ಅಮ್ಮನ ಕುರಂಬ್ ಗಳೇ.

ಬೆಳಗ್ಗೆಯೇ ಜೋರು ಮಳೆ ಬಂದು ಅಂಗಳ ತುಂಬಿ ನೀರು ಹರಿಯುತ್ತಿದ್ದರೆ ಅಪ್ಪ ಶಾಲೆಗೆ ಹೋಗೋದೇ ಬೇಡ ಅಂತಿದ್ರು. ಆದರೆ ಅಮ್ಮನ ದಿನಚರಿಯಲ್ಲಿ ಮಕ್ಕಳು ಶಾಲೆಗೆ ಹೋಗಲೇ ಬೇಕು ಮತ್ತು ಮಕ್ಕಳನ್ನು ಶಾಲೆವರೆಗೆ ಬಿಡುವ ಕೆಲಸವನ್ನು ಅವರೇ ವಹಿಸಿಕೊಳ್ಳುತ್ತಿದ್ದರು. ಅವರ ನಟ್ಟಿಯ ದೊಡ್ಡ ಕುರಂಬ್ ಹಿಡಿದು ಅದರೊಳಗೆ ನನ್ನನ್ನು ಹಿಡಿದುಕೊಂಡು ಕರ್ಕೊಂಡು ಹೋಗ್ತಿದ್ರು. ಅಪ್ಪನ ಮಾತು ಕೇಳಿ ಉದಾಸೀನವಾಗಿ ಮನೆಯಲ್ಲಿರುವ ಅಂದುಕೊಂಡ್ರೂ ಅಮ್ಮ ಬಿಡುತ್ತಿರಲಿಲ್ಲ. ಶಾಲೆ ಹತ್ತಿರದವರೆಗೆ ಬೆಚ್ಚಗೆ ಕುರಂಬ್ ಅಡಿಯಲ್ಲಿ ಹೋದ್ರೂ ಶಾಲೆ ತಲುಪಿದ ಕೂಡ್ಲೇ ನಾಚಿಕೆಯಾಗುತ್ತಿತ್ತು. ಗೆಳೆಯರು ನೋಡಿ ನಗುತ್ತಿದ್ದುದನ್ನು ನೋಡಲಾಗದೇ ಅಮ್ಮನಿಗೆ ಶಾಲೆ ಹತ್ತಿರದವರೆಗೆ ಬರಲು ಬಿಡುತ್ತಲೇ ಇರಲಿಲ್ಲ. ಎಷ್ಟೋ ಬಾರಿ ಅಮ್ಮನಿಗೆ ಬೈದದ್ದೂ ಉಂಟು. "ನಿನಗೆ ಆಗ್ಲೇ ಹೇಳಿದ್ನಲ್ಲ, ಇಸ್ಕೂಲ್ ಹತ್ರದವರೆಗೆ ಬರ್ಬೇಡ ಅಂತ...ಎಲ್ಲಿ ಕೇಳ್ತಿಯಾ ನೀನು, ಈಗ ನೋಡು ಎಲ್ರೂ ನಗ್ತಿದ್ದಾರೆ...ಹೋಗು ಬೇಗ" ಅಂತ ಅಮ್ಮನನ್ನು ಗದರಿಸುವಾಗ ಸುಮ್ಮನೇ ನಗ್ತಾ ಹಿಂತಿರುಗೋಳು, ಆಗ ಮತ್ತೊಮ್ಮೆ ಅಮ್ಮನನ್ನು ಕರೆದು, " ಸಂಜೆ ತಿಂಡಿ ಮಾಡಿ ಇಡು..." ಅಂತ ಹೇಳಿಯೇ ಶಾಲೆಯೊಳಗೆ ಓಡುತ್ತಿದ್ದೆ.
ಅಮ್ಮ ಕುರಂಬ್ ಒಳಗೆಯೇ ನಗುತ್ತಿದ್ಳು.

ಈಗ ಸ್ಕೂಟಿಯೋ, ಕಾರಿನಲ್ಲೋ ಮಗಳನ್ನು ಸ್ಕೂಲ್ ವರೆಗೆ ಬಿಟ್ಟು ಬರುವಾಗ ಕೊಡೆ ಓಪನ್ ಆದ್ರೆ ಆಯ್ತು ಇಲ್ಲದಿದ್ರೆ ಇಲ್ಲ. ಮಳೆಯಲ್ಲಿ ನಡೆಯುವ ಸುಖ ಈಗಿನ ಮಕ್ಕಳಿಗೂ ಸಿಗಬೇಕು...ನಾಳೆ ನಡೆದೇ ಹೋಗುವ ಅಂತ ಮಗಳಿಗೆ ಹೇಳ್ಬೇಕು. ಅಂತೂ ಈ ಕೊಡೆಯ ಶಾಪಿಂಗ್ ನಡುವೆ ಕುರಂಬ್ ಯಾನೆ ಕೊರಂಬು ಯಾನೆ ಗೊರಬಿನ ನೆನಪಾಯ್ತು...

Friday 2 June 2017

ಅನುಸಂಧಾನ
(ಸಣ್ಣಕತೆ)


ನವ್ಯ 


ಛೇ, ಏನೆಲ್ಲಾ ಅಂದುಕೊಂಡಿದ್ದೆ. ತುಂಬಾ ಇಷ್ಟ ಪಡುವ ಗಂಡ, ಮುದ್ದಾದ ಮಕ್ಕಳು, ಚಂದದ ಮನೆ...ಆದರೆ ಸಿಕ್ಕಿದ್ದು? ಯಾವ ಜನ್ಮದಲ್ಲಿ ಯಾರ ಮನೆ ಒಡೆದಿದ್ನೋ ಗೊತ್ತಿಲ್ಲ.... ಈಗ ಅನುಭವಿಸ್ತಾ ಇದ್ದೇನೆ. ಅಕ್ಕನ ಮದುವೆ ಸಮಯದಲ್ಲಿ ಚೆಲ್ಲುಚೆಲ್ಲಾಗಿ ಎಲ್ಲರೊಂದಿಗೆ ಮಾತಾಡ್ತಾ ಇದ್ದಾಗ, "ಹಾಗೆಲ್ಲಾ ಗಂಡುಬೀರಿ ತರ ಆಡ್ಬೇಡ..‌‌‌.ಅದ್ಹೇಗೆ ನಾಳೆ ಗಂಡನ ಮನೆಯಲ್ಲಿ ಸಂಸಾರ ಮಾಡ್ತೀಯಾ?"  ಅಂತ ಬೈದ ಅಮ್ಮನಿಗೆ ಎಷ್ಟು ಧಿಮಾಕಿನಿಂದ ಹೇಳಿದ್ದೆ, " ನೋಡ್ತಾ ಇರಿ, ಎಷ್ಟು ಒಳ್ಳೆ ಮನೆ ಸಿಗ್ತದೆ ನನಗೆ ಅಂತ...ಶ್ರೀಮಂತ ಗಂಡ....ಯಾರ್ ಬರ್ತಾರೆ ಆಗ ನಿನ್ನ ಮನೆಗೆ...ಅಕ್ಕ ಅಸೂಯೆ ಪಡ್ತಾಳೆ ಆಗ, ನೋಡ್ತಾ ಇರು"...ಅದೆಷ್ಟು ಆತ್ಮವಿಶ್ವಾಸದಿಂದ ಮನೆಯಲ್ಲಿ ಹೇಳಿದ್ದೆ...ತವರಿಗೆ ಹೋಗದ ಹಾಗೇ ಮಾಡಿಬಿಟ್ಟಿತಲ್ಲ ನನ್ನ ವಿಧಿ.ನಗ್ತಾಳೆ ಅಕ್ಕ ಈಗ.‌‌‌..ಅಮ್ಮ ಏನು ಕಡಿಮೆಯಾ? ಯಾರನ್ನು ಅಂದು ಏನು ಪ್ರಯೋಜನ. ನಾನೇ ತೋಡಿಕೊಂಡ ಗುಂಡಿ ಇದು.ಎಲ್ಲಾ ನನ್ನದೇ ತಪ್ಪು.


