Monday 6 March 2017

ಎಷ್ಟೋ ದಿನಗಳಿಂದ ಮನೆಯಲ್ಲಿ ಬೇಡಿಕೆ ಇದ್ದಿದ್ದರೂ ನಾನು ಆ ಕಪಾಟು ಮನೆಗೆ ತಂದದ್ದು ಪರ್ಕಳದಲ್ಲಿ ಸ್ನೇಹಿತ ಫರ್ನಿಚರ್ ಅಂಗಡಿ ತೆರೆದ ನಂತರವೇ.ಅದೂ ಕೂಡಾ ದೀಪಾವಳಿಯಲ್ಲಿ ಅವನು ಕೊಟ್ಟ 'ಭಾರೀ ಕಡಿತದ' ದೆಸೆಯಿಂದ. ಅಂಗಡಿಯ ಝಗಮಗಿಸುವ ದೀಪಗಳಲ್ಲಿ ತುಂಬಾ ಚಂದ ಕಂಡ ಅದರ ನಿಜ ರೂಪ , ಮದುಮಗಳು ವೇಷ ಕಳಚಿ ನಿಂತ ಹಾಗೇ  ಮನೆಗೆ ತಂದ ದಿನವೇ ಗೊತ್ತಾಗಿ ಸಂಭ್ರಮ ಹೆಚ್ಚು ಹೊತ್ತು ಉಳಿಯಲಿಲ್ಲ. ಬಾಗಿಲು ತೆರೆಯುವಾಗ ಕಿರ್ರ್..‌ರ್...ರ್...ಎಂದು ಕರ್ಕಶವಾಗಿ ಕೂಗುವ ಅದರ ಕರ್ಣಕಠೋರ ಶಬ್ದ ಕೇಳಿಯೇ ನಾನು ಗೆಳೆಯನ ಮೇಲೆ ಹರಿಹಾಯ್ದಿದ್ದೆ.  "ಕಡಿತ ಕಡಿತ ಅಂತ ಹೇಳಿ ಯಾವುದೇ ಹಳೆಯ ಮಾಲನ್ನು ನನಗೆ ದಾಟಿಸಿದ್ದಿಯಲ್ಲಾ ಮಾರಾಯ"  ಅಂತ ಸರಿಯಾಗಿ ದಬಾಯಿಸಿದೆ.ಅದಕ್ಕೆ ಅವನು " ಹೊಸದೆಲ್ಲಾ ಹಾಗೆಯೇ, ಸ್ವಲ್ಪ ದಿನ ಶಬ್ದ ಮಾಡ್ತದೆ, ನಂತರ ಸರಿ ಹೋಗ್ತದೆ ಬಿಡು.ನಿನಗೆ ಇನ್ನು ಗೊತ್ತಾಗ್ತದೆ ನೋಡು" ಅಂತ ಕಣ್ಣು ಹೊಡೆದು ನಗುವಿನಲ್ಲೇ ಮಾತನ್ನು ತೇಲಿಸಿಬಿಟ್ಟಿದ್ದ.

ಹಾಗೇ ಆ ಅಲಮಾರು ನಮ್ಮ ಮನೆಗೆ ಬಂದದ್ದು, ಅಥವಾ ಕಳಪೆ ಎಂದು ಕಂಡದ್ದೆಲ್ಲಾ ಆ ದಿನದ ಸುದ್ದಿಯಷ್ಟೇ.ಬರೇ ಇಷ್ಟೇ ಆಗಿದ್ದರೆ ಅದರ ಬಗ್ಗೆ ಹೇಳಿಕೊಳ್ಳುವ ಅಗತ್ಯ ಇರಲಿಲ್ಲ ಬಿಡಿ.ಆದರೆ ಅದೂ ಕೂಡಾ ನಮ್ಮ ಮನೆಯಲ್ಲಿ ಒಂದು ಮಹತ್ವದ ವಸ್ತು ಎಂದು ಅದರ ಇರುವಿಕೆಯನ್ನು ತೋರಿಸಿದ್ದರಿಂದಲೇ ಅದರ ಬಗ್ಗೆ ಹೇಳುತಿದ್ದೇನೆ.ನನ್ನ ಮದುವೆಗೆ ಒಂದು ವಾರವಿದ್ದಾಗ ನಡೆದ ಒಂದು ಘಟನೆ ಆ ಕಪಾಟಿಗೆ ನಮ್ಮ ಮನೆಯಲ್ಲಿ , ಮನದಲ್ಲಿ ಶಾಶ್ವತವಾದ ಸ್ಥಾನಮಾನವನ್ನು ಕೊಟ್ಟಿದೆ.ನಾನು ಕೆಲಸದ ನಿಮಿತ್ತ ಬೇರೆ ಊರಿನಲ್ಲಿ ಇರುತ್ತಿದ್ದೆಯಾದ್ದರಿಂದ ಮನೆಯಲ್ಲಿ ಇರುವುದು ಅಪ್ಪ ಅಮ್ಮ ಇಬ್ಬರೇ. ಮದುವೆಗೆ ಒಂದೇ ವಾರವಿದ್ದುದರಿಂದ ತಯಾರಿ ಭರ್ಜರಿಯಾಗಿಯೇ ಸಾಗಿತ್ತು.ಒಡವೆ ವಸ್ತ್ರಗಳನ್ನೆಲ್ಲಾ ಖರೀದಿಸಿ ಆಗಿತ್ತು.ಅಳಿದೂರಿನಲ್ಲಿ ಉಳಿದವನೇ ಗೌಡ ಅನ್ನೋ ಹಾಗೆ ಇದ್ದ ಒಂದೇ ಅಲಮಾರಿಗೆ ರಾಜಕಳೆ ಬಂದಿತ್ತು. ಏನು ತಂದರೂ ಆ ಕಪಾಟಿನ ಒಳಗೆ ತುರುಕಿಸುವುದು ನನ್ನಮ್ಮನ ಇಷ್ಟದ ಕೆಲಸವಾಯ್ತು.ಮದುವೆಗೆ ಅಂತ ಖರೀದಿಸಿದ ಚಿನ್ನ ಮಾತ್ರವಲ್ಲದೇ, ಬ್ಯಾಂಕ್ ನಲ್ಲಿ ಲಾಕರ್ ಸೌಲಭ್ಯ ಸಿಗದೇ ಈ ಅಲಮಾರುವನ್ನೇ ಉಚಿತ ಲಾಕರ್ ಅಂತ ಪರಿಗಣಿಸಿ ತನ್ನ ಮನೆಯಲ್ಲಿದ್ದ ಚಿನ್ನವನ್ನೂ ತಂದು ಇಟ್ಟಿದ್ದಳು ನನ್ನ ಅಕ್ಕ. ಹಾಗಾಗಿ ಈ ಅಲಮಾರು ನಮ್ಮ ಮನೆಯಲ್ಲಿ ಅತ್ಯಂತ ಬೆಲೆಬಾಳುವ ವಸ್ತುವಾಗಿತ್ತು . ಈ ವಿಷಯ ಮನೆಯವರಿಗಷ್ಟೇ ಗೊತ್ತಿದ್ದರೆ ಅದೇನೂ ಅಷ್ಟು ದೊಡ್ಡ ಸಂಗತಿಯಾಗುತ್ತಿರಲಿಲ್ಲ ಬಿಡಿ; ಆದರೆ ಹೊರಗಿನವರಿಗೂ ಈ ವಿಷಯ ಗೊತ್ತು ಅಂತ ನಮಗೆ ಗೊತ್ತಿಲ್ಲದ್ದು ಅಪಾಯಕಾರಿಯಾಗಿತ್ತು.

ಈ ಅಲಮಾರಿಗೆ ಬೀಗ ಹಾಕುವ ಸೌಲಭ್ಯ ಇದ್ದಿದ್ದರೂ, ಬೀಗ ಹಾಕಿದರೂ ಬೀಗದ ಕೈಯನ್ನು ಅದರ ಜಾಗದಿಂದ ಕದಲಿಸುವ ಸಂಪ್ರದಾಯ ಮಾತ್ರ ನಮ್ಮ ಮನೆಯಲ್ಲಿ ಇರಲಿಲ್ಲ. ಬೀಗದ ಕೈ ತೆಗೆದು ಬೇರೆ ಕಡೆ ಇಟ್ಟರೆ ಅದು ಕಳೆದುಹೋಗಬಹುದು ಎಂಬ ಭೀತಿಯೇ ಕಪಾಟಿನ ಬೀಗ ಹಾಕಿದರೂ ಬೀಗದ ಕೈಯನ್ನು ಅಲ್ಲೇ ಇಟ್ಟಿರಲು ಕಾರಣ.ಆ ರಾತ್ರಿಯೂ ಕೂಡಾ ಹಾಗೆಯೇ ಇತ್ತು ಅಲಮಾರಿಯ ಪರಿಸ್ಥಿತಿ. ಅಪ್ಪ ಹೊರಗೆ ಹಾಲ್ ನಲ್ಲಿ ಮಲಗಿದರೆ ಅಮ್ಮ ಒಳಗಿನ ಕೋಣೆಯಲ್ಲಿ ಮಲಗಿದ್ದರು.ಅದೇನೋ ದೊಡ್ಡ ಶಬ್ದವಾದಂತಾಗಿ ಅಮ್ಮನಿಗೆ ಎಚ್ಚರವಾದಾಗ ಸಮಯ ಬೆಳಗಿನ ಮೂರು ಗಂಟೆ. ಹೋ...ಒಲೆಯ ಬದಿಯಲ್ಲಿ ಇಟ್ಟಿದ್ದ ಹಾಲಿನ ಪಾತ್ರೆಯ ಮುಚ್ಚಳ ಬೀಳಿಸಿ ಹಾಲು ಕುಡಿದು ಖಾಲಿ ಮಾಡಿತೋ ಏನೋ ದರಿದ್ರ ಬೆಕ್ಕು...ನೋಡುವ ಅಂತ ಅಮ್ಮ ಎದ್ದು ಕೋಣೆಯ ದೀಪ ಹಾಕಿದಾಗ ಎದುರಿನ ದೃಶ್ಯ ಕಂಡು ಶಾಕ್ ಹೊಡೆದಂತೆ ನಿಂತು ಬಿಟ್ಟರು.

ಕಳ್ಳನೊಬ್ಬ ಅಲಮಾರಿಯ ಬಾಗಿಲು ತೆರೆದು ಒಳಗೆ ಟಾರ್ಚ್ ಹಾಕಿ ಹುಡುಕುತಿದ್ದಾನೆ.ಬಟ್ಟೆಗಳ ರಾಶಿ ಎಲ್ಲಾ  ಚೆಲ್ಲಾಪಿಲ್ಲಿಯಾಗಿ ಹೊರಗೆ ಬಿದ್ದಿವೆ.ಎಷ್ಟು ಹೊರಗೆ ಎಸೆದರೂ ಮುಗಿಯದ ದ್ರೌಪದಿಯ ಅಕ್ಷಯ ಸೀರೆಯಂತೆ ಇನ್ನೂ ಉಳಿದಿರುವ ಬಟ್ಟೆಯ ರಾಶಿಯನ್ನು ಸರಿಸಿ ಕೆಳಗಿನ ಲಾಕರ್ ನಲ್ಲಿ ಹಣ, ಒಡವೆ ಇರಬಹುದೆಂದು ಒಂದೇ ಸಮನೆ ಹುಡುಕಾಡುತಿದ್ದಾನೆ. ಆ ಗಡಿಬಿಡಿಯಲ್ಲಿ ಅಮ್ಮ ಎದ್ದು ಬಂದ ಅರಿವೂ ಅವನಿಗಾಗಿಲ್ಲ. ಆದರೆ ಯಾವಾಗ ಕೋಣೆಯ ದೀಪ ಉರಿಯಿತೋ , ಮೈಮೇಲೆ ಬಿಸಿ ನೀರು ಬಿದ್ದ ಹಾಗೇ ಅಲ್ಲಾಡಿ ಹೋಗಿದ್ದಾನೆ. ವೃತ್ತಿಪರ ಕಳ್ಳನಲ್ಲವಾದ್ದರಿಂದ ಅವನೂ ಹೆದರಿ ಓಡುವ ರಭಸಕ್ಕೆ ಅಮ್ಮನನ್ನು ತಳ್ಳಿ ಶರವೇಗದಲ್ಲಿ ಜಾಗ ಖಾಲಿ ಮಾಡಿದ್ದಾನೆ. ಆದರೆ ಇಷ್ಟೆಲ್ಲಾ ಆಗುವಾಗ ಅಮ್ಮನ ಬಾಯಿಂದ ಒಂದು ಬೊಬ್ಬೆ ಬಿಟ್ಟರೆ ಮತ್ತೇನೂ ಇಲ್ಲ. ಆ ಬೊಬ್ಬೆಯ ಲಾಭದ ಫಲವಾಗಿ ಅಪ್ಪ ಎದ್ದು ಬರುವಾಗ ಕಳ್ಳನ ಮಹಾ ಪಲಾಯನವೂ ಆಗಿ ಹೋಗಿದೆ. ಹಾಗಾಗಿ ಅಪ್ಪನಿಗೆ ಪ್ರಕರಣದ ಅರಿವಾಗಿಲ್ಲ. ಕಳ್ಳ ಓಡುವ ಗಡಿಬಿಡಿಗೆ ತಳ್ಳಿದ ವೇಗಕ್ಕೆ ಅಮ್ಮ ನೆಲದ ಮೇಲೆ ಬಿದ್ದು, ನಂತರ ಸಾವರಿಸಿ ಕುಳಿತಿದ್ದಾರೆ. ಆದರೆ ಅಪ್ಪನಿಗೆ ಈ ಎಲ್ಲಾ ಸುಳಿವಿಲ್ಲದ್ದರಿಂದ ಅಚ್ಚರಿಯಾಗಿ ಅಮ್ಮನನ್ನು ಕೇಳಿದ್ರೆ ಶಾಕ್ ನಿಂದ ಭೂತ ಹೊಕ್ಕ ಮೈಯಂತಾಗಿರುವ ಅಮ್ಮನಿಂದ ಯಾವ ಮಾತೂ ಹೊರಡುತ್ತಿಲ್ಲ. ಸಕಾಲಿಕ ಉಪಚಾರ ಮಾಡಿದ ನಂತರ ಹೊರಲೋಕಕ್ಕೆ ಬಂದ ಅಮ್ಮ ಯಾವುದಕ್ಕೂ ಉತ್ತರ ಕೊಡದೇ, " ಹೋಯ್ತು...ಎಲ್ಲಾ ಹೋಯ್ತು. ಸರ್ವನಾಶ ಆಯ್ತು. ಎಲ್ಲಾ ಕದ್ಕೊಂಡು ಹೋದ. ಅಯ್ಯೋ ದೇವರೇ ನಾನೇನು ಮಾಡ್ಲಿ .." ಅಂತ ಒಂದೇ ಸಮನೆ ಅಳುವಿನ ಕೋಡಿ ಹರಿಸುತಿದ್ದಾರೆ.ಸುಮ್ಮನೇ ನೋಡೋದಷ್ಟೇ ಉಳಿಯಿತು ಅಪ್ಪನ ಪಾಲಿಗೆ‌. ಅತ್ತೂ ಅತ್ತೂ ಕಣ್ಣೀರು ಬತ್ತಿ ಹೋದ ನಂತರ ಅರೆತೆರೆದಿದ್ದ ಅಲಮಾರಿಯನ್ನು ತೆರೆದು ತಾನು ಒಡವೆ ಹಣ ಇಟ್ಟಿದ್ದ ಗುಪ್ತ ಜಾಗವನ್ನು ಪರಿಶೀಲಿಸಲು ; ಅರೆ...! ಹಾಗೇ ಇದೆ. ಯಾವುದೂ ಅವನ ಕೈಗೆ ಸಿಕ್ಕಿಲ್ಲ , ಅಂತ ಗೊತ್ತಾದ ನಂತರ ಅಪ್ಪನಿಗೆ ವಿಷಯ ತಿಳಿದದ್ದು.

