Tuesday 20 November 2018

ಪರಿಚಿತರಾಗುವುದೆಂದರೆ ಅದು
ಅಷ್ಟು ಸುಲಭದ ಕೆಲಸವೇ?

ಕೋಟೆ ಬಾಗಿಲು ತೆರೆದು
ಒಳ ಹೊಕ್ಕಾಗಲೂ
ಏಕಾಂಗಿ ಅನ್ನಿಸುವುದಾದರೆ,
ನಾವಿನ್ನೂ
ತೊಟ್ಟಿಕ್ಕುತ್ತಿರುವ ಒಂದೇ ಮಳೆಯ
ಬೇರೆ ಬೇರೆ ಬಿಂದುಗಳು.
ಅಷ್ಟಕ್ಕೂ ನಾವು‌
ಪರಿಚಿತರಾಗಿದ್ದು ಯಾವಾಗ?

ಒಟ್ಟಿಗಿದ್ದಾಗಲೂ
ನಿನ್ನೆಲ್ಲ ಮಾತು ಮೌನ
ಅಸಹನೆ ಕೋಪ
ನನಗರ್ಥವಾಗದೇ ಉಳಿದಿರುವಾಗ
ಪರಿಚಿತರಾಗಿದ್ದೇವೆನ್ನುವುದು
ಹಸಿ ಹಸಿ ಸುಳ್ಳಲ್ಲವೆ?

ನಿನ್ನ  ಬದುಕಿನ ಉತ್ಕಟ
ಕ್ಷಣಗಳಲ್ಲಿ
ತೀವ್ರವಾಗಿ ಕಾಡಿದ ನೆನಪುಗಳಲ್ಲಿ
ನಾನಿಲ್ಲವೆಂಬುದೇ ಸತ್ಯ
ಅನ್ನವುದಾದರೆ
ನಾವಿನ್ನೂ
ಯಾವತ್ತೂ ಸಂಧಿಸದ
ನಿರ್ಜನ ಬೀದಿಯ ಅನಾಮಿಕರು.

ಅದೆಷ್ಟು ಬೆಳಕಿತ್ತು
ಆ ಬೀದಿಯ ತುಂಬಾ.
ಕಣ್ಣಲ್ಲಿ ಹೊಳೆದದ್ದೇ ನೀನು ಮತ್ತು
ತುಂಬಿದ ಬೆಳದಿಂಗಳು!
ಎಲ್ಲವೂ ಎಲ್ಲರಿಗೂ
ಕಾಣುವಂತೆ ಅದೆಷ್ಟು ಸ್ಪಷ್ಟತೆ!
ಅಲ್ಲಿ ಯಾವುದೂ ಅಪರಿಚಿತ
ಅನಿಸಲೇ ಇಲ್ಲ.
ಇದೀಗ,
ಬೆಳಕು ಆರಿದ ಮೇಲೂ
ಆ ಬೀದಿ ಇನ್ನೂ ಪರಿಚಿತವೇ
ಆದರೆ,
ಅಲ್ಲಿ ಸಿಕ್ಕಿದ ನಾವು?

ಅನೇಕದಲ್ಲಿ ಏಕ!
ಅನ್ನವ ಭ್ರಮೆಯಲ್ಲಿ ಸುಖಿಸಿ,
ಅದನ್ನೇ ನಂಬುತ್ತಾ ಬದುಕಿದ್ದೇವೆ ಮತ್ತು
ಬಲು ದೂರ ಜೊತೆಯಾಗಿಯೇ
ಸಾಗಿ ಬಂದಿದ್ದೇವೆ.
ಆದರೆ ನಾವಿಂದೂ
ಒಳಗಿಳಿಯದ,
ಕಲಸಿ ಬಿಳಿಯಾಗದ
ನಿತ್ಯ ನೂತನ ಕಾಮನ ಬಿಲ್ಲು;
ಜಗದ ಕಣ್ಣು ಕುಕ್ಕುವ
ಎಷ್ಟೊಂದು ಬೆರಗಿನ ಬಣ್ಣಗಳು!