ಮೋಹನ


ತಪ್ಪಲ್ಲ, ಖಂಡಿತಾ ತಪ್ಪಲ್ಲ. ಪ್ರತೀ ಹೆಣ್ಣೂ ತನ್ನ ವೈವಾಹಿಕ ಜೀವನದ ಬಗ್ಗೆ ತನ್ನದೇ ಆದ ಕಲ್ಪನೆಯನ್ನು , ನಿರೀಕ್ಷೆಯನ್ನು ಇಟ್ಟುಕೊಂಡಿರುತ್ತಾಳೆ.ಅದು ಸಹಜ ಮಾತ್ರ, ತಪ್ಪಲ್ಲ. ಆದರೆ ಸಿಕ್ಕಿದ ನಂತರ...ಅರೆ ಇದಲ್ಲ ನಾನು ಬಯಸಿದ್ದು, ನನಗೆ ಆ ತರ ಬೇಕಾಗಿತ್ತು, ಇನ್ನೂ ಒಳ್ಳೆಯ ಬದುಕು ನನ್ನ ಹಕ್ಕಾಗಿತ್ತು, ನನಗೆ ಸಿಕ್ಕಿದ್ದು ಅದಲ್ಲ ಅಂತ ಕೊರಗಿ ಇರೋ ಚಂದದ ಬದುಕನ್ನೇ ನಿತ್ಯ ನರಕ ಮಾಡಿಕೊಂಡ್ರೆ ನನ್ನಂತಹ ಗಂಡಂದಿರ ಪಾಡೇನು?.
ಪ್ರೀತಿ ಅನ್ನೋದು ಎರಡು ಹೃದಯಗಳ , ಗಂಡು ಹೆಣ್ಣಿನ ನಡುವಿನ ವಿಷಯವಾಗಿದ್ದರೂ ಮದುವೆ ಅಂದರೆ ಬರೇ ಅಷ್ಟೇ ಅಲ್ವಲ್ಲ? ಅದು ಎರಡು ಮನೆಗಳ ಮಿಲನ. ಅಲ್ಲಿ ಎಲ್ಲರ ಮನಸೂ ಕೂಡಬೇಕು. ಎಲ್ಲರೂ ಗಂಡನ ಹಾಗೇ ಇರಲಿಕ್ಕಿಲ್ಲ. ಹೊಂದಾಣಿಕೆ ಮಾಡಿಕೊಂಡು ಹೋಗಬೇಕಲ್ವಾ? ಹೌದು ಎರಡು ವರ್ಷ ಎಲ್ಲವೂ ಚೆನ್ನಾಗಿಯೇ ಇತ್ತು. ನನಗೆ ನೀನು, ನಿನಗೆ ನಾನು ಅಂತ ಪ್ರಣಯ ಪಕ್ಷಿಗಳಾಗಿ ಯಾರ ಹಂಗೂ ಇಲ್ಲದೆ ಹಾರಾಡಿದ್ವಿ. ಆಗೆಲ್ಲಾ ನಾನು ನಿನ್ನ ಕಣ್ಣುಗಳಲ್ಲಿ ಕಾಣುತ್ತಿದ್ದುದು ಕೊನೆಯಾಗಲು ಸಾಧ್ಯವೇ ಇಲ್ಲದಂತಹ ಸಾಗರ ಪ್ರೇಮ. ನಡೆ ನುಡಿ ಎಷ್ಟು ಚೆನ್ನ...ಮಾಡುವ ಅಡುಗೆಗೆ ಅದೆಷ್ಟು ರುಚಿ...ಆ ದೇವರು ನನಗಾಗಿಯೇ ಸ್ಪೆಷಲ್ ಆಗಿ ತಯಾರಿ ಮಾಡಿ ಕಳಿಸಿದ ಹುಡುಗಿ ಇವಳು ಅಂತ ಅದೆಷ್ಟು ಬಾರಿ ಅನ್ನಿಸಿಲ್ಲ? ಅಷ್ಟಕ್ಕೂ ನಮ್ಮದು ಲವ್ ಮ್ಯಾರೇಜ್ ಅಲ್ವಾ?


ನವ್ಯ


ಅದೇ...ಅದೇ ನಾನು ಮಾಡಿದ ಮೊದಲ ತಪ್ಪು. ನನ್ನ ಮೊಬೈಲ್‌ ನಲ್ಲಿ ತಪ್ಪಿ (?) ಬಂದ ನಿಮ್ಮ ಮೆಸೇಜ್ಗೆ ಕುತೂಹಲದಿಂದ ರಿಪ್ಲೈ ಮಾಡಿದ್ದು. ನನಗೇನು ಗೊತ್ತಿತ್ತು ಆ ಒಂದು ಮೆಸೇಜ್ ನನ್ನ ಕಲ್ಪನೆಯ ಬಹು ನಿರೀಕ್ಷಿತ ಬದುಕಿನಿಂದ ನನ್ನನ್ನು ಶಾಶ್ವತವಾಗಿ ಬಹು ದೂರ ಕರೆದುಕೊಂಡು ಹೋಗುತ್ತೆ ಅಂತ. ಅದಾವ ಮೋಹನ ಮುರಳಿಯ ನಾದಕ್ಕೆ ತಲೆದೂಗಿದೆ? ಅದೇನು ಸೆಳೆತವಿತ್ತು ನಿನ್ನ ಮಾತುಗಳಲ್ಲಿ? ಈ ಪ್ರೀತಿಯ ಬಲೆಗೆ ಬೀಳದೇ ಜಾಣತನದಿಂದ ನನ್ನ ಬದುಕನ್ನು ಆರಿಸಿಕೊಳ್ಳಬೇಕು ಅಂತ ಎಲ್ಲರಲ್ಲೂ ಹೇಳುತಿದ್ದ, ಪ್ರೀತಿಯಲ್ಲಿ ದಿನವಿಡೀ ಮೊಬೈಲ್ ಗೆ ಆತುಕೊಂಡು ಯಾವುದೋ ಲೋಕದಲ್ಲಿ ತೇಲುತ್ತಿದ್ದ ಫ್ರೆಂಡ್ಸ್ ಗೆಲ್ಲಾ 'ಲೆಕ್ಚರ್' ಕೊಡುತ್ತಿದ್ದ ನಾನೇ ಈ ಬಲೆಯಲ್ಲಿ ಬೀಳಬೇಕಾಗಿ ಬಂದ ಆ ದುರ್ಬಲ ಮಾನಸಿಕ ಘಳಿಗೆ ಯಾವುದು?  ಅಷ್ಟಕ್ಕೇ ನಿಲ್ಲದೇ ಭೇಟಿಯಾದೆವು...ಬರೇ ಫ್ರೆಂಡ್ಸ್ ಅಂತ ಹೇಳುತ್ತಲೇ ಪ್ರೀತಿಗೆ ಜಾರಿದ್ದು ಗೊತ್ತಾಗಲೇ ಇಲ್ಲ. ನಾನು ಮದುವೆಯಾಗಿ ಹೋಗುವ ಮನೆಯಲ್ಲಿ ಅತ್ತೆ ಇರಬಾರದು, ಅಕಸ್ಮಾತ್ ಅತ್ತೆ ಇದ್ದರೂ ನಾದಿನಿಯಂತೂ ಇರಲೇ ಬಾರದು, ಒಬ್ಬನೇ ಮಗನಾಗಿರಬೇಕು ಅಂತೆಲ್ಲಾ
ಅಂದುಕೊಂಡವಳು ಅತ್ತೆ ಇದ್ದೂ ಎರಡೆರಡು ನಾದಿನಿ ಇದ್ದ ಗಂಡನ ಮನೆಯನ್ನು ಆರಿಸಿಕೊಳ್ಳುವಂತಾದದ್ದು ನನ್ನ ದುಡುಕಿನಿಂದಲೇ ಅಥವಾ ಹಣೆಬರಹವೇ ಕೆಟ್ಟದ್ದಾ?...ನಿಜ ಪ್ರೀತಿಗೆ ಕಣ್ಣಿಲ್ಲ. ಅದರೂ ಅತ್ತು ಕರೆದು ಮದುವೆಯಾದೆ ಮನೆಯಲ್ಲಿ ಸಾರಿ ಹೇಳಿದರೂ ಕೇಳದೇ. ಬಹುಷಃ ನನ್ನ ಬಗ್ಗೆ ಮನೆಯಲ್ಲಿ ಅಷ್ಟೂ ಕಾನ್ಫಿಡೆನ್ಸ್ ಇತ್ತು ಅಂತ ಈಗ ಗೊತ್ತಾಗ್ತಾ ಉಂಟು, ಮಗಳು ಆ ಮನೆಯಲ್ಲಿ ಸುಖವಾಗಿರಲಾರಳು ಅಂತ. ಹುಡುಗಿ ನೋಡಲು ಬಂದದ್ದು, ಮದುವೆ ಮಾತುಕತೆ, ಮದುವೆಯ ದಿನದ ಸಂಭ್ರಮ (?) ಎಲ್ಲಾ ನೋಡಿದ್ರೆ ಈಗ ಅರ್ಥ ಆಗ್ತಾ ಉಂಟು ಅವನ ಮನೆಯಲ್ಲೂ ಇಷ್ಟವಿರಲಿಲ್ಲ ಅಂತ. ಆದರೂ ಅವನೂ ಅದನ್ನು ಮುಚ್ಚಿ ನನ್ನ ಕೈಹಿಡಿದ ಅದಾವ ಸುಖ ಸೂರೆಗೈಯಲೋ ಕಾಣೆ.ಆದರೂ ಎರಡು ವರ್ಷ ಚೆನ್ನಾಗಿಯೇ ಇತ್ತಲ್ಲ. ಮೋಹನ್ ಕೂಡಾ ತನ್ನ ಕೆಲಸಕ್ಕಾಗಿ ಊರನ್ನು ಬಿಟ್ಟು ಬೆಂಗಳೂರಿನಲ್ಲಿದ್ದದ್ದರಿಂದ ನನಗೆ ಏನೂ ಅನ್ನಿಸಲಿಲ್ಲ. ಅಪರೂಪಕ್ಕೆ ಗಂಡನ ಮನೆಗೆ ಹೋದಾಗ ಅಂತಹ ಕಿರಿಕಿರಿಯ ಅನುಭವ ಆಗಲಿಲ್ಲ. ಹಾಗೆಯೇ ಇರಬಾರದಿತ್ತಾ? ದಿನಗಳು ಹಾಗೆಯೇ ಕಳೆಯಬಾರದಿತ್ತಾ? ನನ್ನ ಅದೃಷ್ಟವೇ ಹಾಗಿರುವಾಗ ಯಾರನ್ನು ಅಂದೇನು ಪ್ರಯೋಜನ?


