Wednesday 9 September 2015

ಮೊದಲ ನುಡಿ

ಕವನ ಹೇಗೆ ಹುಟ್ಟುತ್ತದೆ ಎಂಬುವುದನ್ನು ವ್ಯಾಖ್ಯಾನಿಸುವುದು ಸುಲಭ ಸಾಧ್ಯವಾದ ಮಾತಲ್ಲ. ಯಾಕೆಂದರೆ ಕವನ ಭಾವ ಜನ್ಯವಾದದ್ದು. ಭಾವವು ಅಮೂರ್ತವಾದದ್ದು. ಆದ್ದರಿಂದ ಭಾವದಿಂದಾದ ಕಾವ್ಯದ ಪ್ರಾದುರ್ಭವವೂ ಕೂಡ  ಮೂರ್ತೀಕರಿಸಲು ಅದು ಲೇಖನಿಯ ಮೊನೆಗೆ ಸಿಗುವ ಗಣಿತವಲ್ಲ. ಅದು ಅಗಣಿತ. ಅದು ಗಣಿತವೇ ಆಗಿದ್ದರೆ ಎಲ್ಲರೂ ಕವಿಗಳಾಗುತ್ತಿದ್ದರು. ಕವನಕ್ಕೆ ಛಂದಸ್ಸಿನ ಗಣಿತವಿದೆ.ಆದರೆ ಅದೂ ಕೃತಕ ಗಣಿತವಲ್ಲ. . ಕವಿಯ ಅಂತರಾಳದ ಅನಂತ ಭಾವಗಳು ಅಮೂರ್ತ ತತ್ತ್ವಾನುಸಂಧಾನದಲ್ಲಿ ಅಕ್ಷರಗಳ ಸ್ಥೂಲರೂಪವನ್ನು ತಾಳು ಪ್ರಕ್ರಿಯೆ ಲಾಸ್ಯವಿದು.ಆದರೆ ಕವನಗಳಿಗೆ ಛಂದಸ್ಸೇ ಪ್ರಧಾನ ಲಕ್ಷವಾಗಿ ಈಗ ಉಳಿದಿಲ್ಲ ಎಂಬುವುದು ಗಮನಾರ್ಹ ಅಂಶ.
ಈ ಸಾರಸ್ವತ ಲೋಕದಲ್ಲಿ ಛಂದೋಬದ್ಧವಾದ ಹಾಗೂ ಛಂದೋಬದ್ಧವಲ್ಲದ ಕವನಗಳ ಎರಡೂ ಪ್ರಕಾರಗಳಿಗೂ ಸಮಾನ ಮನ್ನಣೆ ಇದೆ.ಎರಡೂ ಪ್ರಕಾರಗಳಲ್ಲೂ ಕಾವ್ಯಕಲಾ ತತ್ತ್ವಗಳ ಸಮೃದ್ಧಿ ಇರಬೇಕು. ಈ. ಕಲಾ ತತ್ವ್ತಗಳ ಕವನ ಬರೆಯುವುದು ಸುಲಭದ ಮಾತಲ್ಲ.ಒಂದು ವಿಷಯದ ಬಗ್ಗೆ ಬರೆಯಲು ಹೊರಟರೆ ಕವನವಾಗದು ಅದು ಬರೆಯಲ್ಪಡಬೇಕು. ಯಾವುದೇ ಒಂದು ವಸ್ತು ಅಥವಾ ಸನ್ನಿವೇಶವನ್ನು ಕಂಡ ಕವಿಯ ಬುದ್ಧಿ ಅದನ್ನು ಗ್ರಹಿಸುತ್ತದೆ. ಮತಿ ಚಿಂತಿಸುತ್ತದೆ. ಪ್ರಜ್ಞೆ ಹೊಸ ಹೊಸ ಚಿಂತನೆಯನ್ನು ಮಾಡುತ್ತದೆ. ಪ್ರತಿಭೆ ತಕ್ಷಣವೆ ಅದಕ್ಕೆ ಸ್ಪಂದಿಸಿದಾಗ ಮನಸ್ಸು ಕವನ ಕಟ್ಟುತ್ತದೆ. ಈ ಪ್ರತಿಭೆ ನಿತ್ಯ ನೂತನವಾಗಿದ್ದು ಸಾರ್ವತ್ರಿಕವಾಗದೆ ಅಪೂರ್ವವಾಗಿದೆ. ಪ್ರತಿಭೆ ಇಲ್ಲದೆ ಯಾರೂ ಕವಿಗಳಾಗಲು ಸಾಧ್ಯವಿಲ್ಲ. ಆದ್ದರಿಂದಲೇ ಕವಿಗೆ ಸಮಾಜದಲ್ಲಿ ವಿಶೇಷ ಮನ್ನಣೆಯಿದೆ.
ಉಪನಿಷತ್ತಿನಲ್ಲೇ “ಕವಿರ್ಮನಿಷೀ ಪರಿಭೂಃ ಸ್ವಯಂ ಭೂಃ” ಎಂಬ ಮಾತಿದೆ. ಮೊದಲು ಕವಿಯೂ ಪುರೋಹಿತನೂ ಒಬ್ಬನೆ ಆಗಿದ್ದ .ಹಾಗಾಗಿ ಅವನಿಗೆ ಆ ಕಾಲದಲ್ಲೇ ಅಪಾರ ಗೌರವವಿತ್ತು.