" ಏನೋ ಶಬ್ದ ಆಗಿ ನನಗೆ ಎಚ್ಚರ ಆಯ್ತು. ಬಹುಶಃ ಆ ದರಿದ್ರ ಬೆಕ್ಕು ಎಲ್ಲಿ ಹಾಲಿನ ಪಾತ್ರೆಯ ಮುಚ್ಚಳ ಬೀಳಿಸಿ ,ಇನ್ನೆಲ್ಲಿ ಇದ್ದ ಹಾಲೆಲ್ಲಾ ಖಾಲಿ ಮಾಡಿದ್ರೆ ನಿಮ್ಗೆ ಬೆಳಿಗ್ಗೆ ಚಹಕ್ಕೆ ಹಾಲಿಲ್ಲ ಅಂತ ಎಣಿಸಿ ಎದ್ದು ಲೈಟ್ ಹಾಕಿ ನೋಡ್ತೇನೆ, ಯಾರೋ ಕಪಾಟಿನ ಬೀಗ ತೆಗೆದು ಟಾರ್ಚ್ ಹಾಕಿ ಹುಡುಕ್ತಾ ಇದ್ದಾನೆ. ಕೈಯಲ್ಲಿ ಚೀಲ ಬೇರೆ ಇದೆ. ಹಣ ಚಿನ್ನ ಎಲ್ಲಾ ಹೋಯ್ತು ಅಂತ ನಿಮ್ಗೆ ಬೊಬ್ಬೆ ಹಾಕಿದೆ..ಅಷ್ಷ್ರಲ್ಲಿ ನನ್ನನ್ನು ತಳ್ಳಿ ಹೋದ..‌ಅಬ್ಭಾ! ನಿಮ್ಮ ನಿದ್ರೆಯೇ...ಸದ್ಯ ಏನೂ ಹೋಗಿಲ್ಲ...ಮಗನಿಗೆ ಸುಮ್ನೆ ಬಯ್ತಾ ಇದ್ದೆ...ಎಂತಾ ಗುಜುರಿ ಕಪಾಟ್ ತಂದಿದಿಯಾ ಅಂತ...ಓಪನ್ ಮಾಡೋವಾಗ ಕಿರ್ರ್ ರ್ ರ್ ರ್...ಶಬ್ದ ಬರ್ತದೆ ಅಂತ. ಆದ್ರೆ ಅದೇ ಈಗ ನಮ್ಮನ್ನು ಉಳಿಸಿದೆ"        ಅಂತ ಹೇಳಿ ಮುಗಿಸಿದ್ರು.

ಬೆಳಿಗ್ಗೆ ಪೋನ್ ಮಾಡಿ ನನಗೆ ವಿಷಯ ತಿಳಿಸಿದಾಗ ಆ ಪರಿಸ್ಥಿತಿಯಲ್ಲೂ ನಗು ಬಂತು. ಅಲಮಾರಿಗೆ ಲಾಕರ್ ಇದ್ದರೂ ಹಳೆಯ ಕಾಲದವರು ಮಾತ್ರ ಬದಲಾಗೋದೇ  ಇಲ್ಲ. ಮೊದಲಿನಿಂದಲೂ ಹಣ ಚಿನ್ನವನ್ನೆಲ್ಲಾ ಬಟ್ಟೆಯ ರಾಶಿಯಡಿಯೆಲ್ಲೋ ಅಡಗಿಸಿಡುವುದು ಅವರ ರೂಡಿ.ಅಮ್ಮನೂ ಅದಕ್ಕೆ ಹೊರತಾಗಿರಲಿಲ್ಲ. ಈಗ ಕಪಾಟಿನೊಳಗೆ ಲಾಕರ್ ಇದ್ದರೂ ಚಿನ್ನ ಹಣವೆಲ್ಲಾ ಈಗಲೂ ಬಟ್ಟೆಯ ರಾಶಿಯ ಒಳಗೆಲ್ಲೋ...!. ಅರ್ಜೆಂಟ್ ಗೆ ಮನೆಯವರಿಗೆ ಬೇಕಿದ್ರೂ ಅಮ್ಮನೇ ಬೇಕು, ಹುಡುಕಿ ಕೊಡ್ಲಿಕ್ಕೆ. ಅದು ಕಳ್ಳನಿಗೆ ಗೊತ್ತಾಗದೇ ಅಡ್ಡ ಇದ್ದ ಬಟ್ಟೆ ಹೊರಗೆಸೆದು ಬರೀ ಲಾಕರ್ ಹುಡುಕಿ ಏನೂ ಸಿಗದೇ ಬರಿಗೈಯಲ್ಲಿ ಪಲಾಯನ ಮಾಡಿದ್ದಾನೆ. ಬೆಟ್ಟ ಅಗೆದರೂ ಒಂದು ಇಲಿಯನ್ನೂ ಹಿಡಿಯಲಾಗದಂತಹ ಪರಿಸ್ಥಿತಿ ಅವನದ್ದು. ನಾನು ಪೋನ್ ಮಾಡಿ ಫರ್ನೀಚರ್ ಅಂಗಡಿ ಗೆಳೆಯನಿಗೆ ವಿಷಯ ಹೇಳಿ " ನಿನ್ನ ಅಲಮಾರಿಯ ಶಬ್ದದಿಂದ ನನ್ನ ಗಂಟು ಉಳಿಯಿತು, ಇಲ್ಲದಿದ್ದರೆ ಎಲ್ಲವನ್ನೂ ಕಳೆದುಕೊಳ್ಳುತಿದ್ದೆ" ಅಂತ ಹೇಳುವಾಗ ಆ ಅಲಮಾರಿಯ ಮೇಲೆ ನನಗೆ,  ನನ್ನ ಹೊಸ ಹೆಂಡತಿಯ ಮೇಲೆ ಇರುವಷ್ಟೇ ಪ್ರೀತಿ ಉಕ್ಕಿತು.
ಅವನೋ " ನೋಡಿದ್ಯಾ...ಸುಮ್ನೆ ನನ್ಗೆ ಬಯ್ತಾ ಇದ್ದಿ. ಈ ಶಬ್ದ ಕೂಡಾ ನನ್ನ ಅಲಮಾರಿಯ ವಿಶೇಷತೆಗಳಲ್ಲಿ ಒಂದು ಮಾರಯಾ"  ಅಂತ ಜೋರಾಗಿ ನಕ್ಕ.

ನಂತರ ಎಂದೂ ಆ ಕಪಾಟಿನ ಶಬ್ದ ನಮಗೆ ಕರ್ಣ ಕಠೋರವಾಗಿ ಕೇಳಿಸದೇ, ಎಮ್.ಎಸ್. ಸುಬ್ಬಲಕ್ಷ್ಮಿಯ ನಿತ್ಯನೂತನ ಸುಪ್ರಭಾತದಂತೆ ನಾದಮಯವಾಗಿತ್ತು.

Saturday 4 March 2017

ಕಿಟಕಿಗಳಾಚೆ

ನನ್ನ ಇಪ್ಪತ್ತರ ಹರೆಯದಲ್ಲಿಯೇ ಕೆಲಸ ಸಿಕ್ಕಿದಾಗ ಖುಷಿಯಿಂದ ಕುಣಿದಾಡಿದ್ದೆ. ಡಿಪ್ಲೊಮಾ ಮುಗಿಸಿ ಕೆಲಸಕ್ಕಾಗಿ ಅರ್ಜಿ ಹಾಕಿದ್ದು, ಕಷ್ಟವಲ್ಲದ ಸಂದರ್ಶನವನ್ನು ಹೆದರಿಕೆಯಿಂದ ಕಷ್ಟಪಟ್ಟು ಪಾಸು ಮಾಡಿದ್ದು, ಕೆಲಸ ಸಿಕ್ಕಿದ ಕತೆಯೆಲ್ಲಾ ಈಗ ಅಂತಹ ದೊಡ್ಡ ವಿಷಯವಾಗಿ ಉಳಿದಿಲ್ಲ. ಬೆಳಗಾವಿಯ ಒಳ್ಳೆಯ ಕಂಪೆನಿಯಲ್ಲಿ ಕೆಲಸ, ಕೈತುಂಬಾ ಸಂಬಳ, ವಾಸಕ್ಕೆ ಇಪ್ಪತ್ನಾಲ್ಕು ತಾಸು ಕರೆಂಟ್ ನೀರು ಇರುವ ಕಂಪೆನಿ ಕ್ವಾರ್ಟರ್ಸ್, ಜವಾಬ್ದಾರಿ ಇಲ್ಲದ ಜೀವನ, ಜೊತೆಗೆ ಸಂಜೆಯ ಹಕ್ಕಿ ವೀಕ್ಷಣೆಗೆ ಗುಂಡು ಪಾರ್ಟಿಗಳಿಗೆ ಗೆಳೆಯರು; ಸ್ವರ್ಗಕ್ಕೆ ಕಿಚ್ಚು ಹಚ್ಚಿದ್ದ ದಿನಗಳವು.

ಕಿಟಕಿಗಳು ನನ್ನನ್ನು ಕಾಡಿದಷ್ಟು ಯಾವುದೂ ನನ್ನ ಇದುವರೆಗಿನ ಬದುಕಿನಲ್ಲಿ ನನ್ನನ್ನು ಕಾಡಿಲ್ಲ. ಅಲ್ಲಿಂದನೇ ಹೊರ ಜಗತ್ತನ್ನು ಅಳೆಯಬಹುದು, ಅದು ನನಗೆ ಒಳಗಿದ್ದುಕೊಂಡೇ ಜಗತ್ತನ್ನು ತೋರಿಸುವ ಕಿಂಡಿಗಳು. ನಾನಿದ್ದದ್ದು ಎರಡನೇ ಮಹಡಿಯಲ್ಲಿ. ಸಂಜೆ ನನ್ನ ಕೆಲಸವಾದ ನಂತರ ಅಲ್ಲೇ ಕುಳಿತು  ಕಿಟಕಿಯಿಂದ ರಸ್ತೆಯನ್ನು ನೋಡಿದರೆ ಜಗತ್ತಿಗೆ ಚಲನೆ ಬಂದ ಹಾಗೆ. ಬಗೆ ಬಗೆಯ ಜನರ ರಂಗುರಂಗಿನ ಬದುಕು ಅಲ್ಲೇ ತೆರೆದುಕೊಳ್ಳುತ್ತದೆ.  ಹಾಲ್ ನ ಕಿಟಕಿಯ ಅಭಿಮುಖವಾಗಿ ಎದುರು ಮನೆಯ ಕಿಟಕಿ. ನಾನು ಅಲ್ಲಿ ಕುಳಿತಾಗೆಲ್ಲಾ ಎದುರಿನ ಕಿಟಕಿಯಿಂದ ನನ್ನ ಕಡೆ ನೋಡುತ್ತಿದ್ದ ಜೋಡಿ ಕಣ್ಣುಗಳು ನನಗೆ ಅಪರಿಚಿತವೇನಲ್ಲ. ಕೆಲವೇ ದಿನಗಳಲ್ಲಿ ನನ್ನ ದೃಷ್ಟಿಯೂ ರಸ್ತೆಯ ಬದುಕಿನ ಆಕರ್ಷಣೆಯಿಂದ ಬಿಡಿಸಿಕೊಂಡು ಕಿಟಕಿಯ ಕಡೆ ವಾಲಿದ್ದು ಯೌವ್ವನದ ಮಹಿಮೆಯೇ ಹೊರತು ಬೇರೇನೂ ಅಲ್ಲ. ಅಲ್ಲಿ ಕಾಲೇಜ್ ಹೋಗುವ ಹುಡುಗಿ, ಇತ್ತ ಈಗಷ್ಟೇ ಕೆಲಸ ದೊರೆತ ಇಪ್ಪತ್ತರ ತರುಣ. ಬೆಂಕಿಯೂ ಹೊತ್ತಿಕೊಂಡಿತು; ಬೆಣ್ಣೆಯೂ ಕರಗಿತು. ನಂತರ ನಡೆದದ್ದು ಮಾಮೂಲಿ ವಿಷಯ ಬಿಡಿ. ಲವ್, ಸುತ್ತಾಟ, ಸ್ವಲ್ಪ ದಿನದ ಗುಟ್ಟು, ನಂತರದ ರಟ್ಟು, ಒತ್ತಡ, ಅಸಹಾಯಕತೆ, ಕೊನೆಗೆ ಹೇಳಿ ಹೋಗು ಕಾರಣ ಅಂತ ವಿರಹದ ಅತಿರೇಕ. ಕತೆ ಕೇಳಿ ಕೇಳಿ ಗ್ಲಾಸ್ ಗೆ ವಿಸ್ಕಿ ಹಾಕಿ ಸೋಡ ಮಿಕ್ಸ್ ಮಾಡಿ, ತುಟಿಗೆ ಸಿಗರೇಟ್ ಇಟ್ಟು  "ಸಾಂತ್ವನ ಮಾಡಲು" ಮಾಡಲು ಹೇಗೂ ಫ್ರೆಂಡ್ಸ್‌ ಏನೂ  ಕಮ್ಮಿ ಇರಲಿಲ್ಲ.

ಇಷ್ಟೆಲ್ಲಾ ಆದ ನಂತರ ನಾನು ಬೆಳಗಾವಿ ಬಿಟ್ಟು ಬೆಂಗಳೂರಿಗೆ ಬಂದಿದ್ದೆ. ವಯಸ್ಸಿನಲ್ಲಿಯೂ , ಅನುಭವದಲ್ಲೂ , ಕೆಲಸದಲ್ಲಿಯೂ ಮಾಗಿದ್ದೆ.ಹೊಸ ಎತ್ತರ ಏರಿದ್ದೆ. ಇಲ್ಲಿಯೂ ಮತ್ತೆ ಅದೇ ಚಕ್ರದ ಪುನರಾವರ್ತನೆ ಆಯ್ತು ಅನ್ನೋದು ಬಿಟ್ಟರೆ ರಾಜಧಾನಿಯ ಹೊಸ ಪರಿಸರದಲ್ಲಿ ಲವಲವಿಕೆಯಿಂದಿದ್ದೆ. ಇಲ್ಲೊಂದು ಕಂಪೆನಿಯಲ್ಲಿ ಕೆಲಸ, ವಾಸಕ್ಕೊಂದು ಬಾಡಿಗೆ ರೂಮು. ಆದರೂ ಈ ಕಿಟಕಿಗಳಾಚೆಯ ವಿಷಯಗಳತ್ತ ನನ್ನ ಕುತೂಹಲ ಇಲ್ಲೂ ಮುಂದುವರೆದಿತ್ತು. ಎದುರು ಮನೆಯಲ್ಲೊಂದು ಸರಿಸುಮಾರು ಹತ್ತು ವರ್ಷ ಕಳೆದ 'ಹಳೆಯ' ಸಂಸಾರ. ನನ್ನ ಕಲ್ಪನೆಯ ಸಂಸಾರಗಿಂತ ತೀರಾ ಭಿನ್ನವಾಗದ್ದರಿಂದ ಸಹಜವಾಗಿಯೇ ದೃಷ್ಟಿ ಕಿಟಕಿಯಾಚೆ ಸುಳಿಯುತ್ತಿತ್ತು. ಗಂಡನಿಗೆ ಅವಳು ಎರಡನೆಯ ಸಂಸಾರ. ದಿನ ಬೆಳಗಾದರೆ ಸದಾ ಕೂಗಾಟ ಅರಚಾಟ. ಆ ಹೆಂಗಸು ಯಾವತ್ತೂ ಸಮಾಧಾನದಿಂದ ನಗುನಗುತ್ತಲೇ ಇದ್ದದ್ದನ್ನು ನಾನು ನೋಡಿಯೇ ಇರಲಿಲ್ಲ. ಮನೆಯಲ್ಲಿದ್ದಾಗ ಎಲ್ಲಾ ಕೆಲಸವೂ ಆತನದೇ, ಇವಳಿದ್ದು ಬರೇ ಆರ್ಡರ್. ಯುಕೆಜಿ, ಒಂದನೇ ತರಗತಿಯ ಇಬ್ಬರು  ಗಂಡು ಮಕ್ಕಳಂತೂ ಅಮ್ಮನ ಹಾಗೇ ಮಹಾ ಒರಟರು.
ಮನೆಯ ರಾಮಾಯಣ ಮುಗಿಸಿ ಹೊರಗೆ ಬಂದು ಡ್ಯೂಟಿಗೆಂದು ಬೈಕ್ ಹತ್ತುವಾಗ ಆ ಗಂಡಸಿನ ಮುಖ ನೋಡಬೇಕು...ಯುದ್ಧ ನಂತರದ ನಿರ್ಮಲ ಶಾಂತಿ, ಆನಂದ ಅವರ ಮುಖದಲ್ಲಿ; ಜೀವಾವಧಿ ಶಿಕ್ಷೆ ಮುಗಿಸಿ ಈಗಷ್ಟೇ ಹೊರ ಬಂದ ಖೈದಿಯ ಸಂತೋಷದಂತೆ ನಿರಾಳ ಮುಖಭಾವ. ಸಂಜೆ ಮತ್ತೆ ಮನೆಯ ಬಾಗಿಲು ಬಡಿಯುವಾಗ ಮತ್ತದೇ ಬೇಸರ. "ಒಂದೇ ಮನೆಯಲ್ಲಿ ವಿಚ್ಭೇದಿತ ಮನಸ್ಸುಗಳು ಸಹ ಬೋಜನ ಮಾಡುತ್ತವೆ" ಎಂದು ಎಲ್ಲೋ ಓದಿದ್ದ ಮಾತು ಇವರನ್ನು ನೋಡಿದಾಗ ಅದೆಷ್ಟು ನಿಜ  ಅನಿಸಿತು.ಉಳಿದ ಬದುಕಿನ ಅದೆಷ್ಟು ವರ್ಷಗಳನ್ನು ಈ 'ಬಂಧನ' ದಲ್ಲಿ ಕಳೆಯಬೇಕಲ್ಲಾ ಅಂತೆನಿಸಿ ನನಗೇ ಕಳವಳವಾಗುತಿತ್ತು. ಅದ್ಹೇಗೆ ಒಲವ ಕಾವು ಇಷ್ಟು ಬೇಗ ತಣ್ಣಗಾಗುತ್ತದೆ, ಆರಂಭದ ಉತ್ಕಟ ಪ್ರೇಮ ಹೇಗೆ ಇಂಗುತ್ತದೆ? ಅರ್ಥವೇ ಆಗುತ್ತಿರಲಿಲ್ಲ.
ಬಿಆರ್.ಲಕ್ಷ್ಮಣ್ ರಾವ್ ಅವರ ಒಂದು ಕವಿತೆ ಇವರನ್ನು ನೋಡಿದಾಗೆಲ್ಲಾ ಕಾಡುತ್ತಿತ್ತು...
" ನನ್ನ ನಿನ್ನ ಪ್ರೀತಿ
ಅಪ್ಪಟ  ಚಿನ್ನವಾದರೇನು?
ಕೊಡದಿದ್ದರೆ ಮರೆಗು
ಮಾಸುವುದು ಅದೂನು..."

ತೀರಾ ತಲೆ ಕೆಡುವ ಹಂತ ಬಂದಾಗ ಕಿಟಕಿಯ ಪರದೆಯನ್ನು ಮುಚ್ಚಿಬಿಡುತ್ತಿದ್ದೆ.

ಮುಂದೆ ನನ್ನದೂ ಮದುವೆ ಆಯ್ತು; ಮಕ್ಕಳೂ ಕೂಡಾ. ಕಂಪೆನಿಯೂ ಬದಲಾಗಿ ಬೆಂಗಳೂರಿನಿಂದ ನನ್ನ ನೆಚ್ಚಿನ ಕರಾವಳಿಯ ಮಂಗಳೂರಿಗೆ. ಬೇರೆ ಮನೆ , ಬೇರೆ ಕಿಟಕಿ, ತಣಿಯದ ಕುತೂಹಲದ ಬದುಕಿನ ಹೊಸ ನೋಟ.
ಎದುರು ಮನೆ ಕಿಟಕಿಯಲ್ಲಿ ನಡು ವಯಸ್ಸು ದಾಟಿದ ಇಬ್ಬರೂ ಕೆಲಸಕ್ಕೆ ಹೋಗುವ  'ಹೊಸ' ಸಂಸಾರ. ವಯಸ್ಸಿಗೆ ಬಂದಿರೋ ಮಕ್ಕಳು. ಬೆಳಗ್ಗೆದ್ದು ಕಿಟಕಿಯಾಚೆ ಕಣ್ಣಾಹಿಸಿದರೆ ಆ ಮನೆಯ ವರ್ತಮಾನ ಬಯಲು. ಗಂಡ ಹೆಂಡತಿ ಇಬ್ಬರೂ ಅಡುಗೆ ಕೋಣೆಯಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ ಬೆಳಗಿನ ಉಪಹಾರ ತಯಾರು ಮಾಡುವ ದೃಶ್ಯ ನನ್ನನ್ನು ಬಹುವಾಗಿ ಕಾಡುತಿತ್ತು. ಗಂಡ ಹಿಟ್ಟು ಲಟ್ಟಿಸಿ ಕೊಟ್ಟರೆ ಚಪಾತಿ ಕಾಯಿಸುವ ಕೆಲಸ ಹೆಂಡತಿಯದ್ದು, ಚಟ್ನಿಗೆ ಗಂಡ ಕಾಯಿ ತುರಿದು ಕೊಟ್ಟರೆ ಮಿಕ್ಸಿಯಲ್ಲಿ ರುಬ್ಬುವ ಕೆಲಸ ಹೆಂಡತಿಯದ್ದು. ಎಲ್ಲಾ ಕೆಲಸದಲ್ಲೂ ಸಮಪಾಲು; ಎಂತಹ ಅನ್ಯೋನ್ಯತೆ. ಅವರ ನಡುವೆ ಸುಳಿದಾಡುವಂತದ್ದು ಪ್ರೇಮವೋ ಕಾಮವೋ, ಒಬ್ಬರಿಗೊಬ್ಬರು ಈಗ ಅನಿವಾರ್ಯ ಅನ್ನಿಸುವಂತಹ ಅವಲಂಬನೆಯೋ ಗೊತ್ತಾಗುತ್ತಿರಲಿಲ್ಲ. ಆದರೆ ಅವರು ಜೀವಿಸುತ್ತಿದ್ದ ರೀತಿಯಿಂದ ನನ್ನ ಮನೆಯೊಳಗೂ ಆ ಪರಿಮಳ ಹರಡಿ ಬದುಕನ್ನು ಸಹ್ಯಗೊಳಿಸುತ್ತಿತ್ತು.

ನಡೆದ ಬದುಕಿನ ಎಲ್ಲಾ ಘಟನೆಗಳನ್ನು ಹಿಂತಿರುಗಿ ನೋಡಿದಾಗ ಮನಸ್ಸು ಚಿಂತನೆಯಲ್ಲಿ ತೊಡಗುತ್ತದೆ. ದೃಷ್ಟಿ ನನ್ನದೇ; ಕಿಟಕಿಯೂ ಕೂಡಾ. ಆದರೆ ಹೊರಗಿನ ವ್ಯವಹಾರಗಳು ಕಾಲಕಾಲಕ್ಕೆ ಬದಲಾಗುತ್ತಾ ಹೋದವು.ಬದುಕಿನ ಬೇರೆ ಬೇರೆ ಕಾಲಘಟ್ಟದಲ್ಲಿ ನಮ್ಮ ದೃಷ್ಟಿ, ನಮ್ಮ ಅವಶ್ಯಕತೆ ಅನಿವಾರ್ಯತೆಗಳು ಬೇರೆ ಬೇರೆಯಾಗಿರುವುದರಿಂದಲೇ ನಮ್ಮ ಕಣ್ಣಿಗೆ ಬೀಳುವ ದೃಶ್ಯಗಳೂ ಅಂತಹುಗಳೇ. ಪ್ರೇಮ, ಜಗಳ, ಹೊಂದಾಣಿಕೆ ಇವೆಲ್ಲವೂ ನಮ್ಮ ಅನಿವಾರ್ಯತೆಗಳನ್ನು ಅವಲಂಬಿಸಿವೆ. ಎಲ್ಲವೂ ಆಯಾ ವಯಸ್ಸಿನಲ್ಲಿ ಚಂದವೇ. ಆದರೆ ಹಿತಮಿತವಿರಬೇಕೆಂಬ ಅರಿವು ನಮ್ಮಲ್ಲಿರಬೇಕು. ಎಲ್ಲಕ್ಕಿಂತಲೂ ಬದುಕು ದೊಡ್ಡದೆಂಬ ಅರಿವು ಸದಾ ನಮ್ಮಲ್ಲಿರಬೇಕು.

ಈಗ ಮತ್ತೆ ಮನೆ ಬದಲಾಯಿಸಿದ್ದೇನೆ.ಆದರೆ ಯಾಕೋ ಇನ್ನು ಮುಂದೆ ಎದುರು ಮನೆಯ ಕಿಟಕಿಗಳು ತೆರೆಯುತ್ತವೋ ಇಲ್ಲವೋ ಎಂಬ ಆತಂಕ ಇತ್ತೀಚೆಗೆ  ನನ್ನನ್ನು ಕಾಡುತ್ತಿದೆ.

Friday 3 March 2017

ಒಂದು ಆಟದ ಪ್ರಸಂಗ


ಎಷ್ಟೋ ದಿನಗಳಿಂದ ಯೋಚಿಸ್ತಾ ಇದ್ದೆ.ಒಂದೊಳ್ಳೆಯ ಯಕ್ಷಗಾನ ನೋಡ್ಬೇಕು ಅಂತ.ಆದರೆ ದೈನಂದಿನ ಕೆಲಸಗಳ ಒತ್ತಡದಿಂದಾಗಿ ಯಾವುದಕ್ಕೂ ಪುರುಸೊತ್ತೇ ಸಿಕ್ಕಿರಲಿಲ್ಲ‌.ಹಾಗಂತ ಯಕ್ಷಗಾನ ನೋಡಲೇ ಇರಲಿಲ್ಲ ಅಂತಲ್ಲ‌.ಅಲ್ಲಿ ಇಲ್ಲಿ ನಡೆಯುತ್ತಲೇ ಇದ್ದ ಕಟೀಲು ಮೇಳದ ದೇವಿಮಹಾತ್ಮೆ ಆಟಗಳನ್ನು ಸ್ವಲ್ಪ ಸ್ವಲ್ಪ ನೋಡುತ್ತಿದ್ದೆ. ಎಷ್ಟೆಂದರೂ ಮಹಿಷಾಸುರನ ಪ್ರವೇಶದವರೆಗೆ ಮಾತ್ರ ನಮ್ಮ ಆಟ. ನಂತರ ನಿದ್ರಾದೇವಿಯ ವಶಕ್ಕೆ ಯಾವುದೇ ಯುದ್ಧವಿಲ್ಲದೇ ನನ್ನನ್ನು ಒಪ್ಪಿಸಿ ಬಿಡುತ್ತಿದ್ದೆ.
ಹಾಗಾಗಿ ಒಂದೊಳ್ಳೆಯ ಯಕ್ಷಗಾನವನ್ನು ಪೂರ್ತಿ ನೋಡಿ ಆಸ್ವಾದಿಸಬೇಕು ಅನ್ನುವ ಆಸೆ ಈಡೇರಿರಲಿಲ್ಲ.

     ಉಡುಪಿಯಲ್ಲಿ ತೆಂಕುತಿಟ್ಟು ಹಾಗೂ ಬಡಗುತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯ ಅದ್ದೂರಿ ಆಟದ ಬಗ್ಗೆ ಪೇಪರಿನಲ್ಲಿ ಓದಿದ್ದೇ ನನ್ನ ಕಿವಿಗಳು ನಿಮಿರಿದವು.ಡ್ಯೂಟಿಗೆ ರಜೆ ಹಾಕಿ ದಿನವನ್ನು ರಿಸರ್ವ್ ಮಾಡಿಯೇ ಬಿಟ್ಟೆ. ನನ್ನಷ್ಟೇ ಆಟದ ಹುಚ್ಚಿರುವ ಗೆಳೆಯ ಅಣ್ಣಪ್ಪನೊಂದಿಗೆ ಹೊರಟೇ ಬಿಟ್ಟೆ.ಒಳ್ಳೆಯ ಭಾಗವತಿಕೆಯ ಕಂಠ, ಶಾರೀರವಿರುವ ಅಣ್ಣಪ್ಪ ಗಾಣಿಗ  ಡ್ಯೂಟಿಯ ವಿರಾಮದ ಸಮಯದಲ್ಲಿ ಹಾಡುವ ಯಕ್ಷಗಾನದ ಹಾಡುಗಳನ್ನು ಕೇಳುವಾಗ ಬಡಗುತಿಟ್ಟಿನ ಹೆರಂಜಾಲು ಗೋಪಾಲ ಗಾಣಿಗರೇ ಹಾಡಿದ ಹಾಗೆ ಸುಶ್ರಾವ್ಯವಾಗಿ ಯಕ್ಷಗಾನದ ಪದ್ಯಗಳು ಅಲೆಅಲೆಯಾಗಿ ಕೇಳಿತಿತ್ತು. ಹಾಗಾಗಿ ನನಗೆ ಅಣ್ಣಪ್ಪನೊಂದಿಗೆ ಆಟ ನೋಡುವ ಮಜವೇ ಬೇರೆ. ಸಮಯಕ್ಕೆ ಸರಿಯಾಗಿ ಉಡುಪಿಯ ಕರಾವಳಿ ಬೈಪಾಸ್ ನಲ್ಲಿ ಹಾಕಿದ್ದ ಟೆಂಟ್ ಗೆ ಹೋಗಿ ಎರಡು ಟಿಕೆಟ್ ಕೊಂಡೆವು.ಆದರೆ ಆಟದ ಆರಂಭಕ್ಕಿನ್ನೂ ಸಾಕಷ್ಟು ಸಮಯವಿತ್ತು.

ಪ್ರಸಂಗದ ಬಗ್ಗೆ ಎರಡು ಮಾತು ಹೇಳಲೇ ಬೇಕು.ಆಟದ ಪ್ರಸಂಗ ಚಕ್ರವ್ಯೂಹ, ನನ್ನ ಇಷ್ಟದ ಪ್ರಸಂಗ. ಹಿಂದೆ ಸಾಕಷ್ಟು ಬಾರಿ ನೋಡಿದ್ದರೂ , ಅಭಿಮನ್ಯುವಿನ ರಂಗ ಪ್ರವೇಶದ ಅಬ್ಬರ, ಆ ಲವಲವಿಕೆ ಯಾವತ್ತೂ ಬೋರ್ ಹೊಡೆಸುವುದೇ ಇಲ್ಲ. ಇದೊಂದು ಪೌರುಷ, ಅಮ್ಮ ಮಗನ ಸೆಂಟಿಮೆಂಟ್,  ಕುಟಿಲ ಯುದ್ದದ ರಾಕ್ಷಸತನದ ಭೀಭಸ್ಸತೆಯ ಸನ್ನಿವೇಶಗಳ ಮಿಶ್ರಣದಿಂದಾಗಿ ಮತ್ತೆ ಮತ್ತೆ ನೋಡುವಂತಹ ಪ್ರಸಂಗ. ಬರೇ ಇಷ್ಟೇ ಆಗಿದ್ದರೆ ಆ ದಿನದ ಪ್ರಸಂಗ ವಿಶೇಷವಾಗಿರುತ್ತಿರಲಿಲ್ಲ. ಆದರೆ ಅಂದು ಎರಡು ಬಾರಿ ಚಕ್ರವ್ಯೂಹದ ಪ್ರಸ್ತುತಿ ಇತ್ತು. ಒಮ್ಮೆ ಬಡಗಿನವರು ಕೌರವರಾದರೆ ತೆಂಕುತಿಟ್ಟಿನವರು ಪಾಂಡವರು.ನಂತರ ತೆಂಕಿನವರು ಕೌರವರಾಗಿ ಬಡಗಿನ ಅಭಿಮನ್ಯು ಚಕ್ರವ್ಯೂಹ ಬೇಧಿಸುವ ಅಧ್ಬುತ ರಂಗಪ್ರಯೋಗವಿತ್ತು. ಹಾಗಾಗಿಯೇ ಸಹಜವಾಗಿಯೇ ಕುತೂಹಲವಿತ್ತು.

ಹಾಗಾಗಿ ಸಾಕಷ್ಟು ಸಮಯವಿದ್ದುದರಿಂದ ಊಟಕ್ಕೆ ಅಂತ ಪಕ್ಕದಲ್ಲಿಯೇ ಇದ್ದ ಹೋಟೇಲ್ ಗೆ ಹೋಗಿ ಧೀರ್ಘ ಮಾತುಕತೆಗಳ ನಡುವೆ ಗಡದ್ದಾಗಿ ಊಟಮಾಡಿ ಟೆಂಟ್ ಹತ್ತಿರ ಬರುವಾಗ ಚಕ್ರವ್ಯೂಹದ ಒಳಗೆ ಅಭಿಮನ್ಯುವಿನ ಪ್ರವೇಶ ಆಗಿ ಆಗಿತ್ತು. ಟೆಂಟ್ ನ ಒಳಹೋಗುವ ಬಾಗಿಲು ಹಾಕಿ ಆಗಿತ್ತು.ಅಲ್ಲಿಂದ ಹೋಗುವುದು ಅಸಾಧ್ಯವೇ ಆಗಿತ್ತು. ದಾರಿ ಹುಡುಕಿ ಹುಡುಕಿ ಕೊನೆಗೊಂದು ಕಡೆ ಸಣ್ಣ ದಾರಿ ಸಿಕ್ಕಿ ಹೇಗೋ ಒಳಗೆ ನುಸುಳಿದೆವು ಕಷ್ಟಪಟ್ಟು, ಅಭಿಮನ್ಯು ಚಕ್ರವ್ಯೂಹ ಭೇದಿಸಿದ ಹಾಗೆ. ಒಳಗೆ ಬಂದು ನೋಡ್ತೇವೆ, ಕಿಕ್ಕಿರಿದು ತುಂಬಿದ ಟೆಂಟ್ ನ ಒಳಗೆಲ್ಲೂ ಕುಳಿತುಕೊಳ್ಳಲೂ ಜಾಗವಿಲ್ಲ.ಟಿಕೆಟ್ ತೆಗೆದುಕೊಂಡರೂ ನಮಗೆ ಸೀಟ್ ಇಲ್ಲ. ನುಸುಳಿ ಒಳಬಂದ ಕಡೆ ನಿಲ್ಲಲೂ ಸರಿಯಾದ ಸ್ಥಳವಿಲ್ಲ. ಹಾಗಾಗಿ ಬಂದ ದಾರಿಯಲ್ಲಿಯೇ ಹೊರಹೋಗಿ ಬೇರೆ ಕಡೆಯಿಂದ ಬರೋಣವೆಂದು ತಿರುಗಿದರೆ ಆ ದಾರಿಯನ್ನೂ ಮುಚ್ಚಿಬಿಟ್ಟಿದ್ದಾರೆ ಯಾರೂ ಒಳ ನುಸುಳದ ಹಾಗೆ. ನಿಲ್ಲಲೂ ಆಗದೇ ಹೊರಹೋಗಲೂ ಆಗದೇ ಚಡಪಡಿಸುತ್ತಿರುವಾಗ ಪಕ್ಕದಲ್ಲಿ ನಮ್ಮ ಹಾಗೆಯೇ ಪರಿಸ್ಥಿತಿಯಲ್ಲಿದ್ದ ಒಬ್ಬ ಟೈಟ್ ಮಾಸ್ಟರ್ " ಊಹುಂ...ದಾ...ಲ ಮಲ್ಪೆರೆ ಆಪುಜಿ. ಚಕ್ರವ್ಯೂಹದ ಉಲಯ್ ಬತ್ತಾಂಡ್ .ನನ ಪಿದಯ್ ಪೋಪಿನ ಛಾನ್ಸ್ ಇಜ್ಜಿ. ಲಡಾಯಿ ಮಲ್ಪೊಡೇ, ಬೇತೆ ತಾದಿ ಇಜ್ಜಿ...."  ( ಊಹುಂ...ಏನೂ ಮಾಡೋ ಹಾಗಿಲ್ಲ. ಚಕ್ರವ್ಯೂಹ ಪ್ರವೇಶ ಮಾಡಿ ಆಗಿದೆ. ಇನ್ನು ಹೊರಹೋಗೋ ಛಾನ್ಸೇ ಇಲ್ಲ. ಯುದ್ಧ ಮಾಡಲೇ ಬೇಕು, ಬೇರೆ ದಾರಿಯಿಲ್ಲ ). ಅಂತ ಗಹಗಹಿಸಿ ನಕ್ಕಾಗ ಆ ಸನ್ನಿವೇಶದಲ್ಲಿಯೂ ನಗು ತಡೆಯಲಾಗಲಿಲ್ಲ.

 ಅಂತಿಮವಾಗಿ ಅಭಿಮನ್ಯು ಮೋಸದ ಯುದ್ಧದಿಂದಾಗಿ ವೀರ ಮರಣವನ್ನಪ್ಪಿದಾಗ,
" ಹಲವು ಗಜಗಳೊಂದಾಗಿ
ಸಿಂಹದ ಮರಿಯನ್ನು ಕೊಲಿಸಿದಂತಾಯ್ತು...
ಭರತ ಭೂಮಿಯೊಳ್ ಮೊಳೆತ ಚಿಗುರನು
ಕರುಣೆಯಿಲ್ಲದೇ ಹೊಸಕಿದರು ಶಿವ ಶಿವಾ‌...."
ಎಂದು ಪದ್ಯಾಣ ಗಣಪತಿ ಭಟ್ಟರು ಕರುಣರಸದಿಂದ ನಮ್ಮ ಹೃದಯವನ್ನು ಆರ್ದ್ರಗೊಳಿಸಿದರೂ ಆ ಕುಡುಕನ ಮಾತು ನೆನಪಾಗಿ ನಗೆಬುಗ್ಗೆ ಚಿಮ್ಮುತ್ತಲೇ ಇತ್ತು.