Thursday 15 September 2011

ನೀನಿಲ್ಲದೆ 


ಒಂದಿನಿತೂ ಬೇಸರವಿಲ್ಲದೆ ಕಳೆದ 
ನಿನ್ನೆಯ ಸಂಜೆಯೇ ಒಂದು ಅಚ್ಚರಿ;
ಸಂಜೆಯಾದರೆ ಸಾಕು 
ಕಾಡುವ ನಿನ್ನ ಪಿಸು ಮಾತು
ಅರ್ಥವಿಲ್ಲದ ಹುಸಿ ಮುನಿಸು,
ಬೆಚ್ಚಗಿನ ಸ್ಪರ್ಶ,ಹೂಮುತ್ತು
ನಿನ್ನ ಬಗೆಗಿನ ನೆನಪುಗಳೇ ಹಾಗೆ.
ನೆನಪುಗಳು ಒತ್ತರಿಸಿದಾಗ 
ಮನದ ಮುಗಿಲಿನಲ್ಲಿ ಬೇಸರದ ಕಾರ್ಮೋಡ,
ಪದಗಳಲ್ಲಿ ಕಟ್ಟಿ ಕೊಡಲಾಗದ ನಿರ್ಭಾವುಕತನ.
ನೀನು ದೂರ ಇರುತಿದ್ದ ಪ್ರತಿ ಸಂಜೆ 
ಎಲ್ಲವೂ ಕಳೆದುಕೊಂಡ ಭಾವ;
ಲೋಕವೆಲ್ಲಾ ಜಡವಾಗಿ ಬಿದ್ದುಕೊಂದಂತೆ
ಚಲನೆಗೆ ನಿನ್ನ ಇರವೇ ಕೀಲಿ ಕೈ,
ಆ ತರ ಪ್ರತಿಭಟಿಸುತಿದ್ದ ಮನಸ್ಸು
ನೀನಿಲ್ಲದೆ ನಿರಾಳವಾಗಿದ್ದು ಹೇಗೆ?
ದೂರದ ಬೆಟ್ಟ ನಿನ್ನ ಕಣ್ಣಿಗೂ ನುಣ್ಣಗೆ ಕಂಡಿದ್ದು,
ಅರಳಿ ಹೂ ಬಿಡುತಿದ್ದ ಪ್ರೀತಿಗೆ
ಹೃದಯ ಮಂದಿರದ ಪೂಜ್ಯತೆಗೆ 
ನೀನೆ ಲೋಕ ಎಂದು ಮೈಮರೆತ ಮನಸ್ಸಿಗೆ,
ಉತ್ಕಟ ನಿರೀಕ್ಷೆಗಳಿಗೀಗ ಶೂನ್ಯ ಭಾವ.
ಬಿರುಗಾಳಿಯ ನಂತರದ ನಿಶ್ಯಬ್ದತೆ
ಸುನಾಮಿಯ ಬಳಿಕದ ಸ್ತಬ್ದತೆ,
ಈಗ ಮನಸ್ಸನ್ನವರಿಸಿರುವುದು ಸುಳ್ಳಲ್ಲ.
ಸಂಜೆಗಳು ಮರುಕಳಿಸುತ್ತಿವೆ,ನಾನಿಲ್ಲೇ ಕೂತಿದ್ದೇನೆ.
ನೀನಿಲ್ಲ ಅನ್ನುವುದೊಂದು ಬಿಟ್ಟರೆ
ಜಗತ್ತು ಇನ್ನು ಸುಂದರವಾಗಿದೆ.


No comments:

Post a Comment