ಕಾವ್ಯ ಅಂದರೆ ಸತ್ತ್ವಯುತ ಭಾವಗಳ ಒಂದು ತೆರನಾದ ಹರಿವು. ಕವಿಯ ಕಲ್ಪನೆಯ ಅಭಿವ್ಯಕ್ತಿಯೇ ಕಾವ್ಯ. ಕಾವ್ಯಕ್ಕೆ ಯಾವುದೂ ವಸ್ತುವಾಗಬಲ್ಲುದು ಅದಕ್ಕೆ ನಿರ್ಬಂಧವಿಲ್ಲ. ಕವಿ ಬರೆಯುವುದು ಭಾವಸತ್ಯವನ್ನೇ ಆದರೂ ಅಲ್ಲಿ ಬಾಹ್ಯ ಸತ್ಯವೇ ಅದರ ಆತ್ಮವಾಗಿರುತ್ತದೆ.

ಯುವಕವಿ ಶ್ರೀ ರವೀಂದ್ರ ನಾಯಕರ ಈ ಕವನ ಸಂಕಲನ ಅವರ ಸ್ಫೂರ್ತಿಗೆ ಸಾಕ್ಷಿಯಾಗಿ ನಿಲ್ಲಬಲ್ಲುದು. ಬಹುಶಃ ಈ ಕವಿಯ ಆರಂಭದ ಕವನ ಸಂಕಲನವಿದು. ಹಾಗಾಗಿ ಅವರ ಪ್ರತಿಭೆಯನ್ನು ಪ್ರೋತ್ಸಾಹಿಸುವುದು ಅವರಿಗಿಂತ ಹಿರಿಯವನಾದ ನನ್ನ ಕರ್ತವೆಂದು ಬಗೆದು ಮುನ್ನುಡಿಯನ್ನು ಬರೆಯಲು ಒಪ್ಪಿಕೊಂಡೆ. ಇವರು ಆಯ್ದುಕೊಂಡ ವಸ್ತುವನ್ನು ಕಾವ್ಯವಾಗಿ ಅಭಿವ್ಯಕ್ತಿಸಲು ಹೊರಟಾಗ ಹಲವೆಡೆ ತುಸು ದೀರ್ಘಸೂತ್ರವಿದ್ದರೂ, ಕೆಲವೆಡೆ ಶಬ್ದಗಳ ಸಶಕ್ತ ಪ್ರಯೋಗದಲ್ಲಿ ಹಿಂದುಳಿದಂತೆ ಕಂಡರೂ ಇವರ ಪ್ರತಿಯೊಂದು ಕವನಗಳಲ್ಲೂ ಅನೇಕ ಮಹತ್ತ್ವಪೂರ್ಣ ಸಾಲುಗಳು ನಮ್ಮ ಗಮನ ಸೆಳೆಯುತ್ತದೆ.

ಅವರ ಉರಿದು ಉರಿಸುವುದೆಂದರೆ ಕವನವನ್ನು ಗಮನಿಸಿ... ನಾವು ತೀರವಾಗಿ ಬಯಸಿದವರು ನಮಗೆ ಸಿಗದೆ ದೂರದಲ್ಲೇ ನಿಂತು ಮರೀಚಿಕೆಯಾಗಿ ದ್ವೇಷದ ಉರಿಯಲ್ಲಿ ಉರಿದು ಸಿಗುವಂತೆ ಅಣಕಿಸಿ ನಗತೊಡಗಿ ಸಿಗದೆ ನಮ್ಮ ಹೊಟ್ಟೆ ಉರಿಸಿದರೆ ಹೇಗಾಗಬೇಡ.

ಅದನ್ನೇ ರವೀಂದ್ರ ನಾಯಕರ

"ಉರಿದು ಉರಿಸುವುದೆಂದರೆ ಬಹುಶಃ ಇದೇ ಇರಬೇಕು

ಅಲ್ಲಿಯೆ ನಿಂತು ನಗುತ್ತಿಯ "

ಎಂದು ವಿಡಂಬಿಸಿದ್ದಾರೆ.

ಮತ್ತೆ ಹೇಳುತ್ತಾರೆ ನಿನಗದೆ ಸುಖವೆನಿಸಿದರೆ ಅಲ್ಲಿಯೇ ಇರು. ತಾನು ಬಯಸಿದ್ದನ್ನು ತನಗೆ ಸಿಗದಿದ್ದರೂ ಅದರ ಸುಖವನ್ನೇ ಬಯಸುವ ಪ್ರೇಮಪೂರ್ಣ ಮನಸ್ಸಿನ ಸ್ಥಿತಿಯದು. ಪ್ರೀತಿಯೆಂದರೆ ಸಾಂಗತ್ಯದ  ಅನುಭವವೇ ಆಗಬೇಕೆಂದೇನಿಲ್ಲ. ಆತ್ಮನೂ ಸಂಧಾನವೂ ಆಗಬಲ್ಲುದಲ್ಲವೆ? ಹಾಗಾಗಿ ಜಿಂಕೆಗಳು ಆಟವಾಡುವಾಗ ಅದನ್ನು ಮನೆಗೆ ಕರಕೊಂಡು ಬರಬೇಕು ಅನಿಸಿದರೂ ಈ ಕವಿಗೆ ತಕ್ಷಣ ಹುಲ್ಲಿನ ನೆನಪಾಗಿ ಮನೆ ಅವುಗಳಿಗೆ ಮರುಭೂಮಿಯಾಗಬಹುದು. ಅವು ಮನೆಯ ವಾತಾವರಣದಲ್ಲಿ ಬದುಕಲಾರವು ಎಂಬ ಸತ್ಯ ತಕ್ಷಣದಲ್ಲೇ ಅರಿವಾಗುತ್ತದೆ. ಪ್ರಕೃತಿಯಲ್ಲಿ ಆನಂದ ನಾದದಲ್ಲಿ ರಮಣೀಯ ಲವಲವಿಕೆಯಲ್ಲಿ ಹಾರಾಡುತ್ತಿದ್ದ ಗಿಳಿಯನ್ನು ಪಂಜರದೊಳಗಿಟ್ಟರೆ ಕೃತಾರ್ಥವೇನು? ನಮ್ಮ ಪ್ರೀತಿಯಲ್ಲಿ ಚಿನ್ನದ ಪಂಜರದಲ್ಲೆ ಇಟ್ಟರೂ ಗಿಳಿಗದು ಸ್ವರ್ಗವಲ್ಲ.

ಇವರ ‘ನನ್ನೊಲವಿಗೆ’ ಕವನದಲ್ಲಿ ಚತುರ್ಮಾತ್ರಾ ಲಯವಿದೆ. ಉದಾ:
ಪ್ರೇಮದ | ಶರಧಿಗೆ |ಬೀಸಿದ |ಬಲೆಯಲಿ |

