Saturday 29 April 2017

ರಾಮನ ಪಟ್ಟ ತಿಳಿದ ಮಂಥರೆ
ಸಂಚನು ಹೂಡಿದಳು
ಭರತ ಪ್ರೇಮದ ಮುದುಕಿಯು ಬಂದು
ಕಿವಿಯನು ಹಿಂಡಿದಳು
ಕೈಕೆಯ ಬುದ್ದಿಯ ಕೆಡಿಸಿದಳು.

ತನ್ನ ಕಂದನಿಗೆ ರಾಜ್ಯ ತಪ್ಪಿತೆಂದು
ಕೈಕೆಯು ಮರುಗಿದಳು
ಎಂದೋ ಗಳಿಸಿದ ಮೂರು ವರಗಳ
ರಾಜನ ಕೇಳಿದಳು
ಅಯೋಧ್ಯೆಯು ಭರತಗೆ ಹೇಳಿದಳು.

ತಂದೆ ಮಾತನು ಕೇಳಿದ ರಾಮ
ಕಾಡಿಗೆ ಹೊರಟನು
ನಿನ್ನ ಬಿಟ್ಟು ಇರಲೊಲ್ಲೆ ಎಂದು
ಸೀತೆಯು ಮರುಗಿದಳು
ರಾಮನ ಹಿಂದಯೆ ತೆರಳಿದಳು.

ಪುತ್ರ ಶೋಕದಿ ದಶರಥ ರಾಜ
ಸಾವಿಗೆ ಶರಣಾದ
ತನ್ನ ತಾಯಿಯ ಕೀಳು ಬುದ್ದಿಗೆ
ಭರತನು ನಾಚಿದನು
ಅಣ್ಣನ ಕರೆಯಲು ಓಡಿದನು.

ಪರಿಪರಿ ಬೇಡಿಯೂ ಒಲ್ಲದ ಅಣ್ಣನ
ಪಾದುಕೆ ಕೇಳಿದನು
ರಾಮನ ಹೆಸರಲಿ ರಾಜ್ಯವ ನಡೆಸುವೆ
ಪಾದುಕೆ ಮೇಲಿಟ್ಟು
ನಾನು ನಾರುಮುಡಿಯುಟ್ಟು.

ಚಿನ್ನದ ಜಿಂಕೆಯ ನೋಡಿದ ಸೀತೆ
ಆಸೆಯ ಪಟ್ಟಳು
ಮಾಯಾ ಜಿಂಕೆಯ ಮೋಹವು ಕವಿದು
ರಾಮನ ಬೇಡಿದಳು
ಬಿಡದೇ ಗಂಡನ ಕಾಡಿದಳು.

ಯಾರು ಕರೆದರೂ ಹೊಸ್ತಿಲಿನಾಚೆಗೆ
ಎಂದಿಗು ಬಾರದಿರಿ
ಅಣ್ಣನ ಕೂಗಿಗೆ ಹೊರಡುತ ಲಕ್ಷ್ಮಣ
ಸೀತೆಗೆ ಹೇಳಿದನು
ಲಕ್ಷ್ಮಣ ರೇಖೆಯ ಎಳೆದನು.

ಸಮಯವ ನೋಡಿ ದಶಕಂಠ ರಾವಣ
ಭಿಕ್ಷೆಗೆ ಬಂದನು
ಭೈರಾಗಿ ರೂಪದ ಠಕ್ಕನ ಅರಿಯದೆ
ಭಿಕ್ಷೆಯ ಹಾಕಿದಳು
ಸೀತೆ ರೇಖೆಯ ದಾಟಿದಳು.

ರಾವಣ ಕಂಡು ಬೆಚ್ಚಿದ ಸೀತೆ
ರಾಮನ ಕೂಗಿದಳು
ಮರುಳ ರಾವಣ ಸೀತೆಯ ಹೊತ್ತು
ಲಂಕೆಗೆ ಹಾರಿದನು
ರಾವಣ ದೇವಿಯ ಕದ್ದನು.

ಕಾಂತೆಯ ಕಾಣದೇ ಮರುಗಿದ ರಾಮ
ಹುಡುಕುತ ಬಳಲಿದನು
ಗರುಡನಿಂದ ವಿಷಯವ ತಿಳಿದು
ಕೋಪದಿ ಕೆರಳಿದನು
ರಾಮ ಲಂಕೆಗೆ ಹೊರಟನು.

ವಾನರರೊಂದಿಗೆ ಕೂಡಿದ ರಾಮ
ಲಂಕೆಯ ಮುತ್ತಿದನು
ದೇವನ ಶಕ್ತಿಯ ಎದುರಿಸಲಾಗದೆ
ರಾವಣ ಮಡಿದನು
ರಾಮನು ಲಂಕೆಯ ಗೆದ್ದನು.

ಸೀತೆಯ ಜೊತೆಗೆ ರಾಮನ ಕಂಡು
ಸಂಭ್ರಮ ಜನರಲ್ಲಿ
ಹಣತೆ ಹಚ್ಚಿ ಹೊಸ ಬೆಳಕನು ಚೆಲ್ಲಿ
ಹಬ್ಬವ ಮಾಡಿದರು
ಸೀತಾರಾಮರು ಹರಸಿದರು

Wednesday 26 April 2017

ಗಾಳಿ ಬೆಳಕೆಂದರದು
ಬರಿಯ ಬೌತಿಕ ವಸ್ತುಗಳಲ್ಲ,
ಜೀವಜಾಲ ಹೆಣೆದು ಸದಾ
ಚಲನೆಯಲ್ಲಿ ಇರಿಸುವುದೆಂದರದು
ಸುಲಭದ ಮಾತಲ್ಲ.
ಮನೆಯ ಗೋಡೆಗಳೂ
ಪಾಚಿ ಕಟ್ಟುತ್ತವೆ,
ಹಬೆಯಾಡದಿದ್ದರೆ;
ಹವೆ ತಿರುಗದಿದ್ದರೆ.

ನನ್ನ ಪ್ರತೀ ಮಾತಿಗೂ
ನನಗೇ ಗೊತ್ತಿರದ,
ಅರ್ಥಗಳನ್ನು ಹೊಳೆಸುವ
ನೀನು, ಅಂದುಕೊಂಡಷ್ಟು ದಡ್ಡನಲ್ಲ;
ಹಾಗಂತ ಅರಿತುಕೊಳ್ಳುವಷ್ಟು
ಬುದ್ದಿವಂತನೂ ಅಲ್ಲ.
ಗೊಂದಲಗಳಲ್ಲಿ ಮನಸ್ಸುಗಳು
ಜಡ್ಡುಗಟ್ಟುವಾಗ,
ಸೂಕ್ಷ್ಮತೆ ಕಳೆದು ಸಂಕೀರ್ಣವಾಗಲು
ಹೆಚ್ಚು ಸಮಯ ಬೇಕಾಗಿಲ್ಲ ಬಿಡು.

ಸಂಬಂಧಗಳು;
ತನ್ನನ್ನು ತಾನೇ
ನವೀಕರಿಸದೇ?

ಬಂಧಗಳು ಹೊಳೆಯುತ್ತಿರಲು
ಮನೆಮನಗಳಲ್ಲಿ ಹಬೆಯಾಡಬೇಕು,
ಬೆಂಕಿಯೋ, ಹಣತೆಯೋ
ಅನ್ನುವುದು ದೊಡ್ಡ ಮಾತಲ್ಲ.
ಆದರೆ,
ಸಂಬಂಧಗಳ ಉಸಿರಿನ ಹವಿಸ್ಸಿಗೆ,
ಪ್ರತೀ ಮನೆಯಲ್ಲೂ ಹೆಣ್ಣು
ಸಮೀಧೆಯಂತೆ ಉರಿಯುತ್ತಿರಬೇಕು
ಅನ್ನುವುದೊಂದೇ ನಿತ್ಯ ಸತ್ಯ.

ಯಾವುದನ್ನು ಸೋಸಲಿ?
ಚಹ ತಣ್ಣಗಾದಷ್ಟೂ;
ಮನಗಳು ಉರಿಯುತ್ತವೆ.
ಪ್ರಾರ್ಥನಾ ಗೀತೆ.

ಶತಮಾನದ ನೋವುಗಳ
ಮೆಟ್ಟಿ ನಿಂತ ಚಿಲುಮೆಯೆ |
ಮನುಕುಲದ ಕೊಳೆಯ ಕಳೆಯೆ
ಉದ್ಧರಿಸಿದ ಒಲುಮೆಯೆ ||

ವಂದನೆ ನಿನಗೆ ವಂದನೆ
ಓ ಭೀಮರಾವ್ ನಿನಗೆ ವಂದನೆ (೧)

ಜಾತಿಮತದ ಕೆಸರಿನಿಂದ
ಎದ್ದು ನಿಂತ ಕಮಲವೆ |
ಮೇಲುಕೀಳು ಮುಳ್ಳ ಕೆಡವಿ
ಅರಳಿ ನಿಂತ ಕುಸುಮವೆ ||

ವಂದನೆ ನಿನಗೆ ವಂದನೆ
ಸಂವಿಧಾನ ಶಿಲ್ಪಿಯೇ ವಂದನೆ (೨)

ಸ್ವಾಭಿಮಾನ ಕಿಚ್ಚು ಹರಿಸಿ
ಕ್ರಾಂತಿ ತಂದ ಚೇತನವೆ |
ವಿದ್ಯೆಯ ಧೀಃಶಕ್ತಿ ಅರಿತು
ಭಾಷ್ಯ ಬರೆದ ಜ್ಯೋತಿಯೆ ||

ವಂದನೆ ನಿನಗೆ ವಂದನೆ
ಓ ಅಂಬೇಡ್ಕರ್ ನಿನಗೆ ವಂದನೆ  (೩).
ಮದುವೆ ಆಗಿ

"ಯಾಕೆ ಮದುವೆ ಆಗ್ತೀರಿ,ನಿಮ್ಗೆ ತಲೆ ಸರಿ ಇಲ್ವಾ ಆರಾಮವಾಗಿ ತಿರ್ಗಾಡೋದು ಬಿಟ್ಟು, ಅಲ್ಲಾ....ನಮ್ನನ್ನು ನೋಡಿ ಆದ್ರೂ ತಿಳ್ಕೋಬಾರ್ದಾ?.... "  ಮದುವೆ ಆಗೋ ಕಾಲಕ್ಕೆ ’ಅ೦ಕಲ್’ ಗಳ  ಇಂತಹ ಮಾತುಗಳನ್ನೆಲ್ಲಾ ದಿನೇ ದಿನೇ ಕೇಳಿ ಭಯದಿಂದ ನಡುಗಿ ಮದುವೆಯಾಗಿರುವ ನನ್ನ ಅಂತರಂಗದ ಗೆಳೆಯ, ಚಡ್ಡೀ ದೋಸ್ತ್ ಕೀರ್ತಿಯನ್ನ ಕೇಳಿದ್ದೆ..."ಹೇಗೆ ಮದುವೆ ಆಗಬಹುದಾ? ಎಲ್ಲರೂ ಹೆದರಿಸ್ತಾ ಇದ್ದಾರೆ..."  ಅ೦ತ ಮನದ ದುಗುಡವನ್ನು ಮು೦ದಿಟ್ಟರೆ, ಅವನೋ ..."ಮದುವೆ ಆಗ್ಲೇಬೇಕು ರವಿ, ಬರೀ ಎ೦ಜಾಯ್ಮೆ೦ಟ್ ಒ೦ದೇ ಲೈಫ಼್ ಅಲ್ಲ" ಅ೦ದಿದ್ದ...!  ಮತ್ತೆ ಗೊ೦ದಲಕ್ಕೆ ಬಿದ್ದರೂ ಕಾಣದಿಹ ದಾರಿಯಲಿ ಸೊಗಸಿರಬಹುದು ಎ೦ಬ ಸುಖದ ರಮ್ಯ ಕಲ್ಪನೆಗೆ ಮುದಗೊ೦ಡು ಮದುವೆ ಆಗಿಯೇ ನೋಡುವ ಅಂತ ಮುಂದಡಿ ಇಟ್ಟೆ. ತಲ ಕಾಣದ ಬಾವಿಯಲ್ಲಿ ಮುಳುಗು ಹಾಕಿ ಬಿದ್ದು ಮುಳುಗಿದ ಕೊಡಪಾನಗಳನ್ನು ತಂದು ಕೊಟ್ಟು ಹಳ್ಳಿಯ ಹೆಂಗಸರ ಹೀರೋ ಆದವನು, ಗೋವಾದ ಬೀಚ್ ನಲ್ಲಿ ಪ್ಯಾರಾಗ್ಲೈಡಿಂಗ್ ಮಾಡಿದವನು, ದಾಂಡೇಲಿಯ ಕಾಳೀನದಿಯಲ್ಲಿ ರಾಫ್ಟಿಂಗ್ .... ಎಂತೆಂತಹ ಸಾಹಸಗಳನ್ನು ಮಾಡಿದವನು, ಯಕಃಶ್ಶಿತ್ ಮದುವೆಗೆ ಹೆದರೋದಾ?  ಏನಂದಾರು ಜನ ಅಂತ ನನಗೆ ನಾನೇ ಧೈರ್ಯ, ಸಾಂತ್ವನ ಎರಡನ್ನೂ ತಂದುಕೊಂಡಿದ್ದೆ.

