Tuesday 18 November 2014

ಉರಿದು ಉರಿಸುವುದೆಂದರೆ
ಬಹುಶಃ ಇದೇ ಇರಬೇಕು.
 ಅಲ್ಲಿಯೇ ನಿಂತು ನಗುತ್ತಿಯ,
ನಿನಗದೇ ಸುಖ ಅನ್ನಿಸಿದರೆ
ಅಲ್ಲಿಯೇ ಇರು,
ನನ್ನ ಒತ್ತಾಯವೇನೂ ಇಲ್ಲ.
ದೀಪದ ಮೋಹಕ್ಕೆ
ಹಾರುವ ಪತಂಗವನ್ನೇನೂ
ನಾನು ತಡೆಯುವುದಿಲ್ಲ.
ತನ್ನ ಮಿತಿಯ ಮೀರದ ಮಾತಿನೊಂದಿಗೆ
ನನ್ನ ಮೌನಕ್ಕೂ ಅಸಹನೆ ಇದೆ.

ಹಸಿರ ಬಯಲಿನಲ್ಲಿ
ಜಿಂಕೆಗಳು ಸರಸವಾಡುವಾಗ,
ಮನೆಗೇ ಕರೆದುಕೊಂಡು ಬರಬೇಕು
ಅಂತ ನನಗೂ ಅನ್ನಿಸುವುದುಂಟು.
ಮರುಕ್ಷಣವೇ ಹಸಿರಿನ ನೆನಪಾಗುವುದು.
ನನ್ನ ಮನೆಯ ಮರುಭೂಮಿಯಲ್ಲಿ
ಬಹುಶಃ ಅವು ಬದುಕಲಾರವು.
ಮರುಕ್ಷಣ ಅವುಗಳ ಸರಸ ಕಂಡು
ಖಿನ್ನನಾಗಿ ವಾಪಸಾಗುತ್ತೇನೆ.

ಹೀಗೂ ಇರಬಹುದಿತ್ತು
ಒಂದರೊಳಗೊಂದು ಬೆಸೆದುಕೊಂಡು
ಆಲದ ಮರದಲ್ಲಿ ಕೂರುವ ಹಕ್ಕಿಗಳಂತೆ.
ಬೇಡನೊಬ್ಬ ಕಲ್ಲು ಹೊಡೆದರೆ
ಪುರ್ರನೆ ಹಾರಿ; ತಿರುಗಿ ಮತ್ತೆ
ಬಂದು ಕೂಡುವಂತೆ.
ನಗುವ ಚಿಲಿಪಿಲಿ ಸದ್ದಲಿ
ಬೇಡ, ಕಲ್ಲು ಎರಡೂ ಮರೆವಂತೆ.
ಯಾಕೆ ಕಲ್ಲನ್ನೇ ನೆಪ ಮಾಡಿ
ದೂರ ಕುಳಿತೆ?.

ಮಾತಿನ ನಿರೀಕ್ಷೆ ಇದ್ದಲ್ಲೇ
ಮೌನಕ್ಕೆ ಮೊರೆ ಹೋಗುವ
ನನ್ನ ಹೇಡಿ ಮನಸ್ಸಿನ ಬಗೆಗೆ
ನನಗೂ ಕೋಪವಿದೆ.
ಕೋಪ ಕಳೆದು ಬೆಳಕಾದಾಗ
ನಿರಾಳಗೊಳ್ಳುತ್ತೇನೆ.
ಗೆಲ್ಲಿಸದಿದ್ದರೂ ನನ್ನನ್ನು ಸಾಯಿಸುವುದಿಲ್ಲ.
ಮತ್ತೆ ಬದುಕು ಯಥಾ ಪ್ರಕಾರ ಸಾಗುತ್ತದೆ.
ನನ್ನ ಈ ಮನಸ್ಸಿನ ಬಗ್ಗೆ ಯೋಚಿಸಿದಷ್ಟೂ
ಪ್ರೀತಿ ಉಕ್ಕುತ್ತದೆ.

Thursday 13 November 2014

ಮಗಳೇ
ಮರಳದಂಡೆಯ ಮೇಲೆ
ಹೇಗೆ ಕಟ್ಟಲಿ ಮನೆ?
ಇಟ್ಟಿಗೆ ಇಲ್ಲದ,
ಹೆಂಚು ಹಾಕಲಾಗದ ಮನೆ.
ನಿನ್ನ ಕಾಲನ್ನು ಒಳಗಿಟ್ಟು
ಮೇಲೆ ಮರಳ ರಾಶಿಯ ಸುರಿದು
ಕೈಯಿಂದ ಒತ್ತಿ ಮಾಡಿದ ಮನೆಯನ್ನೇ ಕೆಡವುತಿದ್ದಿ,
ಕೈತಟ್ಟಿ ನಗುತ್ತಿದ್ದಿ,
ಎಷ್ಟೊಂದು ಮುಗುದೆ ನೀನು?
ನಿನಗಿನ್ನೂ ಅರ್ಥವಾಗುತ್ತಿಲ್ಲ,
ಹೊರಗೆ ಬಂದು ಬಂದು
ಬಯಲು ಕಾಣುವ ಆತುರದಲ್ಲಿ
ಮನೆಯನ್ನು ಕೆಡವಿ ಪಿಳಿ ಪಳಿ ನೋಡುತ್ತಿದ್ದಿ.
ಹೇಗೆ ಕಟ್ಟಲಿ ಮನೆ?

ನೋಡು ಮೇಲೆ ಎಷ್ಟೊಂದು ಹದ್ದುಗಳು
ಹಾರುತ್ತಿವೆ,ಕುಕ್ಕಲು ನೋಡುತ್ತಿವೆ;
ಅವುಗಳ ಕಣ್ಣಿಂದ ನಿನ್ನ
ಬಚ್ಚಿಡಬೇಕು.
ಅಲೆಗಳು ದಂಡೆಯ ಮೇಲೆಯೇ
ನುಗ್ಗುತ್ತಿವೆ,
ನಿನ್ನ ಪಾದ ಸೋಕಬಾರದು.
ಜಗದ ಕಪ್ಪು ಕನ್ನಡಕದೊಳಗಿನ
ದೃಷ್ಟಿ ಹೇಗಿದೆಯೋ?
ಸೂರ್ಯನೂ ಇಣಿಕುತ್ತಾನೆ
ಮೋಡದ ಮರೆಯಿಂದ.
ಬೆಳಕನ್ನು ಕಂಡು ಸಂಭ್ರಮಿಸುವುದೋ,
ನೆರಳಿಗೆ ಹೆದರುವುದೋ,
ಅರಿವಾಗುತ್ತಿಲ್ಲ.

ಸ್ವಲ್ಪ ಸುಮ್ಮನಿರು
ಮನೆ ಕಟ್ಟುವವರೆಗೂ
ಬಾಗಿಲು ಹಾಕುವವರೆಗೂ.

Thursday 30 October 2014

ಕಣ್ಣುಗಳು ತೆರೆಯುತ್ತಿಲ್ಲ
ಬೆಳಕಿಗೆ;
ರೆಪ್ಪೆಗಳು ಮುಚ್ಚುತ್ತಿಲ್ಲ
ಇರುಳಿಗೆ.
ಅತ್ತ ಬದುಕೂ ಇಲ್ಲ;
ಇತ್ತ ಕನಸೂ ಇಲ್ಲ.

Sunday 13 April 2014

ಎಲ್ಲರ ಮನೆಯಲ್ಲೂ ಕೇಳುತ್ತಿತ್ತು
ಆಗಾಗ ಬೀದಿಯಲ್ಲೂ ಮೊರೆಯುತ್ತಿತ್ತು.
ನನಗೋ ಕುತೂಹಲದ ವಿಷಯ ,
ಎಲ್ಲೋ ಕೇಳಿದ ವಸ್ತು ;
ಪ್ರತ್ಯಕ್ಷ ನೋಡದ ನಿಗೂಢತೆ.
ಮನೆಯಲ್ಲಿಯೇ ಇದ್ದರೂ 
ಜೊತೆಯಾಗಿ ಸಿಗುತ್ತಿದ್ದರೂ
ಯಾವತ್ತೂ ಕಿಡಿ ಸೋಕಿರಲಿಲ್ಲ.
ಆಗೆಲ್ಲಾ ನಾನೂ ಅಂದುಕೊಳ್ಳುತ್ತಿದ್ದೆ
ಇದು ಬರೀ ಕತೆಗಳಿಗೆ ಮೀಸಲು,
ಸತ್ಯ ಇರಲಿಕ್ಕಿಲ್ಲ; ತಮಾಷೆಗೆ ಮಾತ್ರ .
ಶಾಂತ ಸಾಗರ ಕಲಕುವುದು
ದಡದಲ್ಲಿ ಕೂತು ಕಲ್ಲೆಸೆವವರ ಗುಣ,ಎಲ್ಲರದ್ದೂ ಅಲ್ಲ .
ಹಾಗಂತ ವಿಶ್ವಾಸವಿತ್ತು.
ಬೇಸರ ಕೂಡಾ ಆದದ್ದಿದೆ.
ಅವರಲ್ಲಿ ಇವರಲ್ಲಿ ಮತ್ತೊಬ್ಬರ ಮನೆಯಲ್ಲಿ
ಇದು ಸಂಭವಿಸಿದಾಗ
ನನಗೆ ಮಾತ್ರ ಇಲ್ಲ ಅನ್ನೋ ಬೇಜಾರು .

