Saturday 29 April 2017

ರಾಮನ ಪಟ್ಟ ತಿಳಿದ ಮಂಥರೆ
ಸಂಚನು ಹೂಡಿದಳು
ಭರತ ಪ್ರೇಮದ ಮುದುಕಿಯು ಬಂದು
ಕಿವಿಯನು ಹಿಂಡಿದಳು
ಕೈಕೆಯ ಬುದ್ದಿಯ ಕೆಡಿಸಿದಳು.

ತನ್ನ ಕಂದನಿಗೆ ರಾಜ್ಯ ತಪ್ಪಿತೆಂದು
ಕೈಕೆಯು ಮರುಗಿದಳು
ಎಂದೋ ಗಳಿಸಿದ ಮೂರು ವರಗಳ
ರಾಜನ ಕೇಳಿದಳು
ಅಯೋಧ್ಯೆಯು ಭರತಗೆ ಹೇಳಿದಳು.

ತಂದೆ ಮಾತನು ಕೇಳಿದ ರಾಮ
ಕಾಡಿಗೆ ಹೊರಟನು
ನಿನ್ನ ಬಿಟ್ಟು ಇರಲೊಲ್ಲೆ ಎಂದು
ಸೀತೆಯು ಮರುಗಿದಳು
ರಾಮನ ಹಿಂದಯೆ ತೆರಳಿದಳು.

ಪುತ್ರ ಶೋಕದಿ ದಶರಥ ರಾಜ
ಸಾವಿಗೆ ಶರಣಾದ
ತನ್ನ ತಾಯಿಯ ಕೀಳು ಬುದ್ದಿಗೆ
ಭರತನು ನಾಚಿದನು
ಅಣ್ಣನ ಕರೆಯಲು ಓಡಿದನು.

ಪರಿಪರಿ ಬೇಡಿಯೂ ಒಲ್ಲದ ಅಣ್ಣನ
ಪಾದುಕೆ ಕೇಳಿದನು
ರಾಮನ ಹೆಸರಲಿ ರಾಜ್ಯವ ನಡೆಸುವೆ
ಪಾದುಕೆ ಮೇಲಿಟ್ಟು
ನಾನು ನಾರುಮುಡಿಯುಟ್ಟು.

ಚಿನ್ನದ ಜಿಂಕೆಯ ನೋಡಿದ ಸೀತೆ
ಆಸೆಯ ಪಟ್ಟಳು
ಮಾಯಾ ಜಿಂಕೆಯ ಮೋಹವು ಕವಿದು
ರಾಮನ ಬೇಡಿದಳು
ಬಿಡದೇ ಗಂಡನ ಕಾಡಿದಳು.

ಯಾರು ಕರೆದರೂ ಹೊಸ್ತಿಲಿನಾಚೆಗೆ
ಎಂದಿಗು ಬಾರದಿರಿ
ಅಣ್ಣನ ಕೂಗಿಗೆ ಹೊರಡುತ ಲಕ್ಷ್ಮಣ
ಸೀತೆಗೆ ಹೇಳಿದನು
ಲಕ್ಷ್ಮಣ ರೇಖೆಯ ಎಳೆದನು.

ಸಮಯವ ನೋಡಿ ದಶಕಂಠ ರಾವಣ
ಭಿಕ್ಷೆಗೆ ಬಂದನು
ಭೈರಾಗಿ ರೂಪದ ಠಕ್ಕನ ಅರಿಯದೆ
ಭಿಕ್ಷೆಯ ಹಾಕಿದಳು
ಸೀತೆ ರೇಖೆಯ ದಾಟಿದಳು.

ರಾವಣ ಕಂಡು ಬೆಚ್ಚಿದ ಸೀತೆ
ರಾಮನ ಕೂಗಿದಳು
ಮರುಳ ರಾವಣ ಸೀತೆಯ ಹೊತ್ತು
ಲಂಕೆಗೆ ಹಾರಿದನು
ರಾವಣ ದೇವಿಯ ಕದ್ದನು.

ಕಾಂತೆಯ ಕಾಣದೇ ಮರುಗಿದ ರಾಮ
ಹುಡುಕುತ ಬಳಲಿದನು
ಗರುಡನಿಂದ ವಿಷಯವ ತಿಳಿದು
ಕೋಪದಿ ಕೆರಳಿದನು
ರಾಮ ಲಂಕೆಗೆ ಹೊರಟನು.

ವಾನರರೊಂದಿಗೆ ಕೂಡಿದ ರಾಮ
ಲಂಕೆಯ ಮುತ್ತಿದನು
ದೇವನ ಶಕ್ತಿಯ ಎದುರಿಸಲಾಗದೆ
ರಾವಣ ಮಡಿದನು
ರಾಮನು ಲಂಕೆಯ ಗೆದ್ದನು.

ಸೀತೆಯ ಜೊತೆಗೆ ರಾಮನ ಕಂಡು
ಸಂಭ್ರಮ ಜನರಲ್ಲಿ
ಹಣತೆ ಹಚ್ಚಿ ಹೊಸ ಬೆಳಕನು ಚೆಲ್ಲಿ
ಹಬ್ಬವ ಮಾಡಿದರು
ಸೀತಾರಾಮರು ಹರಸಿದರು

No comments:

Post a Comment