ಚಂದನದ ಗೊಂಬೆ ಪಿಕ್ಚರ್ ನ ಲಕ್ಷ್ಮಿಯನ್ನು ನೋಡಿ ನಾನು ಮದುವೆಯಾಗುವ ಹುಡುಗಿಯೂ ಹೀಗೆಯೇ ಇರಬೇಕು ಅಂತ ಯೋಚನೆ ಮಾಡಿದ್ದೆ. ಆಹಾ....ಎಷ್ಟು ಚಂದ ನಾಚ್ಕೊಳ್ತಾಳೆ, ರೀ...ರೀ..ರೀ...ಅಂತ ಗಂಡನನ್ನು ಕರೆಯುವಾಗ ಮೈಮನಗಳಲ್ಲಿ ಅದೆಂತಹ ಪುಳಕ, ಕಚಗುಳಿಯಿಟ್ಟಂತಾಗಿ ನನ್ನ ಮನದಲ್ಲಿ ಅವಳ ರೂಪವೇ ಅಚ್ಚೊತ್ತಂತಾಗಿ ಯಾವ ಹುಡುಗಿಯೂ ಒಪ್ಪಿಗೆಯಾಗುತ್ತಿರಲಿಲ್ಲ. ಪ್ರತೀ ಸಲ ಹುಡುಗಿ ನೋಡೋಕೆ ನನ್ನೊಂದಿಗೆ ಗೆಳೆಯ ಮಂಜನನ್ನು ಕರೆದೊಯ್ಯುತ್ತದ್ದೆ. ಅವನೋ ಗಡದ್ದಾಗಿ ಉಪ್ಪಿಟ್ಟು ಕಾಪಿಯೋ, ಇಡ್ಲಿ ಸಂಬಾರೋ ತಿನ್ನುವುದು ಬಿಟ್ರೆ ಹುಡುಗಿ ಬಗ್ಗೆ ನೋ ಕಮೆಂಟ್ಸ್...ಹುಡುಗಿ ಬಗ್ಗೆ ಕೇಳಿದ್ರೆ, "ಊಟ ಮಾಡೋನಿಗೆ ಎಲೆಯಲ್ಲಿ ಏನನ್ನು ಬಡಿಸ್ಕೊಳ್ಬೇಕು ಅನ್ನೋದು ಗೊತ್ತಿರ್ ಬೇಕು...ನನ್ನ ಕೇಳಿದ್ರೆ....ನಾನು ಬಂದದ್ದು ತಿಂಡಿ ತಿನ್ಲಿಕ್ಕೆ..." ಅಂತ ದೇಶಾವರಿ ನಗೆ ನಗುತ್ತಿದ್ದ ಬಡ್ಡೀ ಮಗ. ಸರಿ, ಯಾರ್ಯಾರನ್ನು ಕೇಳಿದ್ರೆ ಉಪ್ಯೋಗ್ ಇಲ್ಲ. ನಾನೇ ನಿರ್ಧಾರ ತಗೋಳ್ಬೇಕು ಅನ್ನೋ ಸರಿಯಾದ ನಿರ್ಧಾರ ಬಂದು, ಇನ್ನು ನೋಡಿದ್ರೆ ಒಂದೆರಡು ಹುಡುಗಿ ಮಾತ್ರ. ಅದಕ್ಕೆ ಪುಷ್ಟಿ ನೀಡುವ ಹಾಗೇ ಗೆಳೆಯನ ಮುತ್ತುಗಳು,    " ಮತ್ಯೇನೋ...ಇನ್ನೂ ಹಳೇ ಲಕ್ಷ್ಮೀಯನ್ನು ತಬ್ಕೊಂಡಿದ್ದಿಯಾ.‌‌‌..ಈಗ ಕಾಲ ಅಪ್ಡೇಟ್ ಆಗಿದೆ. ನೀನಿನ್ನು ಅಲ್ಲೇ ಇದ್ರೆ ನಿಂಗೆ ಲಕ್ಷ್ಮೀ ಏಜ್ ನವಳೇ ಸಿಗ್ತಾಳೆ. ಯಾವುದೋ ದಿವ್ಯ, ಭವ್ಯ, ಐಶ್ವರ್ಯನನ್ನು ಒಪ್ಕೊಳ್ಳೋದು ಬಿಟ್ಟು". ನನಗೂ ಸರಿ ಅನಿಸಿತು.

"ಹುಡುಗಿ ಎತ್ರ ಅಷ್ಟಿಲ್ಲದಿದ್ರೂ ಲಕ್ಷಣ ಇದ್ದಾಳೆ, ಕೂದ್ಳು ಉದ್ದ ಇಲ್ಲದಿದ್ರೂ ಮಲ್ಲಿಗೆ ಮುಡಿಬಹುದು ಕ್ಲಿಪ್ ಹಾಕಿ....." ಅಂತ ಮೊದಲ ಬಾರಿ ಏನೇನೋ ಕನ್ಫೂಸಿಂಗ್ ಕಮೆಂಟ್ಸ್ ಕೊಟ್ಟು ತಿನ್ನುವುದರಲ್ಲಿ ಮಗ್ನನಾದ ಮಂಜ.ಮೋಹದ ಮಾಯೆ ಕವಿಯುವಾಗ ಏನೂ ಕಾಣುದಿಲ್ವಂತೆ, ಬಹುಶಃ ಆಗ ತಾನೇ ಅರಳಿದ ಪ್ರೆಶ್ ಹೂಗಳಿಂದ ಕಟ್ಟಿದ ಬಾಣ ಬಿಟ್ಟಿರಬೇಕು ಮನ್ಮಥ ನನ್ನ ಮೇಲೆ. ಯಾವ ಮಾತುಗಳೂ, ಯಾವ ಲಕ್ಷ್ಮಿಯ ಫಿಗರೂ ನನ್ನ ಮುಂದೆ ಬಾರದೇ ಧೊಪ್ ಎಂದು ಅವಳ ಮೋಹ ಪಾಶದಲ್ಲಿ ಬಿದ್ದು ಬಿಟ್ಟು ಯಾವಾಗ ಓಕೆ ಅಂದೆನೋ ನನಗೇ ಗೊತ್ತಿಲ್ಲ.ಸರಿ ಮದುವೆ ಆಯ್ತು ಒಂದು 'ಶುಭ' ಘಳಿಗೆಯಲ್ಲಿ.

ಮೊದಲ ರಾತ್ರಿ, ಹನಿಮೂನ್ ಎ೦ಬ ಬ್ಯಾಚುಲರ್ ಮನಸಿನ ಸುಖದ ಬೆಚ್ಚನೆಯ ಮಧುರ ಕನಸುಗಳೆಲ್ಲಾ ಅವಳ ಕೈಯ ಮದರ೦ಗಿಯ ಬಣ್ಣ ಕಳಚುವ ಮೊದಲೇ ತನ್ನ ನಿಜ ಸ್ವರೂಪವನ್ನು ತೋರಿಸಿಬಿಟ್ಟಿತ್ತು. ಮದುವೆ ದಿನ ಉಟ್ಟದ್ದೇ ಕೊನೆ, ಆ ಸೀರೆಯನ್ನು ಕಪಾಟಿನ ಒಳಗೆಲ್ಲೋ, ಸುಲಭದಲ್ಲಿ ಕೈಗೆ ಸಿಗದ ಹಾಗೆ ಎಸೆದು ಬಣ್ಣಬಣ್ಣದ ಜೀನ್ಸ್ ಪ್ಯಾಂಟ್ ಟೀಶರ್ಟ್ ಗಳಿಂದ ತನ್ನ ವಾರ್ಡ್‌ರೋಬ್‌ ನ್ನು ಸಿಂಗರಿಸಿದ್ಳು. ಮಾರ್ಕೆಟ್ ಹೋದ್ರೂ ಅದೇ, ದೇವಸ್ಥಾನ ಹೋದ್ರೂ ಅದೇ. ನೋಡಿ ನೋಡಿ 'ಸಿಟ್ಟು' ಬಂದು "ಸೀರೆ ಇಲ್ವಾ ಉಡ್ಲಿಕ್ಕೆ..." ಅಂದ್ರೆ ಇಲ್ಲ ಅಂದ್ಳು. "ಮತ್ತೆ ಹುಡುಗಿ ನೋಡ್ಲಿಕ್ಕೆ ಬಂದಾಗ ಅಷ್ಟು ಚಂದದ ಸೀರೆ ಉಡ್ಕೊಂಡಿದ್ದಿ..?" ಕೇಳಿದ್ರೆ " ಅದಾ, ನನ್ನ ಅಕ್ಕನ ಸೀರೆ ಅದು, ಹೇಗಾದ್ರೂ ಮಾಡಿ ನಿಮ್ಮನ್ನು ಯಾಮಾರಿಸ್ಬೇಕಲ್ಲಾ....ಅದಕ್ಕೆ ಬ್ಯೂಟಿ ಪಾರ್ಲರ್ ನವಳನ್ನು ಕರೆಸಿ ಅವಳಿಗೆ ಇನ್ನೂರ್ ರೂಪಾಯಿ ಕೊಟ್ಟು ಉಡ್ಸಿದ್ದು. ಈಗ್ಲೂ ಸೀರೆ ಉಡ್ಬೇಕು ಅಂದ್ರೆ ದಿನ ಅವಳಿಗೆ ಇನ್ನೂರು ರೂಪಾಯಿ ಕೊಡ್ಬೇಕಾಗ್ತದೆ....ನಂಗೆ ಸೀರೆ ಉಡೋಕೆ ಬರಲ್ಲ " ಅಂತ ರಾಗವಾಗಿ ಹೇಳ್ಬಿಟ್ಳು. ಆದ್ರೂ ಪಟ್ಟು ಬಿಡದೇ ನೀನು ಉಡ್ಳೇ ಬೇಕು ಅಂತ ಒತ್ತಾಯ ಮಾಡಿದಾಗ, " ಇದೇನ್ರೀ ನಿಮ್ಮ ಗೋಳು, ದಿನಾ ಸೀರೆ ಉಡ್ಕೊಂಡು ಮಲ್ಲಿಗೆ ಮುಡಿಲಿಕ್ಕೆ ನನ್ನ ನೆಂಟ್ರ ಮದುವೆ ಇದ್ಯಾ? ....ನನ್ಗೊತ್ತು ನಿಮ್ಮ ಚಂದನದ ಗೊಂಬೆಯ ಬಗ್ಗೆ . ನಿಮ್ಮ ಫ್ರೆಂಡ್ ಮಂಜ ಎಲ್ಲಾ ಹೇಳಿದ...ಅದೊಂದೇ ಅಲ್ಲ ಅವಳು ಪಿಕ್ಚರ್ ಮಾಡಿರೋದು, ಜೂಲಿ ಕೂಡಾ ಮಾಡಿದ್ದಾಳೆ. ಅದು ನೋಡಿ, ಈಗಿನ ಕಾಲಕ್ಕೆ ಸರಿಯಾಗಿದೆ. ಅದರಲ್ಲಿರೋದೂ ಲಕ್ಷ್ಮೀನೇ.... ಹಳ್ಳಿ ಹೈದ...ಹ್ಹ ಹ್ಹ ..." ಅಂತ ನಕ್ಕಾಗ ಮಂಜ ಸಿಕ್ರೆ ಇಲ್ಲೇ ಹೂತ್ ಹಾಕೋವಷ್ಟು ಸಿಟ್ಟು ಬಂತು. ನನ್ನ ಮರ್ಯಾದೆ ತೆಗೆಯೋಕೆ ನನ್ ಜೊತೆ ಇರೋದು, ಸಿಕ್ಕು ..ಮಗ ನಿಂಗೆ ಐತೆ...ಅಂತ ಹೆಂಡತಿಯ ಎದುರು ನಡೆಯದ ನನ್ನ ಸಿಟ್ಟನ್ನು ಮಂಜನ ಕಡೆ ತಿರುಗಿಸಿದೆ. ಮತ್ತೆಂದೂ ಸೀರೆ ಬಗ್ಗೆ ಮಾತಾಡದೇ ಚಂದನದ ಗೊಂಬೆ ಪಿಕ್ಚರನ್ನು ಮೊಬೈಲ್ ನಿಂದ ಡಿಲೀಟ್ ಮಾಡಿದೆ.