ಕವನದಲ್ಲಿ ರಸ ಧ್ವನಿ ಔಚಿತ್ಯ ಎಂಬ. ರತ್ನತ್ರಯಗಳು ಬಹಳ
ಮುಖ್ಯಪಾತ್ರ ವಹಿಸುತ್ತದೆ. ರಸವಿಲ್ಲದೆ ಧ್ವನಿಯಿಲ್ಲದೆ ಔಚಿತ್ಯವಿಲ್ಲದೆ ಕವನಗಳು ಜೀವಿಸಲಾರವು. ‘ಧ್ವನಿ’ ನೇರವಾಗಿ ಸಾಕ್ಷಾತ್ಕಾರಗೊಳ್ಳುವುದಲ್ಲ. ಅದು ಸುಪ್ತವಾಗಿರುತ್ತದೆ. ಅಲ್ಲಮ ಪ್ರಭು ತನ್ನ ವಚನದಲ್ಲಿ ದೇವರ ನಿಲುವನ್ನು ‘ಶಬ್ದದೊಳಗಿನ ನಿಶ್ಯಬ್ದದಂತೆ’ ಎಂದು  ಹೇಳಿದಂತೆ ಧ್ವನಿಯೂ ಶಬ್ದದೊಳಿಗಿನ ಒಂದು ನಿಶ್ಯಬ್ದ. ಆ ನಿಶ್ಯಬ್ದವನ್ನು ಜ್ಞಾನಪೂರ್ಣ ಮನಸ್ಸು ಮಾತ್ರ ಕಾಣಬಲ್ಲುದು, ಆಲಿಸಬಲ್ಲುದು. ಧ್ವನಿ ವಾಚ್ಯಾರ್ಥವನ್ನು ಮೀರಿ ನಿಲ್ಲುವಂಥದ್ದು. ಒಂದೇ ಮಾತಿನಲ್ಲಿ ಹಲವರ್ಥಗಳನ್ನು ಬಿಂಬಿಸಬಲ್ಲದ ಸಾಮರ್ಥ್ಯ ಇದಕ್ಕಿದೆ, ಇದನ್ನೆ ಬಲ್ಲವರು ಕಿರಿದರೊಳ್ ಪಿರಿದರ್ಥವಂ ಪೇಳ್ವ ಜಾಣ್ಮೆ’ ಎಂದರು. ಆ ಜಾಣ್ಮೆಯಿಲ್ಲದೆ ಕವಿ ತನ್ನ ಕಾವ್ಯಯಾನದಲ್ಲಿ ಸಶಕ್ತವಾಗಿ ಸಾಫಲ್ಯದ ಗುರಿಮುಟ್ಟಲಾರ.

ರಸವೆಂದರೆ ತಿರುಳು ಎಂಬ ಅರ್ಥವೂ ಇದೆ. ಭಾವ ರಸದ ಸಂಬಂಧ ಅವಿನಾಭಾವವಾದದ್ದು. ರಸವು ಭಾವಜನ್ಯ. ಭಾವ ಲೌಕಿಕವಾದದ್ದು ರಸ ಲೋಕೋತ್ತರವಾದದ್ದು. ಭಾವದಲ್ಲಿ ದುರ್ಭಾವಗಳಿರಬಹುದು. ಆದರೆ ರಸ ಶುದ್ಧವಾದದ್ದು ಸಾಹಿತಿ ಸಿಪಿಕೆಯವರು ಇದನ್ನು ಶ್ರುತಪಡಿಸಿದ್ದಾರೆ.
ಅವರು ಭಾವ ಮತ್ತು ರಸದ ಬಗ್ಗೆ ಹೇಳುತ್ತಾ “ಭಾವವಿಲ್ಲದೆ ರಸವಿಲ್ಲ, ಭಾವ ಶುದ್ಧದ ಸಂಯಮಿತ ರೂಪವೆ” ರಸವೆನ್ನಬಹುದು ಎನ್ನುತ್ತಾರೆ. ಇದು ಹೌದು. ಭಾವ ಶುದ್ಧದ ಸಂಯಮಿತ ರೂಪದಲ್ಲಿ ಕವನ ಮೈದಳೆದರೆ ಮಾತ್ರ ರಸಿಕ ಜನಮಾನಸದಲ್ಲಿ ಆನಂದವನ್ನೇ ನೀಡುತ್ತದೆ.

ಕವನ ಕಟ್ಟುವಾಗ ಶಬ್ದಕ್ಕಾಗಿ ಶಬ್ದವನ್ನು ಕಟ್ಟಬಾರದು ಅದು ಕಾವ್ಯದ ದೃಷ್ಟಿಯಿಂದ ಅದು ಔಚಿತ್ಯಪೂರ್ಣವಾಗಬೇಕು. ಭಾವ ಶಬ್ದ ರಸೋತ್ಪತ್ತಿಗೆ ನಾದವಾಗಬೇಕು.