ಮೋಹನ


ಅದೃಷ್ಟ ಎಲ್ಲರ ಬದುಕಲ್ಲೂ ಹಾವು ಏಣಿ ಆಟ ಆಡುತ್ತದೆ ಅಂತ ಕೇಳಿದವನಿಗೆ ನನ್ನ ಬದುಕಲ್ಲೂ ಹಾವು ಸಿಗಬಹುದು ಅಂತ ಅಂದುಕೊಂಡಿರಲಿಲ್ಲ. ಎಲ್ಲವೂ ಸರಿಯಾಗಿಯೇ ನಡೆಯತ್ತಿದೆ ಅಂದುಕೊಳ್ಳುವಾಗಲೇ, ಇಲ್ಲ ಅಷ್ಟು ಸಲೀಸಾಗಿ ಬದುಕು ಸಾಗುವುದಿಲ್ಲ ಅಂತ ತೋರಿಸಿಯೇ ಕೊಟ್ಟಿತು ಕಾಲಚಕ್ರ. ಒಂದು ಬೆಳಗ್ಗೆ ಹಠತ್ತಾನೇ ಕಾಣಿಸಿದ ಎದೆನೋವು ಗ್ಯಾಸ್ಟ್ರಿಕ್‌ ಇರಬಹುದು ಅಂತ ಮೊದಲಿನ ಹಾಗೇಯೇ ಉಪೇಕ್ಷೆ ಮಾಡಿದ ಅಪ್ಪನಿಗೆ ...ಅಲ್ಲ ಇದು ಹಾರ್ಟ್ ಫೈಲ್ಯೂರ್ ಅಂತ ಹೇಳಲೂ ಅಪ್ಪನಿಂದ ಸಾಧ್ಯವಾಗಲೇ ಇಲ್ಲ. ನಮ್ಮ ಹಳ್ಳಿಯಿಂದ ಆಸ್ಪತ್ರೆಗೆ ಹೋಗುವುದು ಅರ್ಜೆಂಟ್ ಗೆ ಅಷ್ಟು ಸುಲಭವಿಲ್ಲ. ಸರಿಯಾದ ಮಾರ್ಗದ ವ್ಯವಸ್ಥೆ ಇಲ್ಲದ ಹಳ್ಳಿಗೆ ಸಕಾಲಕ್ಕೆ ಯಾವ ರಿಕ್ಷಾದವರು ಬರುವುದೂ ಇಲ್ಲ. ಅಂತೂ ಕಾದೂ ಕಾದೂ ರಿಕ್ಷ ಬಂದರೂ ಆಸ್ಪತ್ರೆಯ ದಾರಿ ಮಧ್ಯದಲ್ಲಿಯೇ ಅಪ್ಪ ನಮ್ಮ ಪಾಲಿಗೆ ಇಲ್ಲವಾದರು. ಸಾವು ಒಬ್ಬರ ಜೀವನವನ್ನು ಮುಕ್ತಾಯ ಮಾಡಿದರೆ ಅವರನ್ನು ಆಧರಿಸಿ ಬದುಕಿದವರ ಬಾಳಿನಲ್ಲಿ ಅದೆಷ್ಟು ಆಟ ಆಡುತ್ತದೆ ಅಂದರೆ ಅದಕ್ಕಿಂತ ಸಾವೇ ಸುಂದರ ಅನ್ನಿಸುವಷ್ಟು. ಅಪ್ಪ ಬಿಟ್ಟು ಹೋದ ಜವಾಬ್ದಾರಿಗಳ ಪಟ್ಟಿ ದೊಡ್ಡದಿತ್ತು. ಆದಕ್ಕೆ ನಾನಗಲೇ ಮಾನಸಿಕವಾಗಿ ಸಿದ್ದನಿರಲಿಲ್ಲ. ಅಕ್ಕನಿಗೆ ಮದುವೆ ಆಗಿದ್ದರೂ ಅವಳ ಬಾಣಂತಿ, ತಂಗಿಯ ಮದುವೆ ಎಲ್ಲವೂ ನನ್ನ ಪಾಲಿಗೆ ಬಂತು. ಕೆಲಸವನ್ನೂ ಬಿಡಲಾಗದ ಅನಿವಾರ್ಯತೆಯಲ್ಲಿ ತಂಗಿಯನ್ನು ಅವಳ ಕಾಲೇಜ್ ಹಾಸ್ಟೇಲ್ ಗೆ ಸೇರಿಸಿ ಅಮ್ಮನನ್ನು ಬೆಂಗಳೂರಿಗೇ ಕರೆದುಕೊಂಡು ಬಂದೆ , ಒಂದು ಚಂದದ ಬಾಳು ನಡೆಸಿದ ಅಪ್ಪನ ಮನೆಗೆ ಬೀಗ ಜಡಿದು.  ಅಂದೇ ನಮ್ಮ ಮನೆಯಲ್ಲಿ ಧಾರಾವಾಹಿ ಶುರುವಾಯಿತು. ನಾನು ಬರೇ ನೋಡುತ್ತಾ ಕುಳಿತೆ!


ನವ್ಯ


ಹೌದು, ಎಷ್ಟು ಅಂತ ನೋಡ್ತಾರೋ ಆ ಹಾಳು ಧಾರಾವಾಹಿಗಳನ್ನು. ಸಂಜೆ ಆರು ಗಂಟೆಗೆ ಶುರು ಆದ್ರೆ ಟಿ.ವಿ‌.ಎಲ್ಲಾ ಇವರಿಗೇ ಆಯ್ತು. ಕೇಳಿ ಕೇಳಿ ಕಿವಿ ಚಿಟ್ಟು ಹಿಡಿದು ಹೋಗಿದೆ‌. ಮೊದಲೇ ಕಿವಿ ಕೇಳುದಿಲ್ಲ, ವಾಲ್ಯೂಮ್‌ ಕಮ್ಮಿ ಮಾಡೋದೇ ಇಲ್ಲ. ಬೆಳಿಗ್ಗೆಯಿಂದ ಮಗಳ , ಅಕ್ಕ ತಂಗಿಯರ ಫೋನ್. ಇವರೊಬ್ಬರೇನಾ ಮಕ್ಕಳನ್ನು ಇಷ್ಟ ಪಡೋದು? ಏನು ಇವರ ಮಗಳಿಗೆ ಇನ್ನೂ ಒಂದು ಒಗ್ಗರಣೆ ಹಾಕೋದೂ ಬರೋದಿಲ್ವಾ? ಅದನ್ನೂ ಫೋನ್ ಮಾಡಿಯೇ ಕೇಳೋದೇನು? ಇವರು ಅದಕ್ಕೆ ಹಾಗೇ ಹೀಗೇ ಅಂತ ಹೇಳೋದೇನು?. ಏನೂ ಕಳಿಸಿ ಕೊಟ್ಟೇ ಇಲ್ವಾ? ಮೈಯೆಲ್ಲಾ ಉರಿಯುತ್ತೆ. ಅವರ ಫೋನ್ ಬಂದಾಗ. ಅವಳ ಮಗುವಿಗೆ ಸಣ್ಣ ಶೀತ ಆದ್ರೂ ಇವರನ್ನ ಕೇಳೋದು...ಯಾಕೆ ಅಲ್ಲಿ ಯಾರೂ ಡಾಕ್ಟರ್ ಇಲ್ವಾ? ಇವರೇನೂ ಸ್ಪೆಷಲಿಷ್ಟಾ? ಹಾಳಾದೋರು. ಅಪರೂಪಕ್ಕೆ ಅಡುಗೆ ಮನೆ ಬಂದ್ರೆ ...ಅಬ್ಬಾ! ಕೊಂಪೆ ಮಾಡಿ ಹಾಕ್ತಾರೆ, ಸರಿ ಮಾಡ್ಲಿಕ್ಕೆ ನಂಗೆ ಇಡೀ ದಿನ ಬೇಕು. ಅದು ಹೇಗೆ ಇರ್ತಿದ್ರೋ ಊರಲ್ಲಿ?. ಇನ್ನೂ ಟೀಗೆ ಸ್ಪಲ್ಪ ಜಾಸ್ತಿ ಸಕ್ಕರೆ ಹಾಕಿದ್ರೆ ಅವರಿಗಾಗಲ್ಲ, ಪೂರಿ ಇಷ್ಟ ಅಂತ ಮಾಡಿದ್ರೆ ಎಣ್ಣೆ ಅಂತಾರೆ, ದಿನಾ ರಾಗಿ ಗಂಜಿನೇ ಬೇಕು. ಅಯ್ಯೋ ದೇವರೇ ಮಾವ ಯಾಕದ್ರೂ ಇಷ್ಟು ಬೇಗ ಹೋದ್ರೋ...ಸಾಕಾಗಿ ಹೋಯ್ತು. ಮೊನ್ನೆ ಟೀ ಸ್ವಲ್ಪ ಸಿಹಿ ಆದದ್ದಕ್ಕೆ '' ಇಷ್ಟು ಸಿಹಿಯಾ? ಕೊಲ್ತಿಯಾ..." ಅಂತ ಹೇಳಿದಾಗ ಎಲ್ಲಿತ್ತೋ ಸಿಟ್ಟು ಗೊತ್ತಿಲ್ಲ, ಹೇಳಿಯೇ ಬಿಟ್ಟೆ "ನೀವೇ ಮಾಡಿ ಕುಡಿಯಿರಿ ಇನ್ನು, ನನಗೂ ಸಾಕಾಗಿ ಹೋಯ್ತು ನಿಮ್ಮ ಚಾಕರಿ ಮಾಡಿ ಮಾಡಿ. ಅದು ಮಾಡಿದ್ರೆ ಆಗಲ್ಲ, ಇದು ಮಾಡಿದ್ರೆ ಆಗಲ್ಲ. ನಾನು ಹೇಗಿರೋದು ಮತ್ತೆ..." ಸುಮ್ನಿರ್ಬೇಕಲ್ಲ ಹೆಂಗಸು...ಪ್ರಾಯ ಇಷ್ಟಾದ್ರೂ ಹಟ ಬಿಡ್ಲಿಲ್ಲ....ಅಬ್ಭಾ..." ಆಯ್ತು...ಅದು ನೀನ್ ಹೇಳ್ಬೇಕಾಗಿಲ್ಲ. ಇಷ್ಟು ವರ್ಷ ಅಡುಗೆ ಮಾಡಿದ್ದೇನೆ...ನಿನ್ನ ಕೈಯಿಂದಲೇ ಕುಡಿಬೇಕು ಅಂತ ಏನೂ ಇಲ್ಲ" ಅಂತ ಹೇಳಿದಾಗ ಅಳುವೇ ಬಂತು. ನನ್ನನ್ನು ಯಾರೂ ಅರ್ಥ ಮಾಡಿಕೊಳ್ಳುವುದಿಲ್ಲ. ಇವರತ್ರ ಹೇಳಿದ್ರೆ ಸ್ಪಲ್ಪ ಅನುಸರಿಸಿಕೊಂಡು ಹೋಗು ಅಂತಾರೆ. ನಾನು ಮಾತ್ರವಾ ಅನುಸರಿಸೋದು? ಅವರು? ಎಷ್ಟು ಹಟ ಅವರಿಗೆ.ನನಗೂ ಆಗಲ್ಲ. ಸಾಕಾಗಿ ಹೋಯ್ತು, ಅವರ ಜೊತೆ ಇರ್ಲಿಕ್ಕೆ ನನಗಾಗಲ್ಲ.


ಮೋಹನ


ನಿಜ, ಮನೆಯಲ್ಲಿ ಇರಲಾಗುತ್ತಿಲ್ಲ. ಸ್ವಲ್ಪ ದಿನ ಎಲ್ಲಿಯಾದರೂ ದೂರ ಹೋಗಿ ಇದ್ದು ಬರಬೇಕು. ಎದ್ದ ನಂತರ ಮಲಗುವವರೆಗೂ ಈ ಹಾವು ಮುಂಗುಸಿ ಜಗಳದ ನಡುವೆ ಹೇಗಿರಲಿ? ಯಾರನ್ನೆಂದು ಸಮಾಧಾನಿಸಲಿ? ಯಾರ ಪರ ನಿಲ್ಲಲಿ?...ಇಲ್ಲಿ ಸೇರಿಗೆ ಸವಾ ಸೇರು...ಅದರ ನಡುವೆ ಮಂಜುಗಡ್ಡೆಯಂತಹ ನಾನು.ತಲೆ ಮೇಲೆ ತಿರುಗುವ ಫ್ಯಾನಿನ ಗಾಳಿ ಇದ್ದರೂ ಯಾಕೋ ತಲೆ ನೋವು ಕಮ್ಮಿಯಾಗುತ್ತಿಲ್ಲ.ಮನಸ್ಸು ಗೊಂದಲದ ಗೂಡಾಗಿ ತುಮುಲಗಳ ನದಿಯೇ ಹರಿಯುವಾಗ ಸಮಾಧಾನದ ಮಾತೇ ಇಲ್ಲ.ಅಡುಗೆ ಮನೆಯಲ್ಲಿಯೂ ಸದಾ ಶಾಂತವಾಗಿರುತ್ತಿದ್ದ ಪಾತ್ರೆಗಳು ಇತ್ತೀಚೆಗೆ ಬಹಳ ಸದ್ದು ಮಾಡುತ್ತಿವೆ.ಕೆಲಸ ಮಾಡುವ ಕೈಗಳಲ್ಲಿ ನಿನಾದಗೈಯುತ್ತಿದ್ದ ಬಳೆಗಳೂ ವಿಚಲಿತವಾಗಿದೆಯೋ ಅಥವಾ ನನ್ನ ಭ್ರಮೆಯೋ ಗೊತ್ತಾಗುತ್ತಿಲ್ಲ. ನೂರು ಜುಟ್ಟನ್ನಾದ್ರೂ ಒಟ್ಟಿಗೆ ಸೇರಿಸಬಹುದಂತೆ ಆದರೆ ಎರಡು ಜಡೆಯನ್ನಲ್ಲ ಅಂತ ಯಾರೋ ಅನುಭವಸ್ಥರೇ ಹೇಳಿರಬೇಕು. ಇಬ್ಬರೂ ಕೆಟ್ಟವರೇನಲ್ಲ‌. ಬೇರೆ ಬೇರೆಯಾಗಿ ಇದ್ದಾಗ ಅದೆಷ್ಟು ಅಕ್ಕರೆ ಪ್ರೀತಿ ನನ್ನ ಮೇಲೆ. ಎಷ್ಟು ಅದೃಷ್ಟ ಮಾಡಿದ್ದೇನೆ ಇಂತಹ ಸಂಸಾರವನ್ನು ಪಡೆಯಲಿಕ್ಕೆ ಅಂತ ಯಾವತ್ತೂ ಅಂದುಕೊಳ್ಳುತ್ತಿದ್ದೆ. ಆದರೆ ಈಗ ಏನಾಗಿ ಹೋಯ್ತು?.

ಹತ್ತಿರವಿದ್ದೂ ದೂರ ನಿಲ್ಲುವೆವು
ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆಯೆಂಬುದು
ನಾಕು ದಿನದ ಈ ಬದುಕಿನಲಿ...

ಸುಮ್ಮನೆ ಹಾಡಿಕೊಳ್ಳುತ್ತಿದ್ದ ಶಿವರುದ್ರಪ್ಪನವರ ಈ ಕವಿತೆಯ ಅರ್ಥ ಈಗೀಗ ಸ್ಪಷ್ಟವಾಗುತ್ತಿದೆ.ಹೊಂದಾಣಿಕೆ ಹೇಳಲಿಕ್ಕೆ ಮಾತ್ರ, ಆಚರಣೆಗಲ್ಲ ಎಂಬಂತಾಗಿದೆ. ಹೆಣ್ಣಿಗೆ ಹಠ ಇರಬಾರದು ಗಂಡಿಗೆ ಚಟ ಇರಬಾರದಂತೆ. ಹಾಗಾದಾಗ ಸಂಸಾರ ಬೀದಿಗೆ ಬರ್ತದೆ.ಇಲ್ಲಿ ಇಬ್ಬರೂ ತಮ್ಮ ತಮ್ಮ ಹಟ ಸಾಧನೆ ಮಾಡಿದ್ರೆ ನಾನೇನು ಮಾಡಲಿ? ಎಷ್ಟೋ ಸಲ ಅನಿಸಿದ್ದಿದೆ, ಒಳ್ಳೆ ತುತ್ತಾ ಮುತ್ತಾ ಫಿಲ್ಮ್ ನ ರಮೇಶ್ ತರಹ ಆಗಿದೆ ನನ್ನ ಸ್ಥಿತಿ. ಯಾವ ಕಡೆ ಎಳೆದರೂ ತುಂಡಾಗುವುದು ನಾನೇ ಕಟ್ಟಿದ ಗೂಡು.


ನವ್ಯ


ಹೋ...ಇನ್ನೇನು ಉಳಿದಿದೆ ತುಂಡಾಗಲು. 'ನೀನೆಲ್ಲಿ ಗಂಟು ಬಿದ್ದಿಯ ನನ್ನ ಮಗನಿಗೆ, ಮನೆಯೇ ಹಾಳಾಗಿ ಹೋಯ್ತು. ಏನ್ ಮಾಡಿದ್ರೂ ಅಗೋದಿಲ್ಲ ನಿಂಗೆ. ಹೀಗೇ ಇರೋದಿಲ್ಲ. ನಿನಗೂ ವಯಸ್ಸಾಗ್ತದೆ. ನಿನ್ನ ಜೊತೆ ಇರೋದಕ್ಕಿಂತ ಊರಲ್ಲಿ ಎರಡು ಮನೆಯಲ್ಲಿ ಕೆಲಸ ಮಾಡಿಕೊಂಡು ಇರೋದು ಎಷ್ಟೋ ಮೇಲು. ಮರ್ಯಾದೆಯಾದ್ರೂ ಉಳಿತದೆ..." ಹೀಗೆ ಹೇಳಿದ್ಳಲ್ಲ ಆ ಮುದುಕಿ. ಎಷ್ಟು ಸೊಕ್ಕು ಅವಳಿಗೆ. ಪ್ರಾಯದವರಂತೆ, ಗೌರವ ಕೊಡ್ಬೇಕಂತೆ. ಹಾಗೇ ಇರ್ಬೇಕು, ಯಾಕೆ ಎಲ್ಲದ್ರಲ್ಲಿ ಮೂಗು ತೂರಿಸೋದು? ಮತ್ತೆ ಇವರ ಜೊತೆ ಇರೋ ಸುಖ ಕೊಡು ಅಂತ ನಾನೇನು ದಿನಾ ದೇವರಲ್ಲಿ ಬೇಡಿಕೊಂಡ್ನಾ? ಹೋದ್ರೆ ಹೋಗ್ಲಿ. ಯಾರಿಗೆ ಬ್ಲಾಕ್ ಮೇಲ್ ಮಾಡೋದು ಇವರು? ಹೋಗೋದಿದ್ರೆ ಯಾವತ್ತೋ ಹೋಗ್ತಿದ್ರು.ವರ್ಷ ಆಯ್ತು ಮಾವ ಸತ್ತು ಹೋಗಿ.ಎಲ್ಲಾ ನಾಟಕ ಇವರದ್ದು. ಮೋಹನನಿಗೆ ಹೇಳಿದ್ರೂ ಅರ್ಥ ಆಗುದಿಲ್ಲ. ಅಮ್ಮ ಅಂದ್ರೆ ಆಯ್ತು ಕರಗಿ ಹೋಗ್ತನೆ. ಇವರ ನಾಟಕ ಅವರಿಗೆ ಅರ್ಥ ಆಗೋದೇ ಇಲ್ಲ. ಅವರು ಆಫೀಸಿಗೆ ಹೋದ ನಂತರ ನೋಡ್ಬೇಕು ಇವರ ಅವತಾರ.ನಾನೂ ನೋಡ್ತೇನೆ ಎಲ್ಲಿ ಹೋಗ್ತಾರೆ ಅಂತ.