ಈಗ ಸಂಭ್ರಮದಲ್ಲಿದ್ದೇನೆ,
ದೇವರು ಕಣ್ಣು ಬಿಟ್ಟ .
ಕೊನೆಗೂ ಕೊನೆಗೂ
ನಮ್ಮ ಮನೆಯಲ್ಲೂ ಶುರುವಾಗಿದೆ
'ಈ' ಸುಪ್ರಭಾತ.
ಬೆಂಕಿ ಹೊತ್ತಿಕೊಂಡಿದೆ;
ನಾನು ಚಳಿ ಕಾಯಿಸುತ್ತಿದ್ದೇನೆ!.
ಬರುವಿಯಾದರೆ ಇಂದೇ ಬಾ
ನಾಳೆಗಾಗಿ ನಾನು ಕಾಯುತ್ತಿಲ್ಲ.
ಪ್ರೀತಿ ವಿರಹ ಮುನಿಸು ಕನಸು
ಎಲ್ಲವನ್ನೂ ಬಚ್ಚಿಟ್ಡಿದ್ದೇನೆ,
ಯಾರಿಗೂ ಕೊಡಲಿಷ್ಟವಿಲ್ಲ;
ಬೆಲೆ ತಿಳಿಯದಿದ್ದರೂ
ಅದು ನಿನಗೇ ಸೇರಬೇಕಲ್ಲ.
'ನಾಳೆಗಳೇ' ನಿನ್ನ ಆಯ್ಕೆಯಾದರೆ
ಇರಲಿ ಬಿಡು.
ಹಣತೆಗಳನ್ನು ಹಚ್ಚಿಟ್ಟಿದ್ದೇನೆ,
ಉರಿಯುತ್ತಲೇ ಇದೆ; ಉರಿಯಲಿ ಬಿಡು.
ಇಂದು ನನ್ನ ಇರುವಿಗೆ;
ನಾಳೆ ಮೌನದ ಗುರುತಿಗೆ.




ಕತೆಯಾಗಿಸಿ

ಕತೆಯಾಗಲು ಕೂತಿದ್ದೇನೆ,
ನಿಮ್ಮದೇ ರಸ್ತೆಯ ತಿರುವುಗಳಲ್ಲಿ
ಬೇಗನೇ ಎತ್ತಿಕೊಳ್ಳಿ
ಬಣ್ಣ ಬಣ್ಣದ ಕನಸುಗಳ ಮುಡಿಸಿ
ಕತ್ತಲ ಸುರಂಗದ ಬೆಳಕಾಗಿಸಿ,
ಹೆಣ್ಣಿನ ಹೊಟ್ಟೆಯ ಕಿಚ್ಚಾಗಿಸಿ
ಗಂಡಿನ ಮೈಯ ಸೊಕ್ಕಾಗಿಸಿ
ನಿಮಗೇ ಬಿಟ್ಟದ್ದು.

ಹರಿವ ನದಿಯಾಗಿಸಿ
ಮೊರೆವ ಕಡಲಾಗಿಸಿ
ಇಲ್ಲವೇ ನಿಂತ ನೀರಾಗಿಸಿ
ಹೂವಾಗಿಸಿ ಹಣ್ಣಾಗಿಸಿ
ಬತ್ತದ ತೆನೆಯಾಗಿಸಿ
ಕಾಡುವ ಕಳೆಯಾಗಿಸಿ
ನನಗೇನು; ಕರೆದಲ್ಲಿ ನಾನಿದ್ದೇನೆ.

