Monday 25 July 2011

ಭಾವನಾ    


ಯಾವುದೋ ಭಾವ ಯಾರಿಗೋ ಮೀಸಲು
ಹೃದಯದೊಳಗಿನ ತುಮುಲ ಬಲ್ಲವರು ಯಾರು?

ಮನಸು ಮನಸಿನ ಮಾತು ಅರಿಯುವ ಮೊದಲೇ
ಸ್ವಂತ ನನಗೆಂದು ಕಾಡುವುದು ತರವೇ?;
ಅಂತರಂಗದ ದನಿಯ ಕೇಳುವಾ ಮೊದಲೇ
ಇನ್ನು ಸಾಕೆಂದು ಹೊರಡುವುದು ಸರಿಯೇ?.

ಹುಚ್ಚು ಮನಸಿಯ ತುಂಬ ನಿನ್ನ ವದನದ ಬಿಂಬ
ಕಣ್ಣೀರುಗರೆಯದ ಕಣ್ಣುಗಳೇ ಭಾರ;
ಮೂಕ ಹೃದಯದ ಕದವ ತೆರೆದ ಮಾತಿನ ಲಹರಿ
ಭಾವ ಮರೆಸುವ ನಗುವು ಎಲ್ಲೋ ದೂರ. 

ಮೌನ ಮಾತಿನ ನಡುವೆ ಎಂದೂ ನಿಲ್ಲದ ಜಗಳ
ಸ್ನೇಹ ಪ್ರೀತಿಯ ಸಂಕ ಕಟ್ಟುವವರು ಯಾರು?;
ಮನಸು ಹೃದಯದ ಬೆಸುಗೆ,ಭಾವ ಬಂಧನ ಸರಳ
ಹಕ್ಕಿ ಹಾಡಿನ ಕೊರಳ ಮರೆತವರು ಯಾರು?


Sunday 24 July 2011

ಅಪ್ಪನಾಗಿದ್ದೇನೆ 


ಈಗೀಗ ಎಲ್ಲವೂ ಅರ್ಥವಾಗುತ್ತಿದೆ,
ಅಪ್ಪನ ಅಸಹನೆ,ಅಮ್ಮನ ತೊಳಲಾಟ 
ಮಕ್ಕಳ ಬಗೆಗಿನ ಅವರ ತಲ್ಲಣ;
ಅವರ ಹಿತನುಡಿಗೆಲ್ಲಾ ಕಿವುಡಾಗುತ್ತಿದ್ದ ,
ಅವರ ಆದರ್ಶಗಳಿಗೆಲ್ಲಾ ಕುರುಡಾಗುತ್ತಿದ್ದ,
ಅವರ ನಂಬಿಕೆಗಳ ಬುಡ ಕತ್ತರಿಸುತ್ತಿದ್ದ,
ನಿನ್ನೆಯವರೆಗಿನ ಕ್ಷಣಗಳ ಬಗ್ಗೆ ಮರುಕವಿದೆ.
ನಿರೀಕ್ಷೆಯ ಅವರ ಕಣ್ಣುಗಳಲ್ಲಿ ಕಂಬನಿ 
ಮಳೆಗರೆದ ದಿನಗಳೂ ಹಸುರಾಗಿವೆ.
ಅವರ ಪ್ರೀತಿ ನಾಟಕವೆನಿಸುತ್ತಿತ್ತು.
ವೃದ್ದಾಪ್ಯದ ಅವರ ಸೇವೆಗೆ ನಮ್ಮನ್ನು 
ತಯಾರು ಮಾಡುತ್ತಿದ್ದರೇನೋ?
ಅವರ ಬೆಂಬಲದಲ್ಲೆಲ್ಲೋ ಅತಿ ಹಂಬಲದ 
ನಿರೀಕ್ಷೆ ಕಾಣುತ್ತಿದ್ದಾಗ,ಪಡುತ್ತಿದ್ದ
ಅವರ ಮರುಕದ ಬಗ್ಗೆ ನೊಂದುಕೊಂಡಿರಲಿಲ್ಲ.
ತೀರ ನಿನ್ನೆಯವರೆಗೂ,
ನನ್ನ ಮಗು ನನ್ನ ನೋಡಿ 
ಕಣ್ಣರಳಿಸಿ ನಕ್ಕು ನನ್ನ
'ಅಪ್ಪಾ' ಎಂದು ಕೂಗುವವರೆಗೂ!.

ಈಗೀಗ ಎಲ್ಲವೂ ಅರ್ಥವಾಗುತ್ತಿದೆ,
ಯಾಕೆಂದರೆ ನಾನು ಅಪ್ಪನಾಗಿದ್ದೇನೆ.

Wednesday 13 July 2011

ಬಿಡುಗಡೆ

ಜೇಡರ ಬಲೆಗೆ ಕನಸಿನ ಕುಸುರಿ
ಅಂಟಿ ಕುಳಿತಿದೆ ನಂಟನು ಬಿಡದೆ;
ಭಾವದ ಸುಳಿಗೆ ಮನಸಿನ ಲಹರಿ
ಬಿಡದೆ ತಿರುಗಿದೆ, ಸಂಕಟ ಪಡದೆ?

ಗಗನದ ಮೇಲೆ ಮಿನುಗುವ ಸಾಲೇ
ನೋವ ಕಾವನು ಸ್ವಲ್ಪ ಮರೆಸೀತೇ?;
ಸಾಗರದೊಳಗೆ ಅಲೆಗಳ ಲೀಲೆ
ತುಮುಲ ತೆರೆಯನು ಸ್ವಲ್ಪ ಸರಿಸೀತೇ?

ಹಕ್ಕಿಯ ಬಳಗ ಹಾರುತ ದೂರ
ಅಳುವ ಒಡಲನು ನಕ್ಕು ನಗಿಸೀತೇ?
ಹೂಬನದೊಳಗೆ ಹಾಡುವ ದುಂಬಿ
ಸುಂದರ ಬದುಕ ಕದವ ತೆರೆಸೀತೇ?



Friday 1 July 2011

ನನ್ನವಳಿಗೆ

ಹೆಜ್ಜೆ ಗುರುತು ಮೂಡಿದೆ
ಮನದಂಗಳದಲ್ಲಿ ನಿನ್ನದೇ;
ನಿನ್ನ ನೆನಪ ಮಧುರ ವೀಣೆ
ಮೀಟುತ್ತಿದೆ ನನ್ನೆದೆ.

       ಭರವಸೆಗಳ ಕಾರಂಜಿ
       ಚಿಮ್ಮುತ್ತಿದೆ ಮೆಲ್ಲಗೆ;
       ಮೈಮನಗಳಿಗೆ ಕಂಪೆರೆಯುತ್ತಿದೆ 
       ನೀ ಮುಡಿದಾ ಮಲ್ಲಿಗೆ.

ನಿನ್ನ ಸಣ್ಣ ನೋಟಕ್ಕೆ 
ಬದುಕ ಕಿಟಕಿ ತೆರೆದಿದೆ;
ಬೆಚ್ಚನೆಯ ಹೂ ಸ್ಪರ್ಶಕ್ಕೆ
ಬಾಳಕೊಂಡಿ ಬೆಸೆದಿದೆ.

       ಸರಸ ವಿರಸ ಏನೇ ಇರಲಿ 
       ಒಂದಾಗಿ ಬೆರೆಯುವ;
       ಸಮರಸದ ಸಾರ ಇರಲಿ
       ಪ್ರೀತಿಯಿಂದ ಸವಿಯುವ.

ಎನ್ನ ಮನದ ಮೂಕ ಭಾಷೆ
ಮಾತಾಗಿ ನುಡಿದಿದೆ;
ಒಡಲಾಳದ ಭಾವ ತೃಷೆ
ಕವಿತೆಯಾಗಿ ಹಾಡಿದೆ.







ಋಣ 

ಪ್ರಿಯೆ
ನೀನು ನಕ್ಕು ನಲಿದು
ನನ್ನೊಂದಿಗಿದ್ದ
ಕ್ಷಣಗಳಿಗೆ ಹೇಗೆ ಬೆಲೆ ಕಟ್ಟಲಿ?
ಅಂದಾಗ
ಸಿಹಿ ಮುತ್ತನಿತ್ತು
ಋಣಭಾರ ಹೆಚ್ಚಿಸಿದೆಯಲ್ಲೇ?


ನಿರ್ಲಕ್ಷ

ಅಂದೇ
ಹೇಳಬೇಕೆಂದಿದ್ದೆ
ನನ್ನೆದೆಯ ನೂರು
ಭಾವಗಳ,
ಯಾರೋ ಹೇಳಿದರು
ಅಮಾವಾಸ್ಸೆಯಂದು
ಚಂದಿರ ಮೂಡುವುದಿಲ್ಲ;
ಮುಂದೆ ಬೆಳದಿಂಗಳ
ನಾ ಕಾಣಲೇ ಇಲ್ಲ!.


ಇಷ್ಟ

ನನ್ನಾಕೆಗೆ ನಾನು ಮಾಡಿದ
ಅಡುಗೆ ಇಷ್ಟ,
ನನಗೆ ಅವಳ ಕೈ
ಅಡುಗೆ ಇಷ್ಟ;
ಮನೆಯಲ್ಲಿ ಮಾತ್ರ
ನಡೆಯುವುದು
ಅವಳ ಇಷ್ಟ!. 

ಹೆಸರು

ಮನೆಯಲ್ಲಿ ಯಾವ 
ಕೆಲಸ ನಡೆದರೂ
ಹೆಸರು ನನ್ನ ಹೆಂಡತಿಯದೇ;
ಅಡುಗೆ ವಿಷಯದಲ್ಲೂ
ಕೂಡಾ!.