ಮೋಹನ


"ಯಾಕೋ ಊರಿಗೆ ಹೋಗ್ಬೇಕು ಅಂತ ಅನಿಸ್ತಿದೆ ಮೋಹನಾ, ಎಷ್ಟೆಲ್ಲಾ ತೋಟ ಮಾಡಿ ಇಟ್ಟಿದ್ದಾರೆ ನಿನ್ನ ತಂದೆಯವರು. ಸರಿಯಾದ ಆರೈಕೆ ಇಲ್ಲಾದೇ ಎಲ್ಲಾ ಹಾಳಾಗಿ ಹೋಗ್ತಾ ಇದೆ. ಯಾಕೋ ಈಗ ಆ ಗಿಡಗಳ ಮೇಲೆ ಬಹಳ ಮಮತೆ ಬಂದಿದೆ. ಅದಕ್ಕೆ ಈ ಬೇಸಿಗೆಯಲಿ ನೀರು ಹಾಕದಿದ್ರೆ ಸತ್ತೇ ಹೋಗ್ತವೆ" ಅಂತ ಅಮ್ಮ ಹೇಳುವಾಗ ಎಂದೂ ತೋಟದ ಕಡೆ ತಲೆ ಹಾಕದ ಅಮ್ಮ ಇಂದು ಈ ಮಾತಾಡ್ಬೇಕಾದ್ರೆ ಕಾರಣ ಏನೂ ಅಂತ ಗೊತ್ತಾಗ್ಲಿಲ್ಲ. ಯಾವಾಗ ಬರ್ತಿಯಮ್ಮಾ? ಕೇಳಿದ್ದಕ್ಕೆ ನಿಂಗೊಂದು ಮಗು ಆಗ್ಲಿ ಅನ್ನುವ ಅಮ್ಮನನ್ನು ಬೇಡಮ್ಮ, ಇಲ್ಲೇ ಇರು , ಅಲ್ಲಿ ಯಾರೂ ಇಲ್ಲ ನಿನ್ನ ನೋಡ್ಕೊಳ್ಳಿಕ್ಕೆ , ಅಂತ ಹೇಳಬೇಕು ಅಂದ್ರೂ ಮಾತು ಗಂಟಲಲ್ಲೇ ಉಳಿದು ಬಿಡುತ್ತಿದೆ.
ಬಾಗಿಲು ಸ್ವಲ್ಪ ತೆರೆಯಮ್ಮ
ಹೊರಗೆ ಹೋಗ್ಬೆಕ್ ನನಗೆ
ಒಳಗೆ ಕೂತದ್ದ್ ಸಾಕಮ್ಮ
ಬೀದಿ ನೋಡ್ಬೇಕ್ ನನಗೆ

ವರುಷ ಒಂದು ಅಯ್ತಮ್ಮ
ಅಂಗಿ ಮಾತ್ರವೇ ಸಾಕೇ?
ನಡೆಯಲು ನನಗೆ ಗೊತ್ತಮ್ಮ
ಎತ್ತಿಕೊಳುವುದಿನ್ಯಾಕೆ?

ಹಲ್ಲು ಎಂಟು ಬಂದಿದೆಯಮ್ಮ
ರುಬ್ಬಿ ಕೊಡುವುದು ಏಕೆ
ಚಾಪಲಿ ಮೂತ್ರ ಮಾಡಲ್ಲಮ್ಮ
ಡೈಪರ್ ಹಾಕೋದ್ಯಾಕೆ?

ಅಪ್ಪನು ಯಾಕೆ ಗದರುವುದಮ್ಮ
ಸುಮ್ಮನೆ ಅಳುವುದೇ ಇಲ್ಲ
ನಿನ್ನ ಮುದ್ದು ಬಂಗಾರಮ್ಮ
ತಂಟೆಯ ತುಂಟನು ಅಲ್ಲ.

Wednesday 24 May 2017

ಹೀಗೆ ನೋಡುವೆಯೇಕೆ
ಬರಿದೆ ಮೌನದ ಒಳಗೆ
ಸವಿ ನುಡಿದು ಹಗುರಾಗು ಚೆಲ್ಲಿ ನಗೆಯ
ನಿನ್ನೆ ನಾಳೆಯ ಮೀರಿ
ಈ ಕ್ಷಣದಿ ನಿನ ಸೇರಿ
ನಿನ್ನೊಲವ ಕುಸುಮದಿ ಹೀರಿ ಮಧುವ

ಅರಳದಿರೆ ಹೂಮೊಗ್ಗು
ಇನ್ನೆಲ್ಲಿ ಸಿಹಿ ಹಿಗ್ಗು
ಗಂಧ ತೀಡಿದ ಸದ್ದು ಎಲ್ಲ ಮಣ್ಣು
ದಳದಳಗಳಲಿ ನಿಂತ
ಪನ್ನೀರು ನೀರಂತ
ಕಾಣುವ ಭಾವಕ್ಕೆ ಅದೆಲ್ಲಿ ಕಣ್ಣು?

ಬಾಳಿನಾಗಸದಲ್ಲಿ
ಚಿಕ್ಕೆ ಮಿಂಚುತಲಿರಲಿ
ಹಬ್ಬಿ ತೂಗಲಿ ಬಳ್ಳಿ ಅಂಗಳದಲಿ
ನೀನಿರೆ ಜೊತೆ ನನ್ನ
ಹೂ ನಗೆಯ ಮೊಗ ಚೆನ್ನ
ಚೆಲುವೆಲ್ಲಾ ಜಗದಲ್ಲಿ ಮೇಳೈಸಲಿ

Saturday 29 April 2017

ರಾಮನ ಪಟ್ಟ ತಿಳಿದ ಮಂಥರೆ
ಸಂಚನು ಹೂಡಿದಳು
ಭರತ ಪ್ರೇಮದ ಮುದುಕಿಯು ಬಂದು
ಕಿವಿಯನು ಹಿಂಡಿದಳು
ಕೈಕೆಯ ಬುದ್ದಿಯ ಕೆಡಿಸಿದಳು.

ತನ್ನ ಕಂದನಿಗೆ ರಾಜ್ಯ ತಪ್ಪಿತೆಂದು
ಕೈಕೆಯು ಮರುಗಿದಳು
ಎಂದೋ ಗಳಿಸಿದ ಮೂರು ವರಗಳ
ರಾಜನ ಕೇಳಿದಳು
ಅಯೋಧ್ಯೆಯು ಭರತಗೆ ಹೇಳಿದಳು.

ತಂದೆ ಮಾತನು ಕೇಳಿದ ರಾಮ
ಕಾಡಿಗೆ ಹೊರಟನು
ನಿನ್ನ ಬಿಟ್ಟು ಇರಲೊಲ್ಲೆ ಎಂದು
ಸೀತೆಯು ಮರುಗಿದಳು
ರಾಮನ ಹಿಂದಯೆ ತೆರಳಿದಳು.

ಪುತ್ರ ಶೋಕದಿ ದಶರಥ ರಾಜ
ಸಾವಿಗೆ ಶರಣಾದ
ತನ್ನ ತಾಯಿಯ ಕೀಳು ಬುದ್ದಿಗೆ
ಭರತನು ನಾಚಿದನು
ಅಣ್ಣನ ಕರೆಯಲು ಓಡಿದನು.

ಪರಿಪರಿ ಬೇಡಿಯೂ ಒಲ್ಲದ ಅಣ್ಣನ
ಪಾದುಕೆ ಕೇಳಿದನು
ರಾಮನ ಹೆಸರಲಿ ರಾಜ್ಯವ ನಡೆಸುವೆ
ಪಾದುಕೆ ಮೇಲಿಟ್ಟು
ನಾನು ನಾರುಮುಡಿಯುಟ್ಟು.

ಚಿನ್ನದ ಜಿಂಕೆಯ ನೋಡಿದ ಸೀತೆ
ಆಸೆಯ ಪಟ್ಟಳು
ಮಾಯಾ ಜಿಂಕೆಯ ಮೋಹವು ಕವಿದು
ರಾಮನ ಬೇಡಿದಳು
ಬಿಡದೇ ಗಂಡನ ಕಾಡಿದಳು.

ಯಾರು ಕರೆದರೂ ಹೊಸ್ತಿಲಿನಾಚೆಗೆ
ಎಂದಿಗು ಬಾರದಿರಿ
ಅಣ್ಣನ ಕೂಗಿಗೆ ಹೊರಡುತ ಲಕ್ಷ್ಮಣ
ಸೀತೆಗೆ ಹೇಳಿದನು
ಲಕ್ಷ್ಮಣ ರೇಖೆಯ ಎಳೆದನು.

ಸಮಯವ ನೋಡಿ ದಶಕಂಠ ರಾವಣ
ಭಿಕ್ಷೆಗೆ ಬಂದನು
ಭೈರಾಗಿ ರೂಪದ ಠಕ್ಕನ ಅರಿಯದೆ
ಭಿಕ್ಷೆಯ ಹಾಕಿದಳು
ಸೀತೆ ರೇಖೆಯ ದಾಟಿದಳು.

ರಾವಣ ಕಂಡು ಬೆಚ್ಚಿದ ಸೀತೆ
ರಾಮನ ಕೂಗಿದಳು
ಮರುಳ ರಾವಣ ಸೀತೆಯ ಹೊತ್ತು
ಲಂಕೆಗೆ ಹಾರಿದನು
ರಾವಣ ದೇವಿಯ ಕದ್ದನು.

ಕಾಂತೆಯ ಕಾಣದೇ ಮರುಗಿದ ರಾಮ
ಹುಡುಕುತ ಬಳಲಿದನು
ಗರುಡನಿಂದ ವಿಷಯವ ತಿಳಿದು
ಕೋಪದಿ ಕೆರಳಿದನು
ರಾಮ ಲಂಕೆಗೆ ಹೊರಟನು.

ವಾನರರೊಂದಿಗೆ ಕೂಡಿದ ರಾಮ
ಲಂಕೆಯ ಮುತ್ತಿದನು
ದೇವನ ಶಕ್ತಿಯ ಎದುರಿಸಲಾಗದೆ
ರಾವಣ ಮಡಿದನು
ರಾಮನು ಲಂಕೆಯ ಗೆದ್ದನು.

ಸೀತೆಯ ಜೊತೆಗೆ ರಾಮನ ಕಂಡು
ಸಂಭ್ರಮ ಜನರಲ್ಲಿ
ಹಣತೆ ಹಚ್ಚಿ ಹೊಸ ಬೆಳಕನು ಚೆಲ್ಲಿ
ಹಬ್ಬವ ಮಾಡಿದರು
ಸೀತಾರಾಮರು ಹರಸಿದರು

Wednesday 26 April 2017

ಗಾಳಿ ಬೆಳಕೆಂದರದು
ಬರಿಯ ಬೌತಿಕ ವಸ್ತುಗಳಲ್ಲ,
ಜೀವಜಾಲ ಹೆಣೆದು ಸದಾ
ಚಲನೆಯಲ್ಲಿ ಇರಿಸುವುದೆಂದರದು
ಸುಲಭದ ಮಾತಲ್ಲ.
ಮನೆಯ ಗೋಡೆಗಳೂ
ಪಾಚಿ ಕಟ್ಟುತ್ತವೆ,
ಹಬೆಯಾಡದಿದ್ದರೆ;
ಹವೆ ತಿರುಗದಿದ್ದರೆ.

ನನ್ನ ಪ್ರತೀ ಮಾತಿಗೂ
ನನಗೇ ಗೊತ್ತಿರದ,
ಅರ್ಥಗಳನ್ನು ಹೊಳೆಸುವ
ನೀನು, ಅಂದುಕೊಂಡಷ್ಟು ದಡ್ಡನಲ್ಲ;
ಹಾಗಂತ ಅರಿತುಕೊಳ್ಳುವಷ್ಟು
ಬುದ್ದಿವಂತನೂ ಅಲ್ಲ.
ಗೊಂದಲಗಳಲ್ಲಿ ಮನಸ್ಸುಗಳು
ಜಡ್ಡುಗಟ್ಟುವಾಗ,
ಸೂಕ್ಷ್ಮತೆ ಕಳೆದು ಸಂಕೀರ್ಣವಾಗಲು
ಹೆಚ್ಚು ಸಮಯ ಬೇಕಾಗಿಲ್ಲ ಬಿಡು.

ಸಂಬಂಧಗಳು;
ತನ್ನನ್ನು ತಾನೇ
ನವೀಕರಿಸದೇ?

ಬಂಧಗಳು ಹೊಳೆಯುತ್ತಿರಲು
ಮನೆಮನಗಳಲ್ಲಿ ಹಬೆಯಾಡಬೇಕು,
ಬೆಂಕಿಯೋ, ಹಣತೆಯೋ
ಅನ್ನುವುದು ದೊಡ್ಡ ಮಾತಲ್ಲ.
ಆದರೆ,
ಸಂಬಂಧಗಳ ಉಸಿರಿನ ಹವಿಸ್ಸಿಗೆ,
ಪ್ರತೀ ಮನೆಯಲ್ಲೂ ಹೆಣ್ಣು
ಸಮೀಧೆಯಂತೆ ಉರಿಯುತ್ತಿರಬೇಕು
ಅನ್ನುವುದೊಂದೇ ನಿತ್ಯ ಸತ್ಯ.

ಯಾವುದನ್ನು ಸೋಸಲಿ?
ಚಹ ತಣ್ಣಗಾದಷ್ಟೂ;
ಮನಗಳು ಉರಿಯುತ್ತವೆ.
ಪ್ರಾರ್ಥನಾ ಗೀತೆ.

ಶತಮಾನದ ನೋವುಗಳ
ಮೆಟ್ಟಿ ನಿಂತ ಚಿಲುಮೆಯೆ |
ಮನುಕುಲದ ಕೊಳೆಯ ಕಳೆಯೆ
ಉದ್ಧರಿಸಿದ ಒಲುಮೆಯೆ ||

ವಂದನೆ ನಿನಗೆ ವಂದನೆ
ಓ ಭೀಮರಾವ್ ನಿನಗೆ ವಂದನೆ (೧)

ಜಾತಿಮತದ ಕೆಸರಿನಿಂದ
ಎದ್ದು ನಿಂತ ಕಮಲವೆ |
ಮೇಲುಕೀಳು ಮುಳ್ಳ ಕೆಡವಿ
ಅರಳಿ ನಿಂತ ಕುಸುಮವೆ ||

ವಂದನೆ ನಿನಗೆ ವಂದನೆ
ಸಂವಿಧಾನ ಶಿಲ್ಪಿಯೇ ವಂದನೆ (೨)

ಸ್ವಾಭಿಮಾನ ಕಿಚ್ಚು ಹರಿಸಿ
ಕ್ರಾಂತಿ ತಂದ ಚೇತನವೆ |
ವಿದ್ಯೆಯ ಧೀಃಶಕ್ತಿ ಅರಿತು
ಭಾಷ್ಯ ಬರೆದ ಜ್ಯೋತಿಯೆ ||

ವಂದನೆ ನಿನಗೆ ವಂದನೆ
ಓ ಅಂಬೇಡ್ಕರ್ ನಿನಗೆ ವಂದನೆ  (೩).
ಮದುವೆ ಆಗಿ

"ಯಾಕೆ ಮದುವೆ ಆಗ್ತೀರಿ,ನಿಮ್ಗೆ ತಲೆ ಸರಿ ಇಲ್ವಾ ಆರಾಮವಾಗಿ ತಿರ್ಗಾಡೋದು ಬಿಟ್ಟು, ಅಲ್ಲಾ....ನಮ್ನನ್ನು ನೋಡಿ ಆದ್ರೂ ತಿಳ್ಕೋಬಾರ್ದಾ?.... "  ಮದುವೆ ಆಗೋ ಕಾಲಕ್ಕೆ ’ಅ೦ಕಲ್’ ಗಳ  ಇಂತಹ ಮಾತುಗಳನ್ನೆಲ್ಲಾ ದಿನೇ ದಿನೇ ಕೇಳಿ ಭಯದಿಂದ ನಡುಗಿ ಮದುವೆಯಾಗಿರುವ ನನ್ನ ಅಂತರಂಗದ ಗೆಳೆಯ, ಚಡ್ಡೀ ದೋಸ್ತ್ ಕೀರ್ತಿಯನ್ನ ಕೇಳಿದ್ದೆ..."ಹೇಗೆ ಮದುವೆ ಆಗಬಹುದಾ? ಎಲ್ಲರೂ ಹೆದರಿಸ್ತಾ ಇದ್ದಾರೆ..."  ಅ೦ತ ಮನದ ದುಗುಡವನ್ನು ಮು೦ದಿಟ್ಟರೆ, ಅವನೋ ..."ಮದುವೆ ಆಗ್ಲೇಬೇಕು ರವಿ, ಬರೀ ಎ೦ಜಾಯ್ಮೆ೦ಟ್ ಒ೦ದೇ ಲೈಫ಼್ ಅಲ್ಲ" ಅ೦ದಿದ್ದ...!  ಮತ್ತೆ ಗೊ೦ದಲಕ್ಕೆ ಬಿದ್ದರೂ ಕಾಣದಿಹ ದಾರಿಯಲಿ ಸೊಗಸಿರಬಹುದು ಎ೦ಬ ಸುಖದ ರಮ್ಯ ಕಲ್ಪನೆಗೆ ಮುದಗೊ೦ಡು ಮದುವೆ ಆಗಿಯೇ ನೋಡುವ ಅಂತ ಮುಂದಡಿ ಇಟ್ಟೆ. ತಲ ಕಾಣದ ಬಾವಿಯಲ್ಲಿ ಮುಳುಗು ಹಾಕಿ ಬಿದ್ದು ಮುಳುಗಿದ ಕೊಡಪಾನಗಳನ್ನು ತಂದು ಕೊಟ್ಟು ಹಳ್ಳಿಯ ಹೆಂಗಸರ ಹೀರೋ ಆದವನು, ಗೋವಾದ ಬೀಚ್ ನಲ್ಲಿ ಪ್ಯಾರಾಗ್ಲೈಡಿಂಗ್ ಮಾಡಿದವನು, ದಾಂಡೇಲಿಯ ಕಾಳೀನದಿಯಲ್ಲಿ ರಾಫ್ಟಿಂಗ್ .... ಎಂತೆಂತಹ ಸಾಹಸಗಳನ್ನು ಮಾಡಿದವನು, ಯಕಃಶ್ಶಿತ್ ಮದುವೆಗೆ ಹೆದರೋದಾ?  ಏನಂದಾರು ಜನ ಅಂತ ನನಗೆ ನಾನೇ ಧೈರ್ಯ, ಸಾಂತ್ವನ ಎರಡನ್ನೂ ತಂದುಕೊಂಡಿದ್ದೆ.

