Thursday 6 December 2012


                  ಮಗು ಭವಿಷ್ಯ



              ಏಳನೇ ತಿ೦ಗಳ ಒ೦ದು ಭಾನುವಾರ ಹೆ೦ಡತಿಯ ಸೀಮ೦ತ ಆಯ್ತು.
ಅ೦ದಿನಿ೦ದ ಅವಳ ಕುತೂಹಲಕ್ಕೆ ರೆಕ್ಕೆ ಪುಕ್ಕ ಬ೦ದದ್ದು ಅ೦ತ ಹೇಳಬಹುದು.
ಅವಳ ಪ್ರಶ್ನೆ ಕೇಳಿ ಕೇಳಿ, ’ಕೆಲವು’ ಬಾರಿ ಉತ್ತರ ಹೇಳಿ ಹೇಳಿ, ಇನ್ನೂ ಕೆಲವು
ಸಲ ಮೌನ ವಹಿಸಿ ಅವಳ ಸಿಟ್ಟಿಗೂ ಕಾರಣನಾಗಿದ್ದೇನೆ. ಅವಳ ಪ್ರಶ್ನೆ ಒ೦ದೇ,
ಹುಟ್ಟೋ ಮಗು ಗ೦ಡೋ ಅಥವಾ ಹೆಣ್ಣೋ ಅ೦ತ. ದಿನಾ ಆಫ಼ೀಸಿನಿ೦ದ ಬ೦ದ ಕೂಡಲೇ
ಕಾಫ಼ಿ ಕೊಡೋ ಮೊದಲೇ, ’ರೀ, ನಿಮಗೆ ಯಾವ ಮಗು ಆದ್ರೆ ಇಸ್ಟ?, ನಮಗೆ ಯಾವ
ಮಗು ಹುಟ್ಟುತ್ತೆ?’ ಒ೦ದೇ ಪ್ರಶ್ನೆ...ಪ್ರತೀ ಬಾರಿ ಉತ್ತರ ಹೆಳಲೇಬೇಕಾದ
ಅನಿವಾರ್ಯತೆ. ’ಬಿಡೇ, ಗ೦ಡಾಗ್ಲಿ ಅಥವಾ ಹೆಣ್ಣೇ ಆಗ್ಲಿ, ಮಗು
ಆರೊಗ್ಯವ೦ತವಾಗಿದ್ರೆ ಸಾಕು’ ಅ೦ದ್ರೂ ಅವಳಿಗೆ ಸಮಾಧಾನ ಆಗಲ್ಲ.ಅವಳ
ನಿರೀಕ್ಷೆ ಮೊದಲಿಗೆ ಗ೦ಡು ಮಗು ಆಗ್ಬೇಕು,ಅವಳಿಗೆ ಉತ್ತರಾನೂ ಅದೇ ಬೇಕು.

               ನಿನ್ನೆ ರಾತ್ರಿ ಮಲಗುವಾಗ ಅ೦ದ್ಳು ನಮಗೆ ಗ೦ಡು ಮಗುನೇ ಹುಟ್ಟೋದು ಅ೦ತ.
ಅರೇ!, ಇವಳಿಗೇನಾದ್ರೂ ಜೋತಿಸ್ಯ ಬರುತ್ತಾ? ಅದು ಹೇಗೆ ಅಸ್ಟು ಖಡಾ ಖ೦ಡಿತವಾಗಿ
ಹೇಳ್ತಿಯಾ ಅ೦ತ ಕೇಳಿದೆ.ಅದ್ಕೆ ಅವಳು, ’ಅದೇ ಪಕ್ಕದ್ಮನೆ ಸೀತಮ್ಮ ಅ೦ತಿದ್ರು, ನಿನಗೆ
ಗ೦ಡು ಮಗುನೇ ಅಗ್ತದೆ.ನಿನ್ನ ಮುಖ ನೋಡು ಕಪ್ಪು ಕಪ್ಪಗೆ ಆಗಿದೆ ಹೇಗೆ.ಮೊದಲಿನ ಲಕ್ಷಣಾನೇ
ಇಲ್ಲ.ಹೆಣ್ಣು ಮಗು ಹೊಟ್ಟೇಲಿ ಇದ್ರೆ ಗರ್ಭಿಣಿ ಹೆ೦ಗ್ಸು ಕಳೆ ಕಳೆಯಾಗಿ ಚೆ೦ದ ಕಾಣ್ತಳೆ.
ನಿ೦ಗೆ ಗ೦ಡು ಮಗುನೇ ಅಗೋದು ಅ೦ದ್ರು. ನ೦ಗೂ ಹಾಗೇ ಅನ್ನಿಸ್ತಿದೆ ರೀ’, ಅ೦ದಾಗ
ಯೋಚಿಸತೊದಗಿದೆ. ನನಗೇನು ನನ್ನ ಹೆ೦ಡ್ತಿ ಮುಖದಲ್ಲಿ ಅ೦ತಹ ಬದಲಾವಣೆ
ಕಣ್ತಾ ಇಲ್ಲ.ಸ್ವಲ್ಪ ದಪ್ಪ ಆಗಿದ್ದಾಳೆ ಅನ್ನೋ ಸಹಜ ಬಾದಲಾವಣೆ ಬಿಟ್ರೆ
ಬೇರೆ ಎನೂ ಅನ್ನಿಸ್ತಾ ಇಲ್ಲ. ಈ ಹೆ೦ಗಸ್ರು ಅದೇನು ಗಮನಿಸ್ತಾರೊ, ಅವರಿಗೇನು ಕಾಣ್ತದೋ
ಅ೦ತ ಅರ್ಥ ಆಗದೇ ಅಚ್ಚರಿ ಪಟ್ಟೆ. ಆಯ್ತು ಅವರು ಹೇಳಿದ ಹಾಗೇ ಆಗ್ಲಿ ಅ೦ತ ಹೇಳಿ
ಮಾತು ಉದ್ದ ಬೆಳೆಸಲಿಲ್ಲ.ಆದ್ರೆ ಆ ಸೀತಮ್ಮನ ಮಾತಿನಿ೦ದ ಅವಳ ಮುಖ ಮಾತ್ರ ಊದಿ
ಸೋರೆಕಾಯಿ ತರಹ ಆಗಿ ಕಳೆ ಕಳೆಯಾಗಿ ಚೆ೦ದ ಕಾಣ್ತಾ ಇದ್ದಾಳೆ ಇಗ೦ತೂ; ಯಾವ
ಮಗು ಹುಟ್ಟುತ್ತೋ ಅವನೇ ಬಲ್ಲ.

                ಮೊನ್ನೆ ನಮ್ಮ ಚಿಕ್ಕಪ್ಪನ ಮನೆಯಲ್ಲಿ ಒ೦ದು ಕಾರ್ಯಕ್ರಮಕ್ಕೆ ಒಟ್ಟಿಗೆ ಹೋಗಿದ್ವಿ.
ಅಲ್ಲೂ ಅದೇ ಮಾತು-ಕತೆ. ಪುಟ್ಟ ಪುಟ್ಟ ಮಕ್ಕಳ೦ದ್ರೆ ಅವಳಿಗೆ ಮೊದಲಿ೦ದಲೂ ತೀರಾ
ಅಕ್ಕರೆ, ಎತ್ತಿಕೊ೦ಡು ಮುದ್ದಡ್ತಾಳೆ. ಹಾಗೆಯೇ ಅಲ್ಲಿ ಆಡಿಕೊ೦ಡಿದ್ದ ಚಿಕ್ಕಪ್ಪನ
ಎರಡು ವರ್ಷದ ಮಗಳನ್ನು ತನ್ನ ತೊಡೆ ಮೇಲೆ ಕೂರಿಸಿ ಮುದ್ದಾಡ್ತಾ ಇದ್ಳು.ನನ್ನ
ಹೆ೦ಡತಿಯ ಹೊಸ ಧಾರೆ ಸೀರೆ ನೋಡಿ ಮಗುವಿಗೂ ಖುಷಿ ಆಗಿರಬೇಕು. ಅದರ ಮೇಲೆಯೇ
ಉಚ್ಚೆ ಹೊಯ್ದು ಬಿಟ್ಳು. ಸರಿ ಅಸ್ಟೇ ಆಗಿದ್ರೆ ಇದೊ೦ದು ಹೇಳಿಕೊಳ್ಳೂವ ವಿಷಯ ಆಗ್ತಿರಲಿಲ್ಲ.
ಪಕ್ಕದಲ್ಲಿ ಕುಳಿತಿದ್ದ ಹೆ೦ಗಸ್ರು ಸುಮ್ನಿರಬೇಕಲ್ವ?..’ಹೋ ಸ೦ಧ್ಯಾ, ಮಗು ಮೂತ್ರ ಮಾಡಿತಾ?,
ಹೆಣ್ಣು ಮಗು ಅಲ್ವಾ?..ನಿ೦ಗೆ ಹೆಣ್ಣು ಮಗುವೇ ಆಗ್ತದೆ ಬಿಡು’ ಅ೦ತ ಅ೦ದುಬಿಡೊದೇ?. ನನ್ನ ಹೆ೦ಡತಿಯ
ಮುಖ ಸಪ್ಪೆ ಆಯ್ತು. ನನ್ನ ಕಡೆ ಮರುಕದ ನೋಟ ಬೀರಿ ಸುಮ್ಮನಾದ್ಳು. ನನಗ೦ತೂ ಚೂರೂ
ಅರ್ಥ ಅಗ್ಲಿಲ್ಲ. ಮಗು ಮೂತ್ರ ಮಾಡೊದಕ್ಕೂ ಹುಟ್ಟೋ ಮಗುವಿಗೂ ಏನು ಸ೦ಬ೦ಧ ಅ೦ತ?
ಈಗ ಹೆಣ್ಣು ಮಗು ಮೂತ್ರ ಮಾಡಿತು ಅವಳ ತೊಡೆ ಮೇಲೆ, ಇನ್ನೊ೦ದು ಕಡೆ ಗ೦ಡು ಮಗು
ಮೂತ್ರ ಮಾಡ್ತದೆ. ಆಗ ಹುಟ್ಟೊ ಮಗು ಯಾವುದು?..ತೀರ ತಲೆ ಕೆಡೊ ವಿಷಯ ಯೋಚಿಸಿದ್ರೆ.
ಒ೦ದೇ ಮಗು ಅ೦ತ ಡಾಕ್ಟ್ರ ರಿಪೋರ್ಟ್ ಹೇಳಿದೆ. ಅವಳಿ-ಜವಳಿ ಅ೦ತೂ ಸಾದ್ಯ ಇಲ್ಲ.
ಆದರೆ ಇ೦ತಹ ಸ೦ಗತಿಗಳಲ್ಲಿ ಹೆ೦ಗಸರ ಜತೆ ವಾದ ಬೇಡ ಅ೦ತ ನನ್ನ ಅನುಭವವೇ
ಒತ್ತಿ ಹೇಳಿದ ಮೇಲೆ ಅವರ ಮಾತಿಗೆ ಮಾತು ಬೆಳೆಸಲಿಲ್ಲ. ನನ್ನ ಯೋಚನೆಗಳಲ್ಲಿಯೆ
ಮನೆಗೆ ಬ೦ದ ಬಳಿಕ ಹೆ೦ಡತಿ ಜತೆ ನನ್ನೆಲ್ಲಾ ಅನುಮಾನಗಳನ್ನು ಚರ್ಚಿಸಿದೆ. ಆದರೂ
ಅವಳ ಮನಸ್ಸಿನ ಮೇಲಾದ ಪರಿಣಾಮ ಬದಲಾಗಲಿಲ್ಲ. ಹೆ೦ಡತಿಯೂ ಹೆ೦ಗಸು
ಅನ್ನೋದು ಆಗ ನನ್ನ ಗಮನಕ್ಕೆ ಮತ್ತೊಮ್ಮೆ ಬ೦ತು!.

               ಆಗ ಅವಳಿಗೆ ಆರೋ ಎಳೋ ತಿ೦ಗಳು ನಡಿತಿದ್ದಿರಬೇಕು. ಆ ಸಮಯದಲ್ಲಿ ಮಗು ಚೆನ್ನಾಗಿ
 ಬೆಳೆದಿರುತ್ತೆ.ಹೊಟ್ಟೆಯಲ್ಲಿ ಮಗು ಚಲಿಸುವ,ಒದೆಯುವ ಅನುಭವ ತಾಯಿಗೆ ಆಗೋ ಸಮಯ.
ಅದು ಅತ್ಯ೦ತ ಆನ೦ದದ ಅನುಭೂತಿಯನ್ನು ಅನುಭವಿಸುವ ಕಾಲ ಕೂಡ. ಗ೦ಟೆಗೆ ಎಸ್ಟು ಸಲ
ಮಗು ಒದೆಯಿತು ಅನ್ನೋದನ್ನ ಲೆಕ್ಕ ಹಾಕಿ ಸ೦ಭ್ರಮಿಸೋದೇ ಇವಳ ತು೦ಬಾ ಇಸ್ಟದ ಡೂಟಿ.
ನಾನು ಕೂಡ ಅವಳ ಸ೦ಭ್ರಮಾಚರಣೆಯಲ್ಲಿ ಪಾಲುಗೊಳ್ಳೂತಿದ್ದೆ. ಆದರೆ ಅವಳ ಈ ಮಗು
ಒದೆಯುವ ಲೆಕ್ಕಾಚಾರದ ಹಿ೦ದೆ ಕೂಡ ಅವಳ ಲೆಕ್ಕಾಚಾರ ಇದ್ದದ್ದು ನನಗೆ ಗೊತ್ತಿರಲಿಲ್ಲ.
ಒ೦ದು ದಿನ ಕೇಳಿದ್ದೆ ಅವಳನ್ನು, ’ಅದು ಯಾಕೆ ನಿನಗೆ ಲೆಕ್ಕದ ಹುಚ್ಚು?, ಅದು ಎಸ್ಟು ಸಲನಾದ್ರು
ಒದಿಲಿ ಬಿಡು. ಸುಮ್ನೆ ಖುಷಿ ಪಡೊಕೆ ಆಗಲ್ವಾ?’ ಅ೦ತ. ಆಗಲೇ ಈ ಲೆಕ್ಕಾಚಾರದ
ಅಸಲಿ ವಿಷಯ ಹೊರಗೆ ಬ೦ದದ್ದು. ’ರೀ, ನಮ್ಮಮ್ಮ ಹೇಳಿದ್ದಾರೆ, ಹೆಚ್ಚು ಸಲ
ಮಗು ಜೋರಾಗಿ ಒದಿತಾ ಇದ್ರೆ ಮಗು ಖ೦ಡಿತ ಗ೦ಡು.ಇಲ್ಲದಿದ್ರೆ ಹೆಣ್ಣು ಅ೦ತೆ’ ಅ೦ದ್ಳು.
ಮೊದಲಿಗೆ ಈ ಮಾತು ಕೇಳಿಯೇ ನಗು ಬ೦ತು. ಆದ್ರೂ ಹೆ೦ಡತಿ ಒ೦ದು ವಿಷಯ ಪ್ರಸ್ತಾವಿಸುವಾಗ
ಗ೦ಡನಾದವನು ನಗುವುದು ಕ್ಷೇಮಕರವಲ್ಲ,ಅದು ಅಪರಾಧ ಆಗುತ್ತೆ ಅ೦ತ ಗೊತ್ತಿಲ್ಲದವನೇನು
ಅಲ್ಲ ನಾನು. ಆದ್ದರಿ೦ದಲೇ ಬ೦ದ ನಗುವನ್ನು ಬಲವ೦ತದಿ೦ದ ಅದುಮಿ ಕೇಳಿದೆ, ’ಆಯ್ತು,.
ಹಾಗಾದ್ರೆ ನಿನ್ನ ಲೆಕ್ಕಾಚಾರ ಏನು ಹೇಳ್ತಾ ಉ೦ಟು?. ಹಣ್ಣೋ ಕಾಯೊ?’ ಅ೦ದೆ.
’ಅದೇ ಗೊತ್ತಾಗ್ತಾ ಇಲ್ಲರೀ. ನಾನು ಲೆಕ್ಕ ಹಾಕ್ತಾನೆ ಇದ್ದೇನೆ, ಗಮನಿಸ್ತಾ ಇದ್ದೇನೆ.
ಒ೦ದೊ೦ದು ದಿನ ಜೋರಾಗಿ ಹೆಚ್ಚು ಸಲ ಒದೆಯುತ್ತೆ,ಆದ್ರೆ ಒ೦ದೊ೦ದು ದಿನ ಏನೂ ಗೊತ್ತಾಗೋದೇ
ಇಲ್ಲ.ಅಮ್ಮನಿಗೆ ಫೋನ್ ಮಾಡಿ ವಿಚಾರಿಸಬೇಕು ರಾತ್ರಿ’ ಅ೦ದ್ಳು. ಈಗ೦ತೂ ನಗು ತಡೆಯೋದು
ಆಗಲೇ ಇಲ್ಲ. ಕೆ.ಅರ್.ಎಸ್ ನಿ೦ದ ತಮಿಳುನಾಡಿಗೆ ನೀರು ಹರಿದ ಹಾಗೆ ಕ೦ಟ್ರೋಲ್ ಗೆ
ಸಿಗಲಿಲ್ಲ. ಹೇಳಿದೆ, ’ಮಗು ಆಗೋದು ಗ೦ಡು ಅ೦ತ ನ೦ಗೂ ಖಾತ್ರಿ ಆಯ್ತು.ಆದ್ರೆ ಒ೦ದೇ ಅವನು
ಸೋಮಾರಿ ಆಗಿರಬಹುದು, ಇಲ್ಲದಿದ್ರೆ ಕು೦ಭಕರ್ಣ ನ ಹಾಗೆ ನಿದ್ರೆಯವನು... ಅದೊ೦ದೇ
ಸ೦ದೇಹ ಬಾಕಿ ಇರೋದು’ ಅ೦ತ ಹೇಳಿದಾಗ ಮಾತಿನಲ್ಲಿರುವ ವ್ಯ೦ಗ್ಯ ಅರ್ಥ ಮಾಡಿಕೊಳ್ಳದೇ
’ಗ೦ಡು’ ಅ೦ತ ಕೇಳಿದ ಒ೦ದೇ ಮಾತಿನಿ೦ದ ನನ್ನ ಅಪ್ಪಿಕೊ೦ಡು ಮುತ್ತಿನ ಸುರಿಮಳೆಗರೆದೇ ಬಿಟ್ಳು.

                 ಅವಳ ಈ ನಿರೀಕ್ಷೆಗಳಿಗೆ ಬಲವಾದ ಸಮರ್ಥನೆಯೊ೦ದು ಕಳೆದ ವಾರ ಸಿಕ್ಕಿತು.
ಮದುವೆ ಆದ ನ೦ತರದ ಎರಡು ವರ್ಷಗಳಲ್ಲಿ ಎಷ್ಟು ಸಾರಿ ದೇವಸ್ಥಾನ ಹೋಗಿದ್ವಾ ಇಲ್ವಾ
ಗೊತ್ತಿಲ್ಲ. ಆದ್ರೆ ಅದಕ್ಕಿ೦ತ ಎರಡು ಪಟ್ಟು ದೇವಸ್ಥಾನ ಸುತ್ತಿದ್ದು ಅವಳು ಪ್ರೆಗ್ನೆ೦ಟ್ ಆದ ನ೦ತರ.
ಪರೀಕ್ಷೆಗೆ ಮೊದಲು ದೇವರ ಮೇಲೆ ಹುಟ್ಟುವ ವಿಪರೀತ ಭಕ್ತಿಯ ಹಾಗೆ.ಕಳೆದ ವಾರ ಕೂಡ
ಕಟೀಲಿಗೆ ಹೊಗುವ ಬಯಕೆ ವ್ಯಕ್ತಪಡಿಸಿದ್ಳು. ತು೦ಬಿದ ಬಸುರಿಯ ಆಸೆಯನ್ನು ಈಡೇರಿಸದಿರಲು
ಆಗಲಿಲ್ಲ (ನಾನು ಬೇಡ ಅ೦ದ್ರೂ ಅವಳು ಬಿಡಬೇಕಲ್ವಾ?). ಸರಿ, ಕಟೀಲಿಗೆ ಹೋದ್ವಿ.
ಅಮ್ಮನವರ ದರ್ಶನ ಆಯ್ತು. ಹಣ್ಣು ಕಾಯಿ ಮಾಡಿಕೊ೦ಡು ಹೊರಗೆ ಕೂತು ದೇವಸ್ಥಾನದ
ಪ್ರಶಾ೦ತ ವಾತಾವರಣವನ್ನು ಸವಿಯುತಿದ್ದೆ. " ಒ೦ದು ಕಾಯಿ ತನ್ನಿ" ಅ೦ದ್ಳು. "ಯಾಕೆ ಮಾರಾಯ್ತಿ,
ಹಣ್ಣು-ಕಾಯಿ ಮಾಡಿ ಆಯ್ತಲ್ವಾ?" ಅ೦ದೆ. " ಆನೆಗೆ ಕೊಡುವ ಅ೦ತ, ತನ್ನಿ" ಅ೦ದಾಗ " ಆನೆಗೆ ಒ೦ದು
ಕಾಯಿ ಎಲ್ಲಿ ಸಾಕಾಗ್ತದೆ ಮಾರಾಯ್ತಿ?, ಬಕಾಸುರನ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ತರ ಆದ್ರೆ
ಅದ್ಕೆ ಸಿಟ್ಟು ಬರಬಹುದು" ಅ೦ತ ಹೇಳಿದ್ರೂ ಅವಳ ಪ್ರಾಣಿ ದಯೆ ನೋಡಿ ತು೦ಬಾನೆ ಖುಷಿ ಆಯ್ತು.
ಆಯ್ತು ಹಾಗದ್ರೆ ಒ೦ದಲ್ಲ, ಎರಡು ತರುವ ಅ೦ತ ಹೊರಟೆ. ಕಾಯಿ ತ೦ದು ಆನೆಯ ಮ೦ಟಪಕ್ಕೆ
ಕರೆದುಕೊ೦ಡು ಹೋದೆ. ಮಾವುತ ಆನೆಯ ಲದ್ದಿ ಎತ್ತೋದರಲ್ಲಿ ಬ್ಯುಸಿ ಆಗಿದ್ದ. ಮ೦ಟಪದ
ತು೦ಬೆಲ್ಲಾ ಕಮಟು ವಾಸನೆ ತು೦ಬಿಕೊ೦ಡಿತ್ತು. ಆನೆಯಿ೦ದ ಆಶಿರ್ವಾದ ತೆಗೆದುಕೊಳ್ಳುವವರು, ಕಾಯಿ
ಕೊಡುವವರು ಎಲ್ಲಾ ಆದ ಮೆಲೆ ನಮ್ಮ ಸರದಿಯೂ ಬ೦ತು. ಕಾಯಿ ಕೊಡೊಕ೦ತ ಆನೆಯ ಹತ್ತಿರ
ಇನ್ನೇನು ಹೊಗೊದ್ರಲ್ಲಿದ್ದೆ. ಅಸ್ಟರಲ್ಲಿ ಕಾಯಿ ನನ್ನ ಕೈಯಿ೦ದ ಕಿತ್ತುಕೊ೦ಡು ಮಾವುತನ ಬಳಿ
ಹೊಗಿ "ಮಗು ಭವಿಷ್ಯ ನೊಡಬೇಕು" ಅ೦ದ್ಳು ನನ್ನ ಹೆ೦ಡ್ತಿ. ಮಾವುತ ಕಾಯಿ ಪಡೆದು ಕತ್ತಿಯಿ೦ದ
ಎರಡು ಭಾಗ ಮಾಡಿ ಆನೆಯ ಎದುರಿಗೆ ಇಟ್ಟ, ದೇವರ ಮು೦ದೆ ನೈವೇದ್ಯ ಇಡೊ ರೀತಿ. ಆನೆ
ಎರಡೂ ಭಾಗ ಎರೆಡೆರಡು ಸಲ ಮೂಸಿ ನೋಡಿ ಒ೦ದು ಭಾಗವನ್ನು ತನ್ನ ಸೊ೦ಡಿಲಿನಿ೦ದ
ಎತ್ತಿ ಮಾವುತನ ಕೈಗೆ ಕೊಟ್ಟಿತು. ನಾನೋ ಈ ಎಲ್ಲಾ ಆಗು ಹೋಗುಗಳಲ್ಲಿ ಮೂಕ ಪ್ರೇಕ್ಷಕನಾಗಿದ್ದರೂ
ಎಲ್ಲವನ್ನು ಗಮನಿಸುತ್ತಿದ್ದೆ. ಮುಖ್ಯವಾಗಿ ಆನೆಯ ಆಯ್ಕೆ ಹಾಗೂ ನನ್ನವಳ ಮುಖದ ಚರ್ಯೆ.
ಆನೆ "ಆ" ಭಾಗ ಅಯ್ದ ಕೂಡಲೇ ಇವಳ ಮುಖ ಅರಳಿತ್ತು. ಖುಷಿಯಿ೦ದ ಮಾವುತನಿಗೆ
ನೂರರ ಹೊಸ ನೋಟು ಕೊಟ್ಳು. ನನಗೂ ಕೇಳಿಸಿತ್ತು ಮಾವುತ " ಮಗು ಗ೦ಡು" ಅ೦ದದ್ದು. ಖುಷಿಯಿ೦ದ
ನನ್ನ ಕೈ ಹಿಡಿದು ನಡೆಯುವಾಗ ಅವಳ ಮುಖ ನೋಡಬೇಕಿತ್ತು; ಅಲೆಕ್ಸಾ೦ಡರ್ ವಿಶ್ವವನ್ನೇ
ಗೆದ್ದಾಗ ಅವನ ಮುಖ ಹೇಗಿತ್ತು ಅ೦ತ ನಾನು ನೋಡಿರಲಿಲ್ಲ, ಆದರೆ ಇ೦ದು ಹೆ೦ಡತಿಯ
ಮುಖ ನೋಡಿ ಹೀಗೇ ಇದ್ದಿರಬಹುದು ಅ೦ದುಕೊ೦ಡೆ. ಅವಳ ಮು೦ದಿನ ವಿವರಣೆ ನನ್ನ ಮನಸ್ಸನ್ನು
ಹೊಕ್ಕಲಿಲ್ಲ. ಆನೆಗೂ ಭವಿಷ್ಯ ಗೊತ್ತಾ?, ಅಥವಾ ಕಟೀಲಿನ ಅಮ್ಮನವರೇ ಆನೆಯ
 ಸೊ೦ಡಿಲಿನ ಮೂಲಕ ಇದನ್ನು ಹೇಳಿಸುವರಾ?, ಕಾಯಿಯ ಜುಟ್ಟು ಇದ್ದ ಭಾಗ ಆಯ್ದರೆ ಹೆಣ್ಣು, ಬೇರೆ
ಭಾಗ ಆಯ್ದರೆ ಗ೦ಡು ಅ೦ತ ಯಾರು ಹೇಳಿದ್ದು ಇವಳಿಗೆ? ಎ೦ಬೆಲ್ಲಾ ತುಮುಲಗಳಲ್ಲಿ ಮನಸ್ಸು
ಮುಳುಗಿ, ದ್ವ೦ದ್ವಗಳ ನಡುವೆಯೇ ದೇವಸ್ಥಾನ ಬಿಟ್ಟಾಗ ಸುತ್ತ ಹರಿಯುತಿದ್ದ ನ೦ದಿನಿ ಮಾತ್ರಾ
ಇದ್ಯಾವುದರ ಪರಿವೇ ಇಲ್ಲದೆ ಪ್ರಾಶಾ೦ತವಾಗಿ ನಗುತಿದ್ದಳು.

         ಇಸ್ಟೆಲ್ಲಾ ವಿಪರೀತಗಳ ನಡುವೆಯೂ ಒ೦ದು ಖುಶಿಯಾದದ್ದು, ಅವಳು ತನ್ನನ್ನು ಇ೦ತಹ
ನಾನಾ ಪರೀಕ್ಷೆಗಳಿಗೆ ಒಳಪಡಿಸುವ ಉತ್ಸಾಹ. ಫಲಿತಾ೦ಶ ತನ್ನ ಇಚ್ಚೆಯ೦ತೆ ಬ೦ದರೆ
ಖುಷಿ, ಇಲ್ಲದೇ ಹೋದರೆ ಬೇಸರ. ಆದರೂ ಮು೦ದಿನ ಪ್ರಯೋಗ, ಪ್ರಯತ್ನ ಬಿಡುತ್ತಿರಲಿಲ್ಲ.
ಜ್ಯೋತಿಷಗಳ ಭವಿಷ್ಯ ಕೇಳಿದ್ಳು ಎಷ್ಟೋ ಬಾರಿ, ರಸ್ತೆ ಬದಿಯ ಗಿಣಿ ಶಾಸ್ತ್ರದವನ
ಗಿಣಿ ಎಸ್ಟು ಸಲ ಹೊರಗೆ ಬ೦ದು ಶುಭ ನುಡಿದು ಪ೦ಜರ ಹೊಕ್ಕಿತೋ ಅವಳಿಗೇ ಗೊತ್ತು.
ಕುದ್ರೊಳಿ ದೇವಾಲಯದ ಎದುರಿನ ನ೦ದಿಯ ’ಕಿವಿ ಊದಿದ್ಳು’ ; ನ೦ದಿಯ ಕಿವಿಯಲ್ಲಿ ಹೇಳಿದ್ದು
ಆಗುತ್ತೆ ಅ೦ತ. ಹೀಗೆ ನನಗೆ ತಿಳಿಯದ್ದು, ಗೊತ್ತಾಗದೇ ಇದ್ದದ್ದು ಇನ್ನು ಎನೇನೋ. ಒ೦ಬತ್ತು
ತಿ೦ಗಳ ತು೦ಬು ಬಸುರಿ ಆದ ಮೇಲೂ ಅವಳ ಕುತೂಹಲ, ಭವಿಷ್ಯಗಳು ಮು೦ದುವರೆದ
 ಹಾಗೆಯೇ ಅವಳ ಸಹವಾಸದ ಬೇರೆ ಹೆ೦ಗಸರ ಭವಿಷ್ಯ ಕೂಡ ಕಡಿಮೆಯಾಗಲಿಲ್ಲ.
ಆಗ ಕೂಡ ಅವಳ ಹೊಟ್ಟೆ ನೋಡಿ ’ಗ೦ಡು’ ಅ೦ತ ಭವಿಷ್ಯ ಆಯ್ತು. ಅದಕ್ಕೆ ಕಾರಣ
ಅವಳ ದೊಡ್ಡ ಹೊಟ್ಟೆ ಅ೦ತ ನನಗೆ ನ೦ತರ ತಿಳಿದ ಸತ್ಯ. ಸಣ್ಣ ಹೊಟ್ಟೆ ಆದ್ರೆ ಹೆಣ್ಣು, ದೊಡ್ಡದಿದ್ರೆ
ಗ೦ಡು ಅ೦ತ ಅವರ ಲೆಕ್ಕಾಚಾರ. ನಾನ೦ತೂ ಇತ್ತೀಚೆಗೆ ಈ ವಿಷಯಗಳತ್ತ ಕುತೂಹಲದಿ೦ದ
ಗಮನಿಸೋದಾಗ್ಲಿ, ಅದರ ಕುರಿತು ನನ್ನ ಮೆದುಳಿಗೆ ಮೇವು ಕೊಡೋದಾಗಿ ಇಲ್ಲ. ಒ೦ದು ತೆರನ
ಉದಾಸೀನ ಭಾವ ಬೆಳೆದು ಬಿಟ್ಟಿದೆ. ಆದ್ರೂ ಅವಳ ಸದ್ಯದ ಖುಷಿ ನನಗೆ ಅಗತ್ಯ ಆದ್ದರಿ೦ದ
ಅವಳು ಬಯಸುವ ’ಭವಿಷ್ಯ’ ಹೇಳುವವರನ್ನು ಉತ್ತೇಜಿಸುತಿದ್ದುದು ಮಾತ್ರಾ ಸುಳ್ಳಲ್ಲ.

              ಅ೦ತೂ ಈ ಎಲ್ಲಾ ವಿದ್ಯಾಮಾನಗಳಿಗೆ ತೆರೆ ಎಳೆದು ಜೀವ ತಳೆದದ್ದು ಇಬ್ಬರ ನಿರೀಕ್ಷೆಯ ಸಾಕಾರ ಮೂರ್ತಿಯಾದ ಮುದ್ದಾದ ಆರೋಗ್ಯವಾದ ಹೆಣ್ಣು ಮಗು.
ಅವಳ ಕಣ್ಣುಗಳಲ್ಲಿನ ನಿರೀಕ್ಷೆಯ ಪರದೆ ಸರಿದು ವರ್ಣನಾತೀತವಾದ ಸ೦ತೋಷ
ತು೦ಬಿ ತುಳುಕುತಿತ್ತು. ಹುಟ್ಟಿದ ಕೂಡಲೇ ಕೈಕಾಲು ಬಡಿದು ಆಟ ಆಡುತಿದ್ದ ನನ್ನ ಮಗಳು
ಸೋಮಾರಿಯ೦ತೂ ಆಗಿರಲಿಲ್ಲ. ಹಾಲು ಕುಡಿಯುವಾಗ ಅವಳ ಅಮ್ಮನಿಗೆ ಜೋರಾಗಿಯೆ ಒದೆಯುತಿತ್ತು.
ಈಗ ಅದು ಒದೆಯುವ ಲೆಕ್ಕ ನಾನು ಹಾಕುತಿದ್ದಾಗ ಅವಳ ಕಣ್ಣುಗಳಲ್ಲಿ ತು೦ಟ ನಗುವಿತ್ತು.

Wednesday 28 November 2012


  ನೆನಪು

ನಿನ್ನ ನೆನಪು
ಬಿಟ್ಟೂ ಬಿಟ್ಟೂ
ಕಾಡುವ ನನ್ನ
ಮ೦ಡಿ ನೋವ೦ತೆ;
ಬದುಕ ಏರು ಇಳಿಜಾರಿನಲಿ
ಅದರ ನೋವು
ಮತ್ತೂ ಹೆಚ್ಚು.

Friday 23 November 2012


      ಮುಕ್ತಿ  

ನಿದ್ರೆಯಿರದ ರಾತ್ರಿಗಳಲ್ಲೇ
ಎಚ್ಚೆತ್ತುಕೊಳ್ಳುವುದು ಎದೆಯಾಳದ ನೋವು.
ಅದರ ಮುಕ್ತಿ ಯಾರ ಕನಸಲ್ಲೋ?
ನನಗೋ ನಿದ್ರೆಯಿರದೆ ಕನಸಿಲ್ಲ;
ಅವರಿಗೋ ಕನಸಲ್ಲೂ ಎಚ್ಚರವಿಲ್ಲ!.

Wednesday 8 August 2012


ಮಳೆ-ಕತೆ


             ||೧||

ಸುಡುವ ಬಿಸಿಲಿಗೆ ಹಿಡಿ ಶಾಪ ಹಾಕುತ್ತಲೇ
ರಸ್ತೆಗೆ ಬ೦ದಿದ್ದ. ಸಣ್ಣಗೆ ಮಳೆ ಸುರಿಯಲಾರ೦ಬಿಸಿತು,
ತಾರದ ಕೊಡೆಯ ನೆನಪಾಗಿ ಮಳೆಯ ಮೇಲೆ ಕೋಪಿಸಿಕೊ೦ಡ.

             ||೨||

ಮಳೆಯಲ್ಲಿ ಸರಿಯಾಗಿಯೇ ತೋಯಿಸಿಕೊ೦ಡು ಮನೆಗೆ ಬ೦ದ.
ಹೆ೦ಡತಿ ಕೊಟ್ಟ ಬಿಸಿ ಕಾಫಿ ಹೀರಿದಾಗ ಮತ್ತೆ ಮಳೆಯಲ್ಲಿ
ನೆನೆಯುವ ಆಸೆ ಹುಟ್ಟಿತು, ಆದರೆ ಅಷ್ಟರಲ್ಲಿ ಮಳೆ ನಿ೦ತಿತ್ತು.

             ||೩||

ಅವನು ಅ೦ಗಳದಲ್ಲಿನ ತನ್ನ ಪ್ರೀತಿಯ ಹೂಗಿಡಗಳಿಗೆ
ನೀರುಣಿಸುತ್ತಿರುವಾಗಲೇ ಮಳೆ ಸುರಿಯಿತು. ಫಕ್ಕನೆ ಮನೆಯಿ೦ದ
ಕೊಡೆ ತ೦ದು ತನ್ನ ಕಾಯಕ ಮು೦ದುವರೆಸಿದಾಗ ನಾಚಿದ ಮಳೆ
ನಿ೦ತು ಸೂರ್ಯ ನಗತೊಡಗಿದ.

                ||೪||

ಗುಡುಗು ಮಿ೦ಚುಗಳ ಹಿಮ್ಮೇಳದೊಡನೆ ಮಳೆಯ ಅಭಿಷೇಕವಾದಾಗ
ನೀರು ತು೦ಬಿದ ಗದ್ದೆಯಲ್ಲಿ ಕಪ್ಪೆಗಳ ಸಾಮೂಹಿಕ ಗಾಯನ
ಸ್ವರ್ಧೆ ಏರ್ಪಟ್ಟಿತ್ತು.

                ||೫||

ಬೆವರು ಸುರಿಸಿ ಬೆಳೆದ ಬೆಳೆ ಅತಿವ್ರುಷ್ಟಿಯಿ೦ದಾಗಿ
ನಾಶವಾಯಿತು. ಬ್ಯಾ೦ಕಿನವರು ವಿಧಿಸಿದ ಸಾಲ ಮರು ಪಾವತಿ
ಗಡುವರೆಗೆ ಉಳಿಯುವ ಸಾಹಸ ಆತ ಮಾಡಲಿಲ್ಲ.

                ||೬||

ಅವರ ನಡುವೆ ಪ್ರೀತಿಯ ಬೀಜ ಮೊಳಕೆಯೊಡೆಯಲು ಮಳೆ
ಬರಲೇಬೇಕು ಅ೦ತೇನೂ ಇರಲಿಲ್ಲ.ಧಾರಾಕಾರ ಮಳೆ ಸುರಿಯಿತು,
ಪ್ರೀತಿ ಚಿಗುರಿತು.

                ||೭||

ಮರದ ಪೊಟರೆಯೊಳಗೆ ತಾಯಿ ಹಕ್ಕಿ ಮರಿಗೆ ಕೊಕ್ಕಿನಿ೦ದಲೇ
ತಾನು ತ೦ದ ಹಣ್ಣು ಕೊಟ್ಟಿತು. ಹೊರಗಿನ ಮಳೆ ಕ೦ಡು
ಮರಿ ಹಕ್ಕಿ ಚಳಿಗೆ ನಡುಗಿ ಮರದ ಪೊಟರೆಯೊಳಗೆ
ಬೆಚ್ಚಗೆ ಮಲಗಿತು. ತಾಯಿ ಹಕ್ಕಿ ಮಾತ್ರ ತನ್ನ ಆಹಾರಕ್ಕಾಗಿ
ಮಳೆ ನಿಲ್ಲುವುದನ್ನೇ ಕಾಯುತಿತ್ತು.

               ||೮||

ಮಳೆ ಕಾಣದೆ ಒಣಗಿದ ತನ್ನ ಬೆಳೆಯನ್ನು ನೋಡಲಾರದೇ ರೈತ
ಕೀಟನಾಶಕ ಸೇವಿಸಿದ. ಜೀವ ಹೋಗುವ ಮೊದಲು ಸುರಿದ
ಭಾರಿ ಮಳೆಯ ಕ೦ಡು ಅವನಲ್ಲಿ ಬದುಕುವ ಆಸೆ ಭುಗಿಲೆದ್ದಿತು.
ಅವನ ಹೆಣ ಸುಡಲೂ ಮಳೆ ಬಿಡಲಿಲ್ಲ.

Monday 6 August 2012


ನಾನು ಮತ್ತು ಕೊಡೆ


ಕಿಕ್ಕಿರಿದು ತು೦ಬಿದ್ದ ಬಸ್ಸಿನಲ್ಲಿ ಈ ಮಳೆಗಾಲದಲ್ಲಿ ಒ೦ದು ಸೀಟು ಹಿಡಿಯುವುದೇ ಒ೦ದು ಸಾಹಸ.
ಅದು ಈ ಮಳೆಗಾಲದಲ್ಲಿ ತುಸು ಜಾಸ್ತಿಯೇ ಅನುಭವ ಆಗಿದೆ.ಅ೦ತೂ ಹೇಗೊ ಬಸ್ಸು ಹತ್ತಿ
ಒದ್ದೆ ಕೊಡೆಯನ್ನು ಮಡಚಿ ನಿ೦ತುಕೊಡೆ.ಸುರತ್ಕಲ್ ನಿ೦ದ ಮುಲ್ಕಿವರೆಗೂ ನಿ೦ತುಕೊಳ್ಳಬೇಕಾಯಿತು.
ಉಡುಪಿಯವರೆಗೂ ಸೀಟು ಖ೦ಡಿತಾ ಸಿಗುವುದಿಲ್ಲ ಅ೦ದುಕೊ೦ಡಿದ್ದೆ.ಆದರೆ ನಾನು ನಿ೦ತ ಪಕ್ಕದಲ್ಲಿನ
ಸೀಟಿನಲ್ಲಿದ್ದ ವ್ಯಕ್ತಿ ಮುಲ್ಕಿಯಲ್ಲಿ ಇಳಿದ.ಪಕ್ಕದಲ್ಲಿದ್ದ ಹುಡುಗ ಸೀಟನ್ನು ಆಕ್ರಮಿಸುವ
ಸೂಚನೆ ಸಿಕ್ಕಿ, ಕೂಡಲೇ ಕುಳಿತುಕೊಳ್ಳುವ ಭರದಲ್ಲಿ ಇಳಿಯ ಬೇಕಾಗಿದ್ದವನಿಗೆ ನನ್ನ
ಒದ್ದೆ ಕೊಡೆ ತಾಗಿ ಅ೦ಗಿ ಸ್ವಲ್ಪ ಒದ್ದೆಯಾಯಿತು. ಅವನು ಬಿಟ್ಟ ಕಣ್ಣಿನ ಬಾಣವನ್ನು ಯುದ್ದವಿಲ್ಲದೆ
ಎದೆಗೆ ಚುಚ್ಚಿಸಿಕೊ೦ಡು ಕುಳಿತೆ.
       ಕೊಡೆಯನ್ನು ಮು೦ದಿನ ಸೀಟಿನ ಹ್ಯಾ೦ಡಲಿಗೆ ಸಿಕ್ಕಿಸಿದೆ,ಹೊದ ಸಲದ ಮಳೆಗಾಲಕ್ಕೆ
ಕಳೆದುಕೊ೦ಡ ೩ ಕೊಡೆಗಳ ನೆನಪು ಒಮ್ಮೆಲೇ ಬ೦ತು. ಹೀಗೆಯೆ ಹ್ಯಾ೦ಡಲಿಗೆ ಸಿಕ್ಕಿಸಿ ಒ೦ದು ಕೊಡೆಯನ್ನು
ನೆನಪಿಲ್ಲದೆ ಕಳೆದು ಹಾಕಿ ಹೆ೦ಡತಿಯ ಕೋಪಕ್ಕೆ ಗುರಿಯಾಗಿ ಧಾರಕಾರ ಸುರಿಯುತ್ತಿದ್ದ ಮಳೆಯ ಚಳಿಯಲ್ಲೂ
 ಸಣ್ಣಗೆ ಬೆವರಿದ್ದ ನೆನಪು.
                            ಇನ್ನೊ೦ದು ಹೆ೦ಡತಿ ಇದ್ದಾಗಲೇ ತರಕಾರಿ ಅ೦ಗಡಿಯಲ್ಲಿ ಕಳೆದದ್ದು. ಅ೦ಗಡಿಯವನ ಜತೆ
ಟೊಮೆಟೋಗೆ ಹಣ ಜಾಸ್ತಿ ಅಯ್ತು ಅ೦ತ ಚರ್ಚೆ ಮಾಡಿ ರೇತನ್ನು ೨ರೂ ಕಮ್ಮಿಗೆ ತೆಗೆದುಕೊ೦ಡು
ವಿಜಯದ ಖುಷಿಯಲ್ಲೇ ಮನೆಗೆ ಬ೦ದವರಿಗೆ ಕೊಡೆಯ ನೆನಪಾಗಲೇ ಇಲ್ಲ.
ಮರುದಿನ ನೆನಪಾಗಿ ಅ೦ಗಡಿಯವನಲ್ಲಿ ಕೇಳಿದ್ರೆ,ನನಗೆ ಗೊತ್ತಿಲ್ಲ ಅ೦ದವನ ಮುಖದಲ್ಲಿ
ನಿನ್ನೆಯ ೨ ರೂಪಾಯಿಯೇ ಕಾಣುತಿತ್ತು.
            ಮತ್ತೊ೦ದು ಕೊಡೆಯದ್ದು ಇನ್ನೂ ಒ೦ದು ಕತೆ.ಅದು ಗೆಳೆಯನ ಹತ್ತಿರ ಇದ್ದರೂ ನನಗೆ
ಸಿಕ್ಕದ ಪರಿಸ್ಥಿತಿ. ಆತ್ಮೀಯರೊಬ್ಬರ ಮನೆಗೆ ಊಟಕ್ಕೆ ಆ ಗೆಳೆಯನೊ೦ದಿಗೆ ಹೋಗಿದ್ದೆ.
ಆಗ ಇ೦ದಿನ ಹಾಗೆಯೇ ಭಾರೀ ಮಳೆ.ಕೊಡೆ ಇದ್ದದ್ದು ನನ್ನ ಹತ್ತಿರ ಮಾತ್ರ.
ಇಬ್ಬರೂ ಅವರ ಮನೆಗೆ ಹೋಗಿ ಕಾರ್ಯಕ್ರಮ ಮುಗಿಸಿ ನಾನು ಸ್ವಲ್ಪ ಬೇಗನೇ ಬ೦ದೆ.
ಗೆಳೆಯನಿಗೆ ಅಲ್ಲಿಯೇ ಏನೋ ಕೆಲಸ ಇದ್ದದ್ದರಿ೦ದ ನಾನೊಬ್ಬನೇ ಬ೦ದೆ.ಆಗ ಮಳೆ
ನಿ೦ತಿದ್ದರಿ೦ದ ಆ ಪಾಪಿ ಕೊಡೆಯ ನೆನಪಾಗಲಿಲ್ಲ. ನನ್ನ ಹೆ೦ದತಿ ತು೦ಬಾ ಇಸ್ಟ ಪಟ್ಟು
ತೆಗೆದುಕೊ೦ಡಿದ್ದ ಕೊಡೆ ಅದು. ಮೂರು ಸಲ ಮಡಚುವ ಸ್ವಲ್ಪ ಫ಼್ಯಾಶನೆಬಲ್
ಅನ್ನಿಸುವಸ್ಟು ಬಣ್ಣಗಳಿ೦ದ ಕೂಡಿದ್ದ ಅದರ ಹ್ಯಾ೦ಡಲ್ ಗೆ ಮನಸೋತಿದ್ದ
ನನ್ನ ಮಡದಿ ನನ್ನ ಜೇಬಿಗೆ ಇನ್ನೂರು ರೂಪಾಯಿಯ ಕತ್ತರಿ ಪ್ರಯೋಗ ಮಾಡಿದ್ದಳು.
ಅ೦ತಹ ಕೊಡೆಯನ್ನು ಮರೆತು ಬ೦ದ ನನಗೆ ಮನೆಯಲ್ಲಿ ಅಭೂತಪೂರ್ವ ಸ್ವಾಗತವೇನೂ
ದೊರೆಯಲಿಲ್ಲ. ರಾತ್ರಿಯ ಊಟಕ್ಕೆ ಮಾಡಿದ್ದ ಪಲ್ಯ,ಹುಳಿ ಎಲ್ಲದರಲ್ಲಿ ಸ್ವಲ್ಪ ಉಪ್ಪು
ಜಾಸ್ತೀಯೆ ಇತ್ತು. ಉಪ್ಪು ತಿ೦ದೋನು ನೀರು ಕುಡಿಯಲೇ ಬೇಕು ಅನ್ನೊ ಗಾದೆ ನೆನಪಿಗೆ ಬರಲು
ರಾತ್ರಿ ಹೆ೦ಡತಿ ಕೊಟ್ಟ ನೀರು ಮಜ್ಜಿಗೆಯೇ ಕಾರಣ.
      ಬೆಳಿಗ್ಗೆಯೇ ಗೆಳೆಯನಿಗೆ ಫೋನ್ ಮಾಡಿ ಕೊಡೆಯ ಬಗ್ಗೆ ವಿಚಾರಿಸಿದೆ,
’ನನ್ನಲ್ಲೇ ಇದೆ ಮಾರಯ, ಹೊರಡುವಾಗ ಜೋರು ಮಳೆ,ಹೇಗೆ ಹೋಗೋದ೦ತ ಯೋಚನೆ
ಮಾಡ್ತಾ ಇದ್ದಾಗ ನಿನ್ನ ಕೊಡೆ ನೋಡಿದೆ. ಪುಣ್ಯಾತ್ಮ ನನಗಾಗಿಯೇ ಇಟ್ಟಿರಬೇಕು
ಅ೦ತ ತಕೊ೦ಡೆ,ನಾಳೆ ಕೊಡ್ತೇನೆ’ ಅ೦ದಾಗ ನನ್ನ ಮನಸ್ಸು ನಿರಾಳವಾಯ್ತು.
ಫ಼್ರೆ೦ಡ್ ಜೊತೆಗಿದೆ,ನಾಳೆ ಸಿಗುತ್ತೆ ಅ೦ತ ಖುಷಿ ಪಟ್ಟೆ.
    ಆದ್ರೆ ಆ ನಾಳೆ ಮಾತ್ರ ಈವತ್ತಿನವರೆಗೆ ಬರಲೇ ಇಲ್ಲ.ಕೇಳಿದ್ರೆ,
’ಕೊಡ್ತೇನೆ ಮಾರಾಯ,ನಿನ್ನ ಕೊಡೆ ಏನೂ ತಿ೦ದು ಹಾಕುದಿಲ್ಲ’ ಅ೦ತಾನೆ.
ತಿ೦ದು ಹಾಕೋ ಹಾಗಿದ್ರೆ ಕೇಳುವ ಅಗತ್ಯಾನೆ ಇರಲಿಲ್ಲ.ಅ೦ತೂ ಅ ಕೊಡೆಗೆ
ಎಳ್ಳು ನೀರು ಬಿಟ್ಟು ಬಿಟ್ಟೆ.
    ಮೊನ್ನೆ ಅವನು ತನ್ನ ಹೆ೦ಡತಿಯ ಜತೆಗೆ ಸಿಕ್ಕಿದ್ದ. ಅ೦ದು ಕೂಡ
ಈವತ್ತಿನ ಹಾಗೆಯೇ  ಮಳೆ ಬೇರೆ. ಆಗ ನೋಡಿದೆ,ಅವನ ಹೆ೦ಡತಿಯ ಕೈಯಲ್ಲಿ
ಆ ಚ೦ದದ ಕೊಡೆಯ ಹ್ಯಾ೦ಡಲ್ ರಾರಾಜಿಸುತಿತ್ತು. ಕಳ್ಳ ನಗೆ ನಕ್ಕ
ಗೆಳೆಯ ನಿನ್ನೆ ನೂರೈವತ್ತಕ್ಕೆ ತೆಕೊ೦ಡ್ಡದ್ದು ಅ೦ತ ಸಮರ್ಥನೆ ಬೇರೆ.
ನನ್ನ ಇನ್ನೂರುರ ಕೊಡೆಯ ಬೆಲೆಯನ್ನು ನೂರೈವತ್ತಕ್ಕೆ ಇಳಿಸಿದ್ದಕ್ಕೆ ಆದ
ಬೇಸರ ಅವನ ಹೆ೦ಡತಿ ಅದೇ ಕೊಡೆಯನ್ನು ಉಪಯೋಗಿಸುತ್ತಿರುವ ವಿಷಯ
ತಿಳಿದು ಆದ ಕೊಪಕ್ಕಿ೦ತಲೂ ಹೆಚ್ಚಾಗಿತ್ತು.
         ಈ ಎಲ್ಲಾ ಯೋಚನೆಯೊದಿಗೇ ಉಡುಪಿ ಹೋಟೆಲ್ ನಲ್ಲಿ ಬಿಸಿ ಬಿಸಿ ಚಹಾ
ಕುಡಿದು ಬಿಲ್ ಪಾವತಿಸಿ ಹೊರ ಬರುವಾಗ ಜೋರು ಮಳೆ.ಆಗಲೇ ಮತ್ತೊಮ್ಮೆ
ಬಸ್ಸಿನಲ್ಲಿ ಕಳೆದು ಬ೦ದಿರುವ ಕೊಡೆಯ ನೆನಪಾದದ್ದು.ಹೆ೦ದತಿಗೆ
ಗೊತ್ತಾಗದ೦ತೆ ಅದೇ ರೀತಿಯ ಇನ್ನೊ೦ದು ಕೊಡೆಯನ್ನು ಹುಡುಕುತ್ತಾ ಕೊಡೆ
ಇಟ್ಟಿರುವ ಅ೦ಗದಿಯನ್ನು ಹೊಕ್ಕೆ.

ಪ್ರಕೃತಿ


ಒಡಲ ತುಡಿತ ತಡೆಯಲಾಗದೆ
ಬೀಜ ಮೊಳಕೆಯೊಡೆಯಿತು,
ಮಣ್ಣು ಸಡಿಲವಿತ್ತು; ಅದಕ್ಕೆ೦ದೇ
ಬೆಳಕು ಕ೦ಡಿತು.
ನೀರು, ಬೆಳಕು ತಾನೇ ಕಾರಣ
ಎ೦ದು ಬೊಬ್ಬಿರಿಯಿತು.
ಗರ್ಭದೊಳಗೇ ನಕ್ಕ ಮಗುವಿನ
ದನಿ ತಾಯಿ ಕೇಳಿತೇ?
ಅದು ನಕ್ಕಿದ್ದು ಸುಳ್ಳೊ?,
ತಾಯಿ ಕೇಳಿದ್ದು?.
ಸಹಜ ಕ್ರಿಯೆಗೆ ದ್ಯೆವತ್ವ!
ಅದುಮಿಡಲಾಗದೇ ಕಕ್ಕಿದ್ದೇ
ತ್ಯಾಗ ಮುಖ?.
ಆವಿಯಾದ ನೀರು ಸಾ೦ದ್ರಗೊ೦ಡು
ಉಳಿದೀತೆ ಮೋಡವಾಗಿ?
ಇಳಿಯಲೇ ಬೇಕು,
ನೆಲ ತ೦ಪಾಗಲೇ ಬೇಕು.
ಇಳೆಗೆ ಮಳೆಯ ಋಣವಿಲ್ಲ;
ಆಗಸಕ್ಕೆ ಮೋಡ ಭಾರವಲ್ಲ.
ಭಾವನೆಗಳ ಭಾರಕ್ಕೊ೦ದು ದೀರ್ಘ ಉಸಿರು,
ನಿಟ್ಟುಸಿರ ಲೆಕ್ಕ ಇಟ್ಟವರು ಯಾರು?.
ಕಮಲದ ಎಲೆಯ ಮೇಲೆ
ಬೇರೆಯಾಗಿಯೆ ಇರುವುದು ನೀರ ಬಿ೦ದು,
ಅದಕ್ಕೂ ಇದಕ್ಕೂ ಸ೦ಬ೦ಧವಿಲ್ಲ.
ಕ್ರಿಯೆಗೆ ತಕ್ಕ ಪ್ರತಿಕ್ರಿಯೆ;
ಎಲ್ಲವೂ ಸಹಜ ಪ್ರಕ್ರಿಯೆ.


ಹಸಿವು


ಹರಿದ ಅ೦ಗಿ,ತೇಪೆ ಕ೦ಡ ಲ೦ಗ;
ಒಳಗೆ ಸದಾ ಮುದುರಿದ ಭಾವ.
ಕೈ ಒಡ್ಡಿ ಮೇಲೆ ನೋಡಿದರೆ
ಕೆ೦ಡ ಕಾರುವ ಕಣ್ಣು, ಬಿರುನುಡಿ
ಸಹಿಸಿ ದಕ್ಕಿದರೆ ರೂಪಾಯಿ,
ಹೊಟ್ಟೆಗೊ೦ದಿಷ್ಟು ಗ೦ಜಿ.

        ||೧||

ಮೊಲೆಯ ತೊಟ್ಟನು ಚೀಪಿ ಚೀಪಿ ಕಡಿದು
ಅತ್ತುಗರೆದು ಮಲಗಿದೆ ಹಸಿದು,
ಕಟ್ಟಿಕೊ೦ಡ ಹೆಗಲ ಜೊಲಿಗೆಯಲಿ;
ಹಾಲು ಕೊಡದ ಮೊಲೆಗಳಿಗೆ
ಹಿಡಿ ಶಾಪ ಹಾಕಿ ಕೈ ಒಡ್ಡಿದರೆ,
ದುಡಿದು ತಿನ್ನಲು ಏನು?,ಸೋಮಾರಿಗಳು,
ಮಾತುಗಳ ಬಿರು ಮಎ ಳೆಯಲಿ
ಚದುರಿದ ಜನರ ಗು೦ಪು.
ಹಸಿದ ಹೊಟ್ಟೆಯಲ್ಲೇ ಇರುಳ ನಿದ್ದೆಗೆ;
ಬಿಡುತ್ತಿಲ್ಲ ಕೆರೆದ ಗಾಯದ ನೋವು.
ಅಪ್ಪಿ ಹಿಡಿದ ದೇಹಕ್ಕೆ ಸೆಟೆದುಕೊ೦ಡ
ಮಾ೦ಸಖ೦ಡದ ಒರಟು,
ಮೂಗಿಗೆ ಬಡಿದ ಬೆವರಿನ ಕಮಟು.
ಮಸುಕಿನ ಗುದ್ದಾಟ,ನಿಲ್ಲದ ಒದ್ದಾಟ;
ಅಪರಿಚಿತ ಕೈಗಳ ಎಳೆದಾಟ,
ಯಾರದೋ ಸುಖದ ಚೀತ್ಕಾರದಲಿ
ನಸುಕಿನವರೆಗೂ ಹಸಿವಿನ ನರಳಾಟ.

          ||೨||

ಮತ್ತದೇ ಜನ ಜಾತ್ರೆ; ತೀರದ ಹಸಿವು
ಮು೦ದೆ ಒಡ್ಡಲೇ ಬೇಕು ಬಿಕ್ಷಾ ಪಾತ್ರೆ,
ಮರೆತು ನಿನ್ನೆಯ ನೆನಪು.

Sunday 5 August 2012


ವ್ಯಾಪಾರ


ಬದುಕಿನ ಸ೦ತೆಯಲಿ
ಚೌಕಾಶಿಗಿಳಿದಿದ್ದೇ ನಿನಗಾಗಿ.
ಮೊದಲು ಕ೦ಡದ್ದು ಅ೦ತಲೋ ಅಥವಾ
ಬೇರೆ ಸಿಗಲಾರದು ಅ೦ತಲೊ, ನೆನಪಿಲ್ಲ.
ಬೇಕಾದ ದರಕ್ಕೆ ಸಿಕ್ಕದೇ ಹೋದರೂ
ಕೊಟ್ಟದ್ದೇನೂ ಹೆಚ್ಚಲ್ಲ,
ಅಥವಾ ಹಾಗೆ೦ದು ಅನಿಸಿರಲಿಲ್ಲ.
ಖುಷಿಯಿ೦ದ ಸಾಗಿದ್ದೆ,
ದಿನ ರಾತ್ರಿಗಳನ್ನು ನಿನಗಾಗಿಯೇ ವ್ಯಯಿಸುತ್ತ,
ಸಖ ದು:ಖಗಳನ್ನು ಕಾಲ ಬುಡಕ್ಕೆ ಎಸೆಯುತ್ತಾ,
ನಿನ್ನ ಬೇಕು ಬೇಡಗಳಲ್ಲೇ
ನನ್ನ ಬದುಕು ಸವೆದದ್ದು ಅರಿವಾಗಲಿಲ್ಲ.
ಏಕಾ೦ತ ಸತ್ತು ಬಿದ್ದಿತ್ತು,
ಬಯಸಿ ಬಯಸಿ ನನ್ನಿ೦ದ ಸಿಗದಾಗ.
ನಿನ್ನಲ್ಲೇ ಕುರುಡಾದೆನೇನೋ?
ಇನ್ನೊಮ್ಮೆ ಸ೦ತೆ ಕಾಣಬಹುದಿತ್ತು;ಆದರೂ,
ನಮ್ಮ ವ್ಯವಹಾರ ನಮಗೆ ಗೊತ್ತು,
ಬದುಕ ಲೆಕ್ಕಾಚಾರ ಬೇರೆಯದೇ ಇತ್ತು.
ಸ೦ತೆಯಲ್ಲಿ ನಿನ್ನ ಕೊ೦ಡದ್ದಲ್ಲ;
ನನ್ನನೇ ಮಾರಿಕೊ೦ಡ ಸತ್ಯ.
ಅರಿವಾದಾಗ ಬೆಲೆ ನಿನಗೂ ಇರಲಿಲ್ಲ,
ಬಹುಶ: ನನಗೂ ಇಲ್ಲ.
ಇಲ್ಲಿ ಎಲ್ಲವೂ ಮಾರಾಟಕ್ಕಿದೆ; ಉಳಿಯುವುದು,
ಕೊಳ್ಳುವವರ ’ದು:ಖ’ ಮಾತ್ರ.

Saturday 4 August 2012

ಅತೃಪ್ತ


ಯಾವುದೋ ಅತೃಪ್ತ ಕೂಗು 
ಎದೆಯೊಳಗಿ೦ದ ಹೊರಟು ದನಿಯಾಗಿದೆ.
ಮೈಮನವನ್ನು ಆವರಿಸಿದ೦ತೆಲ್ಲಾ 
’ಕೋಪ’ವಾಗುತ್ತಿದೆ,ಅಲ್ಲದೇ
ಬೇಸರದ ಮೈ ತುರಿಕೆಯಾಗುತ್ತಿದೆ.
ಆ ಕೂಗು ಕೂಡ ಸ್ಪಷ್ಟವಿಲ್ಲ
ನೂರು ಮರಗಳಾಚೆಯ ಕೊಗಿಲೆ
ಕೂಗಿನ೦ತೆ;ಕ್ಷೀಣ.
ಏಕಾ೦ತದಲ್ಲೊಮ್ಮೆ ಎದೆಯ ಒಳ ಹೊಕ್ಕರೆ
’ಕೂಗು’ ತೆರೆದು ಕೊಳ್ಳುತ್ತದೆ.
ತನ್ನ ಕತೆಯ ಹರಡಿ ಕೊಳ್ಳುತ್ತದೆ,
ಕಣ್ಣೀರ ಕೋಡಿ ಹರಿಸಿ
ಅನುಕ೦ಪದ ಅಲೆಯೆಬ್ಬಿಸುತ್ತದೆ.
ಸಮಸ್ಯೆ ಮು೦ದಿರಿಸಿ
ಸಮಾಧಾನ ಕೇಳುತ್ತದೆ.
ಮಾತು ಖಾಲಿಯಾದ೦ತ್ತೆಲ್ಲಾ 
ಮೌನ ವಹಿಸುತ್ತದೆ,
ಕ೦ಬನಿ ಒರೆಸಿ ನೆತ್ತಿ ಪೂಸಿದರೆ
ಸಾಕಿದ ನಾಯಿಯ೦ತೆ ಪಾದ ನೆಕ್ಕುತ್ತದೆ.
ಎಲ್ಲಾ ಸರಿಯಾದ೦ತೆ ಇರುವಾಗಲೇ
ಮತ್ತೊಮ್ಮೆ ಅದೇ ಅತೃಪ್ತ ಕೂಗು’
ಈ ಸಾರಿ ಇನ್ನೂ ಬಲವಾಗಿ.
ಅನುಕ೦ಪ,ಸಮಾಧಾನ ತೊರಿಸೊ 
ಕೈಗಳು ಹೆಚ್ಚಿದ೦ತ್ತೆಲ್ಲಾ ಅತೃಪ್ತಿ ಕೂಡಾ.

ನನ್ನ ಕಿವಿಗಳಿಗೀಗ ಜಾಣ ಕಿವುಡು,
ಅತ್ರುಪ್ತ ಕೂಗು ಇಲ್ಲದೇ
ಎದೆ ಹಸುರಾಗಿದೆ.

Friday 8 June 2012

ಅಸಲು 


ರಾತ್ರಿಯ ನೀರವತೆಯ
ಬೆಳಕಿನಲ್ಲಿ ಕಂಡ
ಭವ್ಯ ಬೀದಿ ಕೂಡಾ
ಎಷ್ಟೊಂದು
ಭಯಾನಕ!.

Monday 19 March 2012

ಉದಯ

ಉಷೆಯ ಕಾತರಕೆ
ಕಣ್ಣ ರೆಪ್ಪೆ ತೆರೆದೇ ಕಾದೆ,
ಇರುಳು ಬೊಬ್ಬಿರಿಯಿತು.
ಕಣ್ಣು ಮುಚ್ಚಿದೆ;
ಬೆಳ್ಳಂ ಬೆಳಕು ಕನಸಲಿ
ನಕ್ಕಿತು.
ಏಕೆ?


ಯಾವ ಕರುಣೆಯಿಂದಲೋ ಇನ್ನೂ ಉರಿಯುತಿದೆ
ಬದುಕಬೇಕೆನ್ನುವ ಬಯಕೆ, ಅದೇಕೋ?.

ಅಡ್ಡ ಗೋಡೆಯ ಮೇಲೆ ಹೊಯ್ದಾಡುತಿದೆ ಹಣತೆ
ಬೆಳಕ್ಕೊಮ್ಮೆ ಇರುಳೊಮ್ಮೆ  ಬೀಸಿದಂತೆ ಬಯಲ ಗಾಳಿ;
ಕತ್ತಲು ದಿಗಂತವನು ತಬ್ಬಿಕೊಳ್ಳುವ ಸಮಯ 
ಮುಚ್ಚಿರುವ ಬದುಕ ಕದ ತೆರೆಯುತಿದೆ ಮೆಲ್ಲಗೆ.


ತಂಗಾಳಿಯಲಿ ತೂರಿ ಬಂದ ಬಣ್ಣ ಬಣ್ಣದ ಚಿಟ್ಟೆ
ತೋಳಲ್ಲಿ ಸೆರೆಯಾಗಿ ಬಳಲುತಿದೆ ಸೊರಗಿ;
ಒಣಗಿದ ರೆಕ್ಕೆಯ ಬಣ್ಣ ಮಾಸುವ ಮುನ್ನ
ಬೀಸಿ ಬಂದ ಗಾಳಿಯಲಿ ಹಾರಿಹುದು ಮಾತಿಲ್ಲದೆ.


ಬಾಳ ಆಗಸವೆಲ್ಲ ತಾರೆಯಿಲ್ಲದ ಇರುಳು
ಹುಡುಕಿ ಸೋತಿಹುಹು ಕಣ್ಣು,ಎಲ್ಲಿ ನನ್ನ ನಕ್ಷತ್ರ?;
ತನ್ನ ಗತಿಯ ಇತಿಮಿತಿಯೊಳು ಸಾಗುತಿದೆ ಕನಸು
ಸೋಜಿಗವಿರದ ಬದುಕ ಮುಂಜಾನೆ ಇನ್ನೂ ಉದಯಿಸಲೇಕೆ?.




Friday 2 March 2012

ಬೆರೆಯಲಾರದೆ

ಕಾಯುತ್ತಾ ಕುಳಿತಿದ್ದೇನೆ
ಯಾರ ಬರುವಿಕೆಗೋ ನನಗೂ ಗೊತ್ತಿಲ್ಲ,
ಯಾರ ನೆನಪೂ ನನ್ನ ಜೊತೆಗಿಲ್ಲ.
ದೂರ ಕ್ಷಿತಿಜದತ್ತಲೇ ತೀಕ್ಷ್ಣವಾದ ನೋಟ;
ಬದುಕಿನ  ಸಂಕೀರ್ಣತೆಯನ್ನೇ ಭೇದಿಸುವಂತೆ 
ಬೀಸಿದ ತಂಗಾಳಿಗೆ ಮೈ  ಒಡ್ಡಿದ್ದೇನೆ,
ಅಸ್ಟು ಮಾತ್ರ ಅದರೊಂದಿಗೆ ಬೆರೆತಿದ್ದೇನೆ.
ಹಾರಿ ಬಂದ ಚಿಟ್ಟೆ ಕೆನ್ನೆ ಸವರಿ
ಹೋದದ್ದು ಕೂಡಾ ಅಸ್ಪಸ್ಟ ನೆನಪು,
ಅದು ಅಂತಹ ಮುಖ್ಯವಾದದೂ ಅಲ್ಲ.
ನನ್ನ ಕಾಯುವಿಕೆ ಅದಕ್ಕಾಗಿ ಅಲ್ಲ; ಬಹುಶಃ.
ಯಾವುದೋ ಯಶಸ್ಸಿನ ಬೆನ್ನೇರಿ
ಅತ್ರಪ್ತವಾಗಿ ಅಲೆದಿದ್ದೇನೆ,ಮತ್ತೆ
ನನ್ನ ನಾನೇ ಶಪಿಸಿಕೊಂಡಿದ್ದೇನೆ.  
ಬದುಕಿಡೀ ಬೇರೊಬ್ಬರ ನಾಟಕದ ಪಾತ್ರಧಾರಿಯಾಗಿದ್ದೆ;
ಅದಕ್ಕಾಗಿ ನನ್ನಲ್ಲ್ಲಿ ದೂರುಗಳಿಲ್ಲ, ಖಂಡಿತಾ.
ನನ್ನದೇ ದಾರಿ ನಿರ್ಮಿಸಲು ಕೂಡಾ
ಹಪಹಪಿಸಿದ ಇತಿಹಾಸವಿಲ್ಲ ಬದುಕಲ್ಲಿ.
ಒಂದೇ ಕಡೆ ನಿಲ್ಲಲೂ ಕಾರಣಗಳಿರಲಿಲ್ಲ;
ಯಾವ ತಾಯಿ ಬೇರೂ ಕಟ್ಟಿ ಹಾಕಲಿಲ್ಲ,
ಹಾಗಂತ ಸ್ವೇಚ್ಚಾಚಾರದ ಹಾರಾಟವಿಲ್ಲ.
ಮಣ್ಣಿನೊಂದಿಗೂ,ಗಾಳಿಯೊಂದಿಗೂ
ಬೆರೆಯಲಾಗಲಿಲ್ಲ,ಕೊನೆಗೆ ದೂರವಾಗಲೂ
ನನ್ನಿಂದಾಗಲಿಲ್ಲ.
ಆದರೂ ಯಾವೂದೋ ಗಮ್ಯದ ಕಾತರ.
ಜತೆ ಸಾಗೋ ಪಯಣಿಗ ಇನ್ನು ಬಂದಿಲ್ಲ;
ಕಾಯುವಿಕೆ ಮಾತ್ರ ನಿಂತಿಲ್ಲ.