ದಿನೇ ದಿನೇ ಸೋಲತೊಡಗಿದೆ.ಹೆಂಡತಿಯ ಮಾತಿನಾಚೆ ವಾಲತೊಡಗಿದೆ.ಉಫ್...ಎಷ್ಟೊಂದು ಕೆಲಸ...ಮುದುವೆ ಅಂದ್ರೆ ಬರೀ ಹೆಂಡತಿ ಜೊತೆ ಸುತ್ತಾಡೋದು , ಪಿಕ್ಚರ್ ನೋಡೋದು, ನಾನು ಕೆಲಸಕ್ಕೆ ಹೋಗೋದು, ಸಂಜೆ ಬರೋವಾಗ ಮನೆಯ ಗೇಟ್ ಗೆ ಮುಖಯಾನಿಸಿ ಕಾಯುತ್ತಾ ನಿಂತ ಹೆಂಡತಿ....ಆಹಾ...ಎಷ್ಟೆಲ್ಲಾ ಕಲ್ಪನೆ ಇತ್ತು. ಆದರೆ ಇದೇನು ನಡೆಯುತ್ತಿದೆ ಅನ್ನೋದೇ ಅರ್ಥ ಆಗ್ಲಿಲ್ಲ. ಬರೇ ಅಷ್ಟೇ ಅಲ್ಲ. ನೀನಂದುಕೊಂಡ ಲೋಕದಾಚೆ ಇನ್ನು ಎಷ್ಟೋ ಜವಾಬ್ದಾರಿಗಳಿವೆ‌. ಅದೂ ಮದುವೆಯ ಜೊತೆ ಜೊತೆಗೇ ಬರೋದು. ಇಲ್ಲಿ ಒಂದು ತೆಗೆದುಕೊಂಡು ಇನ್ನೊಂದನ್ನು ಬಿಡುವಂತಿಲ್ಲ. ಎಲ್ಲವೂ ಪ್ಯಾಕೇಜ್ ಆಗಿಯೇ ಬರುವುದು. ಬೇರೆ ವಿಧಿಯಿಲ್ಲ.ಅಡುಗೆ ಮನೆ ಸೆಟ್ಟಿ೦ಗ್ , ತರಕಾರಿ ತರುವುದು, ಗ್ಯಾಸ್ ಹಾಲು ಶಾಪಿ೦ಗ್....ಬಟ್ಟೆ ಒಣಗಿಸಲು....ಅಬ್ಭಾ, ಒ೦ದೊ೦ದೇ ಕದವನ್ನು ತೆರೆಯುತ್ತಾ ತನ್ನ ಅವಶ್ಯಕತೆಗಳನ್ನು ತೋರಿಸತೊಡಗಿದಾಗ ’ಅ೦ಕಲ್’ ಗಳ ಮಾತಿನ ಹಿನ್ನಲೆಯನ್ನು ಅರ್ಥೈಸತೊಡಗಿದ್ದೆ.
ಅಪರೂಪಕ್ಕೆ ಎಸ್.ಮ್.ಎಸ್, ಕಾಲ್ ನಲ್ಲೇ ಸಿಗುತಿದ್ದ ಸಿ೦ಗಾರಿ ದಿನದ ಇಪ್ಪತ್ನಾಲ್ಕು ಗ೦ಟೆಯೂ ಕಣ್ಣೆದುರಿಗೆ ಕಾಣುವ ಕ್ಯಾಲೆ೦ಡರ್ ಆಗಿ ಮೊಳೆ ಹೊಡೆದು ಕೂತಾಗ  ಮೊಬೈಲ್ ಸದ್ದಿಲ್ಲದೇ ಮೂಲೆ ಸೇರಿತ್ತು. ಅವಳ ಹಿ೦ದೆ೦ದೂ ಕಾಣದ ಹಲವಾರು ಚರ್ಯೆಗಳನ್ನು  ಕ೦ಡಾಗ ನಿಜವಾಗಿಯೂ ಅನ್ನಿಸಿದ್ದು ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂದು. ನಿಜವಾಗಿಯೂ ಹೆದರಿ ಹೋದೆ.

ಆದರೆ ನನ್ನ ಹೆದರಿಕೆ ಭಯ ಅರ್ಥವಿಲ್ಲದ್ದು, ಅದು ಬರಿಯ ಕಲ್ಪನೆ, ಕನಸು ಮಾತ್ರ ಅ೦ತ ಸಾಬೀತುಪಡಿಸಿದ್ದೂ ಅವಳ ಪ್ರೀತಿಯೇ. ಯಾವುದೂ ಬದಲಾಗಿಲ್ಲ . ಸುಖ ಸಂಸಾರಕ್ಕೆ ಯಾವುದೇ ಸಿದ್ಧ ಸೂತ್ರಗಳಿಲ್ಲ. ಯಾರೋ ಕೇಳಿದ್ರಂತೆ ನಮ್ಮ ಬುದ್ದಿವಂತ ತಿಮ್ಮನನ್ನ, ಈ ಪ್ರಪಂಚದಲ್ಲಿ ಎಷ್ಟು ವಿಧದ ಸಂಸಾರವಿದೆ ಅಂತ. ಅದಕ್ಕೆ ನಮ್ಮ ತಿಮ್ಮ ಹೇಳಿದ್ದು ಎಷ್ಟು ಸರಿ ಇದೆಯಂದ್ರೆ , ಅವನ ಮಾತಲ್ಲೇ ಕೇಳಿ,  "ಈ ಪ್ರಪಂಚದಲ್ಲಿ ಎಷ್ಟು ಜೋಡಿಗಳಿವೆಯೋ ಅಷ್ಟೇ ವಿಧದ ಸಂಸಾರಗಳಿವೆ".  ಹಾಗಾಗಿ ಹೀಗೆ ಮಾಡಿದ್ರೆ ಮಾತ್ರ ನಿಮ್ಮ ಸಂಸಾರಿಕ ಬದುಕು ಹಸನಾಗ್ತದೆ, ಹಾಗೆ ಮಾಡಿದ್ರೆ ಎಕ್ಕೊಟ್ಟು ಹೋಗ್ತದೆ ಅಂತ ಹೇಳೋರು ಯಾರೂ ಇಲ್ಲ. ಎಲ್ಲವೂ ನಮ್ಮ ಕೈಯಲ್ಲೇ ಇದೆ.  ನಮ್ಮ ಪ್ರೀತಿಯೂ ಕೂಡಾ...ಕಲ್ಪಿಸಿ ಹೆದರಿದ ಟಿಪಿಕಲ್ ಹೆ೦ಡ್ತಿ ಆಗದೇ ಇಷ್ಟು ವರ್ಷಗಳ ನ೦ತರವೂ ಗೆಳತಿಯಾಗಿ ಇದ್ದು, ಅದೇ ಪ್ರೀತಿ, ಕಾತರ, ಬಿಸಿ, ಹುಸಿಮುನಿಸು, ನಿರ೦ತರ ಓಲೈಕೆಯ ಸಿ೦ಧುವಾಗಿ.
ಅವಳನ್ನು ನೋಡುವಾಗ ಲಕ್ಷ್ಮೀನಾರಾಯಣ ಭಟ್ಟರ ಕವಿತೆಯ ಸಾಲುಗಳು ನೆನಪಾಗುತ್ತವೆ...

"ಹೆ೦ಡತಿಯೆ೦ದರೆ ಖ೦ಡಿತ ಅಲ್ಲ
ದಿನವೂ ಕುಯ್ಯುವ ಭೈರಿಗೆ;
ಭ೦ಡರು ಯಾರೋ ಹೇಳುವ ಮಾತು
ಬೈದವರು೦ಟೇ ದೇವಿಗೆ"

ಅದೆಷ್ಟು ಸತ್ಯ ಅಲ್ವಾ?. ಇಲ್ಲಿ ಒಬ್ಬರಿಗೆ ಎಲ್ಲವೂ ಸಿಕ್ಕಿರುವುದಿಲ್ಲ. ನಾವು ಸಲಹೆ ಕೇಳೊವಾಗ ಮಾತ್ರ ನಮಗೆ ಅಂತವರೇ ಸಿಕ್ಕಿರುತ್ತಾರೆ, ದಾರಿ ತಪ್ಪಿಸಿ ಟೆನ್ಶನ್ ಕೊಡೋಕೆ. ನಾನು ಅ೦ದುಕೊ೦ಡಿರದ ಸುಖದ ಸ೦ಸಾರದಿ೦ದ ಈಗೀಗ ದಿ ಮೋಷ್ಟ್ ಎಲಿಜಿಬಲ್ ಬ್ಯಾಚುಲರ್ ಗಳಿಗೆ ಮದುವೆಯ ಬ೦ಧನಕ್ಕೆ ಧೈರ್ಯದಿ೦ದ ಬನ್ನಿ ಅ೦ತ ಹೇಳುವ ಸ್ಥಿತಿಗೆ ಬ೦ದಿದ್ದೆನೆ.
ಪೊರ್ತು ಕಂತಿನ ರಾತ್ರಿಡ್
ಬರ್ಸ ಬತ್ತಿಲೆಕ್ಕಾಂಡ್
ಕಂಡ ಕಂಡದ ಪುನಿಟ್
ನೀರ್ ಜತ್ತಿಲೆಕ್ಕಾಂಡ್

ಕಾಳೆ ಬೊಳ್ಳೆನ ಪಿರವೊಡ್
ನಾಯೆರ್ ಒತ್ತಿಲೆಕ್ಕಾಂಡ್
ನೇಜಿ ಪಾಡಿನ ಕಂಡಡ್
ನಟ್ಟಿ ಮಲ್ತಿಲೆಕ್ಕಾಂಡ್

ಹಟ್ಟಿದುಳಯಿಡ್
ಪೆಲಕಾಯಿ ತಿಂದಿಲೆಕ್ಕಾಂಡ್
ಬೈಲ್ ಕಂಡದ ಬಾನೊಡ್
ತೆಡಿಲ್ ಹಾಕಿಲೆಕ್ಕಾಂಡ್

ಜೋರ್ ಬೀಜಿನ ಗಾಳಿಗ್
ಕಂಡಿಬಾಕಿಲ್ ಬೊಟ್ಟಿಲೆಕ್ಕಾಂಡ್
ಪೋಡ್ ದ್ ಲಕ್ಕಿನ ಪೆಟ್ಟ್ ಗ್
ಕನಕಟ್ಟಿನ ಗೊತ್ತಾಂಡ್.....!
ಬೇಸಿಗೆ ಶಿಬಿರ.

ಪ್ರತೀ ಬಾರಿ ಬೇಸಿಗೆ ರಜೆಯಲ್ಲಿ ನಾನು ಮಾವನ ಮನೆಯಲ್ಲಿಯೇ ಇರುವುದು. ಅವರ ತೋಟದಲ್ಲಿ ವರ್ಷಕ್ಕೊಂದು ದೊಡ್ಡ ಆಟದ ಮನೆಯನ್ನು ಕಟ್ಟುವುದು, ಮತ್ತು ಆ ಬೇಸಿಗೆಯ ಎಲ್ಲಾ ಆಟಗಳನ್ನು ಅಲ್ಲಿಯೇ ಆಡುವುದು ಪ್ರತೀ ವರ್ಷ ತಪ್ಪದೇ ನಡೆದುಕೊಂಡು ಬಂದಿತ್ತು. ಆ ವರ್ಷ ನಾನು ಏಳನೇ ಕ್ಲಾಸ್ ನಲ್ಲಿದ್ದೆ. ಕ್ಲಾಸ್ ನ ವಾರದ ಡಿಬೇಟ್, ಹಾಡು ಎಲ್ಲದರಲ್ಲೂ ಸಕ್ರಿಯವಾಗಿ ಭಾಗವಹಿಸಿ ಗಮನಸೆಳೆದಿದ್ದೆ. ಹಾಗಾಗಿ ಆ ವರ್ಷ ನಡೆಯುವ ತಾಲೂಕು ಮಟ್ಟದ ಬೇಸಿಗೆ ಶಿಬಿರದಲ್ಲಿ ನನ್ನ ಹೆಸರನ್ನು ಸೇರಿಸಿದ್ದು ನನಗೆ ಗೊತ್ತೇ ಇರಲಿಲ್ಲ.

