Monday 7 August 2017

ಅಂತರಂಗದ ಬನದ ಬಯಕೆಗೆ
ಮಂದಮಾರುತವೊಂದು ಬೀಸಿರೆ
ಚಂದದಿಂದಲಿ ನಗುತ ಹೂಗಳು ಪಯಣ ಸಾರಿದವು
ಸಂದ ಚಣಗಳ ನೆನಪು ಕಳೆಯಲು
ನಿಂತ ಮನೆಗಳ ಮೋಹ ಕಳಚುತ
ಬಂಧ ಬಿಡಿಸುವ ಸೊಗದ ಕನಸನು ಕಣ್ಣು ಬೇಡಿದವು

ತೀರ ಮುತ್ತುವ ಕಡಲದಲೆಯನು
ಸೇರಿ ಸೆಳೆದೆನು ನೀರ ಮಡುವಲಿ
ಚೀರಿಕೊಂಡರು ಕಿವಿಯು ಕೇಳದು ಜನಕೆ ಜಗದಲ್ಲಿ
ಮೀರೆ ಭವದ ಸೆಳೆಯ ಸಂಚನು
ಸಾರಿ ಪಥವ ಕೂಡಿ ನಡೆಯುತ
ಪಾರು ಮಾಡುವ ಪರದ ನಾವಿಕ ಬಂದು ನೋಡಿಲ್ಲಿ

ಮುಡಿದ ಪದಕದ ಬಣ್ಣ ಕಳೆದಿರೆ
ಸಿಡಿದ ಮಾತಿನ ಲೆಕ್ಕ ಕಾಡಲು
ಪಡೆದ ಮಣ್ಣಲಿ ಬಿದ್ದ ಬೀಜದ ಬದುಕು ಬೆಂದಿಹುದು
ಹಿಡಿದು ಮೂವರ ಕಡೆದು ಬೆಣ್ಣೆಯ
ಒಡೆದುದಾರನು ಮುಂದೆ ನಡೆಯಲು
ಹಡೆದ ಶಾಂತಿಯ ಹಕ್ಕಿ ಹಾರಿತು ಬಯಲ ಬಾನಿನಲಿ

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

No comments:

Post a Comment