Monday 7 August 2017

"ಹೂವಿರುವುದು
ದೇವರ ಗುಡಿಯಲ್ಲಿ
ಮತ್ತು
ಹೆಣ್ಣಿನ ಮುಡಿಯಲ್ಲಿ...."

ಅದ್ಯಾಕೋ ಗೊತ್ತಿಲ್ಲ,
ಈ ಮೋಸದ ಬಗ್ಗೆ
ಸಣ್ಣ ಸುಳಿವೂ ಸಿಗಲಿಲ್ಲ ನೋಡು.
ಅಜ್ಜ ಅಪ್ಪ ಅಣ್ಣ ಎಲ್ಲರೂ
ಹೇಳಿದ್ದು ಇದನ್ನೇ,
ಮೊದಮೊದಲು ನನಗೂ ಗೊತ್ತಾಗಲಿಲ್ಲ.
ಮತ್ತೆ ಮತ್ತೆ ಅದನ್ನೇ ಹೇಳಿದಾಗ
ಎಲ್ಲರಂತೆ ನಾನೂ ತಿಳಿದುಕೊಂಡೆ,
ಇದು ಹೀಗೆ
ಅದು ಹಾಗೆ...
ಮತ್ತು
ಇದು ಹೀಗೆಯೇ
ಅದು ಹಾಗೆಯೇ ಅನ್ನುವುದನ್ನು.

ಅದರಾಚೆಯ ಯೋಚನೆಗಳು
ಎಂದೂ ಕಾಡಲಿಲ್ಲ
ತೀರಾ ನಿನ್ನೆಯವರೆಗೂ;
ಹೂವಿಗಾಗಿಯೇ ಹಾರುವ
ದುಂಬಿಯನ್ನು
ಕಾಣುವವರೆಗೂ.

ತೊಟ್ಟ
ಪೊರೆ ಕಳಚಿದರೆ ಮಾತ್ರ;
ಬದುಕಿಲ್ಲಿ
ಹೊಚ್ಚಹೊಸದು...!

ಇದೀಗ,
ಅಪ್ಪ ಕೊಟ್ಟ
ಕನ್ನಡಕ ತೆಗೆದಿರಿಸಿದ್ದೇನೆ
ಮತ್ತು...
ನನ್ನ ಮಗನಿಗೆ ಸಿಗದ ಹಾಗೆ
ದೂರ ಎಸೆದಿದ್ದೇನೆ.

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

No comments:

Post a Comment