ತಲೆಗೆ ಕಿರೀಟ ತೊಡಿಸಿ
ಸಿಂಹಾಸನದ ಮೇಲೆ ಮೆರೆಸಿ
ಯುದ್ಧದಲ್ಲಿ ಕಡಿಸಿ,
ತಿರುಕನ ಕೈಯ ಪಾತ್ರೆಯಾಗಿಸಿ
ಸೂಳೆಯ ಬದುಕ ಕನಸಾಗಿಸಿ
ಬೀದಿಯ ಧೂಳಲ್ಲಿ ಹೊರಾಳಾಡಿಸಿ
ನಿಜಕ್ಕೂ ನನ್ನಲ್ಲಿ ಬೇಡಿಕೆಗಳಿಲ್ಲ.

ದೇವರಾಗಿಸಿ, ಧರ್ಮವಾಗಿಸಿ
ತಲೆ ಕೆಡಿಸಿ, ಹೊರಳಿಸಿ
ವೈರುದ್ಯಗಳ ನಡುವೆ ನರಳಿಸಿ;
ಶಿಲುಬೆಗೇರಿಸಿ.
ನನ್ನ. ಮೈಯ ಮುಳ್ಳುಗಳೇನೂ ಅರಳುವುದಿಲ್ಲ!.

ಹಾಗಂತ ನನ್ನಲ್ಲಿ ಭ್ರಮೆಗಳಿಲ್ಲ,
ಪಾತ್ರ ಸಂಚಾರಗಳ ಭಾವ ನಿಮ್ಮದೇ
ಅಂತೆಯೇ ನೋವು ನಲಿವು.
ನಿಮ್ಮನ್ನು ನೀವು ನೋಡಿಕೊಳ್ಳುವ
ಬರಿಯ ಕನ್ನಡಿ ನಾನು.

ನಿಮ್ಮ ಕತೆಗಳಲ್ಲಿ 'ನಾನಿಲ್ಲ'.
ಎದೆಯ ಬೀದಿಯ ಚರಂಡಿ
ಕೊಳೆತು ನಾರುತ್ತಿದೆ; ನೆನಪುಗಳ ಕಳೇಬರ
ಅಲ್ಲಿ ಎಸೆದದ್ದಕ್ಕೊ?

................................

ಬದುಕಿನ ಸಾವಿರ
ಜಂಜಾಟಗಳ ನಡುವೆ
'ಪ್ರೀತಿಸುತ್ತೀಯ'
ಅನ್ನುವುದೊಂದೇ ಭರವಸೆ.
ಆ ಆಸೆಯಲ್ಲೇ
ಕಾಯುತ್ತೇನೆ ನಾಳೆಗಾಗಿ.
ಇಲ್ಲದಿದ್ದ
ರೆ ಇರುಳು ಯಾವತ್ತೋ
ನನ್ನ ನುಂಗಿರುತಿತ್ತು.

ಪ್ರೀತಿ ಬೆಳಕು ಅಲ್ವಾ?

ಅಸಹಾಯಕ


ಅತಿಯಾಗಿ ಪ್ರೀತಿಸುವ
ಬದುಕಿನೊ೦ದಿಗೇ ಹೋರಾಡುವ
ನಾನೀಗ ಅಸಹಾಯಕ.

ಕನಸುಗಳನ್ನೆಲ್ಲಾ ಹಸಿವಿನ ಹಾದಿಯಲ್ಲಿ
ಮಾರಿಬಿಟ್ಟಿದ್ದೇನೆ.
ಕನಸುಗಳು ಕಾಣದ೦ತೆ
ನಿದ್ರೆಯೊ೦ದಿಗೇ ಒಪ್ಪ೦ದವಾಗಿ
ರೆಪ್ಪೆಗಳು ಮುಚ್ಚದ೦ತೆ
ಎಚ್ಚರಗೊಳ್ಳುತ್ತೇನೆ.

ಆಸೆಯ ದು೦ಬಿಗಳನ್ನು
ಹತ್ತಿರ ಸುಳಿಯ ಬಿಡುತ್ತಿಲ್ಲ.
ಹೀರುವ ಮಕರ೦ದದ ಬಯಕೆಗಳಿಗೆ
ಮತ್ತೆ ಮೊಗ್ಗಾಗುತ್ತೇನೆ.
ಮನದ೦ಗಳದಲ್ಲೀಗ
ಯಾವ ಹೂವೂ ಅರಳುತ್ತಿಲ್ಲ.

