Saturday 8 July 2017

#BGGROUP @ #ಬಿಜಾಪುರ
#PART 1

#ಕೊರ್ತಿಕೋಲಾರ್  #ಮೊಸರವಲಕ್ಕಿ"

"ಈಗೇನು ನೀ ಬರ್ತಿಯೋ? ಇಲ್ವೋ?...ಅಷ್ಟ್ ಹೇಳಿ ಬಿಡು.‌..ಹಾಂ ಹೂಂ ಕಹಾನಿ ಮತ್ ಬೋಲೋ..."
ಸುಧೀರ್ ಹೊಸ್ಮನಿ ಪೋನ್ ಮಾಡಿದಾಗ ಇನ್ನೂ ಗೊಂದಲದಲ್ಲಿಯೇ ಮಾತಾಡಿದ್ದೆ. ಮತ್ತೆ ನನ್ನ  ನೋಡೋನು  ದೋಸ್ತ್ ...ಮಾತು ಕೇಳಿ ಏಕ್ ದಮ್ ಸೆಂಟಿಮೆಂಟಲ್ ಮೂಡ್ ಗೆ ಗೇರ್ ಬದಲಾಯಿಸಿ  "ನೋಡು ದೋಸ್ತ್... ನಾಳೆ ಯಾರ್ ಇರ್ತಾರೋ ಇಲ್ವೋ ಯಾರಿಗ್ ಗೊತ್ತು...ಒಂದು ವಾರ ಮಾತ್ರ ಇಂಡಿಯಾದಲ್ಲಿರೋದು, ಮತ್ತೆ ವಿಮಾನ ಏರೋವಾಗ ಕೆಳಗೆ ಇಳಿಯೋ ಬಗ್ಗೆ ಗ್ಯಾರಂಟಿ ಇಲ್ಲ...ಬಾ ನೀನು....ಇದ್ರ ಮೇಲೆ ನಿನ್ನಿಷ್ಟ" ಅಂದು ನನ್ನ ಹೆಂಡತಿಯ ತಲೆಗೂ ಭಾವನೆಗಳ ಹುಳ ಬಿಟ್ಟಾಗ ನನಗಂತೂ ಪರ್ಮಿಶನ್ ಸಿಕ್ಕಿದ್ದೇ ನೆಪವಾಗಿ ಮತ್ತೆ ಹಿಂದೆ ಮಂದೆ ನೋಡಲಿಲ್ಲ. ಯತೀಶ್ ಗೆ ಪೋನ್ ಮಾಡಿ ಬರ್ತೀಯಾ ಅಂದದ್ದೇ ತಡ ಹೆಚ್ಚು ಯೋಚಿಸದೇ ಹೊರಟೇ ಬಿಟ್ಟ.

ಬಹುಶಃ BG GROUPನ ಸೆಳೆತವೇ ಆ ರೀತಿಯದ್ದು.

ಹಳೇ ಹುಬ್ಳಿ ಬಸ್ ಸ್ಟ್ಯಾಂಡ್ ನಾಗ ನಿಂತಿದ್ದೆ....

ಹಳೇ ಹುಬ್ಳಿ ಬಸ್ ಸ್ಟ್ಯಾಂಡ್ ನಲ್ಲಿ ಇಳಿದಾಗ ಬೆಳಗ್ಗಿನ ಜಾವ 6 ಗಂಟೆ. ಆಟೋದವರ ಕೈಯಿಂದ ತಪ್ಪಿಸಿಕೊಂಡು ಸುಧೀರ್ ಹೊಸ್ಮನಿಗೊಂದು ಕಾಲ್ ಮಾಡಿ ,ಬೀದಿ ಬದಿಯ ಟೀ ಸ್ಟಾಲ್ ಗೆ ಹೋದೆವು. ಸಾಲಾಗಿ ಇಟ್ಟ ಸಣ್ಣ ಸಣ್ಣ ಕಪ್ಗಳಿಗೆ ಚಾ ಸುರಿಯುತ್ತಿದ್ದ. " ಏ ಎರಡು ಲೆಮನ್ ಟೀ ಕೊಡಪ್ಪಾ..." ಅಂತ ಇಬ್ಬರು ತರುಣರು ಹೇಳಿದ್ದು ಕೇಳಿ "ನನಗೂ ಇಂದು ಲೆಮನ್ ಟೀ" ಅಂದೆ‌. ಅವರ ಸರದಿ ಬಂದಾಗ ಅದೇ ನೋರ್ಮಲ್ ಟೀ ಅವರಿಗೂ ಕೊಟ್ಟು " ಲೆಮನ್ ಟೀ" ಅಂದದ್ದು ಕೇಳಿ "ಲೆಮನ್ ಟೀ ಇಲ್ವಾ..." ಅಂದಾಗ ಸೇರಿದ್ದ ಮಂದಿಗೆಲ್ಲಾ ಜೋರ್ ನಗು...". ಅವನೆಲ್ಲಿ ಲೆಮನ್ ಕೊಡ್ತಾನೋ...ಹುಚ್ ಸೂ.ಮಗ...ಇದಕ್ಕೆ ಟೈಮಿಲ್ಲ. ಇದೇ ಲೆಮನ್, ಇದೇ ಜಿಂಜರ್ ...ಹ್ಹ ಹ್ಹ ಹ್ಹ " ...ಆದರೂ ಚಹಾ ಸೂಪರ್ ಆಗಿತ್ತು. ಚಹಾದ ಸ್ವಾದ ಆರುವ ಮೊದಲೇ ಹೊಸ್ಮನಿ ಸ್ವಿಫ್ಟ್ ಕಾರ್ ನಲ್ಲಿ ಕುಳಿತು ದೂರದಿಂದಲೇ ವಿಶ್ ಮಾಡಿದ.

ಕರಾವಳಿಯ ಜಡಿಮಳೆಯಿಂದ ಹುಬ್ಬಳ್ಳಿಯಲ್ಲಿ ಕಣ್ಣು ತೆರೆದಾಗ ಅಷ್ಟೇನೂ ಪ್ರಖರವಲ್ಲದ ಬಿಸಿಲು. ಬೆಳಗ್ಗಿನ ನಾಶ್ತಾ ಮುಗಿಸಿ ಹೊಸಮನಿಯ ಜೊತೆ ಅವನ ಸುಂದರ ಕುಟುಂಬದಿಂದ ಬೀಳ್ಕೊಂಡು ಸಾಗಿತು ನಮ್ಮ ಕನಸಿನ ಸವಾರಿ ಬಿಜಾಪುರದೆಡೆಗೆ.ಹುಬ್ಬಳ್ಳಿ ಬಿಜಾಪುರ ನಡುವಿನ ೧೬೦ ಕಿ.ಮೀ.ಗಳನ್ನು ಒಂದೇ ಗಂಟೆಯಲ್ಲಿ ತಲುಪುವ ಯೋಚನೆಯೊಂದಿಗೋ ಏನೋ ಕಾರನ್ನು ೧೬೦ ಕಿಮೀ/ಗ ವೇಗಕ್ಕೆ ಒಯ್ದು ಸಿಳ್ಳೆ ಹಾಕತೊಡಗಿದಾಗ ನನಗೂ ಜೊತೆಯಲ್ಲಿದ್ದ ಇನ್ನೊಬ್ಬ ಕರಾವಳಿ ಹುಡುಗ ಯತೀಶನಿಗೆ ಪುಕು ಪುಕು ಶುರು. ಹೇಳಿದ್ರೆ ಎಲ್ಲಿ ಈ ಹೊಸ್ಮನಿ ನಗಾಡ್ತಾನೋ ಅನ್ನೋ ಆತಂಕ. ಒಳ್ಳೆ ಹುಂಬನ ಸಹವಾಸ ಆಯ್ತಲ್ಲ ಅಂದುಕೊಳ್ಳುವಾಗಲೇ ಎದುರಿಗಿದ್ದ ರಸ್ತೆಯ ಕಂಡೀಷನ್ಗೆ ವೇಗವನ್ನು ಕಡಿಮೆ ಮಾಡಲೇ ಬೇಕಾಗಿ ನಿರಾಳಗೊಂಡೆ.ಆಗ ಬಿಚ್ಚಿಕೊಂಡಿತು ಹತ್ತುವರ್ಷಗಳ ಹಳೆಯ ನೆನಪಿನ ಬುತ್ತಿ.

ಈ ಮೊದಲ ಸಲ ಅನ್ನೋ ಶಬ್ದದಲ್ಲೇ ಅದೇನೋ ನಶೆ ಇದೆ.
ಮೊದಲ ಅಳು, ಮೊದಲ ನಗು, ಮೊದಲ ಸೈಕಲ್, ಮೊದಲ ಕ್ರಶ್, ಮೊದಲ ಸ್ಪರ್ಶ, ಮೊದಲ ಮುತ್ತು...ಹೀಗೆ. ಈ ಎಲ್ಲಾ ಮೊದಲಿಗೆ ಒಂದು ಮಾದಕತೆ ಇದೆ, ಹಿಡಿದಿಟ್ಟುಕೊಳ್ಳುವ ಭಾವವಿದೆ, ಮತ್ತೆ ಮತ್ತೆ ನೆನಪಿಸಿಕೊಳ್ಳುವ ಖುಷಿ ಇದೆ. ಆದರೆ ಇಲ್ಲಿ ನೆನಪುಗಳು ಬಿಚ್ಚಿಕೊಂಡದ್ದು, ದೋಸ್ತಿಗಳು ಬೆಸೆದುಕೊಂಡದ್ದು ನನ್ನ ಜೀವನದಲ್ಲಿ ಸಿಕ್ಕಿದ ಮೊದಲ ಕೆಲಸದ ವಿಷಯದಲ್ಲಿ.ಅದು ೨೦೦೨ ರ ಮಳೆಗಾಲದ ದಿನಗಳು. ಸುಲಭ ಇದ್ದ ಇಂಟರ್ ವ್ಯೂ ನ್ನು ಕಷ್ಟಪಟ್ಟು ಪಾಸು ಮಾಡಿದ ಮೇಲೆ ನನಗೆ ಬೆಳಗಾವಿಯ ಇಂಡಾಲ್ ನಲ್ಲಿ ಕೆಲಸ ಸಿಕ್ಕಿದ್ದು, ನಂತರ ನನ್ನೊಂದಿಗೆ ಕೀರ್ತಿ, ಯತೀಶ್, ಈ ಹೊಸ್ಮನಿ, ವಿನಾಯಕ್ ,ಎರಡು  ಜಗ್ಗುದಾದಾಗಳು ಇನ್ನೂ ಹಲವಾರು ಸೇರಿ ವೀಕ್ ಎಂಡ್ ಮಸ್ತಿಗೆ ಏರ್ಪಾಡಾದ ಗ್ರೂಪ್ ಈ BG GROUP.ನಮ್ಮ ಮಂಗಳೂರಿನ ಇಕ್ಬಾಲ್ ಆಗಲೇ ಅಲ್ಲಿ ಝಾಂಡಾ ಊರಿದ್ದ.

ತಲೆಯಲ್ಲಿ ನೂರು ನೆನಪುಗಳ ಮೆರವಣಿಗೆ ಸಾಗುತ್ತಿರುವಾಗಲೇ ಸುಧೀರ್,'ರವಿ ನೋಡೋ, ಈ ಊರಲ್ಲಿ ಬೆಣ್ಣೆಯಂತಹ ಮೊಸರು ಸಿಗ್ತದೆ, ಅವ್ಲಕ್ಕಿ ಮೇಲೆ ಹಾಕಿ ಮೇಲೆ ಚಟ್ನಿ ಪುಡಿ ಹರಡಿಕೊಂಡು ತಿಂದ್ರೆ....ಮ್ಹ್...ಸೂಪರಾಗಿರ್ತದೆ' ಅಂತ ಒಂದು ಸಣ್ಣ ಹೋಟೇಲ್ ಅಂತ ಬೋರ್ಡ್ ಹಾಕ್ಕೊಂಡಿರೋ ಮನೆ ಮುಂದೆ  ಮುಂದೆ ಗಾಡಿ ನಿಲ್ಸಿದ. ಇಳ್ದು ನೋಡ್ತೇನೆ...ಹೋಟೇಲ್ ಮಾತೋಶ್ರೀ...ಕೊರ್ತಿಕೋಲಾರ್ ಅಂತ ಬೋರ್ಡ್ ಇದೆ. ಸೋ ಕೊರ್ತಿಕೋಲಾರ್ ನ ಮೊಸರವಲಕ್ಕಿ ನೋಡೇ ಬಿಡುವ ಅಂತ ಒಳಗೆ ಹೊಕ್ಕಿದ್ವಿ.
'ಮಾವ್ಶೀ...ಚಲೋ ಮೊಸರು ಕೊಡ್ರೀ...ಮಂಗ್ಳುರಿನ ಈ ದೋಸ್ತ್ ರಿಗೆ ಕೊರ್ತಿಕೋಲಾರ್ ನ ಮೊಸರಕ್ಕಿ ರುಚಿ ತೋರಿಸ್ರೀ...' ಅಂದಾಗ ತಲೆ ತುಂಬಾ ಸೆರಗನ್ನು ಹೊದ್ದ ಮಾವ್ಶಿ ನಮ್ಮೆದುರಿಗೆ ಮೊಸರನ್ನು ತಂದು ಇಟ್ರು‌.

ಸಣ್ಣ ಮಣ್ಣಿನ ವಾಟಿಯಲ್ಲಿ ಬೆಣ್ಣೆಯಂತಿದ್ದ ಮೊಸರು ಮಂಗಳೂರಿನ ಐಡಿಯಲ್ ಐಸ್ಕ್ರೀಮ್ ಗಿಂತ ನುಣ್ಣಗಿತ್ತು. ಅವಲಕ್ಕಿ, ಮೇಲೆ ಮೊಸರು ಅದರ ಮೇಲೆ ಎರಡು ತರಹದ ಚಟ್ನಿ ಪುಡಿಯನ್ನು ಹಾಕಿ ತಿನ್ತಾ ಇದ್ರೆ... ಆಹಾ!, ಒಂದೇ ಪ್ಲೇಟ್ ಗೆ ನಿಲ್ಲಲಿಲ್ಲ.ಯತೀಶ್ ಅಂತೂ ಇನ್ನೆರಡು ತರಿಸಿ ಚಪ್ಪರಿಸಿ ತಿಂದ. ' ರವಿ, ಏತ್ ಸೋಕ್ ಉಂಡ್ ಯಾ..' ಅಂತ ಪ್ಲೇಟ್ಗೊಮ್ಮೆ ಹೇಳುತ್ತಾ ತಿನ್ನುತ್ತಿದ್ದ ಅವನನ್ನು ನೋಡಿ ನಗದೇ ಇರಲಾಗಲಿಲ್ಲ.

ಕೊರ್ತಿಕೋಲಾರ್ ಕಡೆ ಬಂದ್ರೆ ಈ ಮೊಸರವಲಕ್ಕಿ ತಿನ್ನೋದನ್ನು ಮಾತ್ರ ಮರಿಬ್ಯಾಡ್ರೀ ಮತ್ತ...

ಪ್ರಯಾಣ ಮುಂದುವರೆಯುವುದು.....

No comments:

Post a Comment