Wednesday 5 August 2015

ಓ ಮಹಾತ್ಮಾ
ನೀನಿನ್ನೆಷ್ಟು ಬಾರಿ ಸಾಯಬೇಕೋ?
ಸತ್ತು ಗೋರಿಯೊಳಗೆ ಮಲಗಿರುವ
ನಿನ್ನನ್ನು ಮತ್ತೆ ಮತ್ತೆ ಹೊರಗೆಳೆದು
ಕೊಲ್ಲುವುದೇ
ಎಲ್ಲದಕ್ಕೂ ಪರಿಹಾರವಾದ ಮೇಲೆ.

ಮನುಕುಲದ ಹೂವ
ಹೊಸಕಿರುವವರಿಗಾಗಿ ನಾವೀಗ
ಗುಡಿ ಕಟ್ಟುತಿದ್ದೇವೆ.
ನೀನು ಮೊದಲಿನಿಂದಲೂ
ಬೀದಿಯಲ್ಲೇ ಕುಳಿತವನು
ಅಲ್ಲೇ ಮಲಗಿದವನು,
ನಿನಗೆ ಬೇಸರವಾಗಲಿಕ್ಕಿಲ್ಲ;
ನಿನ್ನನ್ನಲ್ಲೇ ಪ್ರತಿಷ್ಟಾಪಿಸಿದ್ದೇವೆ.

ನಿನ್ನ ಕೋಲಿಗೆ ಹೆದರುವವರು
ಇಲ್ಲಿ ಯಾರೂ ಉಳಿದಿಲ್ಲ;
ನಾವೆಲ್ಲಾ ಕೋವಿಯನ್ನು
ಅಪ್ಪಿಕೊಂಡಿದ್ದೇವೆ.



Sunday 2 August 2015

ಮೋಡ ಸರಿದು ಬೆಳಕು ಮೂಡಿ
ಸೂರ್ಯ ಬಂದಾನಲ್ಲೋ
ಆಸೆಯ ಸೂರ್ಯ ಬಂದಾನಲ್ಲೋ||

ಬಾನ ಸೆರೆಯೊಡೆದು
ಇಳೆಯ ಸೆಳೆಗೇ ಸೋತು
ಹೊಸತನದ ಮಧುವಾ ಚೆಲ್ಲಿ|
ಇರುಳ ಕನಸ  ಕಳೆದು
ಬಾಳಿನರ್ಥವ ತೆರೆದ
ಚೆಲುವಾದ ರಂಗಾವಲ್ಲಿ||

ಒಲವ ಮಳೆಯೊಳಗೆ
ಬಿಸಿಲ ಬಯಕೆಯು ಕಾಡಿ
ಮೋಹಕ ಕಾಮನಬಿಲ್ಲು|
ಮಂಜು ಪರದೆಯ ಸರಿಸಿ
ಇರುವ ಅರಿವನು ಬೆಳಗೋ
ಇದು ನಿಜವು ದೇವರ ಸೊಲ್ಲು||


                            ರವೀಂದ್ರ ನಾಯಕ್