ನೈಜತೆಯ ಕುರುಹುಗಳೆಲ್ಲಾ
ಮುಖವಾಡದೊಳಗೆ ಬಚ್ಚಿಟ್ಟಿದ್ದೇನೆ.
ಲಾಭ ನಷ್ಟಗಳ ಲೆಕ್ಕಾಚಾರಗಳಲ್ಲೇ
ಒಣ ಆದರ್ಶಗಳನ್ನೂ
ತಕ್ಕಡಿಯಲ್ಲಿ ತೂಕಕ್ಕಿಟ್ಟಿದ್ದೇನೆ.
ವರ್ತಕರ ಬೀದಿಗಳಲ್ಲೀಗ
ನನ್ನ ಅಪಮೌಲ್ಯವಾಗಿದೆ.

ನನ್ನನೀಗ ಯಾರೂ ಕೊಳ್ಳುತ್ತಿಲ್ಲ.
ಬದುಕಿನ ಜೂಜಾಟದಲ್ಲಿ
ಹರಾಜೂ ಕೂಗುತ್ತಿಲ್ಲ.
ಹೊಸ ಕನಸಿಲ್ಲದ
ಆಸೆಯ ಸೆಳೆಯಿಲ್ಲದ
ನೈಜತೆಯ ನಡೆಯಿಲ್ಲದ
ನಾನೀಗ ನಾನಾಗಿಯೇ ಉಳಿದಿಲ್ಲ.

ಬದುಕಿನ ವೈರುಧ್ಯಗಳ ನಡುವೆ
ಉಸಿರಿನ್ನೂ ಆಡುತ್ತಿದೆ.
ಮುಳ್ಳುಗಳ ನಡುವೆ ಸದ್ದಿಲ್ಲದೇ
ಅರಳಿದ ಹೂವೂ ನರಳುತ್ತಿದೆ.

Wednesday 5 February 2014

ರವಿಯಿ೦ದ ಸ೦ಧ್ಯೆಯವರೆಗಿನ ದಾರಿ


ದಿನಕ್ಕೆ ನೂರು ಸ೦ದೇಶ
ಹುಸಿ ಗದರಿಕೆಯೇ ಆದೇಶ
ಪ್ರೀತಿಯದು; ಸ೦ಧ್ಯೆಯ ನಶಾ,
ನಾನವಳ ನ೦ದೀಶ.

ಕೇಳದೆಯೇ ಮುತ್ತು
ಹಸಿಯದೆಯೇ ತುತ್ತು,
ಮನೆಯೇ ಸ್ವರ್ಗ; ನಾನೇ ದೇವೇ೦ದ್ರ.

ದಿನದ ಅಡುಗೆ ರುಚಿ
ನಡುವೆ ಪಾತ್ರೆಯಲ್ಲೂ ಶುಚಿ,
ನನ್ನದೇ ಅಡುಗೆ ಮನೆ; ನಾನೇ ನಳರಾಜ.

ಬಟ್ಟೆಗಳ ನಡುವೆ ನಾನೇನೆ
ಮಗುವಿನ ಡೈಪರೂ ನ೦ದೇನೇ,
ಮನೆಯೇ ಕೈಲಾಸ; ನನ್ನದೇ ಕಾಯಕ.

ಮಾತಿಗೊ೦ದು ಗುದ್ದು
ಮೌನಕ್ಕೂ ಮರು ಸದ್ದು,
ಅಡಗುತಿದೆ ಎಲ್ಲೋ ನನ್ನಿರುವು.
ವಾಸಿಯಾಗುವ ರೋಗವಲ್ಲ;
ಇದು ಹರಡುವ ಶಿಲೀ೦ದ್ರ,
ನಾನೀಗ ಕರಗುವ ರವೀ೦ದ್ರ!!!.
ಗೋರಿ ಮೇಲಿನ ಬದುಕು