" ಹಸಿವು ತೀರಿದ ಮೇಲೆ " ಎಂಬ ಕವನದಲ್ಲಿ ರವೀಂದ್ರ ನಾಯಕರು
 "ಹಸಿವು ತೀರಿದ ಮೇಲೆ ಮತ್ತೆ ಇನ್ನೆಂದೂ ಕೈಗೆ ಸಿಗದ ಹಾಗೆ ದೂರ ಎತ್ತಿ ಬಿಸಾಡಬೇಕು " ಅನ್ನುತ್ತಾರೆ. ಈ ಸಾಲುಗಳಲ್ಲಿ ಅಧ್ಯಾತ್ಮದ ಚಿಂತನೆಗಳಿವೆ.
ಪಂಚಭೂತಾತ್ಮಕವಾದ ಈ ಜಗತ್ತಿನಲ್ಲಿ ನಮಗೆ ಅರಿಷಡ್ವರ್ಗಗಳ ಸೆಳೆತವಿದೆ.
ಈಷಣತ್ರಯಗಳ ಬಂಧನವಿದೆ. ಇಲ್ಲಿ ಕಾಯ ಅನಿತ್ಯವಾಗಿದೆ; ಅಸತ್ಯವಾಗಿದೆ.
ಆತ್ಮ ನಿತ್ಯ ಶಾಶ್ವತವಾಗಿದ್ದು ಸತ್ಯವಾಗಿದೆ. ಆದರೆ ಇಲ್ಲಿ ಅನಿತ್ಯವೂ ಅಸತ್ಯವೂ
ಆದ ಕಾಯದ ಬಂಧನದಲ್ಲಿ ಆತ್ಮ ಬಂಧಿಯಾಗಿರುತ್ತದೆ. ಅದಕ್ಕೆಬಿಡುಗಡೆಯಲ್ಲಿಯೇ ಆನಂದವಿರುವುದು. ಇಲ್ಲಿ  ಸಗುಣ ಕಾಯದ ಬಯಕೆಗಳು ತೀರದೆ ಆತ್ಮಕ್ಕೆ ಬಿಡುಗಡೆಯಿಲ್ಲ. ಹಾಗಾಗಿ ಒಮ್ಮೆ ಆಶೆ
ತೀರಿದ ಮೇಲೆ ಅದನ್ನು ಹತ್ತಿಕ್ಕಿ ಈ ಕಾಯವನ್ನು ತ್ಯಜಿಸಬೇಕು ಅಂದರೆ ಆತ್ಮಹತ್ಯೆಮಾಡಿಕೊಳ್ಳಬೇಕೆಂದು ಅರ್ಥವಲ್ಲ. ನಾವು ನಿರ್ಮೋಹಿಗಳಾಗಿ ನಮಗೆ ಮರಣವೂ ಮಹಾ ನವಮಿಯಾಗಬೇಕೆಂಬುವುದೇ ಇದರ ಧ್ವನಿ. ಇಲ್ಲಿ ದೂರ
ಎತ್ತಿ ಬಿಸಾಡಬೇಕು ಎಂಬ ರವೀಂದ್ರ ನಾಯಕರ ಮಾತೂ ವ್ಯಾಮೋಹವಿಲ್ಲದೆ ಕಾಯವನ್ನು ತ್ಯಜಿಸಬೇಕೆಂಬ ಅರ್ಥವನ್ನು ಕೊಡುತ್ತದೆ. ನಾನು ನನ್ನದು ಎಂಬ ಸ್ವಾರ್ಥವನ್ನು ಮರೆತಾಗ ನಿರ್ಮೋಹತ್ತ್ವಕ್ಕೆ ದಾರಿಯಾಗುತ್ತದೆ. ಈ ಕಾಯಕ್ಕೆಮತ್ತೆ ಮತ್ತೆ ನಾವು ಅಂಟಿಕೊಳ್ಳದಿರಲು ಸಾಧ್ಯವಾಗುತ್ತದೆ.
    ನಾವೊಂದು ಆ ಪೂರ್ಣದಿಂದ ಸಿಡಿದುಬಿದ್ದ ಬಿಂದು. ಈ ಬಿಂದು ಮತ್ತೆ ಆ
ಪೂರ್ಣವನ್ನು ಸೇರಿ ಒಂದಾಗಬೇಕು. ಅದೇ ಮುಕ್ತಿ. ಉಪ್ಪಿನ ಗೊಂಬೆಯೊಂದನ್ನು ಸಮುದ್ರಕ್ಕೆ ಬಿಸಾಡಿದಾಗ ಅದು ಮತ್ತೆಂದೂ ಕೈಗೆ ಸಿಗದೆ ಸಮುದ್ರವೇ ಆಗುವಂತೆ ಈ ಮುಕ್ತಿಯ ಸ್ವರೂಪವಿರುತ್ತದೆ. ಸಾಲೋಕ್ಯ,
ಸಾಮೀಪ್ಯ, ಸಾರೂಪ್ಯ, ಸಾಯುಜ್ಯ ಎಂಬ ಚತುರ್ವಿದ ಮುಕ್ತಿಗಳಲ್ಲಿ ಇದು ಸಾಯುಜ್ಯವಾಗಿದೆ. ಅಲ್ಲಿ ಮತ್ತೆ "ಪುನರಪಿ ಜನನಂ ಪುನರಪಿ ಮರಣಂ ಪುನರಪಿ ಜನನೀ ಜಠರೇ ಶಯನಂ" ಎಂಬ ಬಂಧನಗಳಿರುವುದಿಲ್ಲ.. ರವೀಂದ್ರನಾಯಕರ ಇನ್ನೆಂದೂ ಕೈಗೆ ಸಿಗದ ಹಾಗೆ ದೂರ ಎತ್ತಿ ಬಿಸಾಡಬೇಕೆಂಬ ಮಾತೂಸಾಯುಜ್ಯ ಮುಕ್ತಿಯನ್ನೇ ಸೂಚಿಸುವಂತಿದೆ.
    ಎಲ್ಲಿ ಒಲವಿರುತ್ತದೋ ಅಲ್ಲಿ ಚೆಲುವಿರುತ್ತದೆ. ಇವೆರಡೂ ಇದ್ದಲ್ಲಿ ಶಿವವಿರುತ್ತದೆ. ಅದೇ ಸತ್ಯವಾಗಿರುತ್ತದೆ. ಆದ್ದರಿಂದ ಅಲ್ಲಿ ಗೆಲುವಿರುತ್ತದೆ. ಈ ಹೊತ್ತಗೆಯಲ್ಲಿ ರವೀಂದ್ರ ನಾಯಕರು ಒಲವನ್ನು ಮೆರೆದಿದ್ದಾರೆ, ಚೆಲುವನ್ನು ಹರಡಿದ್ದಾರೆ. ಶಿವವನ್ನು ಮುಟ್ಟಿದ್ದಾರೆ. ಸತ್ಯವನ್ನು ದರ್ಶಿಸಿದ್ದಾರೆ. ಆ ನಿಟ್ಟಿನಲ್ಲಿ ಅವರು ಯುವಕವಿಗಳಿಗೆ ಮಾದರಿಯಾಗಿದ್ದಾರೆ ಇಲ್ಲಿರುವ ಪ್ರತಿಯೊಂದು ಕವನ ರತ್ನದ ಹರಳಾಗಿ ಕವನಗಳ ಗೊಂಚಲು ರತ್ನಮಾಲೆಯಾಗಿ ಕನ್ನಡಾಂಬೆಗೆ ಸಮರ್ಪಿಸಲ್ಪಟ್ಟಿದೆ.