ನಾನು ಎಂದಿನಂತೆ ಮಾವನ ಮನೆಗೆ ಸಿದ್ದನಾಗುತ್ತಿದ್ದೆ ನನ್ನ ಬಡ್ಗ್ ಬಜಾರ್ ಗಳೊಂದಿಗೆ.ಹೊರಡುವ ಮೊದಲ ದಿನ ಅಪ್ಪ ಕರೆದು ಹೇಳಿದ್ರು, " ಈ ಸಲ ಮಾವನ ಮನೆಗೆ ಹೋಗೋದಲ್ಲ....ಮಂಗನ ಹಾಗೆ ಆಟ ಆಡ್ಲಿಕ್ಕೆ. ಸಣ್ಣ ಮಗು ಅಲ್ಲ ಈಗ ನೀನು. ನಿನ್ನ ಮೇಷ್ಟ್ರು ನಿನ್ನನ್ನು ಈ ಸಲದ ಬೇಸಿಗೆ ಶಿಬಿರಕ್ಕೆ ಹಾಕಿದ್ದಾರೆ.ಹೋಗಿ ಅವರು ಹೇಳಿದ ಹಾಗೆ ಕೇಳ್ಕೊಂಡು ಗಲಾಟೆ ಮಾಡದೇ ಇರ್ಬೇಕು". ತಲೆ ಮೇಲೆ ದೊಡ್ಡ ತೆಂಗಿನ ಕಾಯಿ ಬಿದ್ದಂತಾಗಿ " ನಾನು ಹೋಗಲ್ಲ. ನಾಳೆ ಬರ್ತಾನೆ ಅಣ್ಣ, ಅಲ್ಲಿ ಮನೆ ಮಾಡ್ಲಿಕ್ಕೆ ಉಂಟು...." ಅಂದಾಗ "ಹೋಗೋದಿಲ್ವಾ...ನಿನಗೆ..ತಡಿ ಮಾಡ್ತೇನೆ..." ಅಂತ ಹೇಳಿ ಹುಣಸೆ ಬೆತ್ತದಿಂದ ಕುಂಡೆಗೆ ಹೊಡೆದ ನಾಲ್ಕು ಪೆಟ್ಟಿನ ನೋವು ಮರೆಯುವ ಮೊದಲೇ ನಾನು ಬೇಸಿಗೆ ಶಿಬಿರದಲ್ಲಿದ್ದೆ.

'ಎಂತಾ ಕರ್ಮ ಮರ್ರೆ, ಓಡೋದು, ಟೊಂಕದ ಆಟ, ಕಲರ್ ಯಾವ್ದು ಹೇಳೋದು, ಏನೇನೋ ಲೆಕ್ಕ ಹಾಕೋದು, ಚಿತ್ರ ಬರೆಯೋದು ( ಕಲರ್ ಕೊಡ್ಲಿಕ್ಕೆ ಕಲರ್ ಪೆನ್ಸಿಲ್ ಒಂದಿದ್ದರೆ ಒಂದಿಲ್ಲ), ಹಾಡ್ಲಿಕ್ಕೆ ಬರದಿರೋರೂ ಒತ್ತಾಯದಲ್ಲಿ ಹಾಡೋದು....ಅಬ್ಬಾ...ಕೇಳ್ಲಿಕ್ಕೆ ಸಾಧ್ಯ ಇಲ್ಲ.ನನ್ನ ಸ್ಕೂಲ್ ನವರೊಬ್ರೂ ಇಲ್ಲ. ಯಾವಾಗ ಮುಗಿತದಾ' ಅಂತ ನನ್ನಷ್ಟಕ್ಕೆ ಯೋಚಿಸೋದೇ ಕೆಲ್ಸ ಆಗೋಯ್ತು. ಅದೂ ಅಲ್ಲದೇ ನನ್ನ ಅಧಿಕ ಪ್ರಸಂಗದಿಂದಾಗಿ ನನ್ನನ್ನು ರೇಗಿಸೋರ ಒಂದು ಗುಂಪೇ ಇತ್ತು. " ಅಯೆಡ ಏರ್ ಪಾತೆರ್ನು...ಪರ್ಕಳದ ಪಿರ್ಕಿ ...ಮಲ್ಲ ಶೋ..ಮಲ್ಪುವೆ" (ಅವನತ್ರ ಯಾರು ಮಾತಾಡೋದು....ಪರ್ಕಳದ ಹುಚ್ಚ...‌ದೊಡ್ಡ ಜನರ ಹಾಗೆ ಮಾಡ್ತಾನೆ) ಅಂತ ಹೇಳುವಾಗ ಪರ್ಕಳ ಊರಿನವರಾರೂ ಇಲ್ಲದ್ದು ನನಗೆ ಇನ್ನೂ ಕಿರಿಕಿರಿ ಎಣಿಸುತ್ತಿತ್ತು. ಸಂಪನ್ಮೂಲ ವ್ಯಕ್ತಿಗಳಾಗಿ ಬಂದವರದ್ದು ಇನ್ನೂ ದೊಡ್ಡ ಉಪದ್ರ. ಬಹುಶಃ ಕೆಲವರಿಗೆ ಆಕಸ್ಮಿಕವಾಗಿ ದೊರೆಯುವಂತಹ (ಬೇಕಾದವರು ಸಿಗದಿದ್ರೆ ಮತ್ತೆ ಸಿಕ್ಕವರು ನಡಿತದೆ ಅನ್ನುವಂತೆ) ಈ 'ಸಂಪನ್ಮೂಲ ವ್ಯಕ್ತಿ' ಯ ಪಟ್ಟದಿಂದಾಗಿ ತಮ್ಮಲ್ಲಿರುವ ಬಂಡವಾಳವನ್ನೆಲ್ಲಾ ಇಲ್ಲಿ ಪ್ರದರ್ಶಿಸಿ ಬಿಡುತ್ತಾರೆ, ಅದು ವಿಷಯಕ್ಕೆ ಅಗತ್ಯವಿರಲಿ ಇಲ್ಲದಿರಲಿ....ಕೇಳುವ ಕಿವಿ ಎದುರಿಗೆ ಉಂಟಲ್ಲ ಅನ್ನುವ ಗ್ಯಾರಂಟಿಯಿಂದ. ಅವರು ತಮ್ಮ ಬಂಡವಾಳದ ತೋರಿಕೆಯಲ್ಲಿ ನನಗೆ ರಾಕ್ಷಸರಾಗಿ ಕಾಣುತ್ತಿದ್ದರು.

ಆ ದಿನ ಖೋ ಖೋ ಆಟ ಆಡಿಸುತ್ತಿದ್ದರು. ಇದು ನನಗೆ ತುಂಬಾ ಇಷ್ಟವಾದ ಆಟವಾದ್ದರಿಂದ ಖುಷಿಯಲ್ಲಿ ಆಡುತ್ತಿದ್ದೆ. ಆದರೂ ಮಧ್ಯದಲ್ಲಿ ಔಟ್ ಆಗಿ ಸೈಡಿಗೇ ನಿಂತಿದ್ದೆ. ಆಗ ಬೆನ್ನ ಮೇಲೆ ಒಂದು ಹೊಡೆತ ಬಿತ್ತು . ಹೆಚ್ಚಾಗಿ ಖೋ ಖೋ ಆಟದಲ್ಲಿ ನಮಗೆ ಆಗದ ಆಟಗಾರರಿಗೆ ಖೋ ಕೊಡೋವಾಗ ಬರೀ ಬೆನ್ನಿಗೆ ಮುಟ್ಟಿ 'ಖೋ' ಹೇಳದೇ   ಜೋರಾಗಿ ಬಡಿಯೋದು, ಅದೂ ಪೆಟ್ಟು ಎಷ್ಟು ಕಾಯಬೇಕಂದ್ರೆ ಹೊಡೆದ ನಮ್ಮ ಅಂಗೈಯೇ ಚುರುಗುಟ್ಟೋ ತರಹ. ಆದರೆ ಈಗ ನಾನು ಔಟ್ ಆಗಿ ಹೊರಗಿರೋವಾಗ ಯಾರಪ್ಪಾ ,ಈ ತರಹ 'ಖೋ' ಕೊಟ್ಟದ್ದು ಅಂತ ಸಿಟ್ಟಲ್ಲಿ ಮುಷ್ಟಿ ಬಿಗಿಹಿಡಿದೇ ತಿರುಗಿದಾಗ, ಅಲಾ...ಮಾವನ ಮಗ ನಿಂತಿದ್ದಾನೆ, ಯಕ್ಷಗಾನದಲ್ಲಿ ಅರ್ಜುನ ನೆನದಾಗ ಮುಗುಳ್ನಗುತ್ತಾ ಪ್ರತ್ಯಕ್ಷವಾಗುವ ಕೃಷ್ಣ ಪರಮಾತ್ಮನಂತೆ. ಆಶ್ಚರ್ಯವಾದರೂ ನಗೆಯ ಮರ್ಮ ಮಾತ್ರ ಗೊತ್ತಾಗಲಿಲ್ಲ...." ನೀನೇನೋ ಇಲ್ಲಿ....ಯಾರು ಹೇಳಿದ್ರು...ಹೇಗೆ ಗೊತ್ತಾಯ್ತು...."  ಅಂತ ಪ್ರಶ್ನೆಗಳ ಮೇಲೆ ಪ್ರಶ್ನೆಗಳ ಸುರಿಮಳೆ ನನ್ನಿಂದ್ದಾದ್ರೂ ಒಂದಕ್ಕೂ ಉತ್ತರ ಕೊಡದೇ ಕಣ್ಸನ್ನೆಯಲ್ಲೇ  'ಬಾ ನನ್ನ ಜೊತೆ...' ಅಂತ ಸೀದಾ ಮುಂದೆ ಹೋದ. ಏನೂ ಅರ್ಥವಾಗದೇ ಅವನ ಹಿಂದೆ ನಡೆದೆ‌.

"ಸಾರ್,  ರವಿಯ ಅಜ್ಜಿ ಇವತ್ತು ಬೆಳಿಗ್ಗೆ ತೀರ್ಕೊಂಡ್ರು.ಕರ್ಕೊಂಡು ಬಾ ಅಂತ ನನ್ನನ್ನು ಕಳ್ಸಿದ್ದಾರೆ. ದಯಮಾಡಿ ಕಳ್ಸಿಕೊಡಿ..." ಅಣ್ಣ ಶಿಬಿರದ ವ್ವವಸ್ಥಾಪಕರಲ್ಲಿ ಹೇಳುತ್ತಿರುವಾಗ ನನಗೆ ಅಳುವೇ ಬಂತು. 'ಅಯ್ಯೋ...ಅಜ್ಜಿ...' ಅಂತ ಕಣ್ಣೀರು ತುಂಬಿಕೊಳ್ಳುವಾಗ, "ಹೌದಾ...ಸರಿಯಪ್ಪಾ..‌.ಕರ್ಕೊಂಡು ಹೋಗು. ಬೇಗ ಹೊರಡಿ" ಅಂತ ಮ್ಯಾನೇಜರ್ ಹೇಳುವಾಗಲೇ ನಾನು ನನ್ನ ಬ್ಯಾಗ್ ತೆಗೆದುಕೊಂಡು ಹೊರಬಂದಿದ್ದೆ.

ಗೇಟ್ ಹೊರಗೆ ಬಂದು " ಅಣ್ಣ , ಏನಾಯ್ತಣ್ಣ...ನನ್ನ ಅಜ್ಜಿಗೆ..." ಅಳುವಲ್ಲೇ ಕೇಳಿದಾಗ ಅವನೋ ಮುಗುಳ್ನಕ್ಕು " ಬೇಗ ಬೇಗ ಸೈಕಲ್ ಹತ್ತು...ನಿನ್ನ ಅಜ್ಜಿಗೇನಾಗಿದೆ...ಚೆನ್ನಾಗಿದ್ದಾರೆ...ನಮ್ಮ ಮನೆಗೆ ಹೋಗೋಣ....ನಿಂಗೆ ಬೇರೆ ಕೆಲ್ಸ ಇಲ್ವಾ‌‌‌‌...ಶಿಬಿರ ಗಿಬಿರ...." ಅಂತ ಹೇಳಿದಾಗ ಅವನ ಬೆನ್ನಿಗೊಂದು 'ಖೋ' ಕೊಟ್ಟಿದ್ದೆ. " ಅಲ್ಲ.‌‌‌‌...ಆ ಮ್ಯಾನೇಜರ್ ನಮ್ಮ ಸ್ಕೂಲ್ ನವನಲ್ಲ. ಇಲ್ಲದಿದ್ರೆ ನಿನ್ನ ನಾಟಕ ನಡಿತಿರ್ಲಿಲ್ಲ. ಹೋದ ವರ್ಷದ ಕ್ರಿಕೆಟ್ ಟೂರ್ನಮೆಂಟ್ಗೇ ನಾನು ನನ್ನ ಅಜ್ಜಿಯನ್ನು 'ಕೊಂದಿದ್ದೆ'....ಹ್ಹ ಹ್ಹ ಹ್ಹ" ಅಂತ ನಾನು ನಗುವಾಗ ನನ್ನ ಕಡೆ ಅವನು ನೋಡಿದ ನೋಟದಲ್ಲಿ 'ಎಲಾ, ಬಡ್ಡೀ ಮಗನೇ' ಅಂದಂತಹ ಭಾವ ಇತ್ತು...
ಅಟ್ಟಕ್ಕೊಂದು ಏಣಿ ಹಾಕಿ
ಹತ್ತಲೆಂದು ಮನಸು ಮಾಡಿದೆ;
ಕಟ್ಟಿದ್ದ ಕರುವು ಕೂಗಿ
ನೋಡಲೆಂದು ಕೆಳಗೆ ಓಡಿದೆ.

ಬಯಲು ಯಾಕೋ ಬಹಳ ಕಾಡಿ
ಹೊಸ್ತಿಲಾಚೆ ನಡೆಯತೊಡಗಿದೆ;
ತೆರೆದಿದ್ದ ಕಿಟಕಿ ನೋಡಿ
ಮುಚ್ಚಲೆಂದು ಮನೆಗೆ ಸಾಗಿದೆ.

ಬೆಳಕು ಕಾಣುವಾಸೆ ಆಗಿ
ಹೊರಗೆ ಬಂದು ಕಾದು ಕುಳಿತೆ;
ನೋಟವೆಲ್ಲಾ ಕತ್ತಲಾಗಿ
ಕದವ ತೆರೆವ ದಾರಿ ಮರೆತೆ...
ಈ ದಾರಿಗಳು
ಸುಮ್ಮನೇ ಬಿದ್ದುಕೊಂಡಿರುತ್ತವೆ
ಹೊಟ್ಟೆ ತುಂಬಿದ ಹೆಬ್ಬಾವಿನಂತೆ.
ಅಸಲಿಗೆ ಈ ದಾರಿಗಳಿಗೆ
ಯಾವ ಆದಿಯೂ ಇಲ್ಲ
ಅಂತ್ಯವೂ ಇಲ್ಲ.
ಅವೆರಡೂ ಒಂದೇ ಬಿಂದುವಿನಲ್ಲಿ
ಮುಖಮುಖಿಯಾಗುತ್ತವೆ.

ನಿನ್ನನ್ನು ದಾಟಿ ಬಂದಿದ್ದೇನೆ....
ಅನ್ನುವ ಅಹಮಿಕೆಯೆಲ್ಲಾ
ದಾರಿ ಮಧ್ಯದ ಮಾತಷ್ಟೇ ಹೊರತು
ಇನ್ನೇನೂ ಇಲ್ಲ.
ಸುತ್ತಿ ಸುತ್ತಿ ಬಸವಳಿದು
ಓಟ ಮುಗಿಸಿದಾಗ ನಮ್ಮ ಅಸ್ತಿತ್ವಕ್ಕಿಲ್ಲಿ
ಯಾವ ಅರ್ಥವೂ ಉಳಿದಿರುವುದಿಲ್ಲ.

ಕಾಮದಹನವ ಮಾಡಿ
ಬದುಕಚೈತ್ರ ಚಿಗುರುವಾಗ,
ನಾವಿದ್ದದ್ದೇ ಹಬ್ಬದ ಬೀದಿ.
ಅಲ್ಲಿ ಬೇವೂ ಇದೆ;
ಬೆಲ್ಲವೂ ಇದೆ.
ಪ್ರೀತಿಪಾಕದ ಹದವರಿತು ನಡೆದಾಗ
ಬದುಕಿಲ್ಲಿ,
ಅಂತ್ಯ ಕಾಣದ ಯುಗಾದಿ...!
ಕರಗಿದ ಮಂಜು

ನಾನು ಅಂದುಕೊಂಡ 'ಪ್ರೀತಿ' ಯಾಕೆ ಇಷ್ಟು ಬೇಗ ಸೊರಗಿತು? ಹಾಗಾದ್ರೆ ನಾನು ಪ್ರೀತಿಯಲ್ಲಿ ಇರಲಿಲ್ಲವಾ?  ರಶ್ಮಿ ಯಾಕೆ ಆವತ್ತು ನನ್ನ ಕಣ್ಣಿಗೆ ಚಂದ ಕಾಣಲಿಲ್ಲ?  ಆವತ್ತೇ ಯಾಕೆ ಅವಳು ಕುಳ್ಳಿ ದಪ್ಚ, ಬಣ್ಣ ಕಪ್ಪು ಅಂತೆಲ್ಲಾ ಅನ್ನಿಸಿದ್ದು? ಅದಕ್ಕೆಲ್ಲಾ ಪುಷ್ಟಿ ನೀಡುವಂತೆ ಗೆಳೆಯ ಸುಧೀರ್ ಆಡಿದ ಮಾತುಗಳು, " ಲವ್ ಈಸ್ ಬ್ಲೈಂಡ್ ಅನ್ನೋದು ನಿನ್ನನ್ನು ನೋಡಿಯೇ ಗೊತ್ತಾಯ್ತು, ಹೋಗಿ ಹೋಗಿ ಆ ಹುಡುಗಿಯನ್ನು ಲವ್ ಮಾಡ್ತಿದ್ದಿಯಲ್ಲ, ನಿಂಗೇನು ಹುಚ್ಚಾ? ಅವಳನ್ನು ಬಿಟ್ರೆ ಬೇರೆ ಹುಡ್ಗೀನೇ ಸಿಗ್ಲಿಲ್ವಾ?" ಅಂತ. ಒಟ್ಟಾರೆಯಾಗಿ ನನ್ನ ಮನಸ್ಸು ತುಮುಲಗಳ ಸುಳಿಯಲ್ಲಿ ಸಿಕ್ಕಿ ವಿಲವಿಲ ಒದ್ದಾಡಿತು.

ಆ ದಿನದಿಂದ ರಶ್ಮಿ ಜೊತೆಯಲ್ಲಿ ಸರಿಯಾಗಿ ಮಾತಾಡಿದ್ದೇ ಇಲ್ಲ. ಅವಳನ್ನು ಅವಾಯ್ಡ್ ಮಾಡುತ್ತಲೇ ಬಂದೆ. ಅವಳಿಗೂ ಈ ಅನುಮಾನ ಬಂತು.ಆ ದಿನದಿಂದ ಅವಳು ನನ್ನಲ್ಲಿದ್ದ ಅವಳ 'ಶಶಿ' ಯನ್ನು ಹುಡುಕುವ ಹರಸಾಹಸ ಮಾಡಿ ಸೋತಳು. "ಶಶಿ, ನೀನು ಮೊದಲಿನಂತಿಲ್ಲ" ಅಂದ್ಳು. ಅದು ನನಗೆ ಗೊತ್ತಿತ್ತು. ಇಷ್ಟು ದಿನದ ಗಾಢ ಪ್ರೀತಿ ಆವತ್ತಿನ ಒಂದು ಭೇಟಿಯಲ್ಲಿ ಸೊರಗಿದ್ದು ಯಾಕೆ? ಅವಳ ಕಾಲ್, ಮೆಸೇಜ್ ಗಾಗಿ ಕಾತರದಿಂದ ಕಾಯುತ್ತಿದ್ದ ನಾನೇಕೆ ನಿರ್ಲಕ್ಷ್ಯ ವಹಿಸಿದೆ?  ಮಾತುಗಳು ಯಾಕೆ ಬೇಡವಾದವು? ನಿರಂತರವಾಗಿ ತಲೆ ಕೊರೆಯುತ್ತಿವೆ. ನೋಡಿದ ಎಲ್ಲಾ ಹುಡುಗಿಯರೊಂದಿಗೆ ಅವಳನ್ನು ಕಂಪೇರ್ ಮಾಡತೊಡಗಿದೆ. ಕೆಲವೊಮ್ಮೆ ಖುಷಿ ಮತ್ತೊಮ್ಮೆ ಛೇ, ನನ್ನ ಹುಡುಗಿ ಅವರಂತಿಲ್ಲ ಅಂತ ಬೇಸರ. ಅವಳ ಪ್ರೀತಿಗೆ ನಾನು ಅರ್ಹ ವ್ಯಕ್ತಿ ಅಲ್ಲವಾ? ಮೊನ್ನೆ ಮೊನ್ನೆ ಅವಳಿಗೆ ಬೇರೆ ಪ್ರೊಪೋಸಲ್ಸ್ ಬಂದಾಗ ತುಟಿಪಿಟಿಕ್ ಎನ್ನದೇ ಮೌನ ವಹಿಸಿದ್ದು ಈಗ ತೀವ್ರವಾಗಿ ಕಾಡಲಾರಂಬಿಸಿತು. ಪ್ರೀತಿಸಿದ್ದು ಖಂಡಿತಾ ಸುಳ್ಳಲ್ಲ. ಆದರೆ ಈಗ ಈ ರೀತಿಯ ಭಾವನೆ ಕಾಡುತ್ತಿರುವುದೂ ಸುಳ್ಳಲ್ಲ...! ಜೀವನವೇ ಸಾಕಾಗಿ ಹೋಯ್ತು. ರಸಿಕತೆ ಎಲ್ಲಾ ಮಾಯ ಆಗಿ ಆಧ್ಯಾತ್ಮದತ್ತ ವಾಲುವ ಸಾಧ್ಯತೆಯೊಂದು ನನ್ನ ತಲೆಯಲ್ಲಿ ಹೊಕ್ಕಿದ್ದು ಕಂಡು ತೀರಾ ಅಚ್ವರಿ ಆಯ್ತು. ಇನ್ನು ರಶ್ಮಿಯ ಮನಸ್ಥಿತಿ ಹೇಗಾಗಿರಬೇಡ, ಆತ್ಮೀಯತೆ ಮಾತಾಡುತ್ತಿದ್ದ ತನ್ನ 'ಗಂಡ' ನ ಉದಾಸೀನ ಭಾವ ಕಂಡು ಅವಳ ಹೆಣ್ಣು ಮನಸ್ಸು ಗಲಿಬಿಲಿಗೊಂಡಿರಬೇಕು. ಒಂದು ಕ್ಷಣ ನಾನು ಹೇಳಿದ ಮಾತು; " ಆವತ್ತು ನಿನ್ನೊಂದಿಗೆ ಯಾಕೋ ಮಾತಾಡುವ ಮನಸ್ಸಾಗಲಿಲ್ಲ"....ಅವಳು ನಿಸ್ತೇಜ ಕಣ್ಣುಗಳಿಂದ ನನ್ನನ್ನು ಭಾವಶೂನ್ಯವಾಗಿ ನೋಡಿದ ನೋಟ ಈಗಲೂ ಎದೆಯನ್ನು ಸಾವಿರ ಈಟಿಗಳಿಂದ ಚುಚ್ವುತ್ತಿದೆ. ಆ ದಿನದ ನಂತರ ಅವಳ ಪ್ರತಿಕ್ರಿಯೆ ಮನಕಲಕುವಂತಿತ್ತು. ಅವಳನ್ನು ಏನೇನೋ ಕೆಟ್ಟ ಕನಸುಗಳು, ಯೋಚನೆಗಳು ಮುತ್ತಿಬಿಟ್ಟವು. "ನೀನಿಲ್ಲದೇ ಬದುಕಲಾರೆ ಶಶಿ" ಅಂದು ಬಿಟ್ಳು. ಅಷ್ಟು ಮಾತ್ರ ಅವಳಿಂದ ಹೇಳಲು ಸಾಧ್ಯವಾದದ್ದು ಮಾತ್ರವಲ್ಲದೇ ಅವಳಿಗೆ ಹೇಳಲೂ ಅಷ್ಟೇ ಇದ್ದದ್ದು. ಅದೇ ನಾನು ಅವಳಿಂದ ಕೇಳಿದ ಕೊನೆಯ ಮಾತು.ನಿಜವಾಗಿಯೂ ಅವಳು ನನ್ನಿಂದ ಬಯಸಿದ್ದು ನಿರ್ಮಲವಾದ ಪ್ರೀತಿ ಮಾತ್ರ. ಅದು ಸುದೀರ್ಘ ಮತ್ತು ಯಾವುದೇ ಶರತ್ತು ಇಲ್ಲದ್ದು. ನಾನು ಯಾವಾಗಲೂ ಹೇಳುತ್ತಿದ್ದೆ, ನನ್ನದು ಅನ್ ಕಂಡೀಷನಲ್ ಲವ್ ಅಂತ. ಆದರೆ ಅದು ಬರೀ ಬೂಟಾಟಿಕೆಯ ಮಾತುಗಳು ಅಂತ ಈಗ ಅರ್ಥ ಆಗುತ್ತಿದೆ. ಸದಾ ಅವಳಿಗೆ "ಕಡಿಮೆ ತಿನ್ನು, ದಪ್ಪ ಆಗ್ಬೇಡ, ಆ ಡ್ರೆಸ್ ಹಾಕ್ಬೇಡ, ಅಲ್ಲಿಗೆಲ್ಲಾ ಹೋಗ್ಬೇಡ, ಅವನೊಂದಿಗೆ ಮಾತಾಡ್ಬೇಡ......".  ಓಹ್, ಎಷ್ಟೊಂದು ಕಂಡೀಷನ್ಸ್ ಗಳು?...ಆದರೂ ನನ್ನದು ಅನ್ ಕಂಡೀಷನಲ್ ಲವ್ ಅನ್ನೋದನ್ನೂ ಒಪ್ಪಿಕೊಂಡಿದ್ದ ಹುಡುಗಿ ಅವಳು.

ನಮ್ಮನ್ನು ಪ್ರೀತಿಸುವ ಹುಡುಗಿಯೇ ನಮ್ಮ ಬಾಳ ಸಂಗಾತಿಯಾದ್ರೆ ಜೀವನ ತುಂಬಾ ಸುಖಮಯ ರಸಮಯ ಆಗಿರುತ್ತದೆ ಅನ್ನೋದು ನಾನೂ ಒಪ್ಪುವ ಸರಳ ಸತ್ಯ. ಆದರೂ ನನಗಾಗಿ ಮಿಡಿಯುವ ,ಪ್ರೀತಿಸುವ ,ಹೇಗಿದ್ದರೂ ನನ್ನನ್ನು ಒಪ್ಪಿಕೊಳ್ಳುವ ತುಂಬು ಪ್ರೀತಿಯ ಹುಡುಗಿ ಸಿಕ್ಕಿರುವಾಗ ಯಾಕೆ ಬೇಡದ ಶರತ್ತು ಹಾಕ್ತೀಯ ಶಶಿ? ಯಾವತ್ತೂ ಭಾವಜೀವಿ, ಕವಿಮನಸ್ಸು ಅಂದುಕೊಳ್ಳುವ ; ಬೇರೆಯವರೂ ಹಾಗೇ ಹೇಳಲಿ ಎಂದು ಬಯಸುವ ನಿರ್ದಿಷ್ಟ ವ್ಯಕ್ತಿತ್ವ ಇಲ್ಲದ ವ್ಯಕ್ತಿ ನೀನು. ಇನ್ನೊಂದು ಜೀವದ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ, ಅದಕ್ಕೆ ಸ್ಪಂದಿಸುವ ಮನಸ್ಸೂ ನಿನಗಿಲ್ಲದೇ ಹೋಯಿತೇ?  ಹಾಗಾದರೆ ಆ ಮಾತುಗಳೆಲ್ಲಾ ಬರೀ ಆದರ್ಶಕ್ಕೇ ಸೀಮಿತನಾ? ಧಿಕ್ಕಾರವಿರಲಿ ನಿನ್ನ ಕವಿಮನಸ್ಸಿಗೆ. ನೀನು ಕೇವಲ ಸೌಂದರ್ಯದ ಆರಾಧಕನಾಗಿದ್ರೆ ಅವಳೊಂದಿಗೆ ಮೊದಲೇ ಹೇಳಿ ಬಿಡಬಹುದಾಗಿತ್ತು. ಈಗ ಪ್ರೀತಿಯ ದಾರಿಯಲ್ಲಿ ಅವಳೊಡನೆ ಬಹುದೂರ ಸಾಗಿ ಬಂದ ಮೇಲೆ  ಅವಳ ಕೈ ಬಿಡಬೇಕೆಂಬ ಒಂದು ಸಣ್ಣ ಭಾವ ನಿನ್ನಲ್ಲಿ ಮೂಡಿದರೂ ಅದು ಅಕ್ಷಮ್ಯ ಅಪರಾಧ. ನಾನು ನಿನ್ನನ್ನು ಯಾವತ್ತೂ ಕ್ಷಮಿಸೋದಿಲ್ಲ. ಪ್ರೀತಿ ಬಯಸಿ ಸಿಗಲಾರದೇ, ಈಗಾಗಲೇ ಸೋತುಹೋದ ಹುಡುಗಿ ಅವಳು. ಈ ಪ್ರೀತಿಗೀತಿ ಬೇಡ ಅಂತ ಊರಿಂದ ದೂರ ಹೋಗಿ‌ ಹೃದಯವನ್ನು ಕಲ್ಲು ಮಾಡಿಕೊಂಡಿದ್ದವಳು. ಅಲ್ಲಿ ಮತ್ತೆ ಪ್ರೀತಿಯ ಅಮೃತ ಸಿಂಚನ ಮಾಡಿ , ಅವಳ ಮನದ ಬರಡು ಅಂಗಳದಲ್ಲಿ ಮತ್ತೆ ಒಲವಿನ ಹೂವರಳಿಸಿ ಸಂತಸದಲ್ಲಿ ನಳನಳಿಸುವಂತೆ ಮಾಡಿದ ನಿನ್ನನ್ನು ತುಂಬಾ ಪ್ರೀತಿಸುತ್ತಿದ್ದಾಳೆ; ಮಗು ತನ್ನ ಬೊಂಬೆಯನ್ನು ಪ್ರೀತಿಸುವಂತೆ. ಈಗೇನಾದ್ರು ನೀನು ಅವಳನ್ನು ನೆಗ್ಲೆಕ್ಟ್ ಮಾಡಿದ್ರೆ ಮತ್ತೆ ಗಂಡು ಜಾತಿಯ ಮೇಲೆ ಅವಳ ನಂಬಿಕೇನೆ ಹೊರಟುಹೋಗಬಹುದು. ಅದು ದೊಡ್ಡ ನಂಬಿಕೆ ದ್ರೋಹ. ನಿನ್ನ ಸ್ನೇಹಿತರಿಗೆ ಸಿಕ್ಕಿದ ಹುಡುಗಿಯರನ್ನೆಲ್ಲಾ ನೋಡಿ ಅವರೊಡನೆ ಇವಳನ್ನು ಕಂಪೇರ್ ಮಾಡತೊಡಗಿದ್ದು ನಿನ್ನ ತಪ್ಪು. ಮದುವೆ ಆದ ಮೇಲೂ ಹೀಗೆನೇ ಮಾಡ್ತಿಯಾ? ಹೆಂಡತಿ ಬೋರ್ ಆದ್ಳು ಅಂತ ಬೇರೆ ಕಡೆ ನೋಡ್ತಿಯಾ? ಅವಳಿಗೆ ಮೋಸ ಮಾಡ್ತಿಯಾ? . ಶಶಿ, ಬದುಕು ನೀನಂದುಕೊಂಡ ಹಾಗೆ ಸುಲಭವಾಗಿಲ್ಲ. ಬೇರೆಯವರ ಜೊತೆ ಇವಳನ್ನು ಹೋಲಿಸಿ ಚಂದ ಇಲ್ಲ, ಇವಳಿಗೇನೂ ಗೊತ್ತಿಲ್ಲ ಅಂತ ಯಾವತ್ತೂ ಯೋಚಿಸ್ಬೇಡ. ಅವಳು ಹೇಗಿದ್ದಾಳೆಯೋ ಹಾಗೆಯೇ ಒಪ್ಪಿಕೊಂಡು ಪ್ರೀತಿಸುವ ಮನಸ್ಸು ನಿನ್ನದಾಗಬೇಕು. ಎಲ್ಲರಿಗೂ ಎಲ್ಲವೂ ಸಿಕ್ಕಲ್ಲ. ನಿನ್ನ ಮೇಲೆ ಪ್ರಣಾನೇ ಇಟ್ಟುಕೊಂಡಿದ್ದಾಳೆ. ನಿನ್ನ ಮೇಲೆ ಎಷ್ಟು ನಂಬಿಕೆ ಇಟ್ಟುಕೊಂಡಿದ್ದಾಳೆ ಅಂತ ಅವಳು ತನ್ನ ಸರ್ವಸ್ವವನ್ನೂ ನಿನಗೆ ಒಪ್ಪಿಸಿದಾಗಲೇ, ನಿನಗೆ ಅರಿವಾಗಬೇಕಿತ್ತು‌. ಹಾಗೆ ಮಾಡಲು ಅವಳೇನೂ ಮುಗ್ದ ಏನೂ ಗೊತ್ತಿಲ್ಲದ ದಡ್ಡ ಹುಡುಗಿ ಅಲ್ಲ. ಅರ್ಥ ಮಾಡಿಕೋ, ಕೇವಲ ಸೌಂದರ್ಯ ಮಾತ್ರ ಬೇಕಾಗಿರೋದಲ್ಲ ಬದುಕಿಗೆ. ಅದು ಶಾಶ್ವತನೂ ಅಲ್ಲ. ನೀನೇನೂ ಸಾಧನೆ ಮಾಡಿದರೂ ಮನೆಗೆ ಬಂದಾಗ ಪ್ರೀತಿಯಿಂದ ಆದರಿಸುವ ಪತ್ನಿಯೇ ಬದುಕಿನ ಜೀವಾಳ.

ತುಮುಲಗಳ ತೆರೆ ಸರಿದು ಹರಿವ ನದಿ ನಿಲ್ಲಲಿ. ಮನಸ್ಸು ಒಂದಿಷ್ಟು ಶಾಂತಗೊಳ್ಳಲಿ. ಪ್ರಶಾಂತವಾದ ಮನಸ್ಸಿನಿಂದ ಅವಳನ್ನು ಜೀವನ ಪರ್ಯಂತ ಪ್ರೀತಿಸು‌ .ಬಹಳ ದಿನಗಳ ನಂತರ ನಿನ್ನೊಡನೆ ನೀನು ಮಾತಿಗಿಳಿದು ಅಂತರಂಗವನ್ನು ಪ್ರಶ್ನಿಸಿದ್ದಿಯ.ಈ ಮಂಥನ ನಿನಗೊಂದು ಹೊಸ ಆಯಾಮವನ್ನು ನೀಡಲಿ.ಅವಳನ್ನು ಒಂದು ವಸ್ತು ಎಂದು ಪರಿಗಣಿಸದೇ ಅವಳೂ ಒಂದು ಭಾವನೆಗಳ ಮೂಟೆ ಅನ್ನೋದು ಇಂದು ನಿನಗೆ ಅರಿವಾಗಿದೆ. ಇನ್ನೆಂದೂ ಹೀಗಾಗದಿರಲಿ.ಯಾವುದೋ ಕೆಟ್ಟ ಇರುಳಲ್ಲಿ ಕಂಡ ಕರಾಳ ಕನಸು ಮತ್ತೆಂದೂ ಬೀಳದಿರಲಿ.....
ಪಾಂಡು ಮತ್ತು ಸೈಕಲ್

ನಾನು ಪ್ರೈಮರಿಯಲ್ಲಿದ್ದಾಗ  ಸಿಗುವ ಬೇಸಿಗೆ ರಜೆಗಳನ್ನು ನನ್ನ ಮನೆಯಲ್ಲಿ ಎಂದೂ ಕಳೆದವನಲ್ಲ. ಬೇಸಿಗೆ ರಜೆಗಳು ಶುರು ಆದ ಕೂಡಲೇ ನನ್ನ ಕಾತರ ಚಡಪಡಿಕೆಗಳು ಹೆಚ್ಚಾಗುತ್ತಿದ್ದವು. ವರ್ಷವೂ ನನ್ನನ್ನು ಕರ್ಕೊಂಡು ಹೋಗಲು ಬರುತ್ತಿದ್ದ ಪಾಂಡುನ ಸೈಕಲ್ ಇನ್ನೂ ಯಾಕೆ ಬಂದಿಲ್ಲ?. ಅವನಿಗೆ ಇನ್ನೂ ರಜೆ ಸಿಕ್ಕಿಲ್ವಾ?, ಹೀಗೆ ನಿಲ್ಲದ ಯೋಚನೆಗಳು. ಪಾಂಡು ನನ್ನ ಅಮ್ಮನ ಅಕ್ಕನ ಮಗ, ಅವನೇನೂ ವಯಸ್ಸಿನಲ್ಲಿ ನನಗಿಂತ ತುಂಬಾ ದೊಡ್ಡವನಲ್ಲ .ಸುಮಾರು ಐದಾರ್ ವರ್ಷ ದೊಡ್ಡವನಿರಬಹುದು ಅಷ್ಟೇ. ಆದರೆ ಪ್ರತೀ ಬೇಸಗೆ ರಜೆಯಲ್ಲಿ ತಪ್ಪದೇ ಬಂದು ತನ್ನ ಮನೆಗೆ ಕರೆದುಕೊಂಡು ಹೋಗುತಿದ್ದ. ಈ ಪರಿಪಾಠ ನಾನು ಪ್ರೌಢಶಾಲೆಯ ಮೆಟ್ಟಿಲೇರುವ ತನಕವೂ ಬೆಳೆದುಕೊಂಡು ಬಂತು. ಹಾಗಂತ ತಪ್ಪಿದ್ದೇ ಇಲ್ಲ ಅಂತ ಅಲ್ಲ. ಒಂದು ಸಾರಿ ಈ ಯಜ್ಞಕ್ಕೂ ವಿಘ್ನ ಬಂದಿತ್ತು.

ಆ ಸಲದ ಬೇಸಗೆ ರಜೆಯಲ್ಲಿ ನಾನು ಹೋಟೆಲ್ ಒಂದರಲ್ಲಿ ಕೆಲಸಕ್ಕೆ ಸೇರಿದ್ದೆ ಸಪ್ಲಾಯರ್ ಆಗಿ. ಮೂರು ದಿನ ಕೆಲಸ ಮಾಡಿದ್ದೆ ಅಷ್ಟೇ;  ನಾಲ್ಕನೇ ದಿನ ಬೆಳಗ್ಗೆ ಟೇಬಲ್ ಸೆಟ್ ಮಾಡ್ತಾ ಇದ್ದಾಗ ಬೆನ್ನಿಗೆ ಗುದ್ದಿದ್ದು ಯಾರು ಅಂತ ತಿರುಗಿ ನೋಡಿದ್ರೆ ಎದುರು ನಿಂತಿದ್ದಾನೆ ಇದೇ ಪಾಂಡು. ನಡಿ ಹೋಗುವ ಅಂತ ಒಂದೇ ಮಾತು. " ಇಲ್ಲ, ಹಾಗೆಲ್ಲಾ ಬಿಡೋದಿಲ್ಲ ಹೋಟೇಲ್ ಧಣಿ. ಸೇರುವಾಗ್ಲೇ ಹೇಳಿದ್ದಾನೆ, ಎರಡು ತಿಂಗ್ಳು ಕೆಲ್ಸ ಮಾಡೋದಾದ್ರೆ ಮಾತ್ರ ತೆಗೊಳ್ಳೋದು ಅಂತ, ಆಯ್ತು ಹೇಳಿದ್ದೇನೆ" ಅಂದೆ.
"ಅದೆಲ್ಲಾ ನನ್ಗೆ ಗೊತ್ತಿಲ್ಲ, ಸೈಕಲ್ ಹತ್ತು. ನಾನು ಮಾತಾಡ್ತೇನೆ ಅವನತ್ರ" ಅಂತ ಹೇಳಿ ಹೋಟೆಲ್‌ ಮಾಲೀಕರ ಹತ್ರ ಹೋಗಿ ನನ್ನನ್ನು ಕರ್ಕೊಂಡು ಹೋಗುವ ವಿಷಯ ಹೇಳಿದ. ಅದಕ್ಕವರು ಕೆರಳಿ , " ಅದೆಲ್ಲಾ ಆಗಲ್ಲ, ಮೊದ್ಲೇ ಜನ ಇಲ್ಲ ಇಲ್ಲಿ. ಎರಡು ತಿಂಗ್ಳು ನಿಲ್ತೇನಂತ ಹೇಳಿ , ಈಗ ಹೋಗ್ತೇನಂದ್ರೆ ಬಿಡೋಕಾಗಲ್ಲ.ಹೋಗ್ ಹೋಗು ಕೆಲ್ಸ ನೋಡ್ಕೋ" ಅಂತ ಅವರ ಭಾಷಣ ಜಾರಿಯಲ್ಲಿರುವಾಗ್ಲೇ ನನ್ನ ಬಟ್ಟೆಯ ಗಂಟನ್ನು ತೆಕೊಂಡು ಪಲಾಯನಕ್ಕೆ ಸಿದ್ಧನಾಗಿದ್ದೆ. ಅದನ್ನು ನೋಡಿ ಇನ್ನೂ ಕೆರಳಿ ಕೆಂಡವಾಗಿ ನನ್ನ ಬಟ್ಟೆಯ ಗಂಟನ್ನು ಕಿತ್ಕೊಂಡು;  ಹೇಗೆ ಹೋಗ್ತಿಯಾ , ನಾನೂ ನೋಡ್ತೇನೆ ಅನ್ನೋ ಫೋಸ್ ಕೊಟ್ರು. ಅಷ್ಟೊತ್ತಿಗೆ ನನಗೂ ಜೋಶ್ ಬಂದು ಅದನ್ನು ನೀವೇ ಇಟ್ಕೋಳ್ಳಿ ಅಂತ ಹೇಳಿ ಪಾಂಡುನ ಸೈಕಲ್ ಹತ್ತಿಬಿಟ್ಟೆ. ಮತ್ತೆ ಆ ಬಟ್ಟೆಯ ಗಂಟನ್ನು ಅವರಿಂದ ಬಿಡಿಸಿಕೊಳ್ಳಿಕ್ಕೆ ಅಪ್ಪ ಹಲವು ಸುತ್ತುಗಳ ಬೈಗುಳದ ಫೈರಿಂಗ್ ಗೆ ಎದೆಯೊಡ್ಡಬೇಕಾಯ್ತು.

ಒಮ್ಮೆ ಅವನ ಮನೆಯನ್ನು ಸೇರಿದೆನೆಂದರೆ ಮತ್ತೆ ನಮ್ಮ ಮರಿ ಸೈನ್ಯಕ್ಕೆ ಯಾರ ಲಂಗು ಲಗಾಮೂ ಇರಲಿಲ್ಲ.ಅಲ್ಲಿ ಪಾಂಡುನ ತಂಗಿ ಪುಟ್ಟಿ ,ತಮ್ಮ ಸಂತು ಮತ್ತು ನಾನು ಸಮಯದ ಪರಿವೇ ಇಲ್ಲದೇ ಆಟದಲ್ಲಿ, ಜಗಳದಲ್ಲಿ ತಲ್ಲೀನರಾಗುತ್ತಿದ್ದೆವು. ಬರೇ ಆಟ ಮಾತ್ರವಲ್ಲದೇ ಸಣ್ಣಪುಟ್ಟ ಕೆಲಸಗಳೂ ನಮ್ಮ ತಂಡಕ್ಕೆ ನಿಗದಿಯಾಗುತ್ತಿದ್ದವು. ಅದರಲ್ಲಿ ಮುಖ್ಯವಾಗಿ ಮಾವಿನ ಕಾಯಿ ಕೀಳುವುದು. ಪಾಂಡು ಮರ ಹತ್ತಿ ಮಾವಿನ ಕಾಯಿ, ಹಣ್ಣು ಕಿತ್ತು ಕೆಳಗೆ ಹಾಕುತ್ತಿದ್ದ. ಹಾಗೆ ಬೀಳುವ ಕಾಯಿ ನೆಲದ ಮೇಲೆ ಬಿದ್ದು ಒಡೆಯದ ಹಾಗೆ ಮೊದಲೇ ಒಂದು ಗೋಣಿಚೀಲವನ್ನು ನಾನು ಮತ್ತು ಸಂತು ಅಡ್ಡ ಹಿಡಿದು ಅದರಲ್ಲೇ ಬೀಳುವ ಹಾಗೆ ಮಾಡುವುದು ನಮ್ಮ ಕೆಲಸ. ನಂತರ ವಿಸ್ತಾರವಾದ ತೆಂಗಿನ ತೋಟಕ್ಕೆ , ನೀರಿನ ಇಂಜಿನ್ ಚಾಲು ಮಾಡಿದ್ರೆ ಮುಖ್ಯ ನಾಲೆಯಲ್ಲಿ ಬರುತ್ತಿದ್ದ ನೀರನ್ನು ಪ್ರತೀ ತೆಂಗಿನ ಮರದ ಕೆಳಗೆ ಹಾಯಿಸುವುದು, ಬಿದ್ದ ತೆಂಗಿನ ಕಾಯಿಗಳನ್ನು ತಂದು ಅಂಗಳಕ್ಕೆ ಹಾಕುವ ಕೆಲಸಗಳನ್ನು ಬಿಟ್ಟರೆ ಉಳಿದದ್ದು ಬರೇ ಆಟ.

ಆಗ ಅವರ ಮನೆಯಲ್ಲಿ ಸೈಕಲ್ ಹೊಡೆಯುತ್ತಿದ್ದದ್ದು ಪಾಂಡು ಮಾತ್ರ. ಸೈಕಲ್ ಅಂದ್ರೆ ಅವನಿಗೆ ವಿಪರೀತ ವ್ಯಾಮೋಹ. ದಿನವಿಡೀ ಅದರ ಬಗ್ಗೆ ಅವನು ವಹಿಸುವ ನಿಗಾ ನೋಡುವಾಗ ನನಗೆ ನನ್ನ ಅಪ್ಪ , ನಮ್ಮ ಹಟ್ಟಿಯ ಜೋಡಿ ಕೋಣಗಳ ಬಗ್ಗೆ ವಹಿಸುವ ಕಾಳಜಿಯ ನೆನಪಾಗುತ್ತದೆ. ಆ ಸೈಕಲನ್ನು ಒರೆಸುವುದೇನು..ಅದರ ಚೈನ್ ಗೆ ಆಯಿಲ್ ಬಿಡುವುದೇನು..ಅದರ ಚಂದವನ್ನು ನೋಡಿಯೇ ತೀರಬೇಕು. ಪ್ರೀತಿಯಿಂದ ಸಾಕಿದ ಬೆಲೆಬಾಳುವ ಕುದುರೆಯಂತೆ ಆ ಸೈಕಲ್ ನ ಆರೈಕೆ ಮಾಡುತ್ತಿದ್ದ ಪಾಂಡು, ಬೇರೆಯವರಿಗೆ ಅದನ್ನು ಮುಟ್ಟಲೂ ಬಿಡುತ್ತಿರಲಿಲ್ಲ. ಅವನು ಸೈಕಲ್ ಏರಿ ಹೊರಟನೆಂದರೆ ಥೇಟ್ ಐರಾವತವೇರಿದ ದೇವೇಂದ್ರನೇ. ಅಂತಹ ಅಮೂಲ್ಯವಾದ ಅವನ ವಸ್ತು ನಮ್ಮ ಪಾಲಿಗೆ ಕೈಗೆಟುಕದ ಮುಗಿಲತಾರೆ. ಸೈಕಲೆಂದರೆ ನಮಗೋ ತೀರದ ಕುತೂಹಲ. ದೊಡ್ಡಕಣ್ಣುಗಳಿಂದ ಅದರೆಡೆಗೇ ನೋಡಿ ನಾವೂ ಅದರ ಮೇಲೆ ಹತ್ತಿ ಸವಾರಿ ಮಾಡಬೇಕು ಅಂತ ಪ್ರತೀ ದಿನ ಆಸೆ ಪಡೋದಷ್ಟೇ ನಮ್ಮಿಂದ ಮಾಡಲು ಸಾಧ್ಯವಿದ್ದದ್ದು; ಈಡೇರುತ್ತಿರಲಿಲ್ಲ.  ಅಷ್ಟು ಚಂದವಿತ್ತು ಆ ಸೈಕಲ್. ಎರಡೂ ಹ್ಯಾಂಡಲ್ ನ ಕೊನೆಯಲ್ಲಿ ಜೋಡಿಸಿದ ಹಸಿರು ಜರಿಗಳು ಗಾಳಿಗೆ ತರುಣಿಯ ಕೂದಲಿನಂತೆ ಲಾಸ್ಯವಾಡುತ್ತಿತ್ತು. ಇನಿದನಿಯ ಬೆಲ್, ಕ್ಯಾರಿಯರ್ ಗೆ ಹಾಕಿದ ಚಂದದ ಪೆಟ್ಟಿಗೆ...ಹೀಗೆ ಅನೇಕ ಗುಣವಿಶೇಷಗಳಿದ್ದರೂ ಎಲ್ಲಕಿಂತ ಕುತೂಹಲ ಹುಟ್ಟಿಸುತ್ತಿದ್ದದ್ದು ಅದರ ಡೈನಮೋ. ಪೆಡಲ್ ಹೊಡೆದ ಹಾಗೇ ಬೆಳಕು ಕೊಡುತ್ತಿದ್ದ ಡೈನಮೋ ನನ್ನಲ್ಲಿ ಹುಟ್ಟಿಸುತ್ತದ್ದ ಬೆರಗು ಅಪಾರ. ಆ ಸೈಕಲ್ ನ ಮೇಲಿನ ಅವನ ಹಿಡಿತವೂ ಅದ್ಭುತ. ಮುಂದಿನ ಸರಳಿನ ಮೇಲೆ ನನ್ನನ್ನೂ ಹಿಂದಿನ ಕ್ಯಾರಿಯರ್ ಮೇಲೆ ಸಂತುನನ್ನೂ ಕೂರಿಸಿಕೊಂಡು ಪರ್ಕಳ ಪೇಂಟೆಯಿಂದ ಮನೆಗೆ ಆರಾಮವಾಗಿ ತ್ರಿಬ್ಬಲ್ ರೈಡ್ ಮಾಡುತ್ತಿದ್ದ. ಹೀಗೇ ಒಟ್ಟಿಗೆ ನಾವು ಸಂಜೆ ಬಾಬುವಿನ ಅಂಗಡಿಗೆ ಆಮ್ಲೇಟ್ ತಿನ್ನಲು ಹೋಗುತ್ತಿದ್ದ ನೆನಪು. ಆಗೊಮ್ಮೆ ಈಗೊಮ್ಮೆ ಹೀಗೆ ಅದರ ಮೇಲೆ ಕೂತು ಸೈಕಲ್ ಕಲಿಯುವ ನಮ್ಮ ಆಸೆ ಗರಿಗೆದರಿ ಕುಣಿಯಲಾರಂಬಿಸಿತು.

ಅವನಲ್ಲಿ ನಮ್ಮ ಸೈಕಲ್ ಕಲಿಯುವ ಆಸೆಯನ್ನು ತಿಳಿಸಬೇಕೆಂದು ಎಷ್ಟು ಬಾರಿ ಅಂದುಕೊಂಡರೂ ಅವನ ಗತ್ತು ಗಾಂಭೀರ್ಯದ ಮುಂದೆ ಎಲ್ಲವೂ ಟುಸ್ ಆಗುತ್ತಿತ್ತು. ಕೊನೆಗೂ ಒಂದು ದಿನ ಧೈರ್ಯ ಮಾಡಿ ಕೇಳಿದೆವು ನಮಗೂ ಸೈಕಲ್ ಕಲಿಸಿಕೊಡು ಎಂದು. ಸ್ವಲ್ಪ ಹೊತ್ತು ಸುಮ್ಮನಿದ್ದ ಪಾಂಡು ನಂತರ  ಯಕ್ಷಗಾನದ ದಶಕಂಠ ರಾವಣನ ಪಾತ್ರಧಾರಿ ನಕ್ಕ ಹಾಗೆ ಗಹಗಹಿಸಿ ನಕ್ಕು ಬಿಟ್ಟ. ನನಗೋ ಅವಮಾನವಾದಂತೆನಿಸಿ ಪೆಚ್ಚಾದೆ. ನಮ್ಮ ಸೊರಗಿ ಹೋದ ಮುಖಗಳನ್ನು ನೋಡಿ ಬಹುಶಃ ಅನುಕಂಪ ಉಕ್ಕಿರಬೇಕು.  ನಂತರ ಹೇಳಿದ, "ಸೈಕಲ್ ಕಲಿಯೋದು ಅಂದ್ರೆ ತಮಾಷೆಯ ಮಾತಲ್ಲ. ಅದಕ್ಕೆ ತುಂಬಾ ಧೈರ್ಯ ಬೇಕು. ಎದ್ದು ಬಿದ್ದು ಗಾಯಮಾಡಿಕೊಳ್ಳಲು ರೆಡಿ ಇದ್ರೆ ನಾನು ಕಳಿಸಿ ಕೊಡ್ತೇನೆ. ಆದ್ರೆ ನಾನು ಹೇಳಿದ ಹಾಗೇ ಪ್ರಾಕ್ಟೀಸ್ ಮಾಡ್ಬೇಕು" ಅಂತ ಸಣ್ಣ ಲೆಕ್ಚರ್ ಕೊಟ್ಟ.  ಏನೇ ಆಗ್ಲಿ, ಅಂತೂ ಕಲಿಸಲು ಒಪ್ಪಿದ್ನಲ್ಲ ಅನ್ನೋ ಸಮಾಧಾನ ನಮಗೆ. ಆದರೆ ಪಾಂಡು ಎಂತಹ ಖಡಕ್ ಟ್ರೈನರ್ ಅನ್ನೋದು ನಮಗೆ ಮೊದಲ ದಿನದಲ್ಲಿಯೇ ಅನುಭವಕ್ಕೆ ಬಂತು. ಹೋ...!, ಇವತ್ತು ಸೈಕಲ್ ಮೇಲೆ ನಮ್ಮ ಸವಾರಿ....ಅಂತ ಅಂದುಕೊಂಡು ನಾವು ಸೈಕಲ್ ಹತ್ರ ಬಂದದ್ದೇ ಬಂತು, ಆದ್ರೆ ನಿಜ ಸಂಗತಿ ಬೇರೆಯೇ ಇತ್ತು. ಅಲ್ಲಿ ಪಾಂಡುವಿನ ಟ್ರೈನಿಂಗ್ ಶೆಡ್ಯೂಲ್ ತಯಾರಾಗಿತ್ತು.  "ಮೊದಲು ಸೈಕಲ್ ನ್ನು ತಳ್ಳಿಕೊಂಡೇ ಹೋಗಬೇಕು, ಬೀಳದ ಹಾಗೇ ಆರಾಮವಾಗಿ ಸೈಕಲ್ ನ್ನು  ತಳ್ಳುವ ಬಲ ನಿಮಗೆ ಬಂದಿದೆ ಅಂತ ಗ್ಯಾರಂಟಿ ಆಗೋ ತನಕ ಇದೇ ಟ್ರೈನಿಂಗ್ ಅಂತ ಹೇಳಿ ಒಂದು ವಾರ ಬರೇ ಸೈಕಲ್ ತಳ್ಳಿಸಿದ. ಕಷ್ಟಪಟ್ಟು ನಾವು ಸೈಕಲ್ ತಳ್ಳೋದನ್ನ ಗದ್ದೆಯ ದಂಡೆಯ ಮೇಲೆ ಕುಳಿತು ಎಂಜಾಯ್ ಮಾಡುತ್ತಿದ್ದ. ಬೀಳಿಸಿದರೆ ವಾಚಾಮಗೋಚರ ಬೈದು ಆವತ್ತಿನ ಟ್ರೈನಿಂಗ್ ಗೆ ಪ್ಯಾಕಪ್ ಹೇಳುತ್ತಿದ್ದ. ಅಷ್ಟಕೇ ನಿಲ್ಲದೇ , ದಿನದ ಟ್ರೈನಿಂಗ್ ಮುಗಿದ ಕೂಡಲೇ ಒಬ್ಬೊಬ್ಬರಿಗೆ ಒಂದೊಂದು ಕೆಲಸವನ್ನು ವಹಿಸಿ ಬಿಡುತ್ತಿದ್ದ. ನಾನು ಅದರ ಟೈರ್ ಗಳಿಗೆ ಗಾಳಿ ಹಾಕಿದರೆ  ಸಂತುಗೆ ಗದ್ದೆಯ ಹತ್ತಿರದ ತೋಡಿಗೆ ಸೈಕಲ್ ತೆಗೆದುಕೊಂಡು ಹೋಗಿ ಚೆನ್ನಾಗಿ ತೊಳೆಯುವ ಕೆಲಸ, ಗದ್ದೆ ಕೆಲಸದ ನಂತರ ಕೋಣಗಳನ್ನು ನೀರಿಗೆ ತಂದು ತೊಳೆಯುವ ಹಾಗೆ. ಅದಾದ ನಂತರ  ಸೈಕಲ್ ನ್ನು  ಮನೆಯ ಅಂಗಳದ ಅದರ ಸ್ವಸ್ಥಾನದಲ್ಲಿಟ್ಟು ಬೀಗ ಹಾಕುವ ಜವಾಬ್ದಾರಿ ಪುಟ್ಟಿಯ ಪಾಲಿಗೆ.

ಒಂದು ವಾರದ ನಂತರ ಕಾಲನ್ನು ಪೆಡಲ್ ರಾಡ್ ಹಾಗೂ ಸೀಟ್ ರಾಡ್ ನ ಒಳಗೆ ತೂರಿಸಿ 'ಒಳಪೆಡ್ಳು' ಹೊಡೆಯುವ ವಿಧಾನವನ್ನು ತೋರಿಸಿಕೊಟ್ಟ. ಸೀಟ್ ಹತ್ತಿ ಕಲಿಯುವಷ್ಟು ಉದ್ದ ಆಗ ನಾವ್ಯಾರೂ ಇರಲಿಲ್ಲ. ಅಂತೂ ಅದೇ ವಿಧಾನದಿಂದ ಆ ಬೇಸಗೆ ರಜೆಯಲ್ಲಿ ನಾವು ಮೂವರೂ ಸೈಕಲನ್ನು ಒಳಪೆಟ್ಳು ಹೊಡೆದೇ ನಡೆಸಲು ಕಲಿತೆವು. ಒಳಪೆಡ್ಳಿನಿಂದ ಮುಖ್ಯ ಸೀಟಿಗೆ ಹತ್ತಿ ಸವಾರಿ ಮಾಡಲು ನಂತರ ಎಷ್ಟೋ ವರ್ಷಗಳು ಬೇಕಾದವು‌. ಮುಂದೆ ನಾವೆಲ್ಲರೂ ಸ್ಕೂಟರ್ ಬೈಕ್, ಕಾರ್ ಎಲ್ಲವನ್ನೂ ಕಲಿತೆವು. ಆದರೆ ಯಾವುದರಲ್ಲಿಯೂ ಇಷ್ಟು ಸ್ವರಸ್ಯ ಇರಲಿಲ್ಲ. ಹಾಗಾಗಿ ಸೈಕಲ್ ಕಲಿತಷ್ಟು ಶ್ರದ್ಧೆಯಿಂದ , ಭಯಭಕ್ತಿಯಿಂದ ಯಾವುದನ್ನೂ ಕಲಿತಿಲ್ಲ. ಯಾಕೆಂದರೆ ಆಗ ಪಾಂಡುನಂತ ಟ್ರೈನರ್ ನಮಗೆ ಸಿಗಲೇ ಇಲ್ಲ .