ಭೂತ ಕಾಲದ ಗೋರಿಯ ಕೆದಕಿದಷ್ಟೂ
ಕನಸುಗಳು ಮಾರಾಟಕ್ಕಿವೆ.
ಎಷ್ಟು ಸಾರಿ ಕರೆದರೂ,
ಕಹಳೆ ಶ೦ಖ ಊದಿದರೂ ನಿಲ್ಲದ ಪ್ರತಿಧ್ವನಿ.
ಇದ್ದವರದ್ದೋ?;ಸತ್ತವರದ್ದೋ?.
ಚಿವುಟಿದಷ್ಟೂ ಚಿಗುರುವ,
ರಕ್ತ ಚಿಮ್ಮಿದಷ್ಟೂ ಕೊನರುವ ಜೀವನ.
ಮಾತು ಯಾರದ್ದೋ?; ಮೌನ ಯಾರದ್ದೋ?.
ಪಾಳುಬಿದ್ದ ಅರಮನೆಯ ಒಳಗೆಲ್ಲೋ,
ಅಳುವ ಕ೦ದನ ಮಾರ್ದನಿ;
ಉತ್ತರಾಧಿಕಾರಿಯ ಆಗಮನ...?,
ಕಣ್ಣ ಸನ್ನೆ ಯಾರದ್ದೋ?; ತ೦ತ್ರ ಯಾರದ್ದೋ?.
ರುಧ್ರಭೂಮಿಯಲ್ಲಿ ನಿಲ್ಲದ ರಣಕೇಕೆ.
ಹುಡುಕಿ ಹೊರಟವ ಬುದ್ಧನಾದ;
ಶಸ್ತ್ರ ತೊರೆದವ ಅಶೋಕನಾದ,
ಸೊಕ್ಕಿ ಮೆರೆದವ ರಾಜನಾಗಿದ್ದು ಮಾತ್ರ ಇತಿಹಾಸ.
ಏನು ಮೆರೆಯಿತೋ?; ಬದುಕು ಬಾಳಿತೋ?.
ಓದಲು ಸಿಕ್ಕಿದ್ದು ಬರೀ ಮುಖವಾಣಿ!.
ಗಡಿ,ಕೀರ್ತಿ,ಪೌರುಷ ಬರೀ ಭೂತಕಷ್ಟೇ,
ವರ್ತಮಾನ?, ಅದು ಬೇರೆಯೇ.
ಸಾಲು ಮರದ ಕೆಳಗೆ  ನೆರಳ ವಿಲೇವಾರಿ;
ನೆತ್ತಿ ಮೇಲೆ ಬೀಳೋ ತರಗಲೆಗಳೆಷ್ಟೋ?.
ತನ್ನವರ ನಡುವೆ ಕಳೆದು ಹೋಗೊ ಸ೦ಕಟ,
ತಿರುಗಿ ನೋಡಿದ್ದು ಸುಳ್ಳೇ?; ಬದುಕು ನಕ್ಕಿದ್ದು ಸುಳ್ಳೇ?.
ಸಾವಿರದ ಮನೆಯ ಸಾಸಿವೆ ತೀರಿದೆ,
ಅತ್ತು ಬರಿದಾದರೆ ಮತ್ತೂ ಇದೆ ಹಾಡು!.

ಸುಮ್ಮನೆ ಬಿಟ್ಟರೆ ಕಿರೀಟವೂ ವ್ಯರ್ಥ;
ಚಲಾವಣೆಯಲ್ಲಿದ್ದರೆ ಮಾತ್ರ ಹೊಸತು ಅರ್ಥ.
ಹಸಿವು ತೀರಿದ ಮೇಲೆ


ಹಸಿವು ತೀರಿದ ಮೇಲೆ
ಮತ್ತೆ,ಇನ್ನೆ೦ದೂ ಕೈಗೆ ಸಿಗದ ಹಾಗೆ,
ದೂರ ಎತ್ತಿ ಬಿಸಾಡಬೇಕು.
ಅ೦ಟಿಕೊಳ್ಳುವ ಕೃತ್ರಿಮ; ಜಾರಿಕೊಳ್ಳುವ ಅಕ್ರಮ,
ಈ ಕ್ಷಣಕ್ಕಿಷ್ಟು ಸಾಕು.
ಕಹಿಯೂ ಇಲ್ಲ,ಹೇಸಿಗೆ ಹುಟ್ಟುವ ಮುನ್ನ
ದೂರ ಎದ್ದು ನಡೆದು ಬಿಡಬೇಕು.
ಬಯಕೆ ಇತ್ತು; ತೀರಿತು.
ಎಲ್ಲಾ ತೆರೆದು ಬಟಾಬಯಲಾಗುವಲ್ಲೇ
ಮತ್ತೆ ಮುಚ್ಚಿಕೊಳ್ಳುವ ಆತುರ!.

