Thursday 30 June 2011

ನಿರೀಕ್ಷೆ

ನೂರೆಂಟು ಹೊಸ ಕನಸುಗಳ ಹೊತ್ತು
ಹೊಸ ಸೀರೆ,ಮುಡಿ ತುಂಬಾ ಅರೆಬಿರಿದ ಮಲ್ಲಿಗೆ:
ಎಂದೋ ಕಾದು ಕುಳಿತಿದ್ದೇನೆ  ನಾನು,
ಬರುವನೇನೆ ಸಖಿ ಚೆಲುವ?

ಅಂದು ಬಂದಿದ್ದ ಹೊಸ ಹುಡುಗ
ಆಹಾ! ಚಿಗುರು ಮೀಸೆ ಸುಂದರಾಂಗ;
ಹೊಟ್ಟೆ ತುಂಬಾ ಉಪ್ಪಿಟ್ಟು ಕಾಫಿ
ಕುಡಿದು ಎಲ್ಲಿ ಮಾಯವಾದ?

ನಿನ್ನೆ ಬಂದಿತ್ತು ಅವನಿಂದ ಉತ್ತರ,
ಸ್ವಾಮೀ ನಾನು ಆರಡಿ, ನಿಮ್ಮ ಹುಡುಗಿ
ಬರೇ ನಾಲ್ಕಡಿ,ನನ್ನ ಕ್ಷಮಿಸಿಬಿಡಿ;
ಕುಸಿದು ಬಿತ್ತು ಮತ್ತೊಂದು ಆಶಾ ಗೋಪುರ.

ರೂಪ ಬಣ್ಣ,ಹಣ ಅಂತಸ್ಥಿಕೆ,
ನಿಮ್ಮ ಆಸೆಗಳಿಗೆ ಎಲ್ಲಿದೆ ಅಂಕೆ?
ನೆರೆಹೊರೆ ಮಂದಿಗೊಂದಿ ಎಲ್ಲ ವಿಚಾರಿಸಿ,
ಇನ್ನು ತೀರಲಿಲ್ಲವೇ ನನ್ನ ಮೇಲಿನ ಶಂಕೆ?

ಹೇಳುತ್ತೇನೆ ಕೇಳು ಹುಡುಗ
ನನಗೂ ಮನಸ್ಸಿದೆ,ಹುಡುಗಾಟ ಸಲ್ಲ;
ಎಲ್ಲದಕ್ಕೂ ಹೊಂದಿಸಲು ರೇಟು,
ನಾನೇನು ಮಾರ್ಕೆಟಿನ ಹೊಸ ಸರಕೆ?

ನಿಮಗೋ ದಿನಕ್ಕೊಂದು ಹಾಡು,ಬಾಡದ ಹೂವು
ಕೇಳಿದಿರಾ ಎಂದಾದರು ನನ್ನ ಇಸ್ಟವನ್ನ?
ಹೃದಯದಲ್ಲಿ  ಬಚ್ಚಿಟ್ಟ ಪ್ರೇಮ ಪಲ್ಲವಿ;
ಕೇಳುವವರ್ರ್ಯಾರು  ಎನ್ನ ಭಾವಗೀತೆಯನ್ನ?

ಮತ್ತೆ ಸಿಂಗರಿಸಿಕೊಂಡು ಕೂತಿದ್ದೇನೆ
ಮನದಲ್ಲೊಂದು ಹೊಸ ಕವನ,ಹೊಂಬಣ್ಣ;
ಬರುವ ಗಂಡಾದರೂ ಒಪ್ಪಲಿ ಎನ್ನ,
ಇಂತಹ ಪರೀಕ್ಷೆ ಏನು ಚೆನ್ನ?














Wednesday 29 June 2011

modala kavana

ದಿನಕರನಿಗೆ

ಬಾನಂಚಿನಲಿ ಕತ್ತಲ ಮಸುಕು ಇಣುಕಿ
ಹಕ್ಕಿಗಳು ವಿರಹ ಗೀತೆ ಗುನುಗುತಿರುವಾಗ,
ಬರಲಿರುವ ನಿಶೆಗೆ ಹೆದರಿ ಹೋಗಿ 
ಮುಖವೆತ್ತದೆ  ಕಮಲ ಬಾಡುತಿರುವಾಗ,
    ಕರಗಿ ಹೋಗದಿರು ರವಿ
    ಇರುಳ ಮರೆಯಾಗಿ.
ಅಜ್ಞಾನದ ಮುಸುಕು ಎಲ್ಲೆಡೆ ಹರಡಿ
ಜ್ಞಾನದ ದೀಪ ನಂದಿ ಹೋಗಿರುವಾಗ,
ಅಲೆಗಳ ಆರ್ಭಟವಿಲ್ಲದೆ ಹೋಗಿ
ಕಡಲ ಒಡಲು ಬತ್ತಿ ಹೋಗಿರುವಾಗ,
    ಕರಗಿ ಹೋಗದಿರು ರವಿ
    ಇರುಳ ಮರೆಯಾಗಿ.
ಕಡಲ ತೀರದಿ ಮೂಡುವ ನಿನ್ನ
ಹೊಂಬಣ್ಣ ನೋಡಲು ಹವಣಿಸುತಿರುವಾಗ,
ಮನ ಸೂರೆ ಮಾಡುವ ದಿವ್ಯ ರೂಪವ
ಚಿತ್ರಿಸಲು ನಾಂದಿ ಹಾಡಿರುವಾಗ,
    ಕರಗಿ ಹೋಗದಿರು ರವಿ
    ಇರುಳ ಮರೆಯಾಗಿ.
ಕಡಲ ತೀರದ ತಲ್ಪದಿ ಕುಳಿತು
ಕುಂಚ ಹಿಡಿದು ಚಿಂತಿಸುತಿರುವಾಗ,
ಮನದಲ್ಲಿ ಮೂಡುವ ಕಲ್ಪನೆಗಳಿಗೆ
ರೂಪ ನೀಡಲು ಕಾತರಿಸುತಿರುವಾಗ,
     ಕರಗಿ ಹೋಗದಿರು ರವಿ
     ಇರುಳ ಮರೆಯಾಗಿ.

(ಸ್ಫೂರ್ತಿ: ಹಾಡಿ ಬಿಡು ಕೋಗಿಲೆಯೇ ಕಾಯದೆ ಚೈತ್ರಕ್ಕಾಗಿ  , ಕವನ) 



Tuesday 28 June 2011

ಗಾಡಿ 

ನಿಂತಿದೆ ನನ್ನೊಂದಿಗೆ ನನ್ನ ಗಾಡಿ,
ಬೆಳಿಗ್ಗೆಯಿಂದ ಎಳೆದೆಳೆದು ಸುಸ್ತಾಗಿ 
ದಣಿದು ನಿಂತಿದ್ದೇನೆ,
ಒಂದಿಸ್ತ್ತು ವಿರಾಮಕ್ಕಾಗಿ.
ಬದುಕು ಜಟಕಾ ಬಂಡಿ,
ಓಡಿದರೆ ಓಟ, ಮಾತ್ರ ನನ್ನ ಆಟ;
ನನ್ನ ಗಾಡಿಗೇನು ಗೊತ್ತು?
ತೋರಿಸುವುದುಂಟು ಆಗಾಗ ನಖರ .
ಬಾರಕೊಲಿನ ರುಯ್ಯನೆ ಗಾಳಿ,
ಬಾಯಿ ತುಂಬಾ ನಿಲ್ಲದ ಬೈಗಳು 
ಅದಕ್ಯಾಕೋ ತುಂಬಾ ಇಷ್ಟ.
ನನ್ನ ಹೊಟ್ಟೆ ತುಂಬಿಸಲು ಓಡಿ ಓಡಿ,
ಸಡಿಲಗೊಂಡ ಚುರುಕು ಚಕ್ರಗಳು.
ಗಾಡಿ ನಿಂತರೆ ಬದುಕು ನಿಂತ ನೀರು.
ಸಾಗುತ್ತಿರಲಿ ಮುಂದೆ ಮುಂದೆ,
ಎಂದೆಂದೂ ನಿಲ್ಲದೆ: ಬದುಕು ನಡುಗದೆ.
ಇರುಳಿನಾಚೆಗೂ ಮತ್ತೆ ಹಗಲಿದೆ,
ವಿರಾಮದ ನಂತರ ಕೆಲಸವಿದೆ ಮುಂದೆ,
ಇಲ್ಲದೆ ಹೋದರೆ ನನ್ನದೇನಿದೆ ಇಲ್ಲಿ?
ಗಾಡಿ ಓಡುತ್ತಿದೆ;
ಜಗತ್ತು ಸಾಗುತ್ತಿದೆ. 



ಅಭಿವ್ಯಕ್ತ 


ಬಾನಎತ್ತರಕ್ಕೇರುವ ಮಾನವನ ಆಸೆ,
ಇರಬೇಕು ತನ್ನ ಇತಿಮಿತಿಗಳರಿವು;
ಬೇರುಗಳ ನೆಲದಲ್ಲಿಯೇ ಆಳಕ್ಕಿಳಿಸಿ 
ಮಣ್ಣಿನ ಸತ್ವ,ಸಂಸ್ಕೃತಿಯ ಹೀರಿ,
ಮಾಡಬೇಕು ಗಗನ ಚುಂಬಿಸುವ ಆಸೆ.
ರೆಕ್ಕೆ ಮೂಡಿದೊಡನೆಯೇ ಹಾರುವ 
ಪುಟ್ಟ ಹಕ್ಕಿಯ ಬಯಕೆ,
ಕನ್ನಡಿಯೊಳಗಿನ ತನ್ನ ಪ್ರತಿಬಿಂಬಕ್ಕೆ
ತಾನೇ ಮುತ್ತಿಕ್ಕಿದಂತೆ;
ಬಿಸಿಲುಗುದುರೆಯ ಬೆನ್ನ ಹತ್ತಿ 
ಮಾಯಾ ಜಿಂಕೆಯ ಬೇಟೆ?
ಕೈಗೆಟಕುವುದು ಅಂದುಕೊಳ್ಳುವಾಗ
ಮರೆಯಾಗುವುದು ನೆರಳು.
ಕಾಗದದ ದೋಣಿಯಲ್ಲಿ ದಡ ಸೇರುವ ತವಕ,
ಮುಳುಗುವ ಸೂರ್ಯನ ಹಿಡಿದಿಡುವ ಧಾವಂತ,
ಭಾವುಕ ಮನದ ನವಿರು  ಅಭಿವ್ಯಕ್ತಿ.
ಬದುಕು

ಬದುಕು, ಹಾಗಂದರೇನು?
ನೋವು ನಲಿವಿನ ಮಿಶ್ರಣವೇ?
ನಿನ್ನೆ ಕಂಡ, ನಾಳೆ ಕಾಣದ
ವರ್ತಮಾನದ ಸಮಸ್ಯೆಯೇ?
ಜಾತಿ,ಮತ,ಧರ್ಮದ ಭದ್ರ ಗೋಡೆಯ
ನಡುವೆ ತನ್ನತನವ
ಮರೆಯುವ ಪಂಜರವೇ?
ಅಥವಾ
ಕಾಲದ ಸರಳುಗಳ ಹಿಂದೆ 
ಬಂಧಿಯಾಗಿ ನರಳಿ 
ಬೆಳಕು ಕಾಣುವ ನೀರೀಕ್ಷೆಯೇ?
ಅರ್ಥವಾಗುತ್ತಿಲ್ಲ;
ಹಾಗಾದರೆ ಮತ್ತೇನು?
ಜನನ ಮರಣಗಳ ನಡುವೆ 
ಸಾಗುವ ಕವಲು ದಾರಿ,
ನಡುವೆ ಅದೆಷ್ಟೋ ತಿರುವುಗಳು;
ದಾರಿಯ ಆಯ್ಕೆ ಮಾತ್ರ
ಅವರವರಿಗೆ ಬಿಟ್ಟಿದ್ದು,
ಅವರವರ ಬುದ್ದಿಗೆ ತೋಚಿದ ಹಾಗೆ.
ಅಲ್ಲ,  ನಮಗ್ಯಾಕೆ ಬೇಕು ಬದುಕಿನ 
ಅರ್ಥ ಹುಡುಕುವ ಸಾಹಸ?
ಬನ್ನಿ,  ಮೊದಲು 
ಬದುಕಲು ಕಲಿಯೋಣ; ಏನಂತೀರಿ?.



Monday 27 June 2011

ಹತಾಶೆ

ಬಾಳ ಹಾದಿಯ ತುಂಬಾ
ಚೆಲ್ಲಿದ್ದ ಕನಸುಗಳ ಎತ್ತಿಕೊಳ್ಳಲಾಗಲಿಲ್ಲ;
ಬಣ್ಣ ಕಳೆದು ಹೋಗುವ ಮುನ್ನ
ಬದುಕ ಕಟ್ಟಿ ಕೊಳ್ಳಲಾಗಲಿಲ್ಲ;
ಪ್ರತೀ ಮುಂಜಾವು ಎಬ್ಬಿಸಿದರೂ
ಕಣ್ಣು ತೆರೆದು ನೋಡಲಾಗಲೇ ಇಲ್ಲ.




ಕಾರಣ

ನಿನ್ನ ನಗುವಿಗೆ 
ಕಾರಣ
ಹೇಳಿ  ಹೋಗು ಗೆಳತೀ;
ಇಲ್ಲದಿದ್ದರೆ
ಈ ಪ್ರೀತಿಗೆ 
ನಾನು ಜವಾಬ್ದಾರನಲ್ಲ.


ಅಗತ್ಯ

ನೂರು ಸಲ ಯೋಚಿಸಿದ್ದೆ 
ನಿನ್ನ ಮದುವೆ
ಆಗುವ ಮೊದಲು;
ನನಗೇನು ಗೊತ್ತಿತ್ತು
ಮತ್ತೊಂದು ಸಲ 
ಅಗತ್ಯ ಇತ್ತೆಂದು?.



                                                                                                                                        ಮದುವೆ

ಮದುವೆ ದಿನದ 
 ಗಮ್ಮತ್ತೆ?;
ವರುಷ ಮೀರಿದರೆ
ನಾಪತ್ತೆ?.


ಈ ಕ್ಷ್ಶಣ 

ಈಗಿರುವ ಕ್ಷ್ಶಣ
ಜೀವನದ
ಅತ್ಯಮೂಲ್ಯ ಹೊತ್ತು;
ಕಾಲಕ್ಕೆ
ಹಿಂದಕ್ಕೋಡಿ
ಅಭ್ಯಾಸವಿಲ್ಲ!.

    ಕ್ಷ್ಶಣಿಕ 

ಭಾವನೆಗಳು 
ಉಧ್ಭವಿಸುವ
ಕ್ಷ್ಶಣ
ಮಾತ್ರ
ಅದರ ತೀವ್ರತೆ!

       ವಿಸ್ಮಯ

ನನ್ನ ಬಗ್ಗೆ ಬೇಸರಿಸಿಕೊಳ್ಳಲು 
ನಿನಗೆ ನೂರು 
ಕಾರಣಗಳು ಸಿಗಬಹುದಾದರೆ 
ಹೆಮ್ಮೆಗೆ
ಒಂದೂ ಸಿಗಲಾರದೆ?