ಚಂದನದ ಗೊಂಬೆ ಪಿಕ್ಚರ್ ನ ಲಕ್ಷ್ಮಿಯನ್ನು ನೋಡಿ ನಾನು ಮದುವೆಯಾಗುವ ಹುಡುಗಿಯೂ ಹೀಗೆಯೇ ಇರಬೇಕು ಅಂತ ಯೋಚನೆ ಮಾಡಿದ್ದೆ. ಆಹಾ....ಎಷ್ಟು ಚಂದ ನಾಚ್ಕೊಳ್ತಾಳೆ, ರೀ...ರೀ..ರೀ...ಅಂತ ಗಂಡನನ್ನು ಕರೆಯುವಾಗ ಮೈಮನಗಳಲ್ಲಿ ಅದೆಂತಹ ಪುಳಕ, ಕಚಗುಳಿಯಿಟ್ಟಂತಾಗಿ ನನ್ನ ಮನದಲ್ಲಿ ಅವಳ ರೂಪವೇ ಅಚ್ಚೊತ್ತಂತಾಗಿ ಯಾವ ಹುಡುಗಿಯೂ ಒಪ್ಪಿಗೆಯಾಗುತ್ತಿರಲಿಲ್ಲ. ಪ್ರತೀ ಸಲ ಹುಡುಗಿ ನೋಡೋಕೆ ನನ್ನೊಂದಿಗೆ ಗೆಳೆಯ ಮಂಜನನ್ನು ಕರೆದೊಯ್ಯುತ್ತದ್ದೆ. ಅವನೋ ಗಡದ್ದಾಗಿ ಉಪ್ಪಿಟ್ಟು ಕಾಪಿಯೋ, ಇಡ್ಲಿ ಸಂಬಾರೋ ತಿನ್ನುವುದು ಬಿಟ್ರೆ ಹುಡುಗಿ ಬಗ್ಗೆ ನೋ ಕಮೆಂಟ್ಸ್...ಹುಡುಗಿ ಬಗ್ಗೆ ಕೇಳಿದ್ರೆ, "ಊಟ ಮಾಡೋನಿಗೆ ಎಲೆಯಲ್ಲಿ ಏನನ್ನು ಬಡಿಸ್ಕೊಳ್ಬೇಕು ಅನ್ನೋದು ಗೊತ್ತಿರ್ ಬೇಕು...ನನ್ನ ಕೇಳಿದ್ರೆ....ನಾನು ಬಂದದ್ದು ತಿಂಡಿ ತಿನ್ಲಿಕ್ಕೆ..." ಅಂತ ದೇಶಾವರಿ ನಗೆ ನಗುತ್ತಿದ್ದ ಬಡ್ಡೀ ಮಗ. ಸರಿ, ಯಾರ್ಯಾರನ್ನು ಕೇಳಿದ್ರೆ ಉಪ್ಯೋಗ್ ಇಲ್ಲ. ನಾನೇ ನಿರ್ಧಾರ ತಗೋಳ್ಬೇಕು ಅನ್ನೋ ಸರಿಯಾದ ನಿರ್ಧಾರ ಬಂದು, ಇನ್ನು ನೋಡಿದ್ರೆ ಒಂದೆರಡು ಹುಡುಗಿ ಮಾತ್ರ. ಅದಕ್ಕೆ ಪುಷ್ಟಿ ನೀಡುವ ಹಾಗೇ ಗೆಳೆಯನ ಮುತ್ತುಗಳು,    " ಮತ್ಯೇನೋ...ಇನ್ನೂ ಹಳೇ ಲಕ್ಷ್ಮೀಯನ್ನು ತಬ್ಕೊಂಡಿದ್ದಿಯಾ.‌‌‌..ಈಗ ಕಾಲ ಅಪ್ಡೇಟ್ ಆಗಿದೆ. ನೀನಿನ್ನು ಅಲ್ಲೇ ಇದ್ರೆ ನಿಂಗೆ ಲಕ್ಷ್ಮೀ ಏಜ್ ನವಳೇ ಸಿಗ್ತಾಳೆ. ಯಾವುದೋ ದಿವ್ಯ, ಭವ್ಯ, ಐಶ್ವರ್ಯನನ್ನು ಒಪ್ಕೊಳ್ಳೋದು ಬಿಟ್ಟು". ನನಗೂ ಸರಿ ಅನಿಸಿತು.

"ಹುಡುಗಿ ಎತ್ರ ಅಷ್ಟಿಲ್ಲದಿದ್ರೂ ಲಕ್ಷಣ ಇದ್ದಾಳೆ, ಕೂದ್ಳು ಉದ್ದ ಇಲ್ಲದಿದ್ರೂ ಮಲ್ಲಿಗೆ ಮುಡಿಬಹುದು ಕ್ಲಿಪ್ ಹಾಕಿ....." ಅಂತ ಮೊದಲ ಬಾರಿ ಏನೇನೋ ಕನ್ಫೂಸಿಂಗ್ ಕಮೆಂಟ್ಸ್ ಕೊಟ್ಟು ತಿನ್ನುವುದರಲ್ಲಿ ಮಗ್ನನಾದ ಮಂಜ.ಮೋಹದ ಮಾಯೆ ಕವಿಯುವಾಗ ಏನೂ ಕಾಣುದಿಲ್ವಂತೆ, ಬಹುಶಃ ಆಗ ತಾನೇ ಅರಳಿದ ಪ್ರೆಶ್ ಹೂಗಳಿಂದ ಕಟ್ಟಿದ ಬಾಣ ಬಿಟ್ಟಿರಬೇಕು ಮನ್ಮಥ ನನ್ನ ಮೇಲೆ. ಯಾವ ಮಾತುಗಳೂ, ಯಾವ ಲಕ್ಷ್ಮಿಯ ಫಿಗರೂ ನನ್ನ ಮುಂದೆ ಬಾರದೇ ಧೊಪ್ ಎಂದು ಅವಳ ಮೋಹ ಪಾಶದಲ್ಲಿ ಬಿದ್ದು ಬಿಟ್ಟು ಯಾವಾಗ ಓಕೆ ಅಂದೆನೋ ನನಗೇ ಗೊತ್ತಿಲ್ಲ.ಸರಿ ಮದುವೆ ಆಯ್ತು ಒಂದು 'ಶುಭ' ಘಳಿಗೆಯಲ್ಲಿ.

ಮೊದಲ ರಾತ್ರಿ, ಹನಿಮೂನ್ ಎ೦ಬ ಬ್ಯಾಚುಲರ್ ಮನಸಿನ ಸುಖದ ಬೆಚ್ಚನೆಯ ಮಧುರ ಕನಸುಗಳೆಲ್ಲಾ ಅವಳ ಕೈಯ ಮದರ೦ಗಿಯ ಬಣ್ಣ ಕಳಚುವ ಮೊದಲೇ ತನ್ನ ನಿಜ ಸ್ವರೂಪವನ್ನು ತೋರಿಸಿಬಿಟ್ಟಿತ್ತು. ಮದುವೆ ದಿನ ಉಟ್ಟದ್ದೇ ಕೊನೆ, ಆ ಸೀರೆಯನ್ನು ಕಪಾಟಿನ ಒಳಗೆಲ್ಲೋ, ಸುಲಭದಲ್ಲಿ ಕೈಗೆ ಸಿಗದ ಹಾಗೆ ಎಸೆದು ಬಣ್ಣಬಣ್ಣದ ಜೀನ್ಸ್ ಪ್ಯಾಂಟ್ ಟೀಶರ್ಟ್ ಗಳಿಂದ ತನ್ನ ವಾರ್ಡ್‌ರೋಬ್‌ ನ್ನು ಸಿಂಗರಿಸಿದ್ಳು. ಮಾರ್ಕೆಟ್ ಹೋದ್ರೂ ಅದೇ, ದೇವಸ್ಥಾನ ಹೋದ್ರೂ ಅದೇ. ನೋಡಿ ನೋಡಿ 'ಸಿಟ್ಟು' ಬಂದು "ಸೀರೆ ಇಲ್ವಾ ಉಡ್ಲಿಕ್ಕೆ..." ಅಂದ್ರೆ ಇಲ್ಲ ಅಂದ್ಳು. "ಮತ್ತೆ ಹುಡುಗಿ ನೋಡ್ಲಿಕ್ಕೆ ಬಂದಾಗ ಅಷ್ಟು ಚಂದದ ಸೀರೆ ಉಡ್ಕೊಂಡಿದ್ದಿ..?" ಕೇಳಿದ್ರೆ " ಅದಾ, ನನ್ನ ಅಕ್ಕನ ಸೀರೆ ಅದು, ಹೇಗಾದ್ರೂ ಮಾಡಿ ನಿಮ್ಮನ್ನು ಯಾಮಾರಿಸ್ಬೇಕಲ್ಲಾ....ಅದಕ್ಕೆ ಬ್ಯೂಟಿ ಪಾರ್ಲರ್ ನವಳನ್ನು ಕರೆಸಿ ಅವಳಿಗೆ ಇನ್ನೂರ್ ರೂಪಾಯಿ ಕೊಟ್ಟು ಉಡ್ಸಿದ್ದು. ಈಗ್ಲೂ ಸೀರೆ ಉಡ್ಬೇಕು ಅಂದ್ರೆ ದಿನ ಅವಳಿಗೆ ಇನ್ನೂರು ರೂಪಾಯಿ ಕೊಡ್ಬೇಕಾಗ್ತದೆ....ನಂಗೆ ಸೀರೆ ಉಡೋಕೆ ಬರಲ್ಲ " ಅಂತ ರಾಗವಾಗಿ ಹೇಳ್ಬಿಟ್ಳು. ಆದ್ರೂ ಪಟ್ಟು ಬಿಡದೇ ನೀನು ಉಡ್ಳೇ ಬೇಕು ಅಂತ ಒತ್ತಾಯ ಮಾಡಿದಾಗ, " ಇದೇನ್ರೀ ನಿಮ್ಮ ಗೋಳು, ದಿನಾ ಸೀರೆ ಉಡ್ಕೊಂಡು ಮಲ್ಲಿಗೆ ಮುಡಿಲಿಕ್ಕೆ ನನ್ನ ನೆಂಟ್ರ ಮದುವೆ ಇದ್ಯಾ? ....ನನ್ಗೊತ್ತು ನಿಮ್ಮ ಚಂದನದ ಗೊಂಬೆಯ ಬಗ್ಗೆ . ನಿಮ್ಮ ಫ್ರೆಂಡ್ ಮಂಜ ಎಲ್ಲಾ ಹೇಳಿದ...ಅದೊಂದೇ ಅಲ್ಲ ಅವಳು ಪಿಕ್ಚರ್ ಮಾಡಿರೋದು, ಜೂಲಿ ಕೂಡಾ ಮಾಡಿದ್ದಾಳೆ. ಅದು ನೋಡಿ, ಈಗಿನ ಕಾಲಕ್ಕೆ ಸರಿಯಾಗಿದೆ. ಅದರಲ್ಲಿರೋದೂ ಲಕ್ಷ್ಮೀನೇ.... ಹಳ್ಳಿ ಹೈದ...ಹ್ಹ ಹ್ಹ ..." ಅಂತ ನಕ್ಕಾಗ ಮಂಜ ಸಿಕ್ರೆ ಇಲ್ಲೇ ಹೂತ್ ಹಾಕೋವಷ್ಟು ಸಿಟ್ಟು ಬಂತು. ನನ್ನ ಮರ್ಯಾದೆ ತೆಗೆಯೋಕೆ ನನ್ ಜೊತೆ ಇರೋದು, ಸಿಕ್ಕು ..ಮಗ ನಿಂಗೆ ಐತೆ...ಅಂತ ಹೆಂಡತಿಯ ಎದುರು ನಡೆಯದ ನನ್ನ ಸಿಟ್ಟನ್ನು ಮಂಜನ ಕಡೆ ತಿರುಗಿಸಿದೆ. ಮತ್ತೆಂದೂ ಸೀರೆ ಬಗ್ಗೆ ಮಾತಾಡದೇ ಚಂದನದ ಗೊಂಬೆ ಪಿಕ್ಚರನ್ನು ಮೊಬೈಲ್ ನಿಂದ ಡಿಲೀಟ್ ಮಾಡಿದೆ.

