Tuesday, 18 November 2014

ಉರಿದು ಉರಿಸುವುದೆಂದರೆ
ಬಹುಶಃ ಇದೇ ಇರಬೇಕು.
 ಅಲ್ಲಿಯೇ ನಿಂತು ನಗುತ್ತಿಯ,
ನಿನಗದೇ ಸುಖ ಅನ್ನಿಸಿದರೆ
ಅಲ್ಲಿಯೇ ಇರು,
ನನ್ನ ಒತ್ತಾಯವೇನೂ ಇಲ್ಲ.
ದೀಪದ ಮೋಹಕ್ಕೆ
ಹಾರುವ ಪತಂಗವನ್ನೇನೂ
ನಾನು ತಡೆಯುವುದಿಲ್ಲ.
ತನ್ನ ಮಿತಿಯ ಮೀರದ ಮಾತಿನೊಂದಿಗೆ
ನನ್ನ ಮೌನಕ್ಕೂ ಅಸಹನೆ ಇದೆ.

ಹಸಿರ ಬಯಲಿನಲ್ಲಿ
ಜಿಂಕೆಗಳು ಸರಸವಾಡುವಾಗ,
ಮನೆಗೇ ಕರೆದುಕೊಂಡು ಬರಬೇಕು
ಅಂತ ನನಗೂ ಅನ್ನಿಸುವುದುಂಟು.
ಮರುಕ್ಷಣವೇ ಹಸಿರಿನ ನೆನಪಾಗುವುದು.
ನನ್ನ ಮನೆಯ ಮರುಭೂಮಿಯಲ್ಲಿ
ಬಹುಶಃ ಅವು ಬದುಕಲಾರವು.
ಮರುಕ್ಷಣ ಅವುಗಳ ಸರಸ ಕಂಡು
ಖಿನ್ನನಾಗಿ ವಾಪಸಾಗುತ್ತೇನೆ.

ಹೀಗೂ ಇರಬಹುದಿತ್ತು
ಒಂದರೊಳಗೊಂದು ಬೆಸೆದುಕೊಂಡು
ಆಲದ ಮರದಲ್ಲಿ ಕೂರುವ ಹಕ್ಕಿಗಳಂತೆ.
ಬೇಡನೊಬ್ಬ ಕಲ್ಲು ಹೊಡೆದರೆ
ಪುರ್ರನೆ ಹಾರಿ; ತಿರುಗಿ ಮತ್ತೆ
ಬಂದು ಕೂಡುವಂತೆ.
ನಗುವ ಚಿಲಿಪಿಲಿ ಸದ್ದಲಿ
ಬೇಡ, ಕಲ್ಲು ಎರಡೂ ಮರೆವಂತೆ.
ಯಾಕೆ ಕಲ್ಲನ್ನೇ ನೆಪ ಮಾಡಿ
ದೂರ ಕುಳಿತೆ?.

ಮಾತಿನ ನಿರೀಕ್ಷೆ ಇದ್ದಲ್ಲೇ
ಮೌನಕ್ಕೆ ಮೊರೆ ಹೋಗುವ
ನನ್ನ ಹೇಡಿ ಮನಸ್ಸಿನ ಬಗೆಗೆ
ನನಗೂ ಕೋಪವಿದೆ.
ಕೋಪ ಕಳೆದು ಬೆಳಕಾದಾಗ
ನಿರಾಳಗೊಳ್ಳುತ್ತೇನೆ.
ಗೆಲ್ಲಿಸದಿದ್ದರೂ ನನ್ನನ್ನು ಸಾಯಿಸುವುದಿಲ್ಲ.
ಮತ್ತೆ ಬದುಕು ಯಥಾ ಪ್ರಕಾರ ಸಾಗುತ್ತದೆ.
ನನ್ನ ಈ ಮನಸ್ಸಿನ ಬಗ್ಗೆ ಯೋಚಿಸಿದಷ್ಟೂ
ಪ್ರೀತಿ ಉಕ್ಕುತ್ತದೆ.

No comments:

Post a Comment