ಆನ೦ದ; ತನ್ನ ತಾನು ಸೃಷ್ಟಿಸಿಕೊಳ್ಳದೇ?.

ಮೊಗೆ ಮೊಗೆದು ಕೊಟ್ಟೆ; ಅಷ್ಟೇ ಪಡೆದೆ?
ಇಲ್ಲ, ತನ್ನದಾಗದ ಇನ್ನೇನೋ ಇದೆ.
ಪ್ರೀತಿಯ ತೀವ್ರತೆ, ನೆನಪುಗಳ ನಡುವೆ
ಕಾಡುವ ಕೊರತೆಗಳ ನೋವು.
ಬಿಡಿ ಬಿಡಿ ಚಿತ್ರಗಳು; ಪೂರ್ಣವಾಗಲೇ ಇಲ್ಲ.

ಹಸಿವು ತೀರಿದ ಮೇಲೆ
ತಿನ್ನುವ ಆತುರವೂ ಇಲ್ಲ;
ಹಳಸಿದರೂ ಅದು ನನ್ನದಲ್ಲ.
ಫಲ

ಕನಸು ಮಾರುತ್ತಿದ್ದವನಿಗೀಗ
ಕಣ್ಣ ತುಂಬಾ ನಿದ್ದೆ ;
ಕೊಂಡವರು ಆ ಕನಸಿಗಾಗಿ
ದುಡಿಯುವ 
ಬೆವರ ಮುದ್ದೆ.
ಎರಕ

ಎಷ್ಟು ಸಾರಿ ಹೇಳೋದು ನಿನಗೆ?
ಸರಿಯಾಗಿ ನೋಡು , ಮತ್ತೆ ಮಾಡು;
ಮಾತು ಸರಿಯಿಲ್ಲ, ಮೌನ ಒಳಿತಲ್ಲ.
ಹೀಗೆ ಕೂರು,ಹಾಗೆ ನಡೆ,
ಅದು ರಕ್ಕಸ ನಗು
ಅದು ಹೆಣ್ಣಿಗ ಅಳು 
ನಮ್ಮ ಹಾಗೆ ಆಗೋದು ಯಾವಾಗ?

ಅವನು ಹೇಗಿದ್ದಾನೆ ನೋಡು ,
ಅವನಂತೆ ನೀನಾಗು.
ಗುಬ್ಬಚ್ಚಿಗಳ ಹಿಂಡಲ್ಲೇ
ಹೊಟ್ಟೆ ತುಂಬೀತೇ?
ಕನಸು ಕಂಡಿದ್ದು ಸಾಕು.

ತಾನೆ ತಾನಾಗಿ ಅರಳುತ್ತಿದ್ದ 'ಅವನು',
ಮತ್ತೆ ಮೊಗ್ಗಾಗಿ 'ಲೋಕ ನೋಡಿ'
ಕಲಿತಿದ್ದ, ಸುಶಿಕ್ಷಿತನಾಗಿದ್ದ.
ತನಗೆಂದೇ ಸಿದ್ದವಾದ ಮುಖವಾಡ ಧರಿಸಿ ಎಲ್ಲರೊಳಗೊಂದಾದ.
ತನ್ನ ತಪ್ಪು ತಿದ್ದಿದ, ಬೆಳೆದ
ಹೊಸ ಜೀವ, ಮತ್ತಷ್ಟು ಮುಖವಾಡಗಳು ;
ತನ್ನ ಕೈಯಿಂದ ಸಿದ್ಧಗೊಂಡ
ಧನ್ಯಭಾವ 'ಅವನಿಗೆ'.