ಸಾಕಿನ್ನು,
ಮತ್ತೆ ಅಪರಿಚಿತರಾಗಿಬಿಡಬೇಕು
ಕಳೆದುಹೋದಂತೆ
ಯಾವುದೋ ಹೊಸ ಬೀದಿಯಲ್ಲಿ.
ಮತ್ತೆ ಮತ್ತೆ
ನಿನ್ನಲ್ಲಿ‌ ನನ್ನನ್ನು
ನನ್ನಲ್ಲಿ‌ ನಿನ್ನನ್ನು;
ಹುಡುಕುವ ಸಾರ್ಥಕ
ಸುಖಕ್ಕಾಗಿಯಾದರೂ.

# ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

Sunday 11 November 2018

ಸ್ವಗತ

ಬರವಣಿಗೆ ಒಂದು ಮೋಹಕ ತಾಲೀಮು ಅಂತ ನವೀನ್ ಹೇಳಿದ್ದು ಕೇಳಿ ಅದನ್ನೇ ವ್ರತದಂತೆ ಪಾಲಿಸಿ ದಿನಾ ಸ್ವಲ್ಪ ಹೊತ್ತು ಬರವಣಿಗೆಯಲ್ಲಿ ತೊಡಗಿಸಿಕೊಳ್ಬೇಕು ಅಂತ ಡಿಸೈಡ್ ಮಾಡಿದ್ದೆ.ಸ್ವಲ್ಪ ದಿನ ಅದನ್ನು ಚಾಚೂ ತಪ್ಪದೇ ಪಾಲಿಸಿಕೊಂಡೂ ಬಂದಿದ್ದೆ.ಆದರೆ ಬರ್ತಾ ಬರ್ತಾ ರಾಯರ ಕುದುರೆ ಕತ್ತೆಯಾದಂತೆ ಉದಾಸೀನ ಆವರಿಸಿ ಆ ಕ್ರಮ ತಪ್ಪಿಯೇ ಹೋಯಿತು.ಅದಕ್ಕೋ ನಾನು ಆರೋಪಿಸಿಕೊಂಡ ಕಾರಣಗಳು‌ ನೂರಾರು.ಕೆಲಸದ ಒತ್ತಡ, ಮಕ್ಕಳ ನಡುವೆ ಮನೆಯಲ್ಲಿ ಯಾವುದೇ ಬಿಡುವು ಸಿಕ್ಕದೇ ಇರವುದು...ಆದರೆ ಯೋಚಿಸುತ್ತಾ ಕೂತರೆ ಅದೆಷ್ಟು ಸುಳ್ಳುಗಳ ಸರಮಾಲೆ ಇದು ಅಂತ ಥಟ್ಟನೇ ಹೊಳೆದು ಬಿಡುತ್ತದೆ.

ಸಧ್ಯಕ್ಕೆ ತಲೆಯಲ್ಲಿ ಏನೂ‌ ಬೆಳೆಯುತ್ತಿಲ್ಲ, ಖಾಲಿಯಾಗಿದೆ ಅನ್ನುವ ಅರಿವಾಗಿ ಬೇರೇನಾದರೂ ಮಾಡುವ ಅಂತ ಗಹನವಾಗಿ ಯೋಚಿಸಿ, ಸುಮ್ನೆ ಪೆನ್ನು ಹಿಡ್ಕೊಂಡು ತಲೆಕೆರೆದುಕೊಂಡು ಕೂತ್ಕೊಳ್ಳುವುದಕ್ಕಿಂತ ಏನಾದರೂ ಓದೋಣ...ಅಧ್ಯಯನ ಮಾಡುವ ಅನ್ನುವ ನಿರ್ಧಾರ ಮಾಡಿದೆ. ಅದೇ ಸಂಜೆ ಸೀದಾ ಸ್ವಪ್ನ ಬುಕ್ ಹೌಸ್ ಗೆ ಹೋಗಿ ಕುಮಾರವ್ಯಾಸ ಭಾರತವನ್ನು ಬಹಳ ಪೂಜ್ಯನೀಯ ಭಾವನೆಯಿಂದ ಸುಮಾರ ಎರಡು ಸಾವಿರ ತೆತ್ತು ಮನೆಗೆ ತಂದೆ.ಅದೇ ರಾತ್ರಿಯಿಂದ ಅದರ ಓದೂ ಆರಂಭವಾಯಿತು.ತಂಬಾ ಖುಷಿ ಪಟ್ಟೆ ಕುಮಾರವ್ಯಾಸನ ಷಟ್ಪದಿಗಳನ್ನು ಓದುತ್ತಾ... ರಾತ್ರಿ ತಡವಾದರೆ ಬೆಳಗ್ಗೆ ಎದ್ದೂ ವಾಚನ ಮಾಡಿದ್ದೂ ಇದೆ.ಆದರೆ ಆ ಓದಿನ ತಂತು ಎಲ್ಲಿ ಯಾವಾಗ ಕಡಿದುಹೋಯಿತು ಅನ್ನುವುದು ನನ್ನ ನೆನಪಿಗೆ ಬರುತ್ತಿಲ್ಲ.ಮತ್ತೆ ಮುಂದುವರೆಸಬೇಕು ಅನ್ನುವ ಧೃಡ ಸಂಕಲ್ಪ ಮಾತ್ರ ಈಗ ಮನದಲ್ಲಿ ಉಳಿದುಕೊಂಡಿದೆ.

