Tuesday 10 January 2017

ಸಿಡಿಯಲು ನಿಂತ ಜ್ವಾಲಾಮುಖಿಗಳ ನಡುವೆ
ತಣ್ಣಗೆ ಹರಿವ ನದಿಯ ಶಾಂತಿ
ನಿಜವಾದುದೆಂದು ನನಗನಿಸುವುದಿಲ್ಲ.

ಗರ್ಭದ ಬೆಂಕಿಯೊಡನೆ
ರಾಜಿಮಾಡಿಕೊಂಡು ಮುಖವಾಡ ಹಾಕಿಕೊಂಡು
ನಗುವ ಕಳ್ಳನಂತೆಯೂ;
ಒಮ್ಮೊಮ್ಮೆ,
ತೀವ್ರವಾಗಿ ಬಯಸಿದ್ದು ಸಿಗದೇ
ಅನಿವಾರ್ಯ ಆಧ್ಯಾತ್ಮಕ್ಕೆ ಹೊರಳಿದ
ಭಗ್ನ ಹೃದಯಿಯ ಸುಳ್ಳು ಶಾಂತಿಯಂತೆಯೂ          ಭಾಸವಾಗುತ್ತದೆ.

ನದಿಯ ಏಕಾಂತವನ್ನೊಮ್ಮೆ
ಕಲಕಬೇಕು,
ಬೇಸರವೋ
ಕೋಪವೋ ಅಥವಾ
ಅಸಹಾಯಕತೆಯೋ;
ಅಸಲಿ ಭಾವವನ್ನೊಮ್ಮೆ
ನೋಡಿಬಿಡಬೇಕು.

ಹೀಗೆಯೇ ಬದುಕಿಬಿಡುವುದು
ತನ್ನತನವ ಕೊಂದುಕೊಳ್ಳುವ ಕ್ರೌರ್ಯವಲ್ಲವೇ?
ಎಂದನ್ನಿಸಿದರೂ;
ಬದುಕಿಗಿರುವ ಬೇರೆ ಆಯ್ಕೆ
ತಿಳಿಯದೇ ಸುಮ್ಮನಾಗುತ್ತೇನೆ.

No comments:

Post a Comment