ಬೆರೆಸಿ ಕಲಸಿ ಹದಗೊಂಡ
ಹಸಿ ಮಣ್ಣು ಲೋಕದ
ಎರಕದಲ್ಲಿ ಮಡಿಕೆಯಾಗುತಿತ್ತು.
ಸದ್ದಿಲ್ಲದೆ ಅರಳುತ್ತಾ ,ಬಾಡುತ್ತಾ ಉದುರುತ್ತಾ ಮತ್ತೆ ಮೊಗ್ಗಾಗುತಿದ್ದ
ಪಾರಿಜಾತ ಸುಖವಾಗಿ ನಗುತಿತ್ತು.
ಆಸೆ

ಆಸೆಯನ್ನೇ ತ್ಯಜಿಸಿ
ಬುದ್ಧನಾದವನೆದುರು
ಆಸೆಕಂಗಳ ಹುಡುಗಿ 
ತನ್ನ ಆಸೆಯ ಪೂರೈಕೆಗಾಗಿ 
ಪ್ರಾರ್ಥಿಸಿದಳು!
ಹಂತ 

ನಿದ್ದೆಯಿರದ ರಾತ್ರಿಗಳಲ್ಲಿ ಕನಸುಗಳನ್ನು ಕರೆಯುತ್ತೇನೆ,
ಕತ್ತಲು ಮುಗಿದು ಬೆಳಕು ಇಣುಕುವ ಮೊದಲು
ಕಣ್ಣು ತೆರೆದೇ ಮಲಗುತ್ತೇನೆ.
ಅವಳು ಹೂವಾಗಿ ಅರಳಿದ್ದು,
ನಾನು ಮಳೆಯಾಗಿ ಇಳಿದದ್ದು,
ಕನಸಲ್ಲಿ ನೆನಪಾಗಿ ಬಯಕೆ ಚಿಗುರುವಲ್ಲಿ 
ಕಾತರದಿಂದ ಕಾಯುತ್ತೇನೆ.
ಮಣ್ಣ ಕಣ ಕಣ ಪ್ರೀತಿಯ ಮುಚ್ಚಟೆಯಲ್ಲಿ
ಹೊಸ ಬೀಜ ಗರ್ಭ ಕಟ್ಟಿ ;
ಬೆಳೆದು ಬೇಲಿ ಜಿಗಿದು,
ಕತ್ತಲು ಬೆಳೆದು ಬೆಳಕಿಗೆ ಮೈ ಒಡ್ಡುವಲ್ಲಿ
ಎಚ್ಚರವಾಗೇ ಕನಲುತ್ತೇನೆ.
ಕತ್ತಲೂ ಸಾಯುವುದು ಬಯಸುವುದಿಲ್ಲ;
ಅದಕ್ಕೆಂದೇ ಬೆಳಕಿಗೆ ದೀಪವಿಡುತ್ತೇನೆ.
ರೆಕ್ಕೆ ಬಂದ ಹಕ್ಕಿ ಗೂಡು ಕಟ್ಟಿ ,
ಹಾರಲು ಕಲಿಸಿದವರನ್ನು ಹಂಗಿಸಿ ಹಾರುವಲ್ಲಿ,
ಖುಷಿಯಿಂದ ಕೇಕೆ ಹಾಕುತ್ತೇನೆ;
ಬೇರು ಕಡಿದ ಹಾರಾಟ ಕಂಡು
ಕೈ ಬೀಸುತ್ತೇನೆ.
ಮರಳದವರನ್ನು ಕಾಯುತ್ತಾ
ಬೇರಿಗೆ ಅಂಟಿದವರನ್ನು ಕರೆದು ಕೂರಿಸುತ್ತೇನೆ,
ಕನಸಿನ ಮೂಲೆಯಲ್ಲಿ ಸುಮ್ಮನೆ ನಗುತ್ತೇನೆ.
ಚಕ್ರ ಉರುಳಾಗಿ, ಬಯಕೆ ಬೆವರಾಗಿ;
ಹೊಸ ಜೀವ ಕದಲಿದಂತೆ,
ನೋವ ಬಸುರಿನಲ್ಲಿ ಕ್ಷಣದ ನಲಿವು!.
ತಿರುಗಿ ನೋಡಲು ಹೆದರುತ್ತಾ,
ಕನಸುಗಳಲ್ಲಿ ನಾನು ಸಾಕ್ಷಿಯಾಗುತ್ತೇನೆ.


ನಗುತ್ತೇನೆ,ಅಳುತ್ತೇನೆ, ಮಾತು ಒಡೆದು
ಮೌನವಾಗಿ ಮಲಗುತ್ತೇನೆ.
ಮತ್ತೆ ಎಲ್ಲವೂ ಕನಸೆಂದು
ಫಕ್ಕನೇ ಚೀರಿ ಎಚ್ಚರಗೊಳ್ಳುತ್ತೇನೆ.