ರವೀಂದ್ರ ನಾಯಕರ ಈ ಕೃತಿಯಲ್ಲಿ -----ಕವನಗಳಿವೆ. ಇವುಗಳ ಒಳಗೂ ಒಂದೊಂದು ಬಗೆಯ ತತ್ತ್ವದ ತುಣುಕುಗಳಿವೆ. ಸಮಾಜದ ಕೊರಳಿದೆ. ಕರುಳಿದೆ. ಮುಗ್ಧವೂ ಪ್ರೌಢವೂ ಆದ ಮನಸ್ಸಿನ ಮಿಡಿತಗಳಿವೆ. ಮುಂದೆಯೂ ಅವರ ಕಲಿಕೆ ನಿರಂತರವಾಗಲಿ. ಎಂದಿಗೂ ಕಲಿಕೆಗೆ ಕೊನೆಯಿಲ್ಲ. ಕವಿಯಾಗಲಿ ಸಾಹಿತಿಯಾಗಲಿ ಯಾರೇ ಆಗಲಿ ಕಲಿಯುತ್ತಾ ಬೆಳೆಯುತ್ತಾನೆ ಬೆಳೆಯುತ್ತಾ ಉಳಿಯುತ್ತಾನೆ. ರವೀಂದ್ರ ನಾಯಕರೂ ಇನ್ನೂ ಬೆಳೆಯಲಿ, ಬೆಳೆಯುತ್ತಾ ಉಳಿಯಲಿ ಈ ಸಾರಸ್ವತ ಸಾಮ್ರಾಜ್ಯದಲ್ಲಿ ಅವರ ಹೆಸರು ಚಿರಸ್ಥಾಯಿಯಾಗಲಿ ಎಂದು ನಾನು ಹಾರೈಸುತ್ತೇನೆ.

ಗಣೇಶ ಕೊಲೆಕಾಡಿ

ಶ್ರೀ ಛಂದಃಪದ್ಮ

ಅತಿಕಾರಿ ಬೆಟ್ಟು

ವಯ ಮೂಲ್ಕಿ

ಮಂಗಳೂರು, ದ.ಕ.

574171

No comments:

Post a Comment