ದಿನೇ ದಿನೇ ಸೋಲತೊಡಗಿದೆ.ಹೆಂಡತಿಯ ಮಾತಿನಾಚೆ ವಾಲತೊಡಗಿದೆ.ಉಫ್...ಎಷ್ಟೊಂದು ಕೆಲಸ...ಮುದುವೆ ಅಂದ್ರೆ ಬರೀ ಹೆಂಡತಿ ಜೊತೆ ಸುತ್ತಾಡೋದು , ಪಿಕ್ಚರ್ ನೋಡೋದು, ನಾನು ಕೆಲಸಕ್ಕೆ ಹೋಗೋದು, ಸಂಜೆ ಬರೋವಾಗ ಮನೆಯ ಗೇಟ್ ಗೆ ಮುಖಯಾನಿಸಿ ಕಾಯುತ್ತಾ ನಿಂತ ಹೆಂಡತಿ....ಆಹಾ...ಎಷ್ಟೆಲ್ಲಾ ಕಲ್ಪನೆ ಇತ್ತು. ಆದರೆ ಇದೇನು ನಡೆಯುತ್ತಿದೆ ಅನ್ನೋದೇ ಅರ್ಥ ಆಗ್ಲಿಲ್ಲ. ಬರೇ ಅಷ್ಟೇ ಅಲ್ಲ. ನೀನಂದುಕೊಂಡ ಲೋಕದಾಚೆ ಇನ್ನು ಎಷ್ಟೋ ಜವಾಬ್ದಾರಿಗಳಿವೆ‌. ಅದೂ ಮದುವೆಯ ಜೊತೆ ಜೊತೆಗೇ ಬರೋದು. ಇಲ್ಲಿ ಒಂದು ತೆಗೆದುಕೊಂಡು ಇನ್ನೊಂದನ್ನು ಬಿಡುವಂತಿಲ್ಲ. ಎಲ್ಲವೂ ಪ್ಯಾಕೇಜ್ ಆಗಿಯೇ ಬರುವುದು. ಬೇರೆ ವಿಧಿಯಿಲ್ಲ.ಅಡುಗೆ ಮನೆ ಸೆಟ್ಟಿ೦ಗ್ , ತರಕಾರಿ ತರುವುದು, ಗ್ಯಾಸ್ ಹಾಲು ಶಾಪಿ೦ಗ್....ಬಟ್ಟೆ ಒಣಗಿಸಲು....ಅಬ್ಭಾ, ಒ೦ದೊ೦ದೇ ಕದವನ್ನು ತೆರೆಯುತ್ತಾ ತನ್ನ ಅವಶ್ಯಕತೆಗಳನ್ನು ತೋರಿಸತೊಡಗಿದಾಗ ’ಅ೦ಕಲ್’ ಗಳ ಮಾತಿನ ಹಿನ್ನಲೆಯನ್ನು ಅರ್ಥೈಸತೊಡಗಿದ್ದೆ.
ಅಪರೂಪಕ್ಕೆ ಎಸ್.ಮ್.ಎಸ್, ಕಾಲ್ ನಲ್ಲೇ ಸಿಗುತಿದ್ದ ಸಿ೦ಗಾರಿ ದಿನದ ಇಪ್ಪತ್ನಾಲ್ಕು ಗ೦ಟೆಯೂ ಕಣ್ಣೆದುರಿಗೆ ಕಾಣುವ ಕ್ಯಾಲೆ೦ಡರ್ ಆಗಿ ಮೊಳೆ ಹೊಡೆದು ಕೂತಾಗ  ಮೊಬೈಲ್ ಸದ್ದಿಲ್ಲದೇ ಮೂಲೆ ಸೇರಿತ್ತು. ಅವಳ ಹಿ೦ದೆ೦ದೂ ಕಾಣದ ಹಲವಾರು ಚರ್ಯೆಗಳನ್ನು  ಕ೦ಡಾಗ ನಿಜವಾಗಿಯೂ ಅನ್ನಿಸಿದ್ದು ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂದು. ನಿಜವಾಗಿಯೂ ಹೆದರಿ ಹೋದೆ.

ಆದರೆ ನನ್ನ ಹೆದರಿಕೆ ಭಯ ಅರ್ಥವಿಲ್ಲದ್ದು, ಅದು ಬರಿಯ ಕಲ್ಪನೆ, ಕನಸು ಮಾತ್ರ ಅ೦ತ ಸಾಬೀತುಪಡಿಸಿದ್ದೂ ಅವಳ ಪ್ರೀತಿಯೇ. ಯಾವುದೂ ಬದಲಾಗಿಲ್ಲ . ಸುಖ ಸಂಸಾರಕ್ಕೆ ಯಾವುದೇ ಸಿದ್ಧ ಸೂತ್ರಗಳಿಲ್ಲ. ಯಾರೋ ಕೇಳಿದ್ರಂತೆ ನಮ್ಮ ಬುದ್ದಿವಂತ ತಿಮ್ಮನನ್ನ, ಈ ಪ್ರಪಂಚದಲ್ಲಿ ಎಷ್ಟು ವಿಧದ ಸಂಸಾರವಿದೆ ಅಂತ. ಅದಕ್ಕೆ ನಮ್ಮ ತಿಮ್ಮ ಹೇಳಿದ್ದು ಎಷ್ಟು ಸರಿ ಇದೆಯಂದ್ರೆ , ಅವನ ಮಾತಲ್ಲೇ ಕೇಳಿ,  "ಈ ಪ್ರಪಂಚದಲ್ಲಿ ಎಷ್ಟು ಜೋಡಿಗಳಿವೆಯೋ ಅಷ್ಟೇ ವಿಧದ ಸಂಸಾರಗಳಿವೆ".  ಹಾಗಾಗಿ ಹೀಗೆ ಮಾಡಿದ್ರೆ ಮಾತ್ರ ನಿಮ್ಮ ಸಂಸಾರಿಕ ಬದುಕು ಹಸನಾಗ್ತದೆ, ಹಾಗೆ ಮಾಡಿದ್ರೆ ಎಕ್ಕೊಟ್ಟು ಹೋಗ್ತದೆ ಅಂತ ಹೇಳೋರು ಯಾರೂ ಇಲ್ಲ. ಎಲ್ಲವೂ ನಮ್ಮ ಕೈಯಲ್ಲೇ ಇದೆ.  ನಮ್ಮ ಪ್ರೀತಿಯೂ ಕೂಡಾ...ಕಲ್ಪಿಸಿ ಹೆದರಿದ ಟಿಪಿಕಲ್ ಹೆ೦ಡ್ತಿ ಆಗದೇ ಇಷ್ಟು ವರ್ಷಗಳ ನ೦ತರವೂ ಗೆಳತಿಯಾಗಿ ಇದ್ದು, ಅದೇ ಪ್ರೀತಿ, ಕಾತರ, ಬಿಸಿ, ಹುಸಿಮುನಿಸು, ನಿರ೦ತರ ಓಲೈಕೆಯ ಸಿ೦ಧುವಾಗಿ.
ಅವಳನ್ನು ನೋಡುವಾಗ ಲಕ್ಷ್ಮೀನಾರಾಯಣ ಭಟ್ಟರ ಕವಿತೆಯ ಸಾಲುಗಳು ನೆನಪಾಗುತ್ತವೆ...

"ಹೆ೦ಡತಿಯೆ೦ದರೆ ಖ೦ಡಿತ ಅಲ್ಲ
ದಿನವೂ ಕುಯ್ಯುವ ಭೈರಿಗೆ;
ಭ೦ಡರು ಯಾರೋ ಹೇಳುವ ಮಾತು
ಬೈದವರು೦ಟೇ ದೇವಿಗೆ"

ಅದೆಷ್ಟು ಸತ್ಯ ಅಲ್ವಾ?. ಇಲ್ಲಿ ಒಬ್ಬರಿಗೆ ಎಲ್ಲವೂ ಸಿಕ್ಕಿರುವುದಿಲ್ಲ. ನಾವು ಸಲಹೆ ಕೇಳೊವಾಗ ಮಾತ್ರ ನಮಗೆ ಅಂತವರೇ ಸಿಕ್ಕಿರುತ್ತಾರೆ, ದಾರಿ ತಪ್ಪಿಸಿ ಟೆನ್ಶನ್ ಕೊಡೋಕೆ. ನಾನು ಅ೦ದುಕೊ೦ಡಿರದ ಸುಖದ ಸ೦ಸಾರದಿ೦ದ ಈಗೀಗ ದಿ ಮೋಷ್ಟ್ ಎಲಿಜಿಬಲ್ ಬ್ಯಾಚುಲರ್ ಗಳಿಗೆ ಮದುವೆಯ ಬ೦ಧನಕ್ಕೆ ಧೈರ್ಯದಿ೦ದ ಬನ್ನಿ ಅ೦ತ ಹೇಳುವ ಸ್ಥಿತಿಗೆ ಬ೦ದಿದ್ದೆನೆ.