Monday 26 September 2011

ಸಾಟಿ 

ಗೆಳೆಯಾ
ಸಾಗರ ಆಳಕ್ಕಿಳಿದು 
ಮುತ್ತುಗಳ ಹೆಕ್ಕಿ ತಂದು
ಪೋಣಿಸಿದ ಮುತ್ತಿನ ಹಾರ 
ಕೂಡಾ ಸಾಟಿಯಲ್ಲ;
ನೀ ನನಗಿತ್ತ
ಹೂ ಮುತ್ತಿಗೆ!.
ದೃಷ್ಟಿ 

ಕತ್ತು ಉದ್ದ ಮಾಡಿ ನೋಡುತಿದ್ದೇನೆ
ಆದರೂ ಎಲ್ಲವನ್ನು ನೋಡಲಾಗುತ್ತಿಲ್ಲ.
ಹಳೇ ಗೋರಿಯ ಮೇಲೆ ಅರಳಿ ನಿಂತ 
ಚೆಂಗುಲಾಬಿ,ಸಾಯುತ್ತಿರುವ ಬೇರು,
ಮರುಭೂಮಿಯಲ್ಲಿ ನಡೆದು ಸುಸ್ತಾದ
ಒಂಟೆಯ ಕಾಲಿನ ಗಾಯ,ಕೀವು ತುಂಬಿದ ಬಾವು;
ಸಾಗರದಾಳದಲ್ಲಿ ಅಸ್ತಿತ್ವಕ್ಕಾಗಿ 
ಓಡುತ್ತಿರುವ ಸಣ್ಣ ಮೀನುಗಳು,
ಕೆಲವು ಕಣ್ಣಿಗೆ ಕಾಣುತ್ತಿವೆ
ಮನಸ್ಸಿಗೆ ಗೋಚರಿಸುತ್ತಿಲ್ಲ.
ಮತ್ತೆ ಕೆಲವು ಕಣ್ಣಿಗೆ ಕಾಣುವಸ್ಟು
ಹತ್ತಿರದಲ್ಲೇ ಘಟಿಸುತ್ತಿವೆ.
ಅತ್ತ ಕಡೆ ಲಕ್ಷ ಕೊಡುವ ಅಗತ್ಯಕ್ಕೆ
ಯಾವ ಕಾರಣಗಳೂ ಸ್ಪಸ್ಟವಾಗುತ್ತಿಲ್ಲ.
ವಿಷಯಗಳಿಗೆ ವಾಚ್ಯವಾಗುವ;
ಸೂಕ್ಷ್ಮಗಳಿಗೆ ಸೂಚ್ಯಾವಾಗುವ,
ಕಲೆ ಎಲ್ಲರಿಗೂ ಕರಗತವಾಗುವುದಿಲ್ಲ.
ಅಭ್ಯಾಸವಾದವರು ಯಾವುದಕ್ಕೂ ಸ್ಪಂದಿಸುವುದಿಲ್ಲ,
ಅವರದ್ದು ಬೇರೆಯೇ ಲೋಕ.
ನೋಡಿದವರು ತೆರೆದುಕೊಳ್ಳುತ್ತಾರೆ,
ಕಣ್ಣು ಮುಚ್ಚಿದವರು ಮರೆಯುತ್ತಾರೆ.
ಇದು ಹೀಗೆಯೇ,ಅದು ಹಾಗೆಯೇ;
ಅಂತೇನೂ ಇಲ್ಲ.
ನೋಡುವ ದೃಷ್ಟಿಯಲ್ಲೇ ಲೋಕ.


Saturday 24 September 2011

ಅರಿವು


ಗೆಳತೀ 
ಹೃದಯ ಮಂದಿರದಲ್ಲಿಟ್ಟು
ಪೂಜಿಸಿದೆ ನಿನ್ನ;
ಆದರೆ ನಿನ್ನ ಒಲವು
ಬೇರೆ ಭಕ್ತನ ಮೇಲೆ ಇತ್ತು,
ಅರಿವಾಗಲಿಲ್ಲ!.
ಮಾತು-ಮುತ್ತು. 


ಮಾತಿಗೆ ಮಾತು ಬೆಳೆದರೆ
ಛಿದ್ರ ಸಂಸಾರ;
ತುಟಿಗೆ ತುಟಿ ಬೆರೆತರೆ
ಆನಂದ ಸಾಗರ!.

ಸತ್ಯ 


ಹಣಕ್ಕಾಗಿ ಮನುಷ್ಯ 
ಹೆಣಗಾಡುತ್ತಾನೆ;
ಎಲ್ಲಾ ದಕ್ಕಿದರೂ
ಕೊನೆಗೆ
ಹೆಣವಾಗುತ್ತಾನೆ!.

Friday 16 September 2011

ಇಲ್ಲದುದರೆಡೆಗೆ



ಕತ್ತಲ ಸಾಮ್ರಾಜ್ಯದಲ್ಲೂ
ಬೆಳಕಿಗಾಗಿ ಹಂಬಲಿಸಿದೆ;
ಮಿಂಚುಹುಳ ನಕ್ಕಿತು.
ಬರಡು ಭೂಮಿಯಲ್ಲೂ
ಹನಿ ನೀರಿಗಾಗಿ ಹುಡುಕಾಡಿದೆ;
ಓಯಸಿಸ್  ಉಕ್ಕಿತು.
ಸುತ್ತ ಮುತ್ತ ಪ್ರೀತಿಯ ಜೀವ ಇದ್ದರೂ
ನಿನ್ನ ಪ್ರೀತಿಗಾಗಿ ಪರಿತಪಿಸಿ
ಅವರ ದೂರವಿರಿಸಿದೆ;
ಜೀವನ ಕುಕ್ಕಿತು.



ಕಾರಣ

ನನ್ನ ನಗುವಿಗೂ 
ಅಳುವಿಗೂ
ಕಾರಣ ನೀನಲ್ಲ;
ಮಾಸಿ ಹೋದ ನೆನಪುಗಳು
ಹೃದಯ ಕಲಕುವುದಿಲ್ಲ!.

Thursday 15 September 2011

ಬೇಗ ಬಾ


ಆಡು ಬಾ ಕಾಡು ಬಾ,
ಬೇಸರವ ನೀಗು ಬಾ.
ಮನದ ತುಂಬಾ ಖಾಲಿ ಭಾವ
ತುಂಬು ಬಾ, ನೀ ಬೇಗ ಬಾ.

ಹನಿಗಾಗಿ ಕಾದ ಇಳೆ,ದೂರ ಎಲ್ಲೊ ಸೋನೆ ಮಳೆ
ಭೂಮಿ ಬಾನ ನಡುವೆ ಯಾಕೋ; ತೀರದಿಹ ಹುಸಿ ಮುನಿಸು.

ಹುಣ್ಣಿಮೆಯ ಚಂದ್ರನಿಲ್ಲ, ಆಗಸದಿ ತಾರೆ ಇಲ್ಲ
ಕತ್ತಲ ಮರೆಯೊಳಗೆ ಎಲ್ಲೊ; ಕೇಳದಿಹ ಪಿಸು ಮಾತು.

ಮುಗಿಲಿನ ಬಣ್ಣವೆಲ್ಲ, ಸಾಗರದಿ ಲೀನವಾಗಿ
ಬಿರುಗಾಳಿ ಬಯಲೆಲ್ಲಾ; ಸುಡುತಿಹುದು ತಂಗಾಳಿ.

ಶೂನ್ಯ ಭಾವ ಬಿಡದೆ ಕಾಡಿ, ಉದಯರವಿಗೂ ನಿಶೆಯ ಮೋಡಿ
ಸಮಯ ಸಾಗದಾಗಿದೆ; ನಿನ್ನ ಕನಸೂ ಬಾರದೆ?.



ನಮ್ಮ ಬಾಳು


ಮಾತಿನ ಅರಮನೆಯೇ ನಮ್ಮ ಬಾಳು ಗೆಳೆಯ
ಮೌನದ ಉಯ್ಯಾಲೆ ಜೀಕಬೇಕು ಅರೆ ಘಳಿಗೆ,
ಹಮ್ಮು ಬಿಮ್ಮು ಮುನಿಸು,ಸರಿಸಬೇಕು ತೆರೆಯಾ
ಮುತ್ತಿನ ಅರಿವಳಿಕೆ ಸುಖದಾ ದೀವಳಿಗೆ.

ನಿನ್ನ ನಗೆ ಅಲೆ ಅಲೆಯೂ ಸಂತಸದ ಹಾಲ್ಗಡಲು
ನಿನ್ನೊಲುಮೆ ಕ್ಷಣ ಕ್ಷಣವೂ ಹೂಮಳೆಯ ಕರಿಮುಗಿಲು,
ನೀನಿರೆ ಪಯಣಿಗ, ಆನುದಿನವು ಜೊತೆಯಾಗಿ
ನಡೆವ ಹಾದಿಯೆಲ್ಲ ನಲ್ಮೆಯ ಸ್ವಾಗತವು.

ಬಾಳಿನ ರಸ ಘಳಿಗೆ ಕನಸುಗಳೇ ನಿಜವಾಗಿ
ಸಂಸಾರ ವರ್ತುಲದಿ ಗೆಳೆತನವೆ ಸವಿಯಾಗಿ,
ಸುಮಗಳು ಅರಳಿದಂತೆ ನಲಿಯುವ ಚಿಂತೆ ಮರೆತು
ಸ್ವರ್ಗದ ಸುಖವಿಲ್ಲೇ ಕಾಣಬೇಕು ಗೆಳೆಯ.

ನೀನಿಲ್ಲದೆ 


ಒಂದಿನಿತೂ ಬೇಸರವಿಲ್ಲದೆ ಕಳೆದ 
ನಿನ್ನೆಯ ಸಂಜೆಯೇ ಒಂದು ಅಚ್ಚರಿ;
ಸಂಜೆಯಾದರೆ ಸಾಕು 
ಕಾಡುವ ನಿನ್ನ ಪಿಸು ಮಾತು
ಅರ್ಥವಿಲ್ಲದ ಹುಸಿ ಮುನಿಸು,
ಬೆಚ್ಚಗಿನ ಸ್ಪರ್ಶ,ಹೂಮುತ್ತು
ನಿನ್ನ ಬಗೆಗಿನ ನೆನಪುಗಳೇ ಹಾಗೆ.
ನೆನಪುಗಳು ಒತ್ತರಿಸಿದಾಗ 
ಮನದ ಮುಗಿಲಿನಲ್ಲಿ ಬೇಸರದ ಕಾರ್ಮೋಡ,
ಪದಗಳಲ್ಲಿ ಕಟ್ಟಿ ಕೊಡಲಾಗದ ನಿರ್ಭಾವುಕತನ.
ನೀನು ದೂರ ಇರುತಿದ್ದ ಪ್ರತಿ ಸಂಜೆ 
ಎಲ್ಲವೂ ಕಳೆದುಕೊಂಡ ಭಾವ;
ಲೋಕವೆಲ್ಲಾ ಜಡವಾಗಿ ಬಿದ್ದುಕೊಂದಂತೆ
ಚಲನೆಗೆ ನಿನ್ನ ಇರವೇ ಕೀಲಿ ಕೈ,
ಆ ತರ ಪ್ರತಿಭಟಿಸುತಿದ್ದ ಮನಸ್ಸು
ನೀನಿಲ್ಲದೆ ನಿರಾಳವಾಗಿದ್ದು ಹೇಗೆ?
ದೂರದ ಬೆಟ್ಟ ನಿನ್ನ ಕಣ್ಣಿಗೂ ನುಣ್ಣಗೆ ಕಂಡಿದ್ದು,
ಅರಳಿ ಹೂ ಬಿಡುತಿದ್ದ ಪ್ರೀತಿಗೆ
ಹೃದಯ ಮಂದಿರದ ಪೂಜ್ಯತೆಗೆ 
ನೀನೆ ಲೋಕ ಎಂದು ಮೈಮರೆತ ಮನಸ್ಸಿಗೆ,
ಉತ್ಕಟ ನಿರೀಕ್ಷೆಗಳಿಗೀಗ ಶೂನ್ಯ ಭಾವ.
ಬಿರುಗಾಳಿಯ ನಂತರದ ನಿಶ್ಯಬ್ದತೆ
ಸುನಾಮಿಯ ಬಳಿಕದ ಸ್ತಬ್ದತೆ,
ಈಗ ಮನಸ್ಸನ್ನವರಿಸಿರುವುದು ಸುಳ್ಳಲ್ಲ.
ಸಂಜೆಗಳು ಮರುಕಳಿಸುತ್ತಿವೆ,ನಾನಿಲ್ಲೇ ಕೂತಿದ್ದೇನೆ.
ನೀನಿಲ್ಲ ಅನ್ನುವುದೊಂದು ಬಿಟ್ಟರೆ
ಜಗತ್ತು ಇನ್ನು ಸುಂದರವಾಗಿದೆ.