ಬೆಳಕು ಕಮ್ಮಿಯಾಗುತ್ತಿದ್ದ ಒಂದು ಸಂಜೆ
ಏನನ್ನೋ ಹುಡುಕುವಾಗಫಕ್ಕನೆ ಕೈಗೆ ದಕ್ಕಿದ್ದು ಇದು.
ಅರೇ! ಮರೆತೇ ಬಿಟ್ಟಿದ್ದೆ.
ಯಾವತ್ತು ಕೊನೆಯ ಸಲ
ಮುಚ್ಚಳ ತೆರೆದು ಗ್ಲಾಸಿಗಿಳಿಸಿದ್ದು?
ಜೊತೆಗಿದ್ದವರಾರು?
ಸುಖವೋ ದುಃಖವೋ?
ಗ್ಲಾಸ್ ಗೆ ಇಳಿಯುವ ಮೊದಲು
ಗುಟ್ಟುಗಳನ್ನು ಯಾವ ಶೀಶೆಯೂ
ಬಿಟ್ಟುಕೊಡುವುದಿಲ್ಲ;
ಬೆರೆಸುವ ಬೆರೆಯುವ ಕಲೆ
ಒಮ್ಮೆ ಗೊತ್ತಾದರೆ ಸಾಕು,
ಉಳಿದದ್ದು ಬಯಲು.
ನೆನಪಿಸಿಕೊಳ್ಳಬೇಕಿದೆ ಈಗ ಎಲ್ಲವನ್ನು.
ಸರಿಯಾಗಿ ನೆನಪಾದರೆ
ಮತ್ತೆ ಜೋಡಿಸುತ್ತೇನೆ ಕಳೆದ ಕೊಂಡಿಗಳನ್ನು.
ಎಷ್ಟೋ ವರ್ಷಗಳ ದಾಹವೊಂದು
ಇನ್ನೂ ಹಾಗೆಯೇ ಉಳಿದುಕೊಂಡಿದೆ.
ಕಾಲಕ್ಕೂ ಸಿಗದೆ
ಭಾವಕ್ಕೂ ದಕ್ಕದೆ
ಎದೆಯಲ್ಲಿಯೇ ನಿಂತು ಹೆಪ್ಪುಗಟ್ಟಿದೆ.
ಅಬ್ಭಾ ಹೊರಗೆ ಎಂಥಾ ಮಳೆ!
ವರ್ಷದ ಕೊನೆಯ ಮಳೆ ಇರಬೇಕು
ಒಂದೇ ಸಮನೆ ಸುರಿಯುತ್ತಿದೆ.
ಒಂದಂತೂ ಸತ್ಯ;
ಈ ರಾತ್ರಿ ಕಳೆದು ಬರುವ ಬೆಳಕಿಗೆ
ಮತ್ತೆ ಮೋಡ ಕಟ್ಟೀತೆಂಬ ಆತಂಕವಿಲ್ಲ.
ಹಾಂ!
ಮುಚ್ಚಳ ಕಳೆದು ಹೋದ ಶೀಶೆ ಅದು.
ಇನ್ನೂ ಹಾಗೆಯೇ ಬಿಟ್ಟರೆ
ಸುಮ್ಮನೆ ಆರಿಹೋಗುತ್ತದೆ;
ಯಾರ ಪಾಲಿಗೂ ಸಿಗದೆ.
ಬಾ ಹತ್ತಿರ,ಇನ್ನೂ ಹತ್ತಿರ
ಇಂದಾದರೂ ಒಟ್ಟಿಗೆ ಕೂತು
ನೋವುಗಳ ನೀಗಿಕೊಳ್ಳೋಣ;
ನಾನೊಂದಿಷ್ಟು
ಮತ್ತೆ ನೀನೊಂದಿಷ್ಟು,
ಗುಟುಕು ಗುಟುಕಾಗಿ ಹೀರಿಕೊಳ್ಳೋಣ.
~ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
No comments:
Post a Comment