Sunday 3 December 2017

ದೂರ ಹೋಗು ನೆನಪೇ
ಸುಳಿದು ನನ್ನ ಕಾಡಬೇಡ
ಒಲವ ಕದವ ತೆರೆದು
ಮೋಹಕ‌ ಸಂಚು ಹೂಡಬೇಡ
ತಣ್ಣಗಿದೆ ಈಗ ಎದೆಯ ಸುಡುವ ಜ್ವಾಲೆ
ಕೆಣಕದಿರು ಮತ್ತೆ ಶಂಕೆ ಧೂಮ ಮಾಲೆ

ಹರಿವ ನೀರಿನಲಿ ದಿಕ್ಕು ತಪ್ಪಿದ
ಬದುಕ‌ ನಾವೆಯೆಷ್ಟೋ
ಸುರಿವ ಮಳೆಯಲ್ಲಿ ನೀರು ಬತ್ತಿದ
ಕಣ್ಣ ತೊರೆಗಳೆಷ್ಟೋ
ಸುಮ್ಮನಿದೆ ಎಲ್ಲಾ ನೋಡಿ ಕೂಡಾ ತೀರ
ಮೊರೆಯುತಿರೆ ಅಲ್ಲಿ ಕಡಲ ಒಡಲು ಭಾರ

ಹೂವ ಮಕರಂದ ಹೀರಿದಾ ಭ್ರಮರ
ತಿರುಗಿ ಬಾರದಲ್ಲ
ಉರಿವ ದೀಪಕೆ ಸುಟ್ಟ ರೆಕ್ಕೆಗಳ
ಕನಸು ಕಾಡೂದಿಲ್ಲ
ಮಿನುಗುತಿದೆ ತಾರೆ ಇರುಳ ಬಾನ ತುಂಬ
ಮುಸುಕಿದರೆ ಮೋಡ ಒಂಟಿ ಚಂದ್ರ ಬಿಂಬ


ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು


No comments:

Post a Comment