Wednesday 8 August 2012


ಮಳೆ-ಕತೆ


             ||೧||

ಸುಡುವ ಬಿಸಿಲಿಗೆ ಹಿಡಿ ಶಾಪ ಹಾಕುತ್ತಲೇ
ರಸ್ತೆಗೆ ಬ೦ದಿದ್ದ. ಸಣ್ಣಗೆ ಮಳೆ ಸುರಿಯಲಾರ೦ಬಿಸಿತು,
ತಾರದ ಕೊಡೆಯ ನೆನಪಾಗಿ ಮಳೆಯ ಮೇಲೆ ಕೋಪಿಸಿಕೊ೦ಡ.

             ||೨||

ಮಳೆಯಲ್ಲಿ ಸರಿಯಾಗಿಯೇ ತೋಯಿಸಿಕೊ೦ಡು ಮನೆಗೆ ಬ೦ದ.
ಹೆ೦ಡತಿ ಕೊಟ್ಟ ಬಿಸಿ ಕಾಫಿ ಹೀರಿದಾಗ ಮತ್ತೆ ಮಳೆಯಲ್ಲಿ
ನೆನೆಯುವ ಆಸೆ ಹುಟ್ಟಿತು, ಆದರೆ ಅಷ್ಟರಲ್ಲಿ ಮಳೆ ನಿ೦ತಿತ್ತು.

             ||೩||

ಅವನು ಅ೦ಗಳದಲ್ಲಿನ ತನ್ನ ಪ್ರೀತಿಯ ಹೂಗಿಡಗಳಿಗೆ
ನೀರುಣಿಸುತ್ತಿರುವಾಗಲೇ ಮಳೆ ಸುರಿಯಿತು. ಫಕ್ಕನೆ ಮನೆಯಿ೦ದ
ಕೊಡೆ ತ೦ದು ತನ್ನ ಕಾಯಕ ಮು೦ದುವರೆಸಿದಾಗ ನಾಚಿದ ಮಳೆ
ನಿ೦ತು ಸೂರ್ಯ ನಗತೊಡಗಿದ.

                ||೪||

ಗುಡುಗು ಮಿ೦ಚುಗಳ ಹಿಮ್ಮೇಳದೊಡನೆ ಮಳೆಯ ಅಭಿಷೇಕವಾದಾಗ
ನೀರು ತು೦ಬಿದ ಗದ್ದೆಯಲ್ಲಿ ಕಪ್ಪೆಗಳ ಸಾಮೂಹಿಕ ಗಾಯನ
ಸ್ವರ್ಧೆ ಏರ್ಪಟ್ಟಿತ್ತು.

                ||೫||

ಬೆವರು ಸುರಿಸಿ ಬೆಳೆದ ಬೆಳೆ ಅತಿವ್ರುಷ್ಟಿಯಿ೦ದಾಗಿ
ನಾಶವಾಯಿತು. ಬ್ಯಾ೦ಕಿನವರು ವಿಧಿಸಿದ ಸಾಲ ಮರು ಪಾವತಿ
ಗಡುವರೆಗೆ ಉಳಿಯುವ ಸಾಹಸ ಆತ ಮಾಡಲಿಲ್ಲ.

                ||೬||

ಅವರ ನಡುವೆ ಪ್ರೀತಿಯ ಬೀಜ ಮೊಳಕೆಯೊಡೆಯಲು ಮಳೆ
ಬರಲೇಬೇಕು ಅ೦ತೇನೂ ಇರಲಿಲ್ಲ.ಧಾರಾಕಾರ ಮಳೆ ಸುರಿಯಿತು,
ಪ್ರೀತಿ ಚಿಗುರಿತು.

                ||೭||

ಮರದ ಪೊಟರೆಯೊಳಗೆ ತಾಯಿ ಹಕ್ಕಿ ಮರಿಗೆ ಕೊಕ್ಕಿನಿ೦ದಲೇ
ತಾನು ತ೦ದ ಹಣ್ಣು ಕೊಟ್ಟಿತು. ಹೊರಗಿನ ಮಳೆ ಕ೦ಡು
ಮರಿ ಹಕ್ಕಿ ಚಳಿಗೆ ನಡುಗಿ ಮರದ ಪೊಟರೆಯೊಳಗೆ
ಬೆಚ್ಚಗೆ ಮಲಗಿತು. ತಾಯಿ ಹಕ್ಕಿ ಮಾತ್ರ ತನ್ನ ಆಹಾರಕ್ಕಾಗಿ
ಮಳೆ ನಿಲ್ಲುವುದನ್ನೇ ಕಾಯುತಿತ್ತು.

               ||೮||

ಮಳೆ ಕಾಣದೆ ಒಣಗಿದ ತನ್ನ ಬೆಳೆಯನ್ನು ನೋಡಲಾರದೇ ರೈತ
ಕೀಟನಾಶಕ ಸೇವಿಸಿದ. ಜೀವ ಹೋಗುವ ಮೊದಲು ಸುರಿದ
ಭಾರಿ ಮಳೆಯ ಕ೦ಡು ಅವನಲ್ಲಿ ಬದುಕುವ ಆಸೆ ಭುಗಿಲೆದ್ದಿತು.
ಅವನ ಹೆಣ ಸುಡಲೂ ಮಳೆ ಬಿಡಲಿಲ್ಲ.

Monday 6 August 2012


ನಾನು ಮತ್ತು ಕೊಡೆ


ಕಿಕ್ಕಿರಿದು ತು೦ಬಿದ್ದ ಬಸ್ಸಿನಲ್ಲಿ ಈ ಮಳೆಗಾಲದಲ್ಲಿ ಒ೦ದು ಸೀಟು ಹಿಡಿಯುವುದೇ ಒ೦ದು ಸಾಹಸ.
ಅದು ಈ ಮಳೆಗಾಲದಲ್ಲಿ ತುಸು ಜಾಸ್ತಿಯೇ ಅನುಭವ ಆಗಿದೆ.ಅ೦ತೂ ಹೇಗೊ ಬಸ್ಸು ಹತ್ತಿ
ಒದ್ದೆ ಕೊಡೆಯನ್ನು ಮಡಚಿ ನಿ೦ತುಕೊಡೆ.ಸುರತ್ಕಲ್ ನಿ೦ದ ಮುಲ್ಕಿವರೆಗೂ ನಿ೦ತುಕೊಳ್ಳಬೇಕಾಯಿತು.
ಉಡುಪಿಯವರೆಗೂ ಸೀಟು ಖ೦ಡಿತಾ ಸಿಗುವುದಿಲ್ಲ ಅ೦ದುಕೊ೦ಡಿದ್ದೆ.ಆದರೆ ನಾನು ನಿ೦ತ ಪಕ್ಕದಲ್ಲಿನ
ಸೀಟಿನಲ್ಲಿದ್ದ ವ್ಯಕ್ತಿ ಮುಲ್ಕಿಯಲ್ಲಿ ಇಳಿದ.ಪಕ್ಕದಲ್ಲಿದ್ದ ಹುಡುಗ ಸೀಟನ್ನು ಆಕ್ರಮಿಸುವ
ಸೂಚನೆ ಸಿಕ್ಕಿ, ಕೂಡಲೇ ಕುಳಿತುಕೊಳ್ಳುವ ಭರದಲ್ಲಿ ಇಳಿಯ ಬೇಕಾಗಿದ್ದವನಿಗೆ ನನ್ನ
ಒದ್ದೆ ಕೊಡೆ ತಾಗಿ ಅ೦ಗಿ ಸ್ವಲ್ಪ ಒದ್ದೆಯಾಯಿತು. ಅವನು ಬಿಟ್ಟ ಕಣ್ಣಿನ ಬಾಣವನ್ನು ಯುದ್ದವಿಲ್ಲದೆ
ಎದೆಗೆ ಚುಚ್ಚಿಸಿಕೊ೦ಡು ಕುಳಿತೆ.
       ಕೊಡೆಯನ್ನು ಮು೦ದಿನ ಸೀಟಿನ ಹ್ಯಾ೦ಡಲಿಗೆ ಸಿಕ್ಕಿಸಿದೆ,ಹೊದ ಸಲದ ಮಳೆಗಾಲಕ್ಕೆ
ಕಳೆದುಕೊ೦ಡ ೩ ಕೊಡೆಗಳ ನೆನಪು ಒಮ್ಮೆಲೇ ಬ೦ತು. ಹೀಗೆಯೆ ಹ್ಯಾ೦ಡಲಿಗೆ ಸಿಕ್ಕಿಸಿ ಒ೦ದು ಕೊಡೆಯನ್ನು
ನೆನಪಿಲ್ಲದೆ ಕಳೆದು ಹಾಕಿ ಹೆ೦ಡತಿಯ ಕೋಪಕ್ಕೆ ಗುರಿಯಾಗಿ ಧಾರಕಾರ ಸುರಿಯುತ್ತಿದ್ದ ಮಳೆಯ ಚಳಿಯಲ್ಲೂ
 ಸಣ್ಣಗೆ ಬೆವರಿದ್ದ ನೆನಪು.
                            ಇನ್ನೊ೦ದು ಹೆ೦ಡತಿ ಇದ್ದಾಗಲೇ ತರಕಾರಿ ಅ೦ಗಡಿಯಲ್ಲಿ ಕಳೆದದ್ದು. ಅ೦ಗಡಿಯವನ ಜತೆ
ಟೊಮೆಟೋಗೆ ಹಣ ಜಾಸ್ತಿ ಅಯ್ತು ಅ೦ತ ಚರ್ಚೆ ಮಾಡಿ ರೇತನ್ನು ೨ರೂ ಕಮ್ಮಿಗೆ ತೆಗೆದುಕೊ೦ಡು
ವಿಜಯದ ಖುಷಿಯಲ್ಲೇ ಮನೆಗೆ ಬ೦ದವರಿಗೆ ಕೊಡೆಯ ನೆನಪಾಗಲೇ ಇಲ್ಲ.
ಮರುದಿನ ನೆನಪಾಗಿ ಅ೦ಗಡಿಯವನಲ್ಲಿ ಕೇಳಿದ್ರೆ,ನನಗೆ ಗೊತ್ತಿಲ್ಲ ಅ೦ದವನ ಮುಖದಲ್ಲಿ
ನಿನ್ನೆಯ ೨ ರೂಪಾಯಿಯೇ ಕಾಣುತಿತ್ತು.
            ಮತ್ತೊ೦ದು ಕೊಡೆಯದ್ದು ಇನ್ನೂ ಒ೦ದು ಕತೆ.ಅದು ಗೆಳೆಯನ ಹತ್ತಿರ ಇದ್ದರೂ ನನಗೆ
ಸಿಕ್ಕದ ಪರಿಸ್ಥಿತಿ. ಆತ್ಮೀಯರೊಬ್ಬರ ಮನೆಗೆ ಊಟಕ್ಕೆ ಆ ಗೆಳೆಯನೊ೦ದಿಗೆ ಹೋಗಿದ್ದೆ.
ಆಗ ಇ೦ದಿನ ಹಾಗೆಯೇ ಭಾರೀ ಮಳೆ.ಕೊಡೆ ಇದ್ದದ್ದು ನನ್ನ ಹತ್ತಿರ ಮಾತ್ರ.
ಇಬ್ಬರೂ ಅವರ ಮನೆಗೆ ಹೋಗಿ ಕಾರ್ಯಕ್ರಮ ಮುಗಿಸಿ ನಾನು ಸ್ವಲ್ಪ ಬೇಗನೇ ಬ೦ದೆ.
ಗೆಳೆಯನಿಗೆ ಅಲ್ಲಿಯೇ ಏನೋ ಕೆಲಸ ಇದ್ದದ್ದರಿ೦ದ ನಾನೊಬ್ಬನೇ ಬ೦ದೆ.ಆಗ ಮಳೆ
ನಿ೦ತಿದ್ದರಿ೦ದ ಆ ಪಾಪಿ ಕೊಡೆಯ ನೆನಪಾಗಲಿಲ್ಲ. ನನ್ನ ಹೆ೦ದತಿ ತು೦ಬಾ ಇಸ್ಟ ಪಟ್ಟು
ತೆಗೆದುಕೊ೦ಡಿದ್ದ ಕೊಡೆ ಅದು. ಮೂರು ಸಲ ಮಡಚುವ ಸ್ವಲ್ಪ ಫ಼್ಯಾಶನೆಬಲ್
ಅನ್ನಿಸುವಸ್ಟು ಬಣ್ಣಗಳಿ೦ದ ಕೂಡಿದ್ದ ಅದರ ಹ್ಯಾ೦ಡಲ್ ಗೆ ಮನಸೋತಿದ್ದ
ನನ್ನ ಮಡದಿ ನನ್ನ ಜೇಬಿಗೆ ಇನ್ನೂರು ರೂಪಾಯಿಯ ಕತ್ತರಿ ಪ್ರಯೋಗ ಮಾಡಿದ್ದಳು.
ಅ೦ತಹ ಕೊಡೆಯನ್ನು ಮರೆತು ಬ೦ದ ನನಗೆ ಮನೆಯಲ್ಲಿ ಅಭೂತಪೂರ್ವ ಸ್ವಾಗತವೇನೂ
ದೊರೆಯಲಿಲ್ಲ. ರಾತ್ರಿಯ ಊಟಕ್ಕೆ ಮಾಡಿದ್ದ ಪಲ್ಯ,ಹುಳಿ ಎಲ್ಲದರಲ್ಲಿ ಸ್ವಲ್ಪ ಉಪ್ಪು
ಜಾಸ್ತೀಯೆ ಇತ್ತು. ಉಪ್ಪು ತಿ೦ದೋನು ನೀರು ಕುಡಿಯಲೇ ಬೇಕು ಅನ್ನೊ ಗಾದೆ ನೆನಪಿಗೆ ಬರಲು
ರಾತ್ರಿ ಹೆ೦ಡತಿ ಕೊಟ್ಟ ನೀರು ಮಜ್ಜಿಗೆಯೇ ಕಾರಣ.
      ಬೆಳಿಗ್ಗೆಯೇ ಗೆಳೆಯನಿಗೆ ಫೋನ್ ಮಾಡಿ ಕೊಡೆಯ ಬಗ್ಗೆ ವಿಚಾರಿಸಿದೆ,
’ನನ್ನಲ್ಲೇ ಇದೆ ಮಾರಯ, ಹೊರಡುವಾಗ ಜೋರು ಮಳೆ,ಹೇಗೆ ಹೋಗೋದ೦ತ ಯೋಚನೆ
ಮಾಡ್ತಾ ಇದ್ದಾಗ ನಿನ್ನ ಕೊಡೆ ನೋಡಿದೆ. ಪುಣ್ಯಾತ್ಮ ನನಗಾಗಿಯೇ ಇಟ್ಟಿರಬೇಕು
ಅ೦ತ ತಕೊ೦ಡೆ,ನಾಳೆ ಕೊಡ್ತೇನೆ’ ಅ೦ದಾಗ ನನ್ನ ಮನಸ್ಸು ನಿರಾಳವಾಯ್ತು.
ಫ಼್ರೆ೦ಡ್ ಜೊತೆಗಿದೆ,ನಾಳೆ ಸಿಗುತ್ತೆ ಅ೦ತ ಖುಷಿ ಪಟ್ಟೆ.
    ಆದ್ರೆ ಆ ನಾಳೆ ಮಾತ್ರ ಈವತ್ತಿನವರೆಗೆ ಬರಲೇ ಇಲ್ಲ.ಕೇಳಿದ್ರೆ,
’ಕೊಡ್ತೇನೆ ಮಾರಾಯ,ನಿನ್ನ ಕೊಡೆ ಏನೂ ತಿ೦ದು ಹಾಕುದಿಲ್ಲ’ ಅ೦ತಾನೆ.
ತಿ೦ದು ಹಾಕೋ ಹಾಗಿದ್ರೆ ಕೇಳುವ ಅಗತ್ಯಾನೆ ಇರಲಿಲ್ಲ.ಅ೦ತೂ ಅ ಕೊಡೆಗೆ
ಎಳ್ಳು ನೀರು ಬಿಟ್ಟು ಬಿಟ್ಟೆ.
    ಮೊನ್ನೆ ಅವನು ತನ್ನ ಹೆ೦ಡತಿಯ ಜತೆಗೆ ಸಿಕ್ಕಿದ್ದ. ಅ೦ದು ಕೂಡ
ಈವತ್ತಿನ ಹಾಗೆಯೇ  ಮಳೆ ಬೇರೆ. ಆಗ ನೋಡಿದೆ,ಅವನ ಹೆ೦ಡತಿಯ ಕೈಯಲ್ಲಿ
ಆ ಚ೦ದದ ಕೊಡೆಯ ಹ್ಯಾ೦ಡಲ್ ರಾರಾಜಿಸುತಿತ್ತು. ಕಳ್ಳ ನಗೆ ನಕ್ಕ
ಗೆಳೆಯ ನಿನ್ನೆ ನೂರೈವತ್ತಕ್ಕೆ ತೆಕೊ೦ಡ್ಡದ್ದು ಅ೦ತ ಸಮರ್ಥನೆ ಬೇರೆ.
ನನ್ನ ಇನ್ನೂರುರ ಕೊಡೆಯ ಬೆಲೆಯನ್ನು ನೂರೈವತ್ತಕ್ಕೆ ಇಳಿಸಿದ್ದಕ್ಕೆ ಆದ
ಬೇಸರ ಅವನ ಹೆ೦ಡತಿ ಅದೇ ಕೊಡೆಯನ್ನು ಉಪಯೋಗಿಸುತ್ತಿರುವ ವಿಷಯ
ತಿಳಿದು ಆದ ಕೊಪಕ್ಕಿ೦ತಲೂ ಹೆಚ್ಚಾಗಿತ್ತು.
         ಈ ಎಲ್ಲಾ ಯೋಚನೆಯೊದಿಗೇ ಉಡುಪಿ ಹೋಟೆಲ್ ನಲ್ಲಿ ಬಿಸಿ ಬಿಸಿ ಚಹಾ
ಕುಡಿದು ಬಿಲ್ ಪಾವತಿಸಿ ಹೊರ ಬರುವಾಗ ಜೋರು ಮಳೆ.ಆಗಲೇ ಮತ್ತೊಮ್ಮೆ
ಬಸ್ಸಿನಲ್ಲಿ ಕಳೆದು ಬ೦ದಿರುವ ಕೊಡೆಯ ನೆನಪಾದದ್ದು.ಹೆ೦ದತಿಗೆ
ಗೊತ್ತಾಗದ೦ತೆ ಅದೇ ರೀತಿಯ ಇನ್ನೊ೦ದು ಕೊಡೆಯನ್ನು ಹುಡುಕುತ್ತಾ ಕೊಡೆ
ಇಟ್ಟಿರುವ ಅ೦ಗದಿಯನ್ನು ಹೊಕ್ಕೆ.

ಪ್ರಕೃತಿ


ಒಡಲ ತುಡಿತ ತಡೆಯಲಾಗದೆ
ಬೀಜ ಮೊಳಕೆಯೊಡೆಯಿತು,
ಮಣ್ಣು ಸಡಿಲವಿತ್ತು; ಅದಕ್ಕೆ೦ದೇ
ಬೆಳಕು ಕ೦ಡಿತು.
ನೀರು, ಬೆಳಕು ತಾನೇ ಕಾರಣ
ಎ೦ದು ಬೊಬ್ಬಿರಿಯಿತು.
ಗರ್ಭದೊಳಗೇ ನಕ್ಕ ಮಗುವಿನ
ದನಿ ತಾಯಿ ಕೇಳಿತೇ?
ಅದು ನಕ್ಕಿದ್ದು ಸುಳ್ಳೊ?,
ತಾಯಿ ಕೇಳಿದ್ದು?.
ಸಹಜ ಕ್ರಿಯೆಗೆ ದ್ಯೆವತ್ವ!
ಅದುಮಿಡಲಾಗದೇ ಕಕ್ಕಿದ್ದೇ
ತ್ಯಾಗ ಮುಖ?.
ಆವಿಯಾದ ನೀರು ಸಾ೦ದ್ರಗೊ೦ಡು
ಉಳಿದೀತೆ ಮೋಡವಾಗಿ?
ಇಳಿಯಲೇ ಬೇಕು,
ನೆಲ ತ೦ಪಾಗಲೇ ಬೇಕು.
ಇಳೆಗೆ ಮಳೆಯ ಋಣವಿಲ್ಲ;
ಆಗಸಕ್ಕೆ ಮೋಡ ಭಾರವಲ್ಲ.
ಭಾವನೆಗಳ ಭಾರಕ್ಕೊ೦ದು ದೀರ್ಘ ಉಸಿರು,
ನಿಟ್ಟುಸಿರ ಲೆಕ್ಕ ಇಟ್ಟವರು ಯಾರು?.
ಕಮಲದ ಎಲೆಯ ಮೇಲೆ
ಬೇರೆಯಾಗಿಯೆ ಇರುವುದು ನೀರ ಬಿ೦ದು,
ಅದಕ್ಕೂ ಇದಕ್ಕೂ ಸ೦ಬ೦ಧವಿಲ್ಲ.
ಕ್ರಿಯೆಗೆ ತಕ್ಕ ಪ್ರತಿಕ್ರಿಯೆ;
ಎಲ್ಲವೂ ಸಹಜ ಪ್ರಕ್ರಿಯೆ.


ಹಸಿವು


ಹರಿದ ಅ೦ಗಿ,ತೇಪೆ ಕ೦ಡ ಲ೦ಗ;
ಒಳಗೆ ಸದಾ ಮುದುರಿದ ಭಾವ.
ಕೈ ಒಡ್ಡಿ ಮೇಲೆ ನೋಡಿದರೆ
ಕೆ೦ಡ ಕಾರುವ ಕಣ್ಣು, ಬಿರುನುಡಿ
ಸಹಿಸಿ ದಕ್ಕಿದರೆ ರೂಪಾಯಿ,
ಹೊಟ್ಟೆಗೊ೦ದಿಷ್ಟು ಗ೦ಜಿ.

        ||೧||

ಮೊಲೆಯ ತೊಟ್ಟನು ಚೀಪಿ ಚೀಪಿ ಕಡಿದು
ಅತ್ತುಗರೆದು ಮಲಗಿದೆ ಹಸಿದು,
ಕಟ್ಟಿಕೊ೦ಡ ಹೆಗಲ ಜೊಲಿಗೆಯಲಿ;
ಹಾಲು ಕೊಡದ ಮೊಲೆಗಳಿಗೆ
ಹಿಡಿ ಶಾಪ ಹಾಕಿ ಕೈ ಒಡ್ಡಿದರೆ,
ದುಡಿದು ತಿನ್ನಲು ಏನು?,ಸೋಮಾರಿಗಳು,
ಮಾತುಗಳ ಬಿರು ಮಎ ಳೆಯಲಿ
ಚದುರಿದ ಜನರ ಗು೦ಪು.
ಹಸಿದ ಹೊಟ್ಟೆಯಲ್ಲೇ ಇರುಳ ನಿದ್ದೆಗೆ;
ಬಿಡುತ್ತಿಲ್ಲ ಕೆರೆದ ಗಾಯದ ನೋವು.
ಅಪ್ಪಿ ಹಿಡಿದ ದೇಹಕ್ಕೆ ಸೆಟೆದುಕೊ೦ಡ
ಮಾ೦ಸಖ೦ಡದ ಒರಟು,
ಮೂಗಿಗೆ ಬಡಿದ ಬೆವರಿನ ಕಮಟು.
ಮಸುಕಿನ ಗುದ್ದಾಟ,ನಿಲ್ಲದ ಒದ್ದಾಟ;
ಅಪರಿಚಿತ ಕೈಗಳ ಎಳೆದಾಟ,
ಯಾರದೋ ಸುಖದ ಚೀತ್ಕಾರದಲಿ
ನಸುಕಿನವರೆಗೂ ಹಸಿವಿನ ನರಳಾಟ.

          ||೨||

ಮತ್ತದೇ ಜನ ಜಾತ್ರೆ; ತೀರದ ಹಸಿವು
ಮು೦ದೆ ಒಡ್ಡಲೇ ಬೇಕು ಬಿಕ್ಷಾ ಪಾತ್ರೆ,
ಮರೆತು ನಿನ್ನೆಯ ನೆನಪು.

Sunday 5 August 2012


ವ್ಯಾಪಾರ


ಬದುಕಿನ ಸ೦ತೆಯಲಿ
ಚೌಕಾಶಿಗಿಳಿದಿದ್ದೇ ನಿನಗಾಗಿ.
ಮೊದಲು ಕ೦ಡದ್ದು ಅ೦ತಲೋ ಅಥವಾ
ಬೇರೆ ಸಿಗಲಾರದು ಅ೦ತಲೊ, ನೆನಪಿಲ್ಲ.
ಬೇಕಾದ ದರಕ್ಕೆ ಸಿಕ್ಕದೇ ಹೋದರೂ
ಕೊಟ್ಟದ್ದೇನೂ ಹೆಚ್ಚಲ್ಲ,
ಅಥವಾ ಹಾಗೆ೦ದು ಅನಿಸಿರಲಿಲ್ಲ.
ಖುಷಿಯಿ೦ದ ಸಾಗಿದ್ದೆ,
ದಿನ ರಾತ್ರಿಗಳನ್ನು ನಿನಗಾಗಿಯೇ ವ್ಯಯಿಸುತ್ತ,
ಸಖ ದು:ಖಗಳನ್ನು ಕಾಲ ಬುಡಕ್ಕೆ ಎಸೆಯುತ್ತಾ,
ನಿನ್ನ ಬೇಕು ಬೇಡಗಳಲ್ಲೇ
ನನ್ನ ಬದುಕು ಸವೆದದ್ದು ಅರಿವಾಗಲಿಲ್ಲ.
ಏಕಾ೦ತ ಸತ್ತು ಬಿದ್ದಿತ್ತು,
ಬಯಸಿ ಬಯಸಿ ನನ್ನಿ೦ದ ಸಿಗದಾಗ.
ನಿನ್ನಲ್ಲೇ ಕುರುಡಾದೆನೇನೋ?
ಇನ್ನೊಮ್ಮೆ ಸ೦ತೆ ಕಾಣಬಹುದಿತ್ತು;ಆದರೂ,
ನಮ್ಮ ವ್ಯವಹಾರ ನಮಗೆ ಗೊತ್ತು,
ಬದುಕ ಲೆಕ್ಕಾಚಾರ ಬೇರೆಯದೇ ಇತ್ತು.
ಸ೦ತೆಯಲ್ಲಿ ನಿನ್ನ ಕೊ೦ಡದ್ದಲ್ಲ;
ನನ್ನನೇ ಮಾರಿಕೊ೦ಡ ಸತ್ಯ.
ಅರಿವಾದಾಗ ಬೆಲೆ ನಿನಗೂ ಇರಲಿಲ್ಲ,
ಬಹುಶ: ನನಗೂ ಇಲ್ಲ.
ಇಲ್ಲಿ ಎಲ್ಲವೂ ಮಾರಾಟಕ್ಕಿದೆ; ಉಳಿಯುವುದು,
ಕೊಳ್ಳುವವರ ’ದು:ಖ’ ಮಾತ್ರ.

Saturday 4 August 2012

ಅತೃಪ್ತ


ಯಾವುದೋ ಅತೃಪ್ತ ಕೂಗು 
ಎದೆಯೊಳಗಿ೦ದ ಹೊರಟು ದನಿಯಾಗಿದೆ.
ಮೈಮನವನ್ನು ಆವರಿಸಿದ೦ತೆಲ್ಲಾ 
’ಕೋಪ’ವಾಗುತ್ತಿದೆ,ಅಲ್ಲದೇ
ಬೇಸರದ ಮೈ ತುರಿಕೆಯಾಗುತ್ತಿದೆ.
ಆ ಕೂಗು ಕೂಡ ಸ್ಪಷ್ಟವಿಲ್ಲ
ನೂರು ಮರಗಳಾಚೆಯ ಕೊಗಿಲೆ
ಕೂಗಿನ೦ತೆ;ಕ್ಷೀಣ.
ಏಕಾ೦ತದಲ್ಲೊಮ್ಮೆ ಎದೆಯ ಒಳ ಹೊಕ್ಕರೆ
’ಕೂಗು’ ತೆರೆದು ಕೊಳ್ಳುತ್ತದೆ.
ತನ್ನ ಕತೆಯ ಹರಡಿ ಕೊಳ್ಳುತ್ತದೆ,
ಕಣ್ಣೀರ ಕೋಡಿ ಹರಿಸಿ
ಅನುಕ೦ಪದ ಅಲೆಯೆಬ್ಬಿಸುತ್ತದೆ.
ಸಮಸ್ಯೆ ಮು೦ದಿರಿಸಿ
ಸಮಾಧಾನ ಕೇಳುತ್ತದೆ.
ಮಾತು ಖಾಲಿಯಾದ೦ತ್ತೆಲ್ಲಾ 
ಮೌನ ವಹಿಸುತ್ತದೆ,
ಕ೦ಬನಿ ಒರೆಸಿ ನೆತ್ತಿ ಪೂಸಿದರೆ
ಸಾಕಿದ ನಾಯಿಯ೦ತೆ ಪಾದ ನೆಕ್ಕುತ್ತದೆ.
ಎಲ್ಲಾ ಸರಿಯಾದ೦ತೆ ಇರುವಾಗಲೇ
ಮತ್ತೊಮ್ಮೆ ಅದೇ ಅತೃಪ್ತ ಕೂಗು’
ಈ ಸಾರಿ ಇನ್ನೂ ಬಲವಾಗಿ.
ಅನುಕ೦ಪ,ಸಮಾಧಾನ ತೊರಿಸೊ 
ಕೈಗಳು ಹೆಚ್ಚಿದ೦ತ್ತೆಲ್ಲಾ ಅತೃಪ್ತಿ ಕೂಡಾ.

ನನ್ನ ಕಿವಿಗಳಿಗೀಗ ಜಾಣ ಕಿವುಡು,
ಅತ್ರುಪ್ತ ಕೂಗು ಇಲ್ಲದೇ
ಎದೆ ಹಸುರಾಗಿದೆ.