ಅಲ್ಲಿಗೆ ನಿಲ್ಲದೇ ಮಂಗಳೂರು ಗ್ರಂಥಾಲಯದಿಂದ ಹದಿನೈದು ದಿನಗಳಿಗೊಮ್ಮೆ ಮೂರು ಪುಸ್ತಕಗಳನ್ನು ತಂದು ಓದಲು ಶುರುಮಾಡಿದೆ.ಅದೊಂದು ವೈವಿಧ್ಯಮಯವಾದ ಓದು.ಬಹಳ‌ ಉಲ್ಲಾಸವಿತ್ತು.ಓದಲು ಪೂರಕವಾದ ಒಂದು‌ ವಾತಾವರಣ ನನ್ನ ಕೆಲಸದಲ್ಲಿಯೂ ಇತ್ತು.ಆದರೆ ಯಾವಾಗ ರೀವ್ಯಾಂಪ್ ಕೆಲಸ ಶುರು ಆಯಿತೋ ಮತ್ತೆ ಓದಲು ಆಗಲೇ ಇಲ್ಲ.ಸುಮ್ಮನೇ ಮೂರು ಪುಸ್ತಕಗಳನ್ನು ತಂದು ಹಾಗೆಯೇ ವಾಪಾಸು ಕೊಡುವ ಪರಿಸ್ಥಿತಿ. ಈಗ ಆ ರಗಳೆಯೇ ಬೇಡ ಅಂತ ತೀರ್ಮಾನಿಸಿ ಒಂದೇ ಪುಸ್ತಕ ತಂದರೂ ಅದು ವಾಪಾಸು ಕೊಡುವ ದಿನ ಮೀರಿ ಹೋಗಿದೆ.ಆದರೂ ತೆರೆದು ನೋಡಲು ಆಗದ ಕೆಲಸದ ಒತ್ತಡ.

ಬರೆಯುವ ಮತ್ತು ಓದಿನ ವಿಷಯ ಹೀಗಾದರೆ ಹಲವಾರು ಕಾರ್ಯಕ್ರಮಗಳಿಗೆ ಹೋಗಬೇಕೆಂದುಕೊಂಡರೂ ಹೋಗಲಾಗದೇ ಬಹಳ ಬೇಸರಗೊಂಡಿದ್ದೇನೆ.ಪುಸ್ತಕ ಬಿಡುಗಡೆ ಕಾರ್ಯಕ್ರಮಗಳು ಇದರಲ್ಲಿ ಪ್ರಮುಖವಾದವುಗಳು.ಪಾಪುಗುರು, ಹೊಸಪೇಟೆಗುರು...ಹೀಗೆ ತಪ್ಪಸಿಕೊಂಡ ಪುಸ್ತಕ ಬಿಡುಗಡೆ ಸಮಾರಂಭಗಳೆಷ್ಟೋ.ಸಾಹಿತ್ಯ ಲೋಕದ ದಿಗ್ಗಜರು, ಆತ್ಮೀಯರು ಎಲ್ಲರನ್ನೂ ಭೇಟಿಯಾಗುವ ಒಂದು ಅವಕಾಶ ಕೈಜಾರಿಹೋಯಿತು.ಹಲವಾರು ಹೇಳಲು ಆಗದ ಕಾರಣಗಳು ಇದರ ಹಿಂದಿವೆ.ಇದನ್ನೆಲ್ಲಾ ಮೀರಿ ಹೋಗಲು ಆಗದೇ ಅನ್ನುವ ಪ್ರಶ್ನೆ ಮಾತ್ರ ಮತ್ತೆ ಮತ್ತೆ ಕಾಡುವುದುಂಟು.ನನ್ನನ್ನು ನಾನು ಕಳೆದು ಹೋಗುವ ಇಂತಹ ನನ್ನದೇ ಭಾವಲೋಕದ ಉತ್ಕಟ ಕ್ಷಣಗಳನ್ನು ಅನುಭವಿಸಲು ಯಾವುದೇ ಮಾರ್ಗವನ್ನಾದರೂ ತುಳಿಯಲು ಇನ್ಮುಂದೆ ಸಿದ್ಧವಾಗಬೇಕಿದೆ.

ಜೀವನ ಅನ್ನುವುದು ದೇವರು ಕೊಟ್ಟ ಒಂದು ಪ್ಯಾಕೇಜ್... ಅದರಲ್ಲಿ ನಮಗೆ ಬೇಕಾದದ್ದು, ಆ ಕ್ಷಣಕ್ಕೆ ಬೇಡವಾಗಿದ್ದು ಎಲ್ಲವೂ ಇದೆ.ಒಂದನ್ನು ಆಯ್ಕೆ ಮಾಡಿ ಇನ್ನೊಂದನ್ನು ಬೇಡ ಅಂದರೆ ಅದು ಆಗಲಿಕ್ಕಿಲ್ಲ.ಇಡಿಯಾಗಿಯೇ ಸ್ವೀಕರಿಸಬೇಕು.ಪ್ರತಿಕೂಲ ಪರಿಸ್ಥಿತಿಯನ್ನೂ ಹೇಗೆ ನಮಗೆ ಇಷ್ಟವಾಗುವ ತರಹ ಬದುಕುವುದೆಂದು ನಿರಂತರವಾಗಿ ಯೋಚಿಸುತ್ತಾ ಆ ಕಡೆಗೆ ಕಾರ್ಯ ಪ್ರವೃತ್ತರಾಗುವುದೊಂದೇ ನಮ್ಮ ಕೈಯಲ್ಲಿರುವುದು.ಮತ್ತು ಅದನ್ನಷ್ಟೇ ನಾವು ಮಾಡಬೇಕಾಗಿರುವುದು.ಈ ಸಣ್ಣ ಮಕ್ಕಳ ಬೆಳವಣಿಗೆ, ಆಟಪಾಠ, ಕೀಟಲೆ, ಅಳು,ನಗು ಎಲ್ಲವನ್ನೂ ಆಸ್ವಾದಿಸುವ ಕಾಲ.ಅದೇ ಸಮಯದಲ್ಲಿ ನನಗೆ ಕವಿಗೋಷ್ಠಿಯೂ ಆಗಬೇಕು, ಕಾರ್ಯಕ್ರಮಗಳೀಗೂ ಹೋಗಬೇಕೆಂದರೆ ಅದಾಗಲಿಕ್ಕಿಲ್ಲ. U have to choose ... ಆಯ್ಕೆಗಳನ್ನು ಮಾಡಲೇಬೇಕು ಮತ್ತು ಖಂಡಿತವಾಗಿಯೂ ನನಗೆ ಬೇಕಾದದ್ದನ್ನು,ಸಾಧ್ಯವಾಗುವುದನ್ನಷ್ಟೇ ಮಾಡುತ್ತೇನೆ.ಉಳಿದು ಹೋದದ್ದಕ್ಕೆ ಚಿಂತಿಸದೇ.

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು