Monday 14 August 2017

ಅಮ್ಮನು ನಿನ್ನನೆ ಕಂದಾ ಎನ್ನುತ
ಮನೆಯಲಿ ದಾರದಿ ಕಟ್ಟಿದಳು
ಮುಗ್ದನ ತೆರದಿ ಕಾಡುತ ನೀನು
ಬಾಯಲಿ ಜಗವನೆ ತೋರಿಸಿದೆ

ರಾಧೆಯು ನಿನ್ನಯ ಪ್ರೇಮವ ಬೇಡುತ
ಮನದಲಿ ಗುಡಿಯನು ಕಟ್ಟಿದಳು
ಎಲ್ಲಿಯೂ ನಿಲ್ಲದ ಯಮುನೆಯ ಹರಿವಲಿ
ನಾದದಿ ಜಗವನೆ ತೇಲಿಸಿದೆ

ಮೋಹದ ಪರದೆಯ ಮುಸುಕಲು ಮನದಲಿ
ಪಾರ್ಥನು ಕರ್ಮಕೆ ಮರುಗಿದನು
ಜ್ಞಾನದ ಗೀತೆಯ ಸಾರವ ಬೋಧಿಸಿ
ನರರನು ಯುದ್ದದಿ ಗೆಲ್ಲಿಸಿದೆ

ನನಗೇ ಬೇಕು ಅನ್ನುವ ಲೋಕಕೆ
ಸಿಗದೇ ನೀನು ನಗುತಿರುವೆ
ತನ್ನನು ಬಿಟ್ಟು ಕೃಷ್ಣನೇ ಆಗುವ
ಭಾವದಿ ಮಾತ್ರ ದಕ್ಕಿರುವೆ

ಕೃಷ್ಣಂ ವಂದೇ ಜಗದ್ಗುರುಂ

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಅಗ್ಗವಿದ್ದ ಹೊನ್ನಶೂಲ ಸಗ್ಗವಾಗಿ ಕಂಡುಬಂದು
ಬುದ್ದಿಯೆಲ್ಲ ಮಾಯೆಯಿಂದ ತಪ್ಪಿ ಹೋಗಿದೆ
ಒಗ್ಗದಿದ್ದ ಹೆಣ್ಣಕೂಡಿ ಸುಗ್ಗಿಯಾಗಿ ಸೇರಿನಿಂದು
ತನ್ನದಲ್ಲ ಠೀವಿಯಿಂದ ಅಪ್ಪಿಯಾಗಿದೆ

ಮೊಗ್ಗೆಯಾದ ಮೊದ್ದು ಹೂವು ಚೆನ್ನೆಯಾಗಿ ಸೂರೆಗೊಂಡು
ಮುದ್ದು ಮೀರಿ ಟೊಂಗೆಯಿಂದ ಅಂಕೆ ತಪ್ಪಿದೆ
ಬುಗ್ಗೆಯಾದ ಬಣ್ಣನೀರು ತನ್ನಮೇಲೆ ಹಾಕಿಕೊಂಡು
ಶುದ್ಧಿಯಾದ ಭಾವದಿಂದ ಅಂಟಿಕೊಂಡಿದೆ

ಜುಗ್ಗವಾದ ಹೆಣ್ಣುಹಾವು ಇಷ್ಟವಾಗಿ ಸುತ್ತಿಕೊಂಡು
ಹುತ್ತವೆಲ್ಲ ಸಾಲವಾಗಿ ಮೆತ್ತಿಕೊಂಡಿದೆ
ಸಿದ್ಧವಾದ ಚಿಕ್ಕೆತೇರು ಕಷ್ಟವಾಗಿ ಮೆಟ್ಟಿಬಂದು
ಸುದ್ದಿಯೆಲ್ಲ ಮೋಹವಾಗಿ ಮುತ್ತಿಕೊಂಡಿದೆ

ಬದ್ದವಾಗಿ ಸುಪ್ತತಾಪ ಸನ್ನೆಯಲ್ಲಿ ವಾಣಿಯಾಗಿ
ಹೊನ್ನನಾದ ವೀಣೆಗಿಂದು ತಪ್ತಗೊಂಡಿದೆ
ಶುದ್ಧವಾದ ಹಕ್ಕಿಕೂಗು ಸೊನ್ನೆಯಲ್ಲಿ ಲೀನವಾಗಿ
ಜೊನ್ನವಾದ ನೇಹಮಿಂದು ತೃಪ್ತಿಗೊಂಡಿದೆ

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

Saturday 12 August 2017

ಆಶಾಡದ ವಿರಹ ಕಳೆಯುತ್ತಿದ್ದಂತೆಯೇ ಮನಸ್ಸಿಗೆ ಏನೋ ಒಂದು ತೆರನ ನಿರಾಳ ಭಾವ. ಅದೇಕೊ ಗೊತ್ತಿಲ್ಲ, ನನಗೆ ಮೊದಲಿನಿಂದಲೂ ಆಶಾಡ ಅಂದ್ರೆ ಅಷ್ಟಕ್ಕಷ್ಟೇ. ಧೋ ಎಂದು ಸುರಿಯುವ ಮಳೆ ಭೂಮಿಗೂ ಬಾನಿಗೂ ಮಿಲನದೊಸಗೆಯ ಭಾಗ್ಯವನ್ನು ಕರುಣಿಸಿದರೆ ಇಳೆಯ ಪ್ರೇಮಿಗಳ ಪಾಲಿಗೆ ವಿರಹದ ಬೇಗೆ ಸುಡುವ ಕಾಲವಂತೆ, ಹೌದೋ ಅಲ್ವೋ ನನಗಂತೂ ಗೊತ್ತಿಲ್ಲ. ನನ್ನ ಅನುಭವಕ್ಕೆ ಎಂದೂ ಬಂದಿಲ್ಲ. ಆದರೆ ನನಗೆ ಆಶಾಡದ ಬಗ್ಗೆ ಬೇಸರ ಬರಲು ಮುಖ್ಯ ಕಾರಣ ಇದ್ದದ್ದು ಬೇರೆಯೇ ವಿಷಯದಲ್ಲಿ. ಜೂನ್ ನಲ್ಲಿ ಶಾಲೆ ಆರಂಭ ಆದ್ರೆ ಈ ನಾಗರಪಂಚಮಿ ಬರೋ ತನಕವೂ ನಿರಂತರ ಶಾಲೆ. ರಜೆ ಅಂತ ಶುರುವಾಗೋದು ಈ ನಾಗರಪಂಚಮಿಯಿಂದ. ನಮ್ಮ ಹಬ್ಬಗಳ ಸೀಸನ್ ಆರಂಭವಾಗೋದೂ ಈ ನಾಗರಪಂಚಮಿಯಿಂದಲೇ. ಅಲ್ಲೀತನಕ ನಮಗೆ ರಜೆ ಅಂತ ಸಿಗುತ್ತಿದ್ದುದು ಕೆಲವೇ ಸಂದರ್ಭಗಳಲ್ಲಿ ಮಾತ್ರ.

ಪಟಪಟ ಅಂತ ಶಾಲೆಯ ಹೆಂಚಿನಮೇಲೆ ಮಳೆಯ ದೊಡ್ಡ ದೊಡ್ದ ಹನಿಗಳು ಬಿದ್ದು ಜೋರಾದ ಶಬ್ದ ಬರುವಾಗ ಮೇಷ್ಟ್ರು ಪಾಠ ನಿಲ್ಲಿಸುತ್ತಿದ್ದರು, ಅಲ್ಲದೇ ಅಗ ಕವಿಯುವ ಮಳೆಯ ಕತ್ತಲೆಯಿಂದಾಗಿ ಕರೆಂಟ್ ಕನೆಕ್ಷನ್ ಇಲ್ಲದ ನಮ್ಮ ಶಾಲೆಯಲ್ಲಿ ಪಾಠ ಮಾಡಲೂ ಸಾಧ್ಯವಾಗುತ್ತಿರಲಿಲ್ಲ. ಆದರೆ ಮನೆಗೆ ಹೋಗೋ ಹಾಗಿರಲಿಲ್ಲ...ಹೆಚ್ಚು ಮಾತಾಡೊ ಹಾಗೂ ಇರಲಿಲ್ಲ. ಹಾಗೇನಾದ್ರೂ ಮಾಡಿದ್ರೆ ಹೆಸರು ಬರೆದಿಟ್ಟು ಮೇಷ್ಟ್ರಿಗೆ ಕಂಪ್ಲೇಂಟ್ ಮಾಡ್ಲಿಕ್ಕೆ ಕ್ಲಾಸ್ ಲೀಡರ್ ನ ಹದ್ದಿನ ಕಣ್ಣುಗಳು ಸದಾ ಜಾಗ್ರತವಾಗಿರುತ್ತಿದ್ದವು. ಕಟ್ಟಿ ಹಾಕಿದಂತಹ ಪರಿಸ್ಥಿತಿ ನಮ್ಮದು.

ಜೋರ್ ಮಳೆ ಬಂದಾಗ ಒಬ್ಬ ಬಂದು ಮೇಷ್ಟ್ರು ಪಾಠ ಮಾಡುವ ಕೋಣೆಗೆ ನುಗ್ಗುತ್ತಿದ್ದ. ಅವನು ಬರುತ್ತಿದ್ದಂತೆ ಕೆಲವು ಹುಡುಗರ ಕಣ್ಣು ಖುಷಿಯಿಂದ ಅರಳುತ್ತಿದ್ದವು. ಅವನು ಬಂದು "ಹೊಳೆಯಲ್ಲಿ ನೀರು ಹೆಚ್ಚಾಗಿದೆ, ತಡ ಆದ್ರೆ ಮತ್ತೆ ದೋಣಿ ಇಳಿಸ್ಲಿಕ್ಕೆ ಆಗಲ್ಲ..." ಅಂತ ಹೇಳುವಾಗ ಪರಿಸ್ಥಿತಿಯನ್ನು ನೋಡಿ ಮೇಷ್ಟ್ರು "ಪೆರಂಪಳ್ಳಿ ಮನೆಯಿದ್ದವರು ಎದ್ದು ನಿಲ್ಲಿ" ಅನ್ನುತ್ತಿದ್ದರು. ಈ ಮಾತಿಗೇ ಜಾತಕಪಕ್ಷಿಯಂತೆ ಕಾಯುತ್ತಿದ್ದ ಹಾಗೆ, ಈಗಾಗಲೇ ತಮ್ಮ ಮುರುಕು ಬ್ಯಾಗ್ ಗಳಿಗೆ ಪುಸ್ತಕವನ್ನು ತುಂಬಿಸಿ ಲಂಕೆ ಹಾರಲು ಸಿದ್ದನಾದ ಹನುಮಂತನಂತೆ ತುದಿಗಾಲಿನಲ್ಲಿ ನಿಂತ ನಾಲ್ಕು ಹುಡುಗರು ಎದ್ದು ನಿಲ್ಲುತ್ತಿದ್ದರು. ಮತ್ತೆ ಮೇಷ್ಟ್ರು, "ನೀವು ಹೋಗ್ಬಹುದು...ಹುಷಾರಾಗಿ ಕರ್ಕೊಂಡು ಹೋಗಪ್ಪ" ಅಂತ ಆ ವ್ಯಕ್ತಿಗೆ ಹೇಳೋವಾಗ ಮರಿಕಪಿಗಳು ಛಂಗನೇ ಜಿಗಿಯುತ್ತಿದ್ದವು. ಹೋಗುವಾಗ ಇಡೀ ಕ್ಲಾಸ್ ನತ್ತ ಒಮ್ಮೆ ಅವರು ನೋಡುವ ನೋಟ ನನಗಿನ್ನೂ ನೆನಪಿದೆ. ನಂತರ ನಮಗೆ ಪಾಠ ಕೇಳುವ ಯಾವ ಮೂಡೂ ಇರ್ತಿರ್ಲಿಲ್ಲ. ಛೇ...ಬಡ್ಡಿಮಕ್ಳು, ನಮ್ಮನ್ನು ಉರಿಸಿ ಹೋದ್ವು. ಅವರಿಗೆ ಮಾತ್ರ ಯಾವಗ್ಳೂ ರಜೆ ,ಮಳೆ ಬಂದ್ರೆ....ನಾವು ಮಾತ್ರ ಕುತ್ಕೊಳ್ಬೇಕು...ಸ್ವಾಮಿ ದೇವರೆ, ಇವತ್ತು ಯಾರದ್ರು ಸತ್ತೇ ಹೋಗ್ಲಿ...ಒಂದು ದಿನ ರಜೆಯಾದ್ರೂ ಸಿಗಲಿ ಅಂತ ಆ ದೇವರಲ್ಲಿ ಕೊನೆಗೆ ಮೊರೆಯಿಡುತ್ತಿದ್ದೆ. ಮತ್ತೆ ಎಷ್ಟೋ ಸಮಯದ ನಂತರ ಗೊತ್ತಾದದ್ದು ಮಳೆ ಬಂದಾಗ ಮಕ್ಕಳನ್ನು ಕರ್ಕೊಂಡು ಹೋಗಲು ಬರುತ್ತಿದ್ದ ವ್ಯಕ್ತಿ ಶಾಲೆಗೂ ಆ ಊರಿಗೂ ನಡುವೆ ಹರಿಯುತ್ತಿದ್ದ ನದಿಯಲ್ಲಿ ಜನರನ್ನು ಈ ಬದಿಯಿಂದ ಅ ಬದಿಗೆ ಸಾಗಿಸುತ್ತಿದ್ದ ದೋಣಿ ನಡೆಸುವ ಅಂಬಿಗ ಅಂತ. ಆ ಕಾಲದಲ್ಲಿನ್ನೂ ಸೇತುವೆ ಆಗಿರಲಿಲ್ಲ. ಸೇತುವೆಯಾಗಿ ಈಗಿನ ಮಕ್ಕಳಿಗೆ ಅ ಸೌಭಾಗ್ಯವೂ  ಇಲ್ಲ. ಇದೆಲ್ಲದ್ರಿಂದ ಮುಕ್ತಿ ಸಿಗುತ್ತಿದ್ದುದು ಶ್ರಾವಣ ಶುರು ಆದ ನಂತರ ಸಿಗುತ್ತಿದ್ದ ಸಾಲು ಸಾಲು ರಜೆಗಳಿಂದಾಗಿ. ಇಷ್ಟು ದಿನ ಸುರಿಸುರಿದು ಮೋಡಗಳೆಲ್ಲಾ ಬರಿದಾದ ಹಾಗೆ ಮಳೆಯೂ ಸ್ವಲ್ಪ ದಿನ ರಜೆ ಸಾರುವ ಕಾಲವೇ ಈ ಶ್ರಾವಣ. ಗಣೇಶನ ಹಬ್ಬ, ವಿಟ್ಲಪಿಂಡಿಯ ಸಡಗರದ ರಜೆಗಳ ನಡುವೆ ಶಾಲೆ ಇದ್ದ ದಿನವೂ ಒಂದು ಗಂಟೆಯಾದರೂ ಗ್ರೌಂಡ್ ನ ಮುಖ ಕಾಣುತ್ತಿದ್ದೆವು. ಇವೇ ಆಗಿನ ದೊಡ್ಡ ದೊಡ್ಡ ಖುಷಿಗಳು.

ಹಾಗಾಗಿ ಆಶಾಡ ಪ್ರೇಮಿಗಳನ್ನು ವಿರಹ ವೇದನೆಗಾಗಿ ಕಾಡಿ ಶ್ರಾವಣದ ಮಿಲನಕ್ಕಾಗಿ ಕಾಯುವಂತೆ ಮಾಡುತ್ತಿದ್ದರೆ, ರಜೆಯಿಲ್ಲದೆ, ಶಾಲೆಯಲ್ಲಿ ಆಟವೂ ಇಲ್ಲದೇ  ನಿರಂತರ ಪಾಠದಿಂದ ಬೇಸತ್ತ ನಾವೂ ಕೂಡಾ ಶ್ರಾವಣಕ್ಕಾಗಿ ಕಾಯುತ್ತಿದ್ದ ಕಾಲವೂ ಒಂದಿತ್ತು.
ನನಗೆ ಪುರಾಣದ ಪಾತ್ರಗಳು ಮೊದಲು ಪರಿಚಯವಾದದ್ದೇ ಡಾ| ರಾಜ್ ಸಿನಿಮಾಗಳ ಮೂಲಕ.ರಾಜ್ ಸಿನಿಮಾಗಳ ಹುಚ್ಚು ಅಭಿಮಾನಿಯಾಗಿದ್ದ ನಾನು ಅವರ ಪೌರಾಣಿಕ ಕತೆಯ ಸಿನಿಮಾಗಳನ್ನು ಬಹುತೇಕ ಎರಡೆರಡು ಸಲ ನೋಡಿದ್ದೇನೆ. ಅದರಲ್ಲೂ ಬಬ್ರುವಾಹನ, ಭಕ್ತ ಪ್ರಹ್ಲಾದ, ಮಯೂರ,ಸತ್ಯಹರಿಶ್ಚಂದ್ರದಂತಹ ಸಿನಿಮಾಗಳು ನನ್ನ ಮನಸ್ಸಿನಲ್ಲಿ ಉಂಟುಮಾಡಿದ ಬೆರಗು, ರೋಮಾಂಚನ ಇನ್ನೂ ಮಾಸದೆ ಹಸಿರುಹಸಿರಾಗಿವೆ. ಈಗಲೂ ಟಿ.ವಿ‌ಯಲ್ಲಿ ಬಂದರೆ ಅದೇ ಬೆರಗಿನಿಂದ ನೋಡುತ್ತೇನೆ.

ಬಬ್ರುವಾಹನ ಚಿತ್ರದ,  " ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ...", ಮಯೂರದ "ಈ ಮಣಿಕಿರೀಟ ನಿನಗೆ ಬೇಡವೆ? ಈ ರತ್ನ ಸಿಂಹಾಸನ ನಿನಗೆ ಬೇಡವೇ? ಈ ಸಾಮ್ರಾಜ್ಯ ನಿನಗೆ ಬೇಡವೇ? ಎಂದು ಅಕ್ಕರೆಯಿಂದ ಕೇಳುತ್ತಿದ್ದವಳು ನೀನೇ ಅಮ್ಮಾ?.....ಹೊಂಚು ಹಾಕಿ ಸಂಚು ಮಾಡಿ ವಂಚನೆಯಿಂದ ನಮ್ಮ ರಾಜ್ಯವನ್ನು ಕಬಳಿಸಿ ಮೆರೆಯುತ್ತಿರುವ ಶಿವಸ್ಕಂಧವರ್ಮಾ!!!..." ಅಂತಹ ಸಂಭಾಷಣೆಗಳಲ್ಲಿ ನನಗೆ ರಾಜ್ಕುಮಾರ್ ಕಾಣಿಸೋದೇ ಇಲ್ಲ .ಬದಲಾಗಿ ಯುದ್ಧರಂಗದಲ್ಲಿ ಕಲಿ ಅರ್ಜುನನ ಎದುರು ಕೆಚ್ಚದೆಯಿಂದ ನಿಂತ ಬಬ್ರುವಾಹನ, ಅಮ್ಮನ ಸಮಾಧಿಯೆದುರು ಕಂಬನಿಗರೆಯುತ್ತಲೇ ಪಲ್ಲವರನ್ನು ಕನ್ನಡ ನಾಡಿನಿಂದ ಹೊರಹಾಕುವ ಪ್ರತಿಜ್ಞೆಯನ್ನು ಮಾಡುವ ವೀರ ಕನ್ನಡಿಗ ಮಯೂರನೇ ಕಾಣುತ್ತಾನೆ. ಅದು ಡಾ| ರಾಜ್ ಅಭಿನಯದ ಗತ್ತು ಗೈರತ್ತು ಸೌಂದರ್ಯ.

ನಾನು ಅತಿಯಾಗಿ ಮೆಚ್ಚಿದ ಮತ್ತೊಂದು ಸಿನಿಮಾ ಕವಿರತ್ನ ಕಾಳಿದಾಸ. ಸುಕೋಮಲೆಯಾದ ಶಕುಂತಲೆ,  "ಅ...ಆ್ಹ....ಅನಸೂಯೆ...ಪ್ರಿಯಂವದೆ ಕಟ್ಟಿದ ಈ ವಲ್ಕಲ ಬಹಳ ಬಿಗಿಯಾಗಿ ನನ್ನ ಎದೆ ನೋಯುತ್ತಿದೆ, ಸ್ವಲ್ಪ ಸಡಿಲಗೊಳಿಸು...." ಎಂದು ಗೋಗರೆವಾಗ ಸಖಿ ಪ್ರಿಯವಂದೆ, " ಹ್ಮ್....ಎದೆಯನ್ನು ಉಬ್ಬಿಸುತ್ತಿರುವ ನಿನ್ನ ಯೌವನವನ್ನು ನಿಂದಿಸು, ನನ್ನನ್ನಲ್ಲ" ಎಂದು ಶಕುಂತಲೆಯ ತುಂಬಿದ ಯೌವನವನ್ನು ನೋಡುವಾಗ, ದುಂಬಿಯೊಂದು ಮಕರಂದವನ್ನು ಹೀರಲು ಶಕುಂತಲೆಯ ಅಧರವನ್ನು ಮುತ್ತಿಕ್ಕುವ ದೃಶ್ಯ ಕಂಡು ದುಷ್ಯಂತ, "ಆಹಾ ...ಆ ಚಂದುಟಿಯನ್ನು ಚುಂಬಿಸುತ್ತಿರುವ ದುಂಬಿಯೇ...ನೀನೇ ಭಾಗ್ಯಶಾಲಿ" ಎಂದು ಉಧ್ಗರಿಸುತ್ತಾನೆ...ಈ ದೃಶ್ಯಗಳನ್ನು ಕಂಡಾಗ ಜಯಪ್ರದಳ ಮೋಹಕ ಚೆಲುವಿಗೆ ಕ್ಲೀನ್ ಬೋಲ್ಡ್ ಆಗಿದ್ದೆ. ಮೊದಲು ಕುರಿ ಕಾಯುವ ಪೆದ್ದನಾಗಿ, ನಂತರ ಕಾಳಿ ಕೃಪಕಟಾಕ್ಷದಿಂದ ಕಾಳಿದಾಸನಾಗಿ, ದುಷ್ಯಂತನಾಗಿ, ಪ್ರೇಮಿಯಾಗಿ, ವಿರಹಿಯಾಗಿ,ವಿರಾಗಿಯಾಗಿ ರಾಜ್ಕುಮಾರ್ ಅಭಿನಯ ಮನೋಜ್ಞ.

ಪುರಾಣದ ಕೆಲವು ಪಾತ್ರಗಳು ನನ್ನನ್ನು ಈವರೆಗಿನ ಬದುಕಿನುದ್ದಕ್ಕೂ ಕಾಡುತ್ತಲೇ ಬಂದಿವೆ.ಅಂಬೆ, ಊರ್ಮಿಳಾ, ಅಹಲ್ಯೆ ಮತ್ತು ಈ ಶಕುಂತಲ. ಎಲ್ಲರೂ ಬಹುತೇಕ ತಮ್ಮದಲ್ಲದ ತಪ್ಪಿಗೆ ಬದುಕಿನುದ್ದಕ್ಕೂ ಬೆಂದವರೇ.ಮೊದಲ ಮೂವರ ಬಗ್ಗೆ  ಇನ್ನೊಮ್ಮೆ ಅಂತಹ ಸಂಧರ್ಬ ಬಂದಾಗ ಬರೆಯುತ್ತೇನೆಂದು ಹೇಳುತ್ತಾ ಈ ಲೇಖನವನ್ನು ಶಕುಂತಲೆಗೆ ಸೀಮಿತಗೊಳಿಸುತ್ತೇನೆ. ಶಕುಂತಲೆ ದುಷ್ಯಂತರ ಗಾಂಧರ್ವ ವಿವಾಹ, ಉಂಗುರ, ದೂರ್ವಾಸರ ಶಾಪ, ದುಷ್ಯಂತನ ನಿರಾಕರಣೆ, ತನ್ನ ಪ್ರಿಯತಮನಿಂದ ತಿರಸ್ಕೃತಳಾದ ಶಕುಂತಲೆಯ ವಿರಹ...ಇವುಗಳ‌‌ ಸುತ್ತ ಗಿರಕಿಹೊಡೆಯುತ್ತದೆ ಈ ಕತೆ. ದೂರ್ವಾಸರ ಶಾಪದಿಂದಾಗಿ ದುಃಶ್ಯಂತ ಶಕುಂತಲೆಯೊಂದಿಗಿನ ಪ್ರಕರಣವನ್ನೇ ಮರೆಯುತ್ತಾನೆ. ಇನ್ನು ಕಾದು ಪ್ರಯೋಜನವಿಲ್ಲವೆಂದು ಕಣ್ವ ಮಹರ್ಷಿ ತನ್ನ ಶಿಷ್ಯಂದಿರ ಜೊತೆಯಲ್ಲಿ ದುಷ್ಯಂತನ ಅರಮನೆಗೆ  ಕಳುಹಿಸುತ್ತಾನೆ ಶಕುಂತಲೆಯನ್ನು. ಆದರೆ ರಾಜ ಸಭೆಯಲ್ಲಿ ನೀನಾರೆಂದು ಗೊತ್ತೇ ಇಲ್ಲ ಅಂತ ದುಷ್ಯಂತನಿಂದ ತಿರಸ್ಕೃತಳಾದಾಗ ಬೆರಳಿಗೆ ತೊಡಿಸಿದ ಉಂಗುರಕ್ಕಾಗಿ ತಡಕಾಡುತ್ತಾಳೆ. ಆದರೆ ಅಲ್ಲೂ ವಿಧಿ ಅವಳನ್ನು ವಂಚಿಸುತ್ತದೆ...ಉಂಗುರವಿಲ್ಲದ ಬೋಳು ಬೆರಳನ್ನು ಕಂಡು ಪೆಚ್ಚಾಗಿ ನಿಂತಾಗ ನೆರೆದ ಮಂದಿರ ವ್ಯಂಗ್ಯ ನೋಟಗಳನ್ನು ಎದುರಿಸಲಾಗದೇ ಅಪಾರ ಅವಮಾನದಿಂದ ಕುಸಿಯುತ್ತಾಳೆ.
ಜಿ.ಎಸ್.ಎಸ್. ಈ ಸನ್ನಿವೇಶವನ್ನು ತಮ್ಮ ಒಂದು ಕವನದಲ್ಲಿ ಅಮೋಘವಾಗಿ ಕಟ್ಟಿಕೊಡುತ್ತಾರೆ...

"ಉಂಗುರದ ಬೆರಳನು ಸವರಿ ಬೆಚ್ಚಿದಳಬಲೆ;
ಇದ್ದ ಸೇತುವೆ ಮುರಿದು ದಾರಿಯಿಲ್ಲ.
ಭೋರ್ಗರೆವ ಹೊನಲನೀಸುವುದೆ ನೆನಪಿನ ದೋಣಿ?
ಕೊಂಕು ನಗೆಗಳ ಮೊಳಗು ಸುತ್ತ ಮುತ್ತ.
ಸುತ್ತ ಕಣೆ ಹೂಡಿರಲು, ದಿಕ್ಕು ತಪ್ಪಿದ ಜಿಂಕೆ;
ದೇಗುಲದ ಮೂಲೆಯಲಿ ದೀಪವಾರಿದ ಮೇಲೆ
ನಿಂತ ದೀಪದ ಮಲ್ಲಿ!..."

ಶಕುಂತಲೆಗೆ ದುಷ್ಯಂತನ ಪರಿಚಯವಿತ್ತು.ಸಂಧಿಸಿದ ಕೂಡಲೇ ತನ್ನ ಗುರುತು ಹಿಡಿಯುವನೆಂಬ ಅಪಾರ ಆತ್ಮವಿಶ್ವಾಸವೂ ಇತ್ತು. ಅದಕ್ಕಾಗಿಯೇ, ಅವಳಿಗೆ ದುಷ್ಯಂತ ಗುರುತಿಗಾಗಿಯೇ ಕೊಟ್ಟಿದ್ದ ಉಂಗುರವನ್ನು ಅವಳು   ಅಷ್ಟೊಂದು ಮಹತ್ವದ್ದಾಗಿ ಪರಿಗಣಿಸಲೇ ಇಲ್ಲ. ಆ ಅಜಾಗರೂಕತೆಯಿಂದಲೇ ಅವಳು ಉಂಗುರವನ್ನು ಕಳೆದುಕೊಂಡಳು. ಈ ಉಂಗುರದ ವಿಷಯ ಬಂದಾಗ ನನ್ನ ಮನಸ್ಸು ತ್ರೇತಾಯುಗಕ್ಕೆ ಜಿಗಿಯುತ್ತಿದೆ.ಅಲ್ಲಿ ಹನುಮಂತ ಲಂಕೆಗೆ ಹಾರಲು ತಯಾರಾಗಿ ನಿಂತಿದ್ದಾನೆ. ಸೀತೆಯನ್ನು ಕಂಡಾಗ ತಾನು ರಾಮದೂತನೆಂಬ ಸಾಕ್ಷಿಗೆ, ಸೀತೆಗೆ  ತೋರಿಸಲು ರಾಮ ಕೊಟ್ಟ ಉಂಗುರವನ್ನು ಪಡೆದುಕೊಂಡಿದ್ದಾನೆ. ನಂತರ ಲಂಕೆಗೆ ಹಾರಿ ಸೀತೆಯನ್ನು ಕಂಡು ಉಂಗುರ ತೋರಿಸಿ....ಅರೆ ಎಷ್ಟು ಸಲೀಸು...ಉಂಗುರ ಕಂಡು ಸೀತೆಗೆ ರಾಮದೂತನೆಂದು ನಂಬಿಕೆ ಹುಟ್ಟಿ.....ಸುಖಾಂತ್ಯ!!!. ಅರೆ ಶಕುಂತಲೆಯ ವಿಷಯದಲ್ಲಿ ಆಗದಿದ್ದುದು ಇಲ್ಲಿ ಯಾಕಾಯ್ತು? ಅದಕ್ಕೂ ಇದಕ್ಕೂ ಏನಾದರೂ ಕನೆಕ್ಷನ್ ಇದೆಯಾ?....ನನಗನ್ನಿಸುತ್ತದೆ ಹೌದು, ಖಂಡಿತವಾಗಿಯೂ ಇದೆ! ಯೋಚಿಸಿ...ಇಲ್ಲಿ ಹನುಮಂತನಿಗೆ ಸೀತೆಯ ಪರಿಚಯವೇ ಇಲ್ಲ. ಈ ಮೊದಲು ಎಲ್ಲೂ ನೋಡಿಲ್ಲ. ತಾನು ಸೀತಾಮಾತೆಯನ್ನು ಸಂಧಿಸಿದಾಗ ಅವಳಿಗೆ ಖಂಡಿತವಾಗಿಯೂ ತನ್ನ ಗುರುತು ಸಿಕ್ಕಲ್ಲ ಅನ್ನುವುದು ಹನುಮಂತನಿಗೆ ಗೊತ್ತು. ಅದಕ್ಕಾಗಿಯೇ ರಾಮ ಕೊಟ್ಟ ಗುರುತಿನ ಉಂಗುರಕ್ಕೆ ಬಹಳ ಮಹತ್ವ ಕೊಟ್ಟು, ಸಾವಿರ ಸಾವಿರ ಯೋಜನಾ ದೂರವನ್ನು ಕ್ರಮಿಸಿ ಬಂದಿದ್ದರೂ ಉಂಗುರವನ್ನು ಬಹಳ ಜೋಪಾನವಾಗಿ ತನ್ನ ಬಳಿ ಇಟ್ಟುಕೊಂಡಿದ್ದ. ಉಂಗುರ ಕಳೆದು ಹೋಗಿದ್ದರೆ ತಾನು ಅಷ್ಟು ಕಷ್ಟಪಟ್ಟು ಹಾರಿದ್ದು ವ್ಯರ್ಥ ಅನ್ನುವ ಸ್ಪಷ್ಟ ಕಲ್ಪನೆ ಹನುಮನಿಗಿತ್ತು...ಆದರೆ ಕೇವಲ ಒಂದು ನದಿ ದಾಟುವಾಗ ಶಕುಂತಲೆ ಉಂಗುರವನ್ನು ಕಳೆದುಕೊಳ್ಳಲು ಮುಖ್ಯ ಕಾರಣ ಅವಳು ಆ "ಗುರುತಿನ ಉಂಗುರ" ಕ್ಕೆ ಮಹತ್ವ ಕೊಡದೇ ದುಷ್ಯಂತನ ಪ್ರೇಮವನ್ನು ನಂಬಿದ್ದು! (ವಿಷಯದ ಮಹತ್ವಕ್ಕಾಗಿ ದೂರ್ವಾಸರ ಶಾಪವನ್ನು ಕಡೆಗಣಿಸಲಾಗಿದೆ!).

ಇನ್ನೊಂದು ಆಯಾಮದಲ್ಲಿ ಈ ಎಲ್ಲಾ ವಿಷಯಗಳು ನನ್ನನ್ನು ಕಾಡುವುದುಂಟು. ಪೌರಾಣಿಕ ಪಾತ್ರಗಳಿಂದ ಬಿಡಿಸಿಕೊಂಡು ನಮ್ಮ ನಿತ್ಯದ ಬದುಕಿಗೆ ಬರೋಣ. ನಮ್ಮ ಬದುಕಿನ‌ ಭಾಗವೇ ಆದಂತಹ ಹೆಂಡತಿ ಮಕ್ಕಳು, ಅಪ್ಪ ಅಮ್ಮ ,ಅಣ್ಣತಮ್ಮ, ಅಕ್ಕತಂಗಿಯರ ಜೊತೆಗೆ ನಮ್ಮದು ಯಾವತ್ತೂ ಸಿಡುಕು ಮುಖ, ಲೆಕ್ಕಾಚಾರದ ಮಾತುಗಳು. ಅವರೊಂದಿಗೆ Taken for granted ಅನ್ನುವ ತರಹದ ವರ್ತನೆ ನಮ್ಮದು. ಅವರಿಗೆ ಯಾವುದೇ ಸ್ಪೆಷಲ್‌ ಉಂಗುರದ ಗುರುತುಗಳು, ನಗೆಯ ಗುರುತುಗಳ ಅಗತ್ಯ ಇಲ್ಲವೆಂದೇ ಭಾವಿಸುತ್ತೇವೆ ಮತ್ತು ಹಾಗೆಯೇ ನಡೆಯುತ್ತೇವೆ. ಯಾಕೆಂದರೆ ಅವರು ಹೇಗಿದ್ದರೂ ನಮ್ಮವರೇ ಅನ್ನುವ ಉದಾಸೀನ ಭಾವ.ದುಷ್ಯಂತನ ಜೊತೆಯ ಶಕುಂತಲೆಯ ಮನಸ್ಥಿತಿಯಂತೆ. ಅದೇ ಊರ ಮೂಲೆ ಮನೆಯ ಅಪರೂಪದಲ್ಲಿ ಅಪರೂಪಕ್ಕೆ ಮನೆಗೆ ಬರುವ ಅತಿಥಿಯೊಂದಿಗೋ ನಾವು ಉದಾರ ನಗೆಯ ವ್ಯಾಪಾರಿಗಳು!  ಅವರೊಂದಿಗೆ ಅದೇನು ಕುಶಲ ಮಾತುಕತೆ...ಯೋಗ ಕ್ಷೇಮ ವಿಚಾರಣೆ, ಅಬ್ಬಬ್ಬಾ!!!...ಅವರನ್ನು ಯಾವತ್ತೂ Taken for granted ರೀತಿ ನೋಡುವುದೇ ಇಲ್ಲ. ಅವರೊಂದಿಗೆ ಎಲ್ಲವೂ ಸಲೀಸು. ಅಲ್ಲಿ ನಮಗೆ ಗುರುತುಗಳನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಇರುತ್ತದೆ. ಹನುಮಂತ ಸೀತೆಯ ಭೇಟಿಯಂತೆ! ಈ ಧಾವಂತದ ಬದುಕಿನಲ್ಲಿ ಇದನ್ನೆಲ್ಲಾ ಯೋಚಿಸಲು ಅವಕಾಶವೇ ಇಲ್ಲದಿದ್ದಾಗ ಇನ್ನು ಬದಲಾಗಬೇಕು ಅನ್ನುವುದೊಂದು ಕನಸು.

ಇಷ್ಟೆಲ್ಲಾ ನೆನಪಾಗಲು ಕಾರಣ, ಇಂದು ಮಗಳ ಶಾಲೆಯ ಫ್ಯಾನ್ಸಿ ಡ್ರೆಸ್ ಕಾಂಪಿಟೀಶನ್ ನಿಂದಾಗಿ. ಮೊನ್ನೆಯಿಂದ ತಲೆ ಕೆರೆದೂ ಕೆರೆದೂ...ಕೊನೆಗೂ ಶಕುಂತಲೆಯ ಪಾತ್ರವೇ ಓಕೆ ಅಂತಾದ ಮೇಲೆಯೇ ಈ  ಹುಡುಕಾಟಕ್ಕೆ ವಿರಾಮವಿತ್ತದ್ದು. ಶಕುಂತಲೆಯ ಉಡುಪಿನಲ್ಲಿ ಹೇಗೆ ಮುದ್ದು ಮದ್ದಾಗಿ ಕಾಣ್ತಿದ್ಳು ನೋಡಿ ನನ್ನ ಮಗಳು ಸಾನ್ವಿ...

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

Monday 7 August 2017

ಒಲವ ಕಾವ್ಯ ಹೂವ ಕರೆಗೆ
ಕಾದು ಕುಳಿತ ಭ್ರಮರ ಸೆರೆಗೆ
ನಾಚಿ ನಿಂತು ಸೆಳೆದೆ
ಮನದಿ ಮಿಂಚಿ ಹೊಳೆದೆ
ಬನವೆಲ್ಲಾ ನಿನ್ನ ಪ್ರೇಮ ಶಾಲೆ
ನೀನಾದೆ ನನ್ನ ಕೊರಳ ಮಾಲೆ

ಮನದ ನೆಲಕ್ಕೆಲ್ಲ ಪನ್ನೀರು ಸುರಿದು
ಮಿಲನದೊಸಗೆ ಕಾಡಿ ಬೇಡಿದೆ
ಭಾವಸೆಳೆಯೆಲ್ಲ ನಿನಗಾಗಿ ಮಿಡಿದು
ಚೈತ್ರ ಚಿಗುರಿ ಹಕ್ಕಿ ಹಾಡಿದೆ
ಉಕ್ಕುವ ಅಲೆಯಲ್ಲು ತೀರದ ಕನವರಿಕೆ
ಬಾಳಿನ ಇರುಳಲ್ಲು ನೀನಗುವ ಚಂದ್ರಿಕೆ
ಕರಿಮುಗಿಲು ನೀನಾಗಿ ನಗಲು
ಗರಿಬಿಚ್ಚಿ ನಾ ಕುಣಿವ ನವಿಲು

ವೃಂದಾವನಕೆಲ್ಲ ತಂಗಾಳಿ ಬೀಸಿ
ಹಸಿಬಿಸಿ ಆಸೆ ಹೆಣ್ಣಾಗಿ
ಕೃಷ್ಣನ ಕೊಳಲ ನಾದವು ಕೇಳಿ
ಪಿಸುನುಡಿ ಎಲ್ಲ ಇಂಪಾಗಿ
ಬಯಕೆ ಬಿಸಿಯಲ್ಲೂ ಹೊಳೆವ ಮಳೆಬಿಲ್ಲು
ದೂರ ಇರುವಲ್ಲೂ ವಿರಹ ಬರಿಸುಳ್ಳು
ಕನಸಲ್ಲು ಕಣ್ಣಾಗಿ ಕಾದೆ
ನೀನಾದೆ ಈ ಬಾಳ ರಾಧೆ

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಕಣ್ಣ ಸನ್ನೆಯು ಕಾಡಿ ಚಣದಲಿ
ಸಣ್ಣ ಮಿಡಿತವು ಮನದ ಕಡಲಲಿ
ಮಣ್ಣ ಕಣಕಣ ಚಿಗಿತು ಹಾರಿತು ಭಾವದೊಡಲಿನಲಿ
ತನ್ನ ನಲ್ಲನ ಮನದ ಬಯಕೆಗೆ
ಮುನ್ನ ಕಾಣಿಕೆ ಕೊಡುವೆನೆನುತಲಿ
ಚೆನ್ನೆ ನಾಚುತ ಮುಟ್ಟಿ ಕೆನ್ನೆಯ ನಿಲ್ಲದೋಡಿದಳು

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಇಷ್ಟು ಸಾಕೆಂದೆದ್ದು ದೂರ ನಡೆದರು ಕೂಡ
ಬಿಟ್ಟುಬಿಡುತ್ತಿಲ್ಲ ಅದೆಂತ ಅಂಟು?
ಎಷ್ಟು ಬಲದಿಂದೊದ್ದು ತಳ್ಳಿದರು ಮತ್ತೆ
ಕೂಡೊ ಬಂಧಕ್ಕದೆಂತ ನಂಟು?

ಹೂವು ಕೀಳಲು ಹೋಗಿ ಚುಚ್ಚಿದರು ಮುಳ್ಳು
ಇನ್ನು ಕಾಡಿದೆಯದರ ದಳದ ಚೆಲುವು
ಹಕ್ಕಿ ಹಾಡನು ಕೇಳಿ ಹಾರುವುದು ಸುಳ್ಳು
ಹೆಕ್ಕಿ ಮುಗಿಯದು ಇಲ್ಲಿ ಅಷ್ಟು ಒಲವು

ಭಾವಬಂಧುರವೆಂದು ನಂಬಿ ನೊಂದರು ಕೂಗಿ
ಮನದ ಮಗುವಿನ ನಗುವು ಮಾಸದಿಲ್ಲಿ
ಹೊರ ಬಯಲಕರೆಗಾಳಿ ಬೀಸಿದರು ಬಲವಾಗಿ
ಮನೆಯ ಮಡಕೆಯ ಚಿಂತೆ ತೀರದಿಲ್ಲಿ

ಎಲ್ಲೊ ದೂರದಿ ಅಲ್ಲಿ ಕೇಳಿ ಮುರಳಿಯ ಸೊಲ್ಲು
ಶ್ರುತಿಯುಗೊಂಡಿದೆ ಈಗ ಹೃದಯವೀಣೆ
ಬಂದೆತ್ತಿಕೋ ನನ್ನ ಗಿರಿಯಂತೆ ಬೆರಳಲ್ಲಿ
ಹರಿದು ಹೋಗಲಿ ಎಲ್ಲ ಭವದ ಬೇನೆ

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
#ನೋಟ

ಇದ್ದಿದ್ದರೆ
ಹೆಂಡತಿಯ ನೋಟಕ್ಕೂ
ದೂರ್ವಾಸರ ಶಕ್ತಿ;
ನಾನೆಂದಿಗೋ ಬೂದಿಯಾಗಿ
ಸಿಗುತ್ತಿತ್ತು ಮುಕ್ತಿ...!

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
"ಹೂವಿರುವುದು
ದೇವರ ಗುಡಿಯಲ್ಲಿ
ಮತ್ತು
ಹೆಣ್ಣಿನ ಮುಡಿಯಲ್ಲಿ...."

ಅದ್ಯಾಕೋ ಗೊತ್ತಿಲ್ಲ,
ಈ ಮೋಸದ ಬಗ್ಗೆ
ಸಣ್ಣ ಸುಳಿವೂ ಸಿಗಲಿಲ್ಲ ನೋಡು.
ಅಜ್ಜ ಅಪ್ಪ ಅಣ್ಣ ಎಲ್ಲರೂ
ಹೇಳಿದ್ದು ಇದನ್ನೇ,
ಮೊದಮೊದಲು ನನಗೂ ಗೊತ್ತಾಗಲಿಲ್ಲ.
ಮತ್ತೆ ಮತ್ತೆ ಅದನ್ನೇ ಹೇಳಿದಾಗ
ಎಲ್ಲರಂತೆ ನಾನೂ ತಿಳಿದುಕೊಂಡೆ,
ಇದು ಹೀಗೆ
ಅದು ಹಾಗೆ...
ಮತ್ತು
ಇದು ಹೀಗೆಯೇ
ಅದು ಹಾಗೆಯೇ ಅನ್ನುವುದನ್ನು.

ಅದರಾಚೆಯ ಯೋಚನೆಗಳು
ಎಂದೂ ಕಾಡಲಿಲ್ಲ
ತೀರಾ ನಿನ್ನೆಯವರೆಗೂ;
ಹೂವಿಗಾಗಿಯೇ ಹಾರುವ
ದುಂಬಿಯನ್ನು
ಕಾಣುವವರೆಗೂ.

ತೊಟ್ಟ
ಪೊರೆ ಕಳಚಿದರೆ ಮಾತ್ರ;
ಬದುಕಿಲ್ಲಿ
ಹೊಚ್ಚಹೊಸದು...!

ಇದೀಗ,
ಅಪ್ಪ ಕೊಟ್ಟ
ಕನ್ನಡಕ ತೆಗೆದಿರಿಸಿದ್ದೇನೆ
ಮತ್ತು...
ನನ್ನ ಮಗನಿಗೆ ಸಿಗದ ಹಾಗೆ
ದೂರ ಎಸೆದಿದ್ದೇನೆ.

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಸುರಿದ ಮಳೆಯಲಿ ನಿಂತು ನೆನೆಯುತ
ಸರಿದ ನನ್ನನು ಕದ್ದು ನೋಡಿದ
ಹುರುಪು ನೋಟವು ಮನಕೆ ಚುಚ್ಚಿತು ನೂರು ಹೂಬಾಣ
ಅರಿವು ತಪ್ಪಿತು ಬುದ್ದಿ ಕೆಟ್ಟಿತು
ಮರೆತು ನನ್ನನೆ ನಿನ್ನ ವಶದಲಿ
ತಿರೆಯ ವಿರಹವು ಬಾನ ಮುತ್ತಿಗೆ ಮರೆತು ಹಸುರಾಯ್ತು

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಅಂತರಂಗದ ಬನದ ಬಯಕೆಗೆ
ಮಂದಮಾರುತವೊಂದು ಬೀಸಿರೆ
ಚಂದದಿಂದಲಿ ನಗುತ ಹೂಗಳು ಪಯಣ ಸಾರಿದವು
ಸಂದ ಚಣಗಳ ನೆನಪು ಕಳೆಯಲು
ನಿಂತ ಮನೆಗಳ ಮೋಹ ಕಳಚುತ
ಬಂಧ ಬಿಡಿಸುವ ಸೊಗದ ಕನಸನು ಕಣ್ಣು ಬೇಡಿದವು

ತೀರ ಮುತ್ತುವ ಕಡಲದಲೆಯನು
ಸೇರಿ ಸೆಳೆದೆನು ನೀರ ಮಡುವಲಿ
ಚೀರಿಕೊಂಡರು ಕಿವಿಯು ಕೇಳದು ಜನಕೆ ಜಗದಲ್ಲಿ
ಮೀರೆ ಭವದ ಸೆಳೆಯ ಸಂಚನು
ಸಾರಿ ಪಥವ ಕೂಡಿ ನಡೆಯುತ
ಪಾರು ಮಾಡುವ ಪರದ ನಾವಿಕ ಬಂದು ನೋಡಿಲ್ಲಿ

ಮುಡಿದ ಪದಕದ ಬಣ್ಣ ಕಳೆದಿರೆ
ಸಿಡಿದ ಮಾತಿನ ಲೆಕ್ಕ ಕಾಡಲು
ಪಡೆದ ಮಣ್ಣಲಿ ಬಿದ್ದ ಬೀಜದ ಬದುಕು ಬೆಂದಿಹುದು
ಹಿಡಿದು ಮೂವರ ಕಡೆದು ಬೆಣ್ಣೆಯ
ಒಡೆದುದಾರನು ಮುಂದೆ ನಡೆಯಲು
ಹಡೆದ ಶಾಂತಿಯ ಹಕ್ಕಿ ಹಾರಿತು ಬಯಲ ಬಾನಿನಲಿ

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು