Saturday 19 May 2018

ಭೀಷ್ಮನಂತೆಯೇ ಅವನಿನ್ನೂ
ಶರಶಯ್ಯೆಯಲ್ಲಿ ಮಲಗಿದ್ದಾನೆ,
ಎದೆಗೆ ನಾಟದ ಬಾಣದಿಂದಾಗಿ
ಜೀವವಿನ್ನೂ ಹಿಡಿದುಕೊಂಡು.

ಕಿಟಕಿಯಿಂದ ಇಣುಕುವ ಕೋಲು ಬಿಸಿಲಿಗೆ
ಅವನು ಮೊದಲಿನಂತೆ ದೃಷ್ಠಿ
ನೆಡುವುದಿಲ್ಲ,
ಹೊರಗಿನ ಗದ್ದಲಗಳಿಗೆ
ಅವನ ಕಿವಿಗಳು ಮೊದಲಿನಂತೆ
ತೆರೆಯುವುದೂ ಇಲ್ಲ.
ಆದರೂ ಅವನ ಕಾತರದ ಕಣ್ಣುಗಳು
ಕತ್ತಲಲ್ಲೂ ಮಿನುಗುತ್ತವೆ,
ಎಂದೋ ಬೀಳುವ ನಕ್ಷತ್ರದ
ನಿರೀಕ್ಷೆಯಲ್ಲಿ ಹಣ್ಣಾಗುತ್ತಾ;
ಮೈಯೆಲ್ಲಾ ಕಣ್ಣಾಗುತ್ತಾ...
ಆ ಮುಖಾಮುಖಿಯಲ್ಲಿ ಅವನಲ್ಲೊಂದು
ಕೊನೆಯ ಪ್ರಾರ್ಥನೆಯಿದೆ!

ಹಾಗಂತ ಈ ಕುರುಕ್ಷೇತ್ರದ
ಯುದ್ಧವನ್ನು ಪೂರ್ತಿಯಾಗಿ
ನೋಡಲೇಬೇಕೆನ್ನುವ ಹಪಾಹಪಿಯೇನೂ
ಅವನಿಗೆ ಇದ್ದಂತಿಲ್ಲ.
ಯಾರ ಸೋಲು ಗೆಲುವಿನ ಲೆಕ್ಕಾಚಾರದಲ್ಲಿ
ಅವನಲ್ಲಿ ಅಸಕ್ತಿಯೂ ಇಲ್ಲ.
ಅಷ್ಟಕ್ಕೂ ಅವನು
ಯಾರ ಹಂಗಿನ ತುತ್ತಿಗೂ ಬಿದ್ದವನಲ್ಲ!

ಆದರೆ,
ಅವನಲ್ಲಿ ಈಗ
ನಿಜಕ್ಕೂ ಆಯ್ಕೆಗಳು ಉಳಿದಿಲ್ಲ;
ಯಾಕೆಂದರೆ ಅವನು
ಇಚ್ಛಾಮರಣಿಯಲ್ಲ!

No comments:

Post a Comment