Friday 28 July 2017

ಮನಸು ಹೊರಳಿದೆ ಹೊನ್ನಸೂರಿಗೆ
ಸೇರೊ ದಾರಿಯದೆಲ್ಲಿದೆ
ಹುಚ್ಚು ಬಯಕೆಯ ಕಳೆವ ಗಿರಿಪಥ
ದಲ್ಲಿ ದರಿಗಳು ಹಲವಿದೆ
ಗುರಿಯ ಕಾಣದೆ ಬಳಲಿದೆ
ತೋರೊ ಗುರು ನೀನೆಲ್ಲಿಹೆ

ಇಲ್ಲೆ ಇದ್ದ ಗಳಿಗೆಯಲ್ಲಿ
ಬಿಡದೆ ಅವನ ಕಾಡಿದೆ
ಮೇರೆ ಇರದ ಅರಸನಲ್ಲಿ
ಬರಿದೆ ಪ್ರೇಮ ಬೇಡಿದೆ
ಎಂಥ ಹುಚ್ಚು ನನ್ನದು
ಹೃದಯವೆಷ್ಟು ಸಣ್ಣದು
ದಾಹ ಕಳೆವ ದೇವನಲ್ಲಿ
ಗುಟುಕಿಗಾಗಿ ಕಾಡಿದೆ;
ಅವನ ಹರವು ಅರಿಯದೆ

ಒಡಲ ಮೋಹ ಬಿಡದು ಇಲ್ಲಿ
ಮುರಳಿಗಾನ ಕೇಳದೆ
ದಡದ ಹಂಗು ತೀರದಿಲ್ಲಿ
ಒಲವ ನದಿಯು ಹರಿಯದೆ
ಬಯಲು ಎಷ್ಟು ಕರೆದರೂ
ನಿಜದ ಸದ್ದು ಕೇಳದು
ಒಂದು ಹೆಜ್ಜೆಯ ಹಾಕದೆ
ಗೆಜ್ಜೆ ಕಾಲಿಗೆ ಕಟ್ಟಿದೆ;
ಜಗದ ಹೆಮ್ಮೆಯನಪ್ಪಿದೆ

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